Murugha Mutt: ಮುರುಘಾಶ್ರೀ ಇಲ್ಲದೆ ನಡೆದ ಶೂನ್ಯ ಪೀಠಾರೋಹಣ ಕಾರ್ಯಕ್ರಮ

By Ravi JanekalFirst Published Oct 6, 2022, 2:37 PM IST
Highlights
  • ಮುರುಘಾ ಮಠದಲ್ಲಿ ಸಂಭ್ರಮದಿಂದ ನಡೆದ ಶೂನ್ಯ ಪೀಠಾರೋಹಣ ಕಾರ್ಯಕ್ರಮ.
  • ಮುರುಘಾ ಮಠಕ್ಕೆ ಆಗಮಿಸಿದ ಮಠದ ಮಾಜಿ ಆಡಳಿತಾಧಿಕಾರಿ ಎಸ್‌.ಕೆ ಬಸವರಾಜನ್ ದಂಪತಿ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಅ.6) : ಮುರುಘಾ ಪರಂಪರೆಯಂತೆ ಇಂದು ಮುರುಘಾ ಮಠದಲ್ಲಿ ಶೂನ್ಯ ಪೀಠಾರೋಹಣ ಕಾರ್ಯಕ್ರಮ ನಡೆಯಿತು. ಪ್ರತೀ ವರ್ಷ ಶೂನ್ಯಪೀಠದಲ್ಲಿ ಮುರುಘಾ ಶರಣರು ಕೂತು ಭಕ್ತರಿಗೆ ಆಶೀರ್ವಾದ ಮಾಡುತ್ತಿದ್ದರು. ಆದ್ರೆ ಈ ಬಾರಿ ಮುರುಘಾ ಶ್ರೀಗಳಿಲ್ಲದೇ ಹಿಂದಿನ ಮುರುಘ ಶಾಂತವೀರ ಸ್ವಾಮೀಜಿಗಳ ಪೋಟೋ ಇಟ್ಟು ಭಕ್ತಿ ಸಮರ್ಪಣೆ ಸಲ್ಲಿಸಲಾಯಿತು. ಈ ಕುರಿತು ಒಂದು ಸ್ಪೆಷಲ್ ವರದಿ ಇಲ್ಲಿದೆ.

ಶೂನ್ಯಪೀಠ ಮುರುಘಾ ಮಠಕ್ಕೆ ಅನ್ಯ ಸಮುದಾಯದವರು ಪೀಠಾಧ್ಯಕ್ಷರು ಯಾಕಾಗಬಾರದು? - ಬಿ.ಕಾಂತರಾಜ್

ಒಂದೆಡೆ ಎಲ್ಲಾ ಭಕ್ತಾಧಿಗಳು ಸೇರಿ ಶೂನ್ಯಪೀಠಕ್ಕೆ(Shoonyapeetha) ಪುಷ್ಪಾರ್ಚನೆ ಮಾಡುವ ಮೂಲಕ ಜೈ ಮುರುಗೇಶ, ಜೈ ಮುರುಗೇಶ ಎಂದು ಘೋಷ‌ವಾಕ್ಯ ಕೂಗ್ತಿರುವ ದೃಶ್ಯ. ಮತ್ತೊಂದೆಡೆ ಮುರುಘಾ ಮಠ(Murugha Math)ದ ಹಿಂದಿನ ಆಡಳಿತಾಧಿಕಾರಿ ಎಸ್. ಕೆ ಬಸವರಾಜನ್(S.K.Basavarajan) ದಂಪತಿ ಸಮೇತ ಮಠಕ್ಕೆ ಆಗಮಿಸಿದಾಗ ಪೊಲೀಸರೊಂದಿಗೆ ವಾಗ್ವಾದ ಮಾಡ್ತಿರೋ ಸನ್ನಿವೇಶ. ಈ ಎರಡು ದೃಶ್ಯಗಳು ಸಾಕ್ಷಿಯಾಗಿದ್ದು, ಕೋಟೆನಾಡು ಚಿತ್ರದುರ್ಗ(Chitradurga) ಜಿಲ್ಲೆಯ ಪ್ರತಿಷ್ಠಿತ ಮಠಗಳಲ್ಲಿ ಒಂದಾಗಿರುವ ಮುರುಘಾ ಮಠದ ಆವರಣದಲ್ಲಿ. 

ಈಗಾಗಾಲೇ ಪೋಕ್ಸೋ(Pocso) ಪ್ರಕರಣದಲ್ಲಿ ಕಳೆದ ಒಂದು ತಿಂಗಳಿಂದ ಮುರುಘಾ ಮಠದ ಪೀಠಾಧಿಪತಿಗಳಾದ ಡಾ. ಶಿವಮೂರ್ತಿ ಮುರುಘಾ ಶರಣ(Dr.Shivamurthy murugha sharana)ರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದ್ದರಿಂದ ಈ ಬಾರಿಯ ಶರಣ ಸಂಸ್ಕೃತಿ ಉತ್ಸವ(Sharana Samskrit Utsav) ಬಹಳ ಸರಳವಾಗಿ ನಡೆಯುತ್ತಿದೆ. 

ಇಂದು ಶೂನ್ಯ ಪೀಠಾರೋಹಣ ಕಾರ್ಯಕ್ರಮ ಜರುಗಿದ್ದು, ಪ್ರತೀ ವರ್ಷ ಮುರುಘಾ ಶರಣರೇ ಶೂನ್ಯ ಪೀಠಾರೋಹಣ ನೆರವೇರಿಸಿ ಪೀಠದ ಮೇಲೆ ಕುಳಿತುಕೊಂಡು ಬಂದಂತಹ ಭಕ್ತಾಧಿಗಳಿಗೆ ಆಶೀರ್ವಾದ ಮಾಡ್ತಿದ್ರು. ಆದ್ರೆ ಈ ಬಾರಿ ಮೊದಲನೇ ಜಗದ್ಗುರುಗಳಾದ ಶ್ರೀ ಮುರುಗಿ ಶಾಂತವೀರ ಮಹಾಸ್ವಾಮಿಗಳ ಪೋಟೋ ಇಟ್ಟು ಪೂಜೆ ಸಲ್ಲಿಸುವ ಮೂಲಕ ಶೂನ್ಯ ಪೀಠಾರೋಹಣ ಕಾರ್ಯಕ್ರಮವನ್ನು, ಇಂದಿನ ಮುರುಘಾ ಮಠದ ಪ್ರಭಾರ ಪೀಠಾಧಿಪತಿಗಳಾದ ಹೆಬ್ಬಾಳ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಸಲಾಯಿತು. 

ಈ ಬಾರಿ ಸರಳವಾಗಿ ಆಚರಣೆ ಮಾಡಲಾಗಿದೆ, ರುದ್ರಾಕ್ಷಿ ಕಿರೀಟ, ಬಂಗಾರದ ಆಭರಣಗಳು ಎಲ್ಲಾ ಭದ್ರವಾಗಿವೆ. ಗುರುಗಳು ಇಲ್ಲದ ಕಾರಣ ಅವುಗಳನ್ನು ಹೊರಗೆ ತೆಗೆದಿಲ್ಲ ಎಂದು ಮಹಾಂತ ರುದ್ರೇಶ್ವರ ಶ್ರೀಗಳು ಸ್ಪಷ್ಟನೆ ಕೊಟ್ಟರು.

ಇತ್ತ ಮುರುಘಾ ಮಠದಲ್ಲಿ ಶೂನ್ಯ ಪೀಠಾರೋಹಣ ಕಾರ್ಯಕ್ರಮ ನಡೆಯುತ್ತಿರುವಾಗಲೇ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ ಬಸವರಾಜನ್ ಆಗಮಿಸಿದ್ದು ವಿಶೇಷವಾಗಿತ್ತು. ತನ್ನ ಪತ್ನಿಯೊಂದಿಗೆ ಆಗಮಿಸಿದ ಬಸವರಾಜನ್ ಶೂನ್ಯ ಪೀಠಕ್ಕೆ ನಮಸ್ಕರಿಸಲು ತೆರಳುವ ಮುನ್ನ ಪೊಲೀಸ್ ರೊಂದಿಗೆ ವಾಗ್ವಾದ ನಡೆಯಿತು. ಹೆಚ್ಚು ಜನ ಒಂದೇ ಬಾರಿ ತೆರಳಿದ ವೇಳೆ, ಪೊಲೀಸರು ಅವರನ್ನು ತಡೆದರು. ಕೊಂಚ‌ ಕಾಲ ಮುರುಘಾ ಮಠದಲ್ಲಿ ಎಸ್ ಕೆ.ಬಸವರಾಜನ್ ಹಾಗೂ ದಂಪತಿಗಳಿಂದ ಹೈಡ್ರಾಮಾ ನಡೆಯಿತು. ನಂತರ ಸ್ವಲ್ಪ ಸಮಯದ ನಂತರ ದಂಪತಿ ಸಮೇತ ತೆರಳಿ ಶೂನ್ಯ ಪೀಠಕ್ಕೆ ನಮಸ್ಕರಿಸಿದರು.

 ಮಠದ ಆವರಣದಲ್ಲಿಯೇ ನಡೆದ ಪಲ್ಲಕ್ಕಿ ಮೆರವಣಿಗೆಯಲ್ಲಿ ಭಾಗಿಯಾದ್ರು. ಕಳೆದ 14 ವರ್ಷಗಳ ಬಳಿಕ ಮೊದಲ ಬಾರಿಗೆ ಮುರುಘಾ ಮಠದಲ್ಲಿ ನಡೆಯುವ ಶೂನ್ಯ ಪೀಠಾರೋಹಣ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಮೊದಲ ಬಾರಿಗೆ ಗದ್ದುಗೆ ಮೇಲೆ ಪೋಟೋ ಬಿಟ್ಟು ಕಾರ್ಯಕ್ರಮ ನಡೆಸಲಾಗ್ತಿದೆ. ಈಗಾಗಲೇ ಸಮಾಜ ಬಾಂಧವರು ಸಭೆ ನಡೆಸ್ತಿರೋ ಹಾಗೆ, ತ್ವರಿತವಾಗಿ ಪೀಠಕ್ಕೆ ಓರ್ವ ಸ್ವಾಮೀಜಿಯನ್ನು ನೇಮಕ ಮಾಡುವುದು ಅತ್ಯವಶ್ಯಕವಾಗಿದೆ. ಈ‌ ಮೊದಲೇ ನಾನು ಹೇಳಿದ್ದೆ, ಮುರುಘಾ ಶ್ರೀ ಇರುವವರೆಗೂ ಮಠಕ್ಕೆ‌ ಬರಲ್ಲ ಎಂದು ಹಾಗಾಗಿ ಇಂದು ಬಂದಿದ್ದೇನೆ ಮುಂದೆಯೂ ಬರ್ತೇನೆ ಎಂದು ಖಡಕ್ ಸಂದೇಶ ರವಾನಿಸಿದರು.

Murugha Mutt; ವಿಚಾರಣಾಧೀನ ಕೈದಿಯಾಗಿ ಶರಣರು ಬಂದಾಗ ಧ್ಯಾನದಲ್ಲಿದ್ದ ಶೂನ್ಯಪೀಠ!

ಒಟ್ಟಾರೆಯಾಗಿ ಮುರುಘಾ ಶರಣರು ಇಲ್ಲದೇ ಮೊದಲ‌ ಬಾರಿಗೆ ಇಂದು ಮುರುಘಾದಲ್ಲಿ ಶೂನ್ಯ ಪೀಠಾರೋಹಣ ಕಾರ್ಯಕ್ರಮ ನಡೆದಿದ್ದು ವಿಶೇಷ. ಆದ್ರೆ ಮಾಜಿ ಆಡಳಿತಾಧಿಕಾರಿ ಕುಟುಂಬ ಸಮೇತ ಮಠಕ್ಕೆ ಆಗಮಿಸಿದ್ದು ಮುರುಘಾ ಶ್ರೀಗಳ ಆಪ್ತ ವಲಯಕ್ಕೆ ಕೊಂಚ ಬೇಸರ ತರಿಸಿದ್ದಂತೂ ಹೌದು.

click me!