ಅಪಾರ್ಟ್‌ಮೆಂಟ್‌ನಲ್ಲಿ ಸತ್ಯನಾರಾಯಣ ಪೂಜೆ: 20ಕ್ಕೂ ಹೆಚ್ಚು ಜನರಿಗೆ ವಕ್ಕರಿಸಿದ ಸೋಂಕು

By Kannadaprabha NewsFirst Published May 2, 2021, 7:51 AM IST
Highlights

ಪದ್ಮನಾಭನಗರದ ಎಸಿಎಸ್‌ ಮೇಘನಾ, ಶಾಲಿನಿ ಅಪಾರ್ಟ್‌ಮೆಂಟ್‌ನಲ್ಲಿ ಪೂಜೆ| ಪೂಜೆಗೆ ಅಪಾರ್ಟ್‌ಮೆಂಟ್‌ ನಿವಾಸಿಗಳು ಮಾತ್ರವಲ್ಲ ಅವರ ಬಂಧು ಮಿತ್ರರು ಕೂಡ ಭಾಗಿ| ಮುನ್ನೆಚ್ಚರಿಕೆ ಕ್ರಮವಾಗಿ ಇಂತಹ ಸಂಕೀರ್ಣಗಳನ್ನು ಮಿನಿ ಕಂಟೈನ್ಮೆಂಟ್‌ ವಲಯಗಳೆಂದು ಘೋಷಿಸುವುದು ಉತ್ತಮ| 

ಬೆಂಗಳೂರು(ಮೇ.02): ಅಪಾರ್ಟ್‌ಮೆಂಟ್‌ವೊಂದರಲ್ಲಿ ಪ್ರತಿಷ್ಠೆಗೆಂದು ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದ ನಂತರ 20ಕ್ಕೂ ಹೆಚ್ಚು ಮಂದಿಯಲ್ಲಿ ಕೊರೋನಾ ಸೋಂಕು ಕಂಡು ಬಂದಿರುವುದು ಈ ಅಪಾರ್ಟ್‌ಮೆಂಟ್‌ ಅನ್ನು ಕಿರು ಸೋಂಕಿತ ವಲಯ ಎಂದು ಘೋಷಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ನಗರದ ಪದ್ಮನಾಭನಗರದ 100 ಅಡಿ ಹೊರ ವರ್ತುಲ ರಸ್ತೆಯಲ್ಲಿರುವ ಎಸಿಎಸ್‌ ಮೇಘನಾ ಮತ್ತು ಶಾಲಿನಿ ಅಪಾರ್ಟ್‌ಮೆಂಟ್‌ನಲ್ಲಿ ಮಾರ್ಚ್‌ ಅಂತ್ಯದವರೆಗೂ ಒಂದೂ ಸೋಂಕಿತ ಪ್ರಕರಣಗಳು ಇರಲಿಲ್ಲ. ನಗರದಲ್ಲಿ ಕೊರೋನಾ ಸೋಂಕು ಹರಡುವಿಕೆ ತಡೆಯಲು ಸರ್ಕಾರ ಜನತಾ ಕರ್ಫ್ಯೂ ಜಾರಿಗೆ ತಂದು ಹೆಚ್ಚು ಜನರು ಸೇರುವ ಎಲ್ಲ ಕಾರ್ಯಕ್ರಮಗಳನ್ನು ನಿರ್ಬಂಧಿಸಿದ್ದರೂ ಸಹ ಮಾರ್ಚ್‌ 28ರಂದು ಅಪಾರ್ಟ್‌ಮೆಂಟ್‌ನಲ್ಲಿ ದೊಡ್ಡಮಟ್ಟದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಲಾಗಿತ್ತು. ಪೂಜೆಗೆ ಅಪಾರ್ಟ್‌ಮೆಂಟ್‌ ನಿವಾಸಿಗಳು ಮಾತ್ರವಲ್ಲ ಅವರ ಬಂಧು ಮಿತ್ರರು ಕೂಡ ಇದರಲ್ಲಿ ಭಾಗಿಯಾಗಿದ್ದರು.

"

ಮೊದಲ ದಿನವೇ ‘ವ್ಯಾಕ್ಸಿನ್‌’ ಕೊರತೆ: ಹಲವರಿಗೆ ಲಸಿಕೆ ಸಿಗದೆ ವಾಪಸ್‌

ಈ ವೇಳೆ ಕೋವಿಡ್‌ ನಿಯಮಾವಳಿಯನ್ನು ಪಾಲಿಸಲಾಗಿಲ್ಲ. ಅಪಾರ್ಟ್‌ಮೆಂಟ್‌ನಲ್ಲಿ 600ಕ್ಕೂ ಹೆಚ್ಚು ನಿವಾಸಿಗಳು ವಾಸವಾಗಿದ್ದಾರೆ. ಅವರಲ್ಲಿ ಬಹುತೇಕರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಈ ಧಾರ್ಮಿಕ ಕಾರ್ಯಕ್ರಮವಾಗಿ ಕೆಲವೇ ದಿನಗಳಲ್ಲಿ ಈ ಅಪಾರ್ಟ್‌ಮೆಂಟ್‌ ಕರೋನಾ ಪಿಡುಗು ಹಾವಳಿ ಆರಂಭಿಸಿತು ಎಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಾರೆ.

ಇಂದು 19ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಇದ್ದು, ಕೆಲವರು ಗುಣಮುಖರಾಗಿದ್ದಾರೆ. ಕೋವಿಡ್‌ ಸೋಂಕು ಹೆಚ್ಚುತ್ತಲೇ 600 ನಿವಾಸಿಗಳಲ್ಲಿ ಹಲವರು ತಮ್ಮ ಊರುಗಳಿಗೆ ತೆರಳಿದ್ದಾರೆ. ಸದ್ಯಕ್ಕೆ 400ಕ್ಕಿಂತ ಕಡಿಮೆ ನಿವಾಸಿಗಳು ಮಾತ್ರ ಉಳಿದುಕೊಂಡಿದ್ದಾರೆ. ಹಾಗಾಗಿ ಅಪಾರ್ಟ್‌ಮೆಂಟ್‌ನಲ್ಲಿ ಇಷ್ಟರ ಮಟ್ಟಿಗೆ ಸೋಂಕಿತ ಪ್ರಕರಣಗಳಿದ್ದರೂ ಸ್ಯಾನಿಟೈಸ್‌ ಸಹ ಮಾಡಿಲ್ಲವೆಂದು ದೂರು ಕೇಳಿಬಂದಿವೆ.

ಬಿಬಿಎಂಪಿ ಸಿಬ್ಬಂದಿ ಅಪಾರ್ಟ್‌ಮೆಂಟ್‌ ಪರೀಕ್ಷಿಸಲು ಬಂದರೆ ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘದ ಸಹ ಸಂಘದ ಕಾರ್ಯದರ್ಶಿ ಅನುಮತಿ ನೀಡಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಇಂತಹ ಸಂಕೀರ್ಣಗಳನ್ನು ಮಿನಿ ಕಂಟೈನ್ಮೆಂಟ್‌ ವಲಯಗಳೆಂದು ಘೋಷಿಸುವುದು ಉತ್ತಮ. ಇದರಿಂದ ಕೊರೋನಾ ಸೋಂಕು ಇತರರಿಗೆ ಹರಡದಂತೆ ತಡೆಯಲು ಸಾಧ್ಯ ಎಂಬುದು ಅಪಾರ್ಟ್‌ಮೆಂಟ್‌ ಸುತ್ತಮುತ್ತಲ ಜನರ ಒತ್ತಾಯ.

ಪ್ರತಿವರ್ಷದಂತೆ ಈ ಬಾರಿಯೂ ಆಚರಿಸಿದಂತೆ ಈ ಬಾರಿಯೂ ಆಚರಿಸಿದ್ದೇವೆ. ಈ ಕಾರಣದಿಂದ ಸೋಂಕು ಹರಡಿಲ್ಲ. ಏಪ್ರಿಲ್‌ನಲ್ಲಿ ಎಂಟ್ಹತ್ತು ಜನರಲ್ಲಿ ಸೋಂಕು ಕಂಡುಬಂದಿತ್ತು. ಅವರು ಹೋಂ ಕ್ವಾರಂಟೈನ್‌ ಆಗಿ ವಾಸಿ ಮಾಡಿಕೊಂಡಿದ್ದಾರೆ. ಈಗ ಮೂರ್ನಾಲ್ಕು ಜನರಲ್ಲಿ ಮಾತ್ರ ಸೋಂಕಿದ್ದು, ಅವರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಯಾರೋ ದುರುದ್ದೇಶದಿಂದ ವದಂತಿ ಹಬ್ಬುತ್ತಿದ್ದಾರೆ ಎಂದು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಮಮೂರ್ತಿ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!