ವಿನಯ್‌ ಗುರೂಜಿ ಎಂಜಲು ಪ್ರಸಾದ ಟೀಕೆ : ಶರವಣ ಆಕ್ಷೇಪ

By Kannadaprabha NewsFirst Published Aug 21, 2020, 8:28 AM IST
Highlights

ವಿನಯ್ ಗುರೂಜಿ ಎಂಜಲು ಪ್ರಸಾದ ವಿಚಾರಕ್ಕೆ ಸಂಬಂಧಿಸಿದಂತೆ ರಘು ಆಚಾರ್ ಹೇಳಿಕೆಗೆ ಶರವಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಆ.21): ಗುರುಗಳಲ್ಲಿ ಭಗವಂತನನ್ನು ಕಾಣುವುದರಿಂದ ವಿನಯ್‌ ಗುರೂಜಿ ಅವರು ಸೇವಿಸಿದ ಆಹಾರವನ್ನು ಪ್ರಸಾದವೆಂದು ಭಾವಿಸುತ್ತೇವೆ ವಿಧಾನಪರಿಷತ್‌ ಮಾಜಿ ಸದಸ್ಯ ಟಿ.ಎ.ಶರವಣ ತಿಳಿಸಿದ್ದಾರೆ. 

ವಿನಯ್‌ ಗುರೂಜಿ ಕುರಿತ ವಿಧಾನಪರಿಷತ್‌ ಸದಸ್ಯ ರಘು ಆಚಾರ್‌ ಹೇಳಿಕೆಯನ್ನು ಖಂಡಿಸಿರುವ ಶರವಣ, ತಮ್ಮ ಹಗುರವಾದ ಮಾತುಗಳಿಂದ ನನ್ನ ಮನಸ್ಸಿಗೆ ನೋವಾಗಿದೆ. ಇದು ನಿಮ್ಮ ಸ್ಥಾನಕ್ಕೆ ಶೋಭೆ ತರುವ ಮಾತಲ್ಲ ಎಂದು ತಿಳಿಸಿದ್ದಾರೆ. 

ಧಾರ್ಮಿಕ ನಂಬಿಕೆಗಳು ಜನರ ವೈಯಕ್ತಿಕ ವಿಚಾರಕ್ಕೆ ಮತ್ತು ಅವರವರ ಭಾವನೆಗಳಿಗೆ ಒಳಪಟ್ಟಿರುತ್ತದೆ. 

ಅವಧೂತ ವಿನಯ್ ಗುರೂಜಿ ನಡೆ ಬಗ್ಗೆ ಬಹಿರಂಗ ಆಕ್ಷೇಪ...

ಗುರೂಜಿಯವರ ಅಪಾರ ಶಿಷ್ಯವೃಂದದಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ. ಆದ್ದರಿಂದ ಗುರುಗಳು ಸೇವಿಸಿದ ಆಹಾರವನ್ನು ಪ್ರಸಾದವೆಂದು ಭಾವಿಸಿದ್ದೇನೆ. ಗುರುಗಳು ಸೇವಿಸಿದ ಆಹಾರವನ್ನು ಪ್ರಸಾದವಾಗಿ ಸೇವಿಸುವಂತೆ ಯಾರಿಗೂ ಒತ್ತಾಯ ಮಾಡಿಲ್ಲ. ಅದೇ ರೀತಿ ತಮಗೂ ಬಲವಂತಪಡಿಸಿಲ್ಲ. ನಂಬಿಕೆ ಇರುವವರು ಪ್ರಸಾದವನ್ನು ಸೇವಿಸುತ್ತಾರೆ. ಆದರೆ, ನೀವು ಕೇವಲ ಪ್ರಚಾರಕ್ಕಾಗಿ ವ್ಯಕ್ತಿಯ ನಂಬಿಕೆಯನ್ನು ಬಹಿರಂಗವಾಗಿ ಚರ್ಚಿಸುವುದು ಸರಿಯಲ್ಲ ಎಂದಿದ್ದಾರೆ.

ರಂಭಾಪುರಿ ಶ್ರೀ ಪಾದಪೂಜೆ ಮಾಡಿ ಕಾಲಜ್ಞಾನ ನುಡಿದ ವಿನಯ್ ಗುರೂಜಿ...

ನಮ್ಮ ಆಚಾರ-ವಿಚಾರಗಳು ಮತ್ತು ನಂಬಿಕೆಗಳ ಬಗ್ಗೆ ಕೆಲವರು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ಇಂತಹ ವಿಚಾರಗಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುವುದನ್ನು ಮೊದಲು ನಿಲ್ಲಿಸಬೇಕು. ಒಂದು ವೇಳೆ ತಮಗೆ ವಿನಯ್‌ ಗುರೂಜಿ ಅವರ ಬಗ್ಗೆ ಮಾಹಿತಿ ತಿಳಿಯದಿದ್ದರೆ, ತಮ್ಮ ಪಕ್ಷದ ಅಧ್ಯಕ್ಷರು ಮತ್ತು ಹಿರಿಯ ನಾಯಕರನ್ನು ಕೇಳಿ ತಿಳಿದುಕೊಳ್ಳಿ. ನಮ್ಮ ಆರೋಗ್ಯದ ಬಗ್ಗೆ ನಿಮಗೆ ಖಂಡಿತವಾಗಿಯೂ ಕಾಳಜಿ ಬೇಡ. ಗುರುಗಳು ಆರೋಗ್ಯವಾಗಿ ಇರುವುದರಿಂದ ನಮಗೆ ಯಾವುದೇ ತೊಂದರೆ ಆಗಿಲ್ಲ ಎಂದು ಶರವಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!