ನಾನು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಇದೇ ಕಾರಣ : ಎಂಟಿಬಿ ನಾಗರಾಜ್

By Kannadaprabha NewsFirst Published Sep 1, 2020, 2:03 PM IST
Highlights

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿ ಇದ್ದ ವೇಳೆಯೇ ಪಕ್ಷ ತೊರೆದು ಬಿಜೆಪಿ ಸೇರಿದೆ. ಕಾಂಗ್ರೆಸ್ ತೊರೆಯಲು ಪ್ರಮುಖ ಕಾರಣ ಯಾವುದು ಎಂದು ಬಿಜೆಪಿ ಮುಖಂಡ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಹೊಸಕೋಟೆ (ಸೆ.01):  ದೇವರು ನನಗೆ ಆಸ್ತಿ, ಅಂತಸ್ತು, ಹಣ ಎಲ್ಲವನ್ನೂ ಕೊಟ್ಟಿದ್ದಾನೆ. ಆದರೆ ನಾನು ಜನಸೇವೆಯನ್ನು ಮಾಡಲು ರಾಜಕೀಯ ಪ್ರವೇಶ ಮಾಡಿದ್ದೇನೆಯೇ ಹೊರತು ಹಣ ಮಾಡುವ ಉದ್ದೇಶದಿಂದಲ್ಲ ಎಂದು ವಿದಾನ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್‌ ತಿಳಿಸಿದರು.

ಅನುಗೊಂಡಹಳ್ಳಿ ಹೋಬಳಿ ಹಾರೋಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಸ್ವಾಭಿಮಾನ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಗ್ರಾಪಂ ಸದಸ್ಯ ಮುರಳಿ ಹಾಗೂ ಅವರ ಬೆಂಬಲಿಗರನ್ನು ಅಭಿನಂದಿಸಿ ಮಾತನಾಡಿದರು.

ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಸೇರ್ಪಡೆ

ಮೂರು ಭಾರಿ ಶಾಸಕನಾಗಿ, ಒಂದು ಭಾರಿ ಸಚಿವನಾಗಿ ತಾಲೂಕಿನ ಸಮಗ್ರ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ತಾಲೂಕಿನ ಅಭಿವೃದ್ದಿಗೆ ಅಗತ್ಯ ಅನುದಾನ ನೀಡದ ಕಾರಣ, ಅಧಿಕಾರಕ್ಕೆ ಅಂಟಿಕೊಂಡು ಕೂರದೆ, ತಾಲೂಕಿನ ಅಭಿವೃದ್ದಿ ದೃಷ್ಟಿಯಿಂದ ಬಿಜೆಪಿಗೆ ಸೇರ್ಪಡೆಗೊಂಡೆ. ಆದರೆ ಕೆಲವರು ಹಣದ ಆಸೆಗಾಗಿ ಬಿಜೆಪಿ ಸೇರಿರುವುದಾಗಿ ಸುಳ್ಳು ಪ್ರಚಾರ ಮಾಡಿದ್ದಾರೆ. ದೇವರು ದಾನಮಾಡುವಷ್ಟುಸಂಪತ್ತನ್ನು ನನಗೆ ಕರುಣಿಸಿದ್ದಾನೆ. ರಾಜಕಾರಣದಲ್ಲಿ ಹಣ ಮಾಡುವ ಪ್ರಮೇಯ ನನಗಿಲ್ಲ ಎಂದರು.

ತಾಲೂಕಿನಲ್ಲಿ ನನ್ನ ಅಭಿವೃದ್ದಿಯನ್ನು ಮೆಚ್ಚಿ, ಸ್ವಾಭಿಮಾನಿ ಹಾಗೂ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಅನುಗೊಂಡಹಳ್ಳಿ ಹೋಬಳಿಯ 27 ಕೆರೆಗಳಿಗೆ ನೀರು ತುಂಬಿಸುವ ಏತನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಉದ್ಘಾಟನೆ ಮಾಡಿಸುತ್ತೇನೆ ಎಂದರು.

ಸೋತರೂ ಅಭಿವೃದ್ಧಿ ಮರೆತಿಲ್ಲ

ಗ್ರಾಪಂ ಸದಸ್ಯ ಮುರಳಿ ಮಾತನಾಡಿ ತಾಲೂಕಿನಲ್ಲಿ ಅಭಿವೃದ್ದಿಗೆ ಪ್ರಥಮ ಆದ್ಯತೆ ನೀಡುವಲ್ಲಿ ಎಂಟಿಬಿ ನಾಗರಾಜ್‌ ಅವರು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಉಪಚುನಾವಣೆಯಲ್ಲಿ ಅವರು ಸೋತರೂ, ತಾಲೂಕಿನ ಅಭಿವೃದ್ದಿ ಮರೆತಿಲ್ಲ. ತಮ್ಮ ವೈಯುಕ್ತಿಕ ಹಣದಲ್ಲಿ ತಾಲೂಕಿನಾದ್ಯಂತ ಉಚಿತವಾಗಿ ಆಯುಷ್ಮಾನ್‌ ಭಾರತ್‌ ಕಾರ್ಡ್‌ ವಿತರಣೆ ಜೊತೆಗೆ, ಎಂಎಲ್ಸಿ, ಸೇರಿದಂತೆ ವಿವಿಧ ಇಲಾಖೆಗಳಿಂದ ವಿಶೇಷ ಅನುದಾನ ತಂದು ಗ್ರಾಮಗಳಿಗೆ ಅಗತ್ಯ ಅಭಿವೃದ್ದಿ ಮಾಡುವಲ್ಲಿ ಮುಂದಾಗಿದ್ದಾರೆ ಎಂದರು.

ಗ್ರಾಪಂ ಸದಸ್ಯ ಮುರಳಿ, ಸಂಗಡಿಗರಾದ ಮಂಜು, ಭುವನೇಶ್ವರ್‌, ಕೃಷ್ಣಾರೆಡ್ಡಿ, ದಯಾನಂದ್‌, ನಾಗರಾಜಪ್ಪ, ಪ್ರಭಾಕರ್‌, ಮೋಹನ್‌ ಕುಮಾರ್‌, ಶೃಗ ವಿದ್ಯಾಸಂಸ್ಥೆ ಮುಖ್ಯಸ್ಥೆ ಅನಸೂಯಮ್ಮ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

click me!