
ಶಿವಮೊಗ್ಗ (ಏ.09): ಶಿವಮೊಗ್ಗ ನಗರದ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಲೇಔಟ್ ಒಂದರಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದ್ದು, ಇದು ಕೊಲೆಯೋ ಅಥವಾ ಸಾಧಾರಣ ಸಾವೋ ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡಿದೆ. ಮೃತನ ಕುಟುಂಬಸ್ಥರು ಇದನ್ನು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಶಿವಮೊಗ್ಗದ ಮೇಲಿನ ತುಂಗಾ ನಗರದ ನಿವಾಸಿ ಮಂಜುನಾಥ್ (30) ಎಂಬಾತನೇ ಮೃತಪಟ್ಟ ದುರ್ದೈವಿ. ಸ್ಥಳೀಯವಾಗಿ ಈತನನ್ನು 'ಟೊಳ್ಳೇ ಮಂಜುನಾಥ್' ಎಂದೇ ಕರೆಯಲಾಗುತ್ತಿತ್ತು. ವೃತ್ತಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಮಂಜುನಾಥ್, ತುಂಗಾ ನಗರದ ಖಾಸಗಿ ಲೇಔಟ್ನ ನಿರ್ಜನ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಶನಿವಾರ ರಾತ್ರಿ ಮನೆಯಿಂದ ಹೊರಗೆ ಹೋದವನು ಮತ್ತೆ ಮರಳಿ ಬರಲೇ ಇಲ್ಲ. ಇಂದು ಬೆಳಗ್ಗೆ ಆತನ ಶವ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಂಜುನಾಥ್ ಸಾವಿನ ಹಿಂದೆ ಆತನ ಗೆಳೆಯ ಸಂತೋಷ್ ಎಂಬಾತನ ಕೈವಾಡವಿದೆ ಎಂದು ಮೃತನ ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ. 'ನಿನ್ನೆ ರಾತ್ರಿ ಮಂಜುನಾಥ್ನನ್ನು ಸಂತೋಷ್ ಎಂಬಾತನೇ ಬಂದು ಮನೆಯಿಂದ ಕರೆದುಕೊಂಡು ಹೋಗಿದ್ದ. ಅವರಿಬ್ಬರೂ ಒಟ್ಟಿಗೆ ಹೋದವರು, ಈಗ ನನ್ನ ತಮ್ಮ ಹೆಣವಾಗಿ ಬಿದ್ದಿದ್ದಾನೆ. ಆ ಸಂತೋಷನೇ ಏನೋ ಮಾಡಿದ್ದಾನೆ' ಎಂದು ಮೃತನ ಅಕ್ಕ ಲಕ್ಷ್ಮಿ ಪೊಲೀಸರ ಮುಂದೆ ಕಣ್ಣೀರು ಹಾಕುತ್ತಾ ದೂರಿದ್ದಾರೆ.
ಮೃತ ಮಂಜುನಾಥ್ ಕಳೆದ ಹಲವು ವರ್ಷಗಳಿಂದ ಗಾರೆ ಕೆಲಸ ಮಾಡಿಕೊಂಡಿದ್ದ. ಆತನಿಗೆ ಮದ್ಯಪಾನದ ವಿಪರೀತ ಚಟವಿತ್ತು ಎನ್ನಲಾಗಿದೆ. ಪ್ರತಿದಿನ ಕೆಲಸ ಮುಗಿಸಿ ಬಂದ ಮೇಲೆ ಕುಡಿಯುವ ಅಭ್ಯಾಸ ಹೊಂದಿದ್ದ ಮಂಜುನಾಥ್, ನಿನ್ನೆ ರಾತ್ರಿ ಕೂಡ ಸಂತೋಷ್ ಜೊತೆಗೆ ಕುಡಿಯಲು ಹೋಗಿರಬಹುದು ಎಂದು ಶಂಕಿಸಲಾಗಿದೆ. ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ಗಲಾಟೆಯಾಗಿ ಈ ಸಾವು ಸಂಭವಿಸಿದೆಯೇ ಅಥವಾ ಯಾವುದೋ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಸಂತೋಷ್ ಕೊಲೆ ಮಾಡಿದ್ದಾನೆಯೇ ಎಂಬ ಸತ್ಯಾಸತ್ಯತೆ ಹೊರಬರಬೇಕಿದೆ.
ಘಟನಾ ಸ್ಥಳಕ್ಕೆ ತುಂಗಾ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಮೇಲೆ ಯಾವುದೇ ಗುರುತರ ಗಾಯದ ಗುರುತುಗಳಿವೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಕುಟುಂಬಸ್ಥರ ದೂರಿನ ಮೇರೆಗೆ ಸಂತೋಷ್ ಎಂಬಾತನನ್ನು ವಶಕ್ಕೆ ಪಡೆಯಲು ಹುಡುಕಾಟ ನಡೆಸುತ್ತಿದ್ದಾರೆ. ಮಂಜುನಾಥ್ ಸಾವು ಇಡೀ ಕುಟುಂಬವನ್ನು ಬೀದಿಗೆ ತಂದಿದ್ದು, ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.