ಕಲ್ಕಡ್ಕ ಪ್ರಭಾಕರ್ ಭಟ್ ಗುಣಮುಖ: ಶ್ರೀರಾಮ ಶಾಲೆ ಕಾರ್ಯಕ್ರಮದಲ್ಲಿ ಭಾಗಿ

By Govindaraj SFirst Published Apr 9, 2022, 1:20 PM IST
Highlights

ಎದೆನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಆಗಮಿಸಿದ್ದಾರೆ. 

ಮಂಗಳೂರು (ಏ.09): ಎದೆನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಆರ್‌ಎಸ್‌ಎಸ್ ಮುಖಂಡ (RSS Leader) ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhat) ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಕಲ್ಲಡ್ಕದ ಶ್ರೀ ರಾಮ ವಿದ್ಯಾ ಕೇಂದ್ರಕ್ಕೆ ಆಗಮಿಸಿದ್ದಾರೆ.  ಆಸ್ಪತ್ರೆಯಿಂದ ಬಿಡುಗಡೆಯಾಗಿ ಕಲ್ಲಡ್ಕ ಶಾಲೆಗೆ ಆಗಮಿಸಿದ ಆರ್‌ಎಸ್‌ಎಸ್ ಮುಖಂಡ ಪ್ರಭಾಕರ ಭಟ್, ಕಲ್ಕಡ್ಕ ಶಾಲೆಯ ಪಾಕಶಾಲಾ ಸಮುಚ್ಛಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಳೆದ ಎ.5ರಂದು ಮಂಗಳೂರಿನ (Mangaluru) ಖಾಸಗಿ ಆಸ್ಪತ್ರೆಗೆ ಎದೆ ನೋವಿನ ಕಾರಣದಿಂದ ಕಲ್ಲಡ್ಕ ಭಟ್ ದಾಖಲಾಗಿದ್ದರು. 

ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಭಟ್, ಇಂದು ನೇರವಾಗಿ ಕಲ್ಲಡ್ಕ ಶಾಲೆಯ ಕಾರ್ಯಕ್ರಮದಲ್ಲಿ ಭಾಗಿಯಾದ್ದಾರೆ. ಶಾಲೆಗೆ ಆಗಮಿಸಿದ ಕಲ್ಕಡ್ಕ ಭಟ್ ಅವರನ್ನು ಶಾಲೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ದೀಪ ಬೆಳಗಿಸಿ ಕಲ್ಲಡ್ಕ ಭಟ್ ದಂಪತಿ ಕಾರ್ಯಕ್ರಮ ಉದ್ಘಾಟಿಸಿದರು. ಭಟ್ ಅನಾರೋಗ್ಯ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರು ಆರೋಗ್ಯ ವಿಚಾರಿಸಿದ್ದರು. ಸದ್ಯ ಹೆಚ್ಚು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಂತೆ ಭಟ್ ಗೆ ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

Latest Videos

ಮಂಗಳೂರು ವಿವಿಗೆ ಕಲ್ಕಡ್ಕ ‌ಭಟ್ ಅತಿಥಿ: ಸಿಎಫ್‌ಐ ವಿರೋಧ..!

ಕಲ್ಕಡ್ಕ ಭಟ್ ಜೊತೆ ಕೇಸರಿ ಶಾಲು ಧರಿಸಿಯೇ ವಿದ್ಯಾರ್ಥಿಗಳು ಭಾಗಿ: ಮಂಗಳೂರು ವಿವಿಯ (Mangalore University) ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೆ ಆರ್‌ಎಸ್‌ಎಸ್ (RSS) ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ಆಹ್ವಾನ ನೀಡಿದ್ದಕ್ಕೆ ಸಿಎಫ್ಐ ಪ್ರತಿಭಟನೆ (CFI Protest) ನಡೆಸಿದರೂ ಕಲ್ಕಡ್ಕ ಪ್ರಭಾಕರ ಭಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅಲ್ಲದೇ ವಿವಿಯ ವಿದ್ಯಾರ್ಥಿ ನಾಯಕರು ‌ಹಾಗೂ ಬಹುತೇಕ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಯೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಂಗಳೂರು ವಿವಿ ಕಾರ್ಯಕ್ರಮಕ್ಕೆ ಆರ್ ಎಸ್ ಎಸ್ ಮುಖಂಡ ಕಲ್ಕಡ್ಕ ‌ಭಟ್ ಅತಿಥಿ ವಿಚಾರಕ್ಕೆ ಸಂಬಂಧಿಸಿ ಸಿಎಫ್ಐ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ‌ನಡೆಸಿತ್ತು. ಈ ನಡುವೆ ಕಲ್ಕಡ್ಕ ಭಟ್ ಜೊತೆ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 

ವೇದಿಕೆಯಲ್ಲೂ ಕೇಸರಿ ಶಾಲು ಧರಿಸಿ ವಿದ್ಯಾರ್ಥಿ ಸಂಘದ ನಾಯಕರು ಭಾಗಿಯಾಗಿದ್ದು, ಕೇಸರಿ ಶಾಲು ಧರಿಸಿಯೇ ಪ್ರಭಾಕರ ಭಟ್ ಜೊತೆ ವಿದ್ಯಾರ್ಥಿ ನಾಯಕರು ವೇದಿಕೆಯಲ್ಲಿದ್ದರು. ವಿದ್ಯಾರ್ಥಿ ಪರಿಷತ್ ಕಾರ್ಯಕ್ರಮದಲ್ಲಿ ಬಹುತೇಕ ವಿದ್ಯಾರ್ಥಿಗಳು ಕೇಸರಿ ಶಾಲಿನ ಜೊತೆ ಭಾಗಿಯಾಗಿದ್ದರು. ಮಂಗಳೂರು ವಿವಿ ಆವರಣದ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಉಪಕುಲಪತಿ ಡಾ.ಸುಬ್ರಹ್ಮಣ್ಯ ಯಡಪಡಿತ್ತಾಯ ಸೇರಿ ವಿವಿ ಉಪನ್ಯಾಸಕರು ಭಾಗಿಯಾಗಿದ್ದರು. ಒಟ್ಟಾರೆ  ಮಂಗಳೂರು ವಿವಿ ಕಾರ್ಯಕ್ರಮ ಸಂಪೂರ್ಣ ಕೇಸರಿ ಮಯವಾಗಿತ್ತು. ವಿದ್ಯಾರ್ಥಿ ಪರಿಷತ್ ನಾಯಕರಾಗಿ ಎಬಿವಿಪಿ ವಿದ್ಯಾರ್ಥಿಗಳ ಗೆಲುವು ಸಾಧಿಸಿದ್ದಾರೆ. 

ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು: ಕಲ್ಲಡ್ಕ ಪ್ರಭಾಕರ ಭಟ್

ಕಲ್ಕಡ್ಕ ವಿರುದ್ದ ಸಿಎಫ್ಐ ಪ್ರೊಟೆಸ್ಟ್: ಇನ್ನು ಕಾರ್ಯಕ್ರಮದ ಆರಂಭಕ್ಕೂ ಮುನ್ನ ಪ್ರಭಾಕರ ಭಟ್ ವಿರುದ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಮಂಗಳೂರು ವಿವಿ ಆವರಣಕ್ಕೆ ಸಿಎಫ್ ಐ ಕಾರ್ಯಕರ್ತರು ನುಗ್ಗಲು ಯತ್ನಿಸಿದರು. ವಿವಿಯ ಮುಖ್ಯ ಗೇಟ್ ಮುಂಭಾಗದಿಂದ ವಿವಿ ಆವರಣಕ್ಕೆ ನುಗ್ಗಲು ಯತ್ನಿದರು. ಆದರೆ ವಿವಿ ಗೇಟ್ ಬಳಿಯೇ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರನ್ನ ಪೊಲೀಸರು ತಡೆದರು.‌ ಪೊಲೀಸರು ಮತ್ತು ಸಿಎಫ್ ಐ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು. 

click me!