ಪೊಲೀಸ್‌ ಇಲಾಖೆ ಸಾಹಸ: 1.30 ಕೋಟಿ ದಂಡ ವಸೂಲಿ

By divya perlaFirst Published Jul 14, 2019, 9:13 AM IST
Highlights

ಶಿವಮೊಗ್ಗ ಪೊಲೀಸರು ವಾಹನಗಳಿಗೆ ಸಂಬಂಧಿಸಿದಂತೆ 1,06,066 ಪ್ರಕರಣಗಳಲ್ಲಿ .1,30,01,300 ದಂಡ ವಸೂಲಿ ಮಾಡಿದ್ದಾರೆ. ಚಾಲಕರು, ತಮ್ಮ ವಾಹನಗಳ ದಾಖಲಾತಿಗಳನ್ನು ಪಕ್ಕ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ವಾಹನಗಳ ತಪಾಸಣೆಯನ್ನು ಕಟ್ಟು ನಿಟ್ಟಾಗಿ ಮಾಡಲಾಗುತ್ತಿದೆ.

ಚಿಕ್ಕಮಗಳೂರು (ಜು.14) : ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪೊಲೀಸರು ವಾಹನಗಳಿಗೆ ಸಂಬಂಧಿಸಿದಂತೆ 1,06,066 ಪ್ರಕರಣಗಳಲ್ಲಿ .1,30,01,300 ದಂಡ ವಸೂಲಿ ಮಾಡಿದ್ದಾರೆ.

ಹೆಲ್ಮೆಟ್‌ ಹಾಕಿಕೊಳ್ಳದೇ ವಾಹನಗಳ ಚಾಲನೆ, ವಾಹನಗಳ ವಿಮೆ ಹಾಗೂ ವಾಹನಗಳು ದಾಖಲೆ ಹೊಂದದಿರುವುದು ಮತ್ತು ನೋ ಪಾರ್ಕಿಂಗ್‌ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾರಿ ದಂಡ ಮೊತ್ತವನ್ನು ಜಿಲ್ಲೆಯ ಪೊಲೀಸರು ಕಲೆ ಹಾಕಿದ್ದಾರೆ. ಇದರಲ್ಲಿ ಟ್ರಾಫಿಕ್‌ ಪೊಲೀಸರ ಕೊಡುಗೆ ಅಪಾರ.

ಸರಕು ಸಾಗಾಣಿಕೆ ವಾಹನಗಳಲ್ಲಿ ಜನರನ್ನು ಕರೆದುಕೊಂಡು ಹೋಗುವುದನ್ನು ಉಚ್ಛ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಇದಕ್ಕೆ ಕಡಿವಾಣ ಹಾಕದೇ ಹೋದರೆ ಸಂಬಂಧಪಟ್ಟಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಾಕೀತು ಮಾಡಿದೆ. ಆದ್ದರಿಂದ ಈ ಆದೇಶ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ಬಂದಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಹರೀಶ್‌ ಪಾಂಡೆ ಅವರು ಜಂಟಿ ಸಭೆಗಳನ್ನು ನಡೆಸಿ, ಜನರಿಗೆ ಹಾಗೂ ಕಾಫಿ ಬೆಳೆಗಾರರಿಗೆ ಮನವರಿಕೆ ಮಾಡಿದ್ದರು. ಸರಕು ಸಾಗಾಣಿಕೆ ವಾಹನಗಳಲ್ಲಿ ಜನರನ್ನು ಕರೆದುಕೊಂಡು ಹೋಗುವುದನ್ನು ನಿಷೇಧಿಸಿರುವುದು ನಿಧಾನವಾಗಿ ಜಾರಿಗೆ ತರಲಾಗಿದೆ.

ಸರಕು ಸಾಗಾಣೆ ವಾಹನಗಳಲ್ಲಿ ಜನರನ್ನು ಕರೆದುಕೊಂಡು ಹೋಗುವ ವಾಹನಗಳಿಂದ ದಂಡ ವಿಧಿಸುವುದು ಜಾರಿಗೆ ತರಲಾಗಿದೆ. ಈ ಸಂಬಂಧ ಜೂ.20ರಿಂದ ಜು.11 ರವರೆಗೆ ಜಿಲ್ಲೆಯಲ್ಲಿ 867 ಪ್ರಕರಣಗಳನ್ನು ದಾಖಲು ಮಾಡಿ 1,75,700 ರುಪಾಯಿ ದಂಡ ವಸೂಲಿ ಮಾಡಲಾಗಿದೆ. ಆಟೋಗಳಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವುದು ಹಾಗೂ ಇತರೆ ವಾಹನಗಳಲ್ಲಿ ನಿಗದಿಗಿಂತ ಹೆಚ್ಚು ಜನರನ್ನು ಕರೆದುಕೊಂಡು ಹೋಗುವಂತ್ತಿಲ್ಲ. ಈ ಸಂಬಂಧ 22 ಪ್ರಕರಣಗಳಡಿ 7,500 ರುಪಾಯಿ ದಂಡವನ್ನು ಪೊಲೀಸ್‌ ಇಲಾಖೆ ವಸೂಲಿ ಮಾಡಿದೆ.

ಅಪಘಾತ ಸಂದರ್ಭ ಚಾಲಕ ಹೆಲ್ಮೆಟ್ ಧರಿಸಿದ್ರೆ ಮಾತ್ರ ವಿಮೆ ಹಣ:

ಇಂಡಿಯನ್‌ ಮೋಟಾರ್‌ ವಾಹನ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ. ಇದರಿಂದಾಗಿ ಬಹಳಷ್ಟುಮಂದಿ ಪೊಲೀಸರ ಕಿರಿಕಿರಿ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸಲೇಬೇಕಾಗಿದೆ. ದ್ವಿಚಕ್ರ ವಾಹನಗಳ ಅಪಘಾತ ಪ್ರಕರಣಗಳಲ್ಲಿ ಚಾಲಕ ಹೆಲ್ಮೆಟ್‌ ಧರಿಸದೇ ಹೋದರೆ ಪ್ರಕರಣವನ್ನು ದಾಖಲಿಸಬಾರದು ಎಂದು ವಿಮಾ ಕಂಪನಿಗಳು ನ್ಯಾಯಾಲಯದ ಮೊರೆಹೋಗಿವೆ. ಹೆಲ್ಮೆಟ್‌ ಕಡ್ಡಾಯವಾಗಿ ಧರಿಸಬೇಕು. ವಾಹನಗಳ ವಿಮೆಯನ್ನು ಹೊಂದಿದರೆ ಮಾತ್ರ ಅಪಘಾತ ಪ್ರಕರಣಗಳಲ್ಲಿ ವಿಮೆ ಹಣ ಸಿಗಲು ಸಾಧ್ಯ. ಈ ಕಾರಣದಿಂದಲೇ ಪೊಲೀಸ್‌ ಇಲಾಖೆ ಚಾಲಕರು, ತಮ್ಮ ವಾಹನಗಳ ದಾಖಲಾತಿಗಳನ್ನು ಪಕ್ಕ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ವಾಹನಗಳ ತಪಾಸಣೆಯನ್ನು ಕಟ್ಟು ನಿಟ್ಟಾಗಿ ಮಾಡುತ್ತಿದೆ.

ಭಿಕ್ಷುಕರ ವೇಷದಲ್ಲಿ ಪೊಲೀಸ್- ನಿಯಮ ಪಾಲಿಸದವರಿಗೆ ನಡು ರಸ್ತೆಯಲ್ಲೇ ಶಿಕ್ಷೆ!

click me!