Bride Hunting: ಬ್ರಾಹ್ಮಣ ಯುವಕರಿಗೆ ವಧು ಸಿಗುತ್ತಿಲ್ಲ, ಕನ್ಯಾನ್ವೇಷಣೆಗೆ 'ಉತ್ತರ' ಮಾರ್ಗ!

Suvarna News   | Asianet News
Published : Dec 05, 2021, 01:16 PM IST
Bride Hunting: ಬ್ರಾಹ್ಮಣ ಯುವಕರಿಗೆ ವಧು ಸಿಗುತ್ತಿಲ್ಲ, ಕನ್ಯಾನ್ವೇಷಣೆಗೆ 'ಉತ್ತರ' ಮಾರ್ಗ!

ಸಾರಾಂಶ

ಬ್ರಾಹ್ಮಣ (Brahmin) ಯುವಕರಿಗೆ ಹುಡುಗಿ ಸಿಗುವುದು ಕಷ್ಟವಾಗಿದೆ.  ಇದು ಬ್ರಾಹ್ಮಣ ಸಮಾಜದಲ್ಲಿ ದೊಡ್ಡ ಸಮಸ್ಯೆಯಾಗಿದ್ದು, ಉತ್ತರ ಕನ್ನಡ (Uttara Kannada) ಜಿಲ್ಲೆ ಶಿರಸಿಯ (Sirsi) ಸೋಂದಾ ಸ್ವರ್ಣವಲ್ಲಿ ಮಠ ಇದನ್ನು ಗಂಭೀರವಾಗಿ ತೆಗೆದುಕೊಂಡು, ಪರಿಹಾರ ಕಂಡು ಹಿಡಿಯಲು ಮುಂದಾಗಿದೆ.   

ಉತ್ತರ ಕನ್ನಡ (ಡಿ. 05):  ಮನೆ ಕಟ್ಟಿ ನೋಡು ಮದುವೆ (Marriage) ಮಾಡಿ ನೋಡು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಏಕೆಂದರೆ ಮನೆ (Home) ಕಟ್ಟುವುದು ಮತ್ತು ಮದುವೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಭಾರತದಲ್ಲಿ ಗಂಡು ಹೆಣ್ಣಿನ ಮಧ್ಯೆ ಅನುಪಾತದಲ್ಲಿ (Ratio) ಹೆಣ್ಣು ಮಕ್ಕಳ (girls) ಸಂಖ್ಯೆ ತುಂಬಾ ಕಡಿಮೆ ಇರುವ ಸಂದರ್ಭದಲ್ಲಂತೂ ಮದುವೆ ಮಾಡುವುದು ಸಾಹಸವೇ ಸರಿ. ಅದರಲ್ಲೂ ತಮ್ಮ ಜಾತಿ ಕುಲದವರನ್ನೇ ಮದುವೆ ಮಾಡಿಕೊಳ್ಳಬೇಕೆನ್ನುವವರಿಗೆ ಮದುವೆ ಮಾಡಿಸುವುದು ಎಂದರೆ ದೊಡ್ಡ ಹೋರಾಟ ಮಾಡಿದಂತೆ. ಅದರಲ್ಲೂ ಬ್ರಾಹ್ಮಣ (brahmin) ಸಮುದಾಯದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಿದ್ದು, ಗಂಡು ಮಕ್ಕಳಿಗೆ ವಧು (Bride) ಸಿಗುತ್ತಿಲ್ಲ. 

"

 'ನನ್ನ ಮಗ ಓದಿದ್ದಾನೆ, ಒಳ್ಳೆಯ ಕೆಲಸದಲ್ಲಿದ್ದಾನೆ, ಆದರೂ ಹುಡುಗಿ ಸಿಗುತ್ತಿಲ್ಲ' ಎಂದು ಪೋಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಕೃಷಿಕರು, ಮನೆಯಲ್ಲಿಯೇ ಇರುವವರು ಪುರೋಹಿತರಿಗೆ ಹುಡುಗಿ ಸಿಗುವುದು ಕಷ್ಟ ಕಷ್ಟ ಎನ್ನುವಂತಾಗಿದೆ. ಇದು ಬ್ರಾಹ್ಮಣ ಸಮಾಜದಲ್ಲಿ ದೊಡ್ಡ ಸಮಸ್ಯೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆ ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠ ಇದನ್ನು ಗಂಭೀರವಾಗಿ ತೆಗೆದುಕೊಂಡು, ಪರಿಹಾರ ಕಂಡು ಹಿಡಿಯಲು ಮುಂದಾಗಿದೆ. ಸ್ವರ್ಣವಲ್ಲಿ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸ್ವಾಮಿಗಳ ಮಾರ್ಗದರ್ಶನದಲ್ಲಿ 40 ಬ್ರಾಹ್ಮಣ ಯುವಕರು, ಉತ್ತರ ಪ್ರದೇಶದ ಯುವತಿಯರೊಂದಿಗೆ ವಿವಾಹವಾಗಿದ್ದಾರೆ. 

ಉತ್ತರ ಪ್ರದೇಶದಲ್ಲಿ (Uttar Pradesh) ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣರಿದ್ಧಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಬಡತನ, ಅನಕ್ಷರತೆ , ವರದಕ್ಷಿಣೆ ಕಾರಣಗಳಿಂದ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಲು ಪೋಷಕರು ಹೆಣಗಾಡುತ್ತಿದ್ಧಾರೆ. ಅಂತಹ ಹೆಣ್ಣು ಮಕ್ಕಳಿಗೆ ಬಾಳು ಕೊಟ್ಟ ಹಾಗಾಗುತ್ತದೆ, ಇತ್ತ ಗಂಡು ಮಕ್ಕಳಿಗೂ ಮದುವೆಯಾದಂತಾಗುತ್ತದೆ ಎಂದು ಶ್ರೀ ಮಠದ ವತಿಯಿಂದ 'ಸಪ್ತಪದಿ' ಕಾರ್ಯಕ್ರಮ ರೂಪಿಸಲಾಗಿದೆ. ಇದರಿಂದ ದೊಡ್ಡ ಮಟ್ಟದಲ್ಲಿ ಅನುಕೂಲವೂ ಆಗುತ್ತಿದೆ. ಉತ್ತರ ಭಾರತದ ಯುವತಿಯರಿಗೆ ಇಲ್ಲಿನ ಭಾಷೆ, ಸಂಸ್ಕೃತಿ, ಸಂಪ್ರದಾಯಗಳಿಗೆ ಹೊಂದಿಕೊಳ್ಳುವುದು ಮೊದ ಮೊದಲು ಕಷ್ಟವಾದರೂ, ಮನೆಯವರ ಸಹಕಾರ, ವಿಶ್ವಾಸದಿಂದ ನಿಧಾನಕ್ಕೆ ಹೊಂದಿಕೊಳ್ಳುತ್ತಿದ್ದಾರೆ. 

ಬ್ರಾಹ್ಮಣ ಯುವಕರಿಗೆ ವಧು ಸಿಗುತ್ತಿಲ್ಲ ಎನ್ನುವ ಸಮಸ್ಯೆ ಬರೀ ಕರ್ನಾಟಕದ್ದು ಮಾತ್ರವಲ್ಲ, ನೆರೆಯ ರಾಜ್ಯ ತಮಿಳುನಾಡಿನಲ್ಲಿಯೂ ಈ ಸಮಸ್ಯೆ ಇದೆ.  ಬ್ರಾಹ್ಮಣ ಹುಡುಗರಿಗೆ ವಧು ಹುಡಕಲು ತಮಿಳುನಾಡು ಬ್ರಾಹ್ಮಣ ಸಂಘ ದೆಹಲಿ  ಉತ್ತರ ಪ್ರದೇಶ ಹಾಗೂ ಬಿಹಾರಗಳಲ್ಲಿ ವಿಶೇಷ ಅಭಿಯಾನ ಆರಂಭಿಸಿದೆ. ತಮಿಳು ನಾಡು ಬ್ರಾಹ್ಮಣ ಸಂಘದ ಅಧ್ಯಕ್ಷ ಎನ್ ನಾರಾಯಣನ್ '30 ರಿಂದ 40 ವರ್ಷ ವಯಸ್ಸಿನ ಮತ್ತು ವಿವಿಧ ಅರ್ಹತೆಗಳಯುಳ್ಳ ಸುಮಾರು 40,000 ತಮಿಳು ಬ್ರಾಹ್ಮಣ ಯುವಕರು ತಮಿಳುನಾಡಿನಲ್ಲಿ ವಧುಗಳನ್ನು ಹುಡುಕಲು ಹೆಣಗಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಲಿಂಗ ಅನುಪಾತ - ಪ್ರತಿ 10 ಹುಡುಗರಿಗೆ ಕೇವಲ ಆರು ಹುಡುಗಿಯರಿದ್ದಾರೆ ಹಾಗೂ ಸ್ಥಳ ಮತ್ತು ಸ್ಥಾನಮಾನದಲ್ಲಿನ ಅಂತರ ಮತ್ತು ಅಂತರ್ಜಾತಿ ವಿವಾಹಗಳು ಇದಕ್ಕೆ ಕಾರಣಗಳಾಗಿವೆ' ಎನ್ನುತ್ತಾರೆ. 

ಒಟ್ಟಿನಲ್ಲಿ 'ಸಪ್ತಪದಿ' ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಯಶಸ್ವಿಯಾದರೆ, ಬ್ರಾಹ್ಮಣ ಸಮಾಜದಲ್ಲಿ ಬದಲಾವಣೆ ಕಾಣಬಹುದು. ಅವಿವಾಹಿತ ಯುವಕರಿಗೆ ಭರವಸೆಯನ್ನೂ ಮೂಡಿಸಿದೆ.
 

PREV
Read more Articles on
click me!

Recommended Stories

ಇಂದು ಲೋಕಸಭೆಯಲ್ಲಿ ‘ವಂದೇ ಮಾತರಂ’ ಚರ್ಚೆ: ಮೋದಿ ಚಾಲನೆ
ಬೆಳಗಾವಿ ಅಧಿವೇಶನ: 89 ಸಂಘಟನೆಗಳಿಂದ ಪ್ರತಿಭಟನೆಗೆ ಕರೆ, 6000ಕ್ಕೂ ಹೆಚ್ಚು ಪೊಲೀಸರಿಂದ ಸರ್ಪಗಾವಲು