
ಚಿತ್ತಾಪುರ(ಡಿ.31): ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿ ಹಾಗೂ ಅರ್ಎಸ್ಎಸ್ ಮುಖಂಡರು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸುಳ್ಳು ಆರೋಪ ಮಾಡುತ್ತಾ ಖರ್ಗೆ ಕುಟುಂಬಕ್ಕೆ ಕಳಂಕ ಹಚ್ಚುವ ಹಾಗೂ ರಾಜಕೀಯ ಜೀವನಕ್ಕೆ ಮಸಿ ಬಳಿಯುವ ವ್ಯವಸ್ಥಿತ ಸಂಚು ರೂಪಿಸಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಆರೋಪಿಸಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವು ದೊಡ್ಡ ಪಕ್ಷವಾಗಿದ್ದು, ಆ ಪಕ್ಷದಲ್ಲಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆರವರಿಗೆ ಸಾವಿರಾರು ಸಂಖ್ಯೆಯಲ್ಲಿ ಆಪ್ತರು, ಅಭಿಮಾನಿಗಳು ಇದ್ದಾರೆ. ಅವರಿಗೆ ಒಂದು ಘನತೆ ಇದೆ. ಇದು ಬಿಜೆಪಿ ಮುಖಂಡರಿಗೆ ಗೊತ್ತಿದ್ದರೂ ಕೂಡಾ ಪ್ರಿಯಾಂಕ್ ಖರ್ಗೆರವರ ರಾಜಕೀಯ ಏಳಿಗೆಯನ್ನು ಸಹಿಸದೇ ತೇಜೊವಧೆ ಮಾಡುವ ಏಕೈಕ ಉದ್ದೇಶದಿಂದ ಅವರಿಗೆ ಸಂಬಂಧವಿಲ್ಲದ ವಿಷಯದ ಕುರಿತು ಸುಳ್ಳು ಆರೊಪಗಳನ್ನು ಮಾಡಿ ಅವರ ರಾಜೀನಾಮೆ ಕೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆಯಲ್ಲಿ ಅತೀ ಹೆಚ್ಚು ನರೇಗಾ ಹಾಜರಾತಿ ಅಕ್ರಮ
ಗುತ್ತಿಗೆದಾರರಾಗಿರುವ ಸಚಿನ್ ಅವರು ಕಾಮಗಾರಿ ಗುತ್ತಿಗೆ ಪಡೆಯಲು ಹಣಕಾಸಿನ ಲೇವಾದೇವಿ ಮಾಡುವದು ಸಹಜ. ತನ್ನ ಆರ್ಥಿಕ ಶಕ್ತಿ ಮೀರಿ ಸಾಲ ಅಥವಾ ಕೈಗಡವಾಗಿ ಪಡೆದ ಹಣ ಹಿಂತಿರಿಗಿಸಲು ಸಾಧ್ಯವಾಗದ ಪರಿಸ್ಥಿತಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲಾ ಎಂದು ತಿಳಿಸಿದರು.
ಆತ್ಮಹತ್ಯೆಗೆ ಮುಂಚೆ ತನಗೆ ಸಹಾಯ ಮಾಡಿದವರನ್ನೆ ತನ್ನ ಸಾವಿಗೆ ಹೊಣೆಗಾರರನ್ನಾಗಿ ಮಾಡುವ ಉದ್ದೇಶದೊಂದಿಗೆ ಡೆತ್ನೋಟ್ ಬರೆದಿರಬಹುದು. ಸಚಿನ್ ಅವರು ತನ್ನ ಆತ್ಮಹತ್ಯೆ ಸಾವಿನೊಂದಿಗೆ ಕಾಂಗ್ರೆಸ್ ಬಿಜೆಪಿ ಪಕ್ಷದ ಹೆಸರು ಉಲ್ಲೇಖಿಸಿ ಬರೆದು ಆತ್ಮಹತ್ಯೆಯಲ್ಲಿ ರಾಜಕೀಯ ಬೆರೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಚಿನ್ ಆತ್ಮಹತ್ಯೆಗೂ ಸಚಿವ ಪ್ರಿಯಾಂಕ್ ಖರ್ಗೆರವರಿಗೆ ಯಾವುದೇ ಸಂಬಂಧವೇ ಇಲ್ಲಾ. ಸಂಬಂಧ ಕಲ್ಪಿಸಲು ಯತ್ನಿಸುತ್ತಿರುವ ಬಿಜೆಪಿ ಪಕ್ಷದವರ ಬಣ್ಣ ಬಯಲಾಗುವುದರಲ್ಲಿ ಯಾವುದೇ ಅನುಮಾನ ಎಲ್ಲಾ ಎಂದರು.
ಬಿಜೆಪಿ ಮುಖಂಡರ ಕೊಲೆಗೆ ಸಂಚು ಮಾಡಲಾಗಿದೆ ಎಂದು ಗುಲ್ಲೆಬ್ಬಿಸಿದ ಬಿಜೆಪಿ ಪಕ್ಷದವರ ವರ್ತನೆ ಅನುಮಾನಕ್ಕೀಡು ಮಾಡಿದೆ. ಮಾಡಿದೆ. ಈ ರೀತಿಯ ಸಂಚು ತಿಳಿದ ಮೇಲೆ ಸಚಿನ್ ಅವರು ಬಿಜೆಪಿ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಮೊದಲೇ ತಿಳಿಸಬೇಕಾಗಿತ್ತು. ಇದನ್ನು ಬಿಜೆಪಿ ಪಕ್ಷ ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಅನೇಕ ಅನುಮಾನ ಹುಟ್ಟುಹಾಕಿದೆ ಇದೇ ಪ್ರವೃತ್ತಿ ಮುಂದುವರೆಸಿದಲ್ಲಿ ಕಾಂಗ್ರೆಸ್ ಪಕ್ಷವು ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಮುಖಂಡರಾದ ಮುಕ್ತಾರ ಅಹ್ಮದ ಪಟೇಲ್, ಶಿವರುದ್ರ ಭೀಣೀ, ಮಲ್ಲಿಕಾರ್ಜುನ ಕಾಳಗಿ, ಸಂಜಯ ಬುಳಕರ್, ಜಗದೇವರೆಡ್ಡಿ, ರವೀಚಿದ್ರ ರೆಡ್ಡಿ, ಓಂಕಾರ ರೇಶ್ಮಿ, ನಾಗಯ್ಯ ಗುತ್ತೆದಾರ ವಿನ್ನುಕುಮಾರ ಜೆಡಿ ಇತರರು ಇದ್ದರು.
ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳುವುದು ಸಮಂಜಸವಲ್ಲ: ಡಾ. ಅಜಯ್ ಧರ್ಮಸಿಂಗ್
ಕಲಬುರಗಿ: ಬೀದರ್ ಮೂಲದ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳುತ್ತಿರುವುದು ಸಮಂಜಸವಲ್ಲ, ಡೆತ್ನೋಟ್ನಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಪ್ರಸ್ತಾಪವಾಗಿಲ್ಲ, ಹೀಗಾಗಿ ಅವರು ಯಾವ ಕಾರಣಕ್ಕೂ ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸೋದಿಲ್ಲ ಎಂದು ಕೆಕೆಆರ್ಡಿಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್ ಧರ್ಮಸಿಂಗ್ ಹೇಳಿದ್ದಾರೆ.
ಬಿಜೆಪಿ ಶಾಸಕ, ನಾಯಕರ ಹತ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಿಂದ ಸಂಚು!
ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಅವರು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಯಾಕೆ ಕೊಡಬೇಕು. ಪ್ರಕರಣದ ತನಿಖೆ ಪೊಲೀಸರು ಮಾಡುತ್ತಿದ್ದಾರೆ. ಈ ಹಂತದಲ್ಲಿ ಇಲ್ಲದ್ದನ್ನು ಪ್ರಸ್ತಾಪಿಸುತ್ತ ರಾಜೀನಾಮೆ ಕೇಳುತ್ತಿರುವುದು ಅರ್ಥವಿಲ್ಲದ ಬೇಡಿಕೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಪಂಚಾಳ್ ಗೂ ಪ್ರಿಯಾಂಕ ಖರ್ಗೆ ಅವರಿಗೂ ಸಂಬಂಧವೇ ಇಲ್ಲ. ಅವರ ಆಪ್ತರೆಂದು ಹೆಸರು ಪ್ರಸ್ತಾಪಿಸುತ್ತ ಬಿಜೆಪಿ ವಿನಾಕಾರಣ ಟೀಕಿಸುತ್ತಿದೆ. ಶಾಸಕರು, ಸಚಿವರಿಗೆ ಎಲ್ಲರೂ ಆಪ್ತರೆ ಇರುತ್ತಾರೆ. ಹಾಗಂತ ಯಾವುದೋ ಪ್ರಕರಣದಲ್ಲಿ ಅವರ ಹೆಸರು ಹೇಳಿ ರಾಜೀನಾಮೆ ಕೇಳೋದು ಸಮಂಜಸವೆ? ಎಂದು ಪ್ರಶ್ನಿಸಿದರು.
ಸಂಬಂಧವಿಲ್ಲದ ಸಂಗತಿಗಳನ್ನೇ ಮುಂದಿಟ್ಟುಕೊಂಡು ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳುತ್ತಿರುವುದರ ಹಿಂದೆ ಅವರನ್ನ ಟಾರ್ಗೆಟ್ ಮಾಡಿ ರಾಜಕೀಯ ಮಾಡುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ಇದು ಜನರಿಗೂ ಗೊತ್ತಾಗಿದೆ. ಮಾತೆತ್ತಿದರೆ ಅವರಿವರ ರಾಜೀನಾಮೆ ಕೇಳಿದರೆ ಕೊಡಲಿಕ್ಕೇನು ಮಕ್ಕಳಾಟವೇ? ಬಿಜೆಪಿ ಮುಖಂಡರು ಇಂತಹ ಆಗ್ರಹ ಮಾಡುವ ಮುನ್ನ ಸರಿಯಾಗಿ ಎರಡೆರಡು ಬಾರಿ ಯೋಚಿಸಿ ಹೇಳಿಕೆ ನೀಡಬೇಕು ಎಂದು ಡಾ. ಅಜಯ್ ಸಿಂಗ್ ಕಿವಿಮಾತು ಹೇಳಿದ್ದಾರೆ.