ಯುವತಿಗೆ ಕೊರೋನಾ: ತರಲಘಟ್ಟ ಗ್ರಾಮ ಸೀಲ್‌ಡೌನ್‌

By Suvarna NewsFirst Published May 21, 2020, 8:30 AM IST
Highlights

ಮುಖ್ಯಮಂತ್ರಿಗಳ ಸ್ವಕ್ಷೇತ್ರ ಶಿಕಾರಿಪುರ ಪಟ್ಟಣಕ್ಕೆ ಕೇವಲ 5-6 ಕಿ.ಮೀ ದೂರದಲ್ಲಿನ ತರಲಘಟ್ಟ ಗ್ರಾಮದಲ್ಲಿ ಕೊರೋನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಈ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಶಿಕಾರಿಪುರ(ಮೇ.21): ತಾಲೂಕಿನ ತರಲಘಟ್ಟ ಗ್ರಾಮದಲ್ಲಿನ ಯುವತಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಗ್ರಾಮಕ್ಕೆ ತುರ್ತು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಮುಖ್ಯಮಂತ್ರಿಗಳ ಸ್ವಕ್ಷೇತ್ರ ಶಿಕಾರಿಪುರ ಪಟ್ಟಣಕ್ಕೆ ಕೇವಲ 5-6 ಕಿ.ಮೀ ದೂರದಲ್ಲಿನ ತರಲಘಟ್ಟಗ್ರಾಮದಲ್ಲಿ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದ ಜಿಲ್ಲಾಡಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೋಂಕು ವ್ಯಾಪಿಸದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಖುದ್ದು ಅವಲೋಕಿಸಲು ಜಿಲ್ಲಾಧಿಕಾರಿ ಭೇಟಿ ನೀಡಿ, ತರಲಘಟ್ಟ ಹಾಗೂ ತರಲಘಟ್ಟ ತಾಂಡಾವನ್ನು ಕಂಟೈನ್‌ಮೆಂಟ್‌ ಜೋನ್‌ ಎಂದು ಘೋಷಿಸಿದರು.

ಯುವತಿಯ ಮನೆಯ ಸಮೀಪದ 5 ಕಿ.ಮೀ ವ್ಯಾಪ್ತಿಯನ್ನು ಬಫರ್‌ಜೋನ್‌ ಎಂದು ಗುರುತಿಸಲಾಗಿದ್ದು ವ್ಯಾಪ್ತಿಯಲ್ಲಿನ ಜನತೆ ಮನೆಯಿಂದ ಹೊರಬರದಂತೆ ಅಗತ್ಯ ವಸ್ತು, ತರಕಾರಿ - ಹಾಲು ಪೂರೈಸಲು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು. ಈ ವ್ಯಾಪ್ತಿಯಲ್ಲಿ ದಿನದ 24 ಕಾರ್ಯನಿರ್ವಹಿಸುವ ಆಸ್ಪತ್ರೆ ತೆರೆಯಲು ಸೂಚಿಸಿದರು. ಸೋಂಕು ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದ ಅವರು ಗ್ರಾಮದ ಎಲ್ಲ ಸಂಪರ್ಕ ರಸ್ತೆಗಳನ್ನು ಬಂದ್‌ಗೊಳಿಸಲು ಮತ್ತು ಪ್ರತಿ ಮನೆ ಸದಸ್ಯರ ಆರೋಗ್ಯ ಪರೀಕ್ಷಿಸಲು ತಿಳಿಸಿದರು. ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಬಿಪಿ ಕಿಟ್‌ಗಳನ್ನು ವಿತರಿಸಿದರು.

ಸೋಂಕು ಭಾರೀ ಹೆಚ್ಚಳ: ರಾಜ್ಯದಲ್ಲಿ ಮೊದಲ 500 ಕೇಸಿಗೆ 46 ದಿನ, ಈಗ ಕೇವಲ 7 ದಿನ!

ಜಿಲ್ಲಾಧಿಕಾರಿಗಳ ಆದೇಶದನ್ವಯ ತಹಸೀಲ್ದಾರ್‌ ಎಂ.ಪಿ. ಕವಿರಾಜ್‌ ನೇತೃತ್ವದಲ್ಲಿ ಆರೋಗ್ಯ, ಕಂದಾಯ, ರಕ್ಷಣಾ ಇಲಾಖೆ, ಆಶಾ - ಅಂಗನವಾಡಿ ಕಾರ್ಯಕರ್ತೆಯರು ಕೂಡಲೇ ಬಿರುಸಿನ ಕ್ರಮ ಕೈಗೊಂಡರು.

ಸೋಂಕು ಪೀಡಿತ ಯುವತಿ ಸಹೋದರಿ, ತಾಯಿ ಸಹಿತ ಕುಟುಂಬದ ಸದಸ್ಯರ ಜತೆಗೆ ಯುವತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಗ್ರಾಪಂ ಸದಸ್ಯರ ಸಹಿತ ವ್ಯಾಪ್ತಿಯ ಆಶಾ ಅಂಗನವಾಡಿ 7 ಕಾರ್ಯಕರ್ತರನ್ನು ಕ್ವಾರಂಟೈನ್‌ಗೊಳಪಡಿಸಲಾಗಿದೆ. ಸೋಂಕು ಪೀಡಿತ ಯುವತಿಯ ಟ್ರಾವಲ್‌ ಹಿಸ್ಟರಿ ಸಂಗ್ರಹಕ್ಕಾಗಿ ತೆರಳಿದ್ದ ಪೊಲೀಸ್‌ ವೃತ್ತ ನಿರೀಕ್ಷಕ ಬಸವರಾಜ್‌ರನ್ನು ಕ್ವಾರಂಟೈನ್‌ಗೊಳಪಡಿಸಲಾಗಿದ್ದು, ವೃತ್ತ ನಿರೀಕ್ಷಕರ ಜತೆ ಸಂಪರ್ಕದಲ್ಲಿದ್ದ ಪೊಲೀಸ್‌ ಉಪಾಧೀಕ್ಷಕ ಶಿವಾನಂದ್‌ ಸ್ವಯಂ ಕ್ವಾರಂಟೈನ್‌ಗೊಳಗಾಗಿದ್ದಾರೆ ಎನ್ನಲಾಗಿದೆ. ಗ್ರಾಮದಲ್ಲಿನ ಎಂಎಸ್‌ಐಎಲ್‌ ಮಳಿಗೆ ಮುಚ್ಚಲಾಗಿದೆ.

ತಹಸೀಲ್ದಾರ್‌ ಎಂ.ಪಿ. ಕವಿರಾಜ್‌, ತಾಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ. ಪೂಜಾರ್‌ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

click me!