ಶರಾ​ವತಿ ಹಿನ್ನೀರು ಕುಸಿ​ತ; ಲಾಂಚ್‌​ನಲ್ಲಿ ವಾಹನ ಸಾಗಣೆ ಬಂದ್‌ ಆತಂಕ!

By Kannadaprabha NewsFirst Published Jun 9, 2023, 10:36 AM IST
Highlights

ಶರಾವತಿ ಹಿನ್ನೀರಿನ ಪ್ರಮಾಣ ದಿನೇದಿನೆ ಕಡಿಮೆಯಾಗುತ್ತಿರುವುದರಿಂದ ಮುಂದಿನ 8-10 ದಿನಗಳಲ್ಲಿ ಹೊಳೆಬಾಗಿಲಿನ ಲಾಂಚ್‌ನಲ್ಲಿ ಕೇವಲ ಜನರನ್ನು ಮಾತ್ರ ದಾಟಿಸುತ್ತಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ನೀರು ಕಡಿಮೆಯಾಗಿರುವ ಕಾರಣದಿಂದಾಗಿ ಈಗಾಗಲೇ ಮೇ 26ರಿಂದ ಮುಪ್ಪಾನೆಯಲ್ಲಿ, ಜೂ.4ರಿಂದ ಹಸಿರುಮಕ್ಕಿಯಲ್ಲಿ ಲಾಂಚ್‌ ಸೇವೆಯನ್ನು ಸಂಪೂರ್ಣ ನಿಲ್ಲಿಸಲಾಗಿದೆ.

ಸಾಗರ (ಜೂ.9) : ಶರಾವತಿ ಹಿನ್ನೀರಿನ ಪ್ರಮಾಣ ದಿನೇದಿನೆ ಕಡಿಮೆಯಾಗುತ್ತಿರುವುದರಿಂದ ಮುಂದಿನ 8-10 ದಿನಗಳಲ್ಲಿ ಹೊಳೆಬಾಗಿಲಿನ ಲಾಂಚ್‌ನಲ್ಲಿ ಕೇವಲ ಜನರನ್ನು ಮಾತ್ರ ದಾಟಿಸುತ್ತಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ನೀರು ಕಡಿಮೆಯಾಗಿರುವ ಕಾರಣದಿಂದಾಗಿ ಈಗಾಗಲೇ ಮೇ 26ರಿಂದ ಮುಪ್ಪಾನೆಯಲ್ಲಿ, ಜೂ.4ರಿಂದ ಹಸಿರುಮಕ್ಕಿಯಲ್ಲಿ ಲಾಂಚ್‌ ಸೇವೆಯನ್ನು ಸಂಪೂರ್ಣ ನಿಲ್ಲಿಸಲಾಗಿದೆ.

ಹೊಳೆಬಾಗಿಲಿನಲ್ಲಿ ಲಾಂಚ್‌ ಸೇವೆ ಸಂಪೂರ್ಣ ಸ್ಥಗಿತವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಆದರೆ ಲಾಂಚ್‌ನಲ್ಲಿ ಬಸ್‌ ಸೇರಿದಂತೆ ಯಾವುದೇ ವಾಹನಗಳನ್ನು ಹಾಕದೆ ಕೇವಲ ಜನರನ್ನು ಮಾತ್ರ ದಾಟಿಸುತ್ತಾರೆ ಎನ್ನ​ಲಾ​ಗಿದೆ.

 

ಶಿವಮೊಗ್ಗ: ಕುಸಿದು ಬಿದ್ದು ವ್ಯಕ್ತಿ ಸಾವು, ಬ್ಯಾಟರಿ ಲೈಟ್‌ನಲ್ಲಿ ಮರಣೋತ್ತರ ಪರೀಕ್ಷೆ, ನಾಗರಿಕರ ಆಕ್ರೋಶ

ಕಳೆದ ಡಿಸೆಂಬರ್‌ ತಿಂಗಳವರೆಗೂ ಮಳೆಯಾಗಿದ್ದರೂ ಈ ವರ್ಷದ ಭಾರಿ ಬಿಸಿಲಿನ ತಾಪಕ್ಕೆ ತಾಲೂಕಿನ ಎಲ್ಲ ಭಾಗದಲ್ಲಿ ನೀರಿನ ಮೂಲಗಳು ಬತ್ತಿನಿಂತಿವೆ. ಇದರ ಭಾಗವಾಗಿ ಶರಾವತಿ ಹಿನ್ನೀರು ಕೂಡ ದಿನೇ ದಿದೇ ಕಡಿಮೆಯಾಗುತ್ತಿದ್ದು ಇನ್ನೊಂದು ವಾರದಲ್ಲಿ ಸರಿಯಾದ ಮಳೆಯಾಗದಿದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ. ಹಾಲಿ ಸಿಗಂದೂರು ಸಂಪರ್ಕಿಸುವ ಲಾಂಚಿನಲ್ಲಿ ರೂಟ್‌ ಬಸ್‌ ಸೇರಿದಂತೆ ಎಲ್ಲ ರೀತಿಯ ವಾಹನಗಳನ್ನು ದಾಟಿಸಲಾಗುತ್ತಿದೆ. ಆದರೆ ಪರಿಸ್ಥಿತಿ ಹಿಗೆಯೇ ಮುಂದುವರಿದರೆ ಲಾಂಚಿನಲ್ಲಿ ವಾಹನಗಳಿಗೆ ಅವಕಾಶ ನೀಡದೆ ಕೇವಲ ಜನರಿಗೆ ಮಾತ್ರ ಅವಕಾಶ ನೀಡುವ ವ್ಯವಸ್ಥೆ ಜಾರಿಯಾಗಲಿದೆ.

ನಾಡಿಗೆ ಬೆಳಕು ನೀಡಲು ಸರ್ವಸ್ವವನ್ನು ಕಳೆದುಕೊಂಡಿರುವ ತಾಲೂಕಿನ ತುಮರಿ ಭಾಗದ ಜನರಿಗೆ ಲಾಂಚ್‌ ವ್ಯವಸ್ಥೆ ಹೊರಜಗತ್ತಿನ ಸಂಪರ್ಕ ಸೇತುವೆಯಾಗಿದೆ. ಲಾಂಚ್‌ ಇಲ್ಲದಿದ್ದರೆ ತಾಲೂಕು ಕೇಂದ್ರವಾದ ಸಾಗರಕ್ಕೆ ನೂರಾರು ಕಿ.ಮೀ. ಸುತ್ತುಹಾಕಿಕೊಂಡು ಬರಬೇಕು. ದೈನಂದಿನ ವ್ಯವಹಾರಗಳಿಗೆ, ಶೈಕ್ಷಣಿಕ, ಆರೋಗ್ಯದ ವಿಷಯದಲ್ಲಿ ನಿಟ್ಟೂರು, ನಗರ-ಹೊಸನಗರ ಮಾರ್ಗವಾಗಿ ಸಾಗರಕ್ಕೆ ಬರುವುದು ಕಷ್ಟಸಾಧ್ಯ. ತುರ್ತು ಆರೋಗ್ಯ ಸೇವೆಯ ಸಂದರ್ಭದಲ್ಲಂತೂ ಸುತ್ತುಹಾಕಿಕೊಂಡು ಸಾಗರವನ್ನು ಸಂಪರ್ಕಿಸಲು ಸಾಕಷ್ಟುಸಮಯಾವಕಾಶ ಬೇಕು. ಈ ಹಿನ್ನೆಲೆಯಲ್ಲಿ ಲಾಂಚ್‌ ಸೇವೆ ಸಮರ್ಪಕವಾಗಿ ದೊರೆಯದಿದ್ದರೆ ಆ ಭಾಗದ ಜನರು ಆತಂಕಿತರಾಗುವುದು ಸಹಜ. ಆದರೆ ಕೇವಲ ಜನರ ಓಡಾಟಕ್ಕಂತೂ ಸದ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.

ತಡರಾತ್ರಿ ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಬಾರ್ ಕ್ಯಾಶಿಯರ್ ಕೊಲೆ ಮಾಡಿದ ಕುಡುಕರು!

ಮುಂದಿನ ಒಂದು ವಾರ ಕಾಲ ಲಾಂಚಿನಲ್ಲಿ ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. ಒಂದು ವಾರದ ನಂತರೂ ಮಳೆಯಾಗದೆ ಹಿನ್ನೀರಿನ ಪ್ರಮಾಣ ಮತ್ತಷ್ಟುಕಡಿಮೆಯಾದರೆ ಆಗ ಲಾಂಚಿನಲ್ಲಿ ಯಾವುದೇ ರೀತಿ ವಾಹನಗಳನ್ನು ಹಾಕದೆ ಕೇವಲ ಜನರನ್ನು ಮಾತ್ರ ದಾಟಿಸಲಾಗುವುದು. ಹೊಳೆಬಾಗಿಲಿನಲ್ಲಿ ಲಾಂಚ್‌ ಸೇವೆ ಸಂಪೂರ್ಣ ಸ್ಥಗಿತಗೊಳ್ಳುವುದಿಲ್ಲ. ಹಾಗಾಗಿ ನಡುಗಡ್ಡೆಯ ಜನರು ಯಾವುದೇ ಆತಂಕ ಪಡಬೇಕಿಲ್ಲ. ಕಳೆದ 4-5 ವರ್ಷಗಳ ಹಿಂದೆ ಹಿಗೇಯೇ ಹಿನ್ನೀರಿನ ಪ್ರಮಾಣ ಕಡಿಮೆಯಾದಾಗಲೂ ಜನರನ್ನು ಮಾತ್ರ ದಾಟಿಸಲಾಯಿತೇ ಹೊರತು ಲಾಂಚ್‌ ಸೇವೆ ಸಂಪೂರ್ಣ ಸ್ಥಗಿತಗೊಳಿಸಿರಲಿಲ್ಲ. ಈಗಲೂ ಲಾಂಚ್‌ ಸ್ಥಗಿತಗೊಳ್ಳುವುದಿಲ್ಲ.

ದಾಮೋದರ ನಾಯ್‌್ಕ ಸಹಾಯಕ ಕಡವು ನಿರೀಕ್ಷಕರು

click me!