
ಉಡುಪಿ (ಫೆ.20): ಮೂರ್ತಿ ಪೂಜೆ ಹಾಗೂ ವ್ಯಕ್ತಿ ಪೂಜೆಯೇ ಇಲ್ಲದ ಇಸ್ಲಾಂ ಮತದಲ್ಲಿ ಮುಸಲ್ಮಾನರು ಟಿಪ್ಪು ಜಯಂತಿಯನ್ನು ಕೇಳಿರಲಿಲ್ಲ. ಆದರೆ ಸಿದ್ದರಾಮಯ್ಯ ಜಾತಿಗಳ ನಡುವೆ ಘರ್ಷಣೆ ಸೃಷ್ಟಿಸುವುದಕ್ಕೋಸ್ಕರ ಟಿಪ್ಪು ಜಯಂತಿಯನ್ನು ಪ್ರಾರಂಭಿಸಿದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು. ಅವರು ಸೋಮವಾರ, ನಗರದ ಎಮ್.ಜಿ.ಎಮ್ ಮೈದಾನದಲ್ಲಿ ಜಿಲ್ಲಾ ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಈ ಹೋರಾಟದಲ್ಲಿ ಮಡಿಕೇರಿಯ ಹಿಂದೂ ಕಾರ್ಯಕರ್ತ ಕುಟ್ಟಪ್ಪ ಹತ್ಯೆಯಾದರು. ಅನೇಕ ಅಮಾಯಕ ಹಿಂದೂ ಯುವಕರ ಮೇಲೆ ಕೇಸುಗಳು ದಾಖಲಾಗಿ, ಇಂದಿಗೂ ಕೋರ್ಟಿಗೆ ಅಲೆದಾಡುತ್ತಿದ್ದಾರೆ ಎಂದವರು ಹೇಳಿದರು.
ಕುರುಬರಿಗೂ ಮೋಸ:
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಶಾಲಾ ಮಕ್ಕಳಿಗೆ ಪ್ರವಾಸ ಯೋಜನೆಯನ್ನು ಒಂದು ಜಾತಿಗೆ ಸೀಮಿತಗೊಳಿಸಿದರು. ಶಾದಿಭಾಗ್ಯ ಯೋಜನೆಯ ಮೂಲಕ ಮುಸಲ್ಮಾನರನ್ನು ಓಲೈಕೆ ಮಾಡಲು ಪ್ರಯತ್ನಿಸಿದರು. ಸ್ವತಃ ಕುರುಬರಾದ ಸಿದ್ದರಾಮಯ್ಯನವರು ಕುರುಬರಿಗೂ ಶಾಧಿಭಾಗ್ಯ ಯೋಜನೆಯನ್ನು ನೀಡದೇ ಮೋಸ ಮಾಡಿದ್ದಾರೆ ಎಂದರು.
ಈಗಲೇ ಬೆದರಿಸಲು ಆರಂಭವಾಗಿದೆ:
ಈಗಾಗಲೇ ಕೆಲವರು ಮುಂದಿನ ಎರಡು ತಿಂಗಳ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿದ್ದಾರೆ. ನಂತರ ಬಿಜೆಪಿಯವರನ್ನು ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಕಾರ್ಯಕರ್ತರು ಯೋಚನೆ ಮಾಡಬೇಕಿದೆ. ಬಿಜೆಪಿಯನ್ನು ಹೊರತು ಪಡಿಸಿ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಈ ದೇಶಕ್ಕೆ, ಹಿಂದುಗಳಿಗೆ ಅನ್ಯಾಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿವೇಕಾನಂದರ ಸಂದೇಶಗಳ ಪಾಲನೆ ಯುವಜನತೆಯ ಗುರಿಯಾಗಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಗೆಲ್ಲುವ ಅಂತರ ಮುಖ್ಯ:
ಜಿಲ್ಲೆಯಲ್ಲಿ ಐದಕ್ಕೆ ಐದು ಕ್ಷೇತ್ರವನ್ನು ಬಿಜೆಪಿ ಗೆಲ್ಲಲಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಎಷ್ಟು ಅಂತರದಲ್ಲಿ ಗೆಲ್ಲುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆಕ್ಕಿಂತಲೂ ಅತೀ ಹೆಚ್ಚಿನ ಅಂತರದಲ್ಲಿ ಐದು ಕ್ಷೇತ್ರವನ್ನು ಗೆಲ್ಲಿಸುವ ಜವಾಬ್ದಾರಿ, ನಾಯಕರು ಮತ್ತು ಕಾರ್ಯಕರ್ತರ ಮೇಲಿದೆ ಎಂದರು.
ಶಾಲೆಗಳಲ್ಲಿ ಯಕ್ಷಗಾನ ಕಲಿಸಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಕಾರ್ಯಕರ್ತರೇ ಯೋಧರು:
ನಮ್ಮ ಪಕ್ಷಕ್ಕೆ ನಾವೇ ಯೋಧರು, ಗಡಿಯಲ್ಲಿ ಕಾಯುವ ಯೋಧ ಮೈನಸ್ ಡಿಗ್ರಿ ಸೆಲ್ಸಿಯಸ್ ನಲ್ಲಿ ದೇಶಕ್ಕಾಗಿ ಹೋರಾಡುತ್ತಾರೆ. ಅವರಿಗೂ ನರೇಂದ್ರ ಮೋದಿಯವರು ನಾಯಕತ್ವದಲ್ಲಿ ವಿಶ್ವಾಸವಿದೆ. ಬಿಜೆಪಿ ಯೋಧರು ಪಕ್ಷವನ್ನು ಗೆಲ್ಲಿಸಲು ಪಣತೊಡಬೇಕು ಎಂದು ಕರೆ ನೀಡಿದರು.