ಚಾಮರಾಜನಗರ: ರಾಜಧನ ವಂಚಿಸಿ ಕೇರಳಕ್ಕೆ ಕರಿ, ಬಿಳಿ ಕಲ್ಲು, ಅಧಿಕಾರಿಗಳು ಶಾಮೀಲು?

By Kannadaprabha NewsFirst Published Nov 20, 2023, 11:12 PM IST
Highlights

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾದು ಹೋಗುವ ಹೆದ್ದಾರಿಯಲ್ಲಿ ಅರಣ್ಯ, ಪೊಲೀಸ್‌ ಇಲಾಖೆ ಚೆಕ್‌ ಪೋಸ್ಟ್‌ ಸಿಬ್ಬಂದಿ ಸಹಕಾರದಲ್ಲಿ ದೊಡ್ಡ ದೊಡ್ಡ ಟಿಪ್ಪರ್‌ಗಳಲ್ಲಿ ತಾಲೂಕಿನ ಪ್ರಾಕೃತಿಕ ಸಂಪತ್ತು ರಾಯಲ್ಟಿ ಹಾಗೂ ಎಂಡಿಪಿ ವಂಚಿಸಿ ಬಿಳಿ ಮತ್ತು ಕರಿ ಕಲ್ಲಿನ ಉತ್ಪನ್ನಗಳು ಸಾಗಿಸುತ್ತಿದ್ದಾರೆ.

ಗುಂಡ್ಲುಪೇಟೆ(ನ.20):  ರಾಯಲ್ಟಿ, ಎಂಡಿಪಿ ವಂಚಿಸಿ ಇಲ್ಲಿನ ಕ್ರಷರ್‌ಗಳ ಉತ್ಪನ್ನ ಹಾಗೂ ಕ್ವಾರಿಯ ರಾ ಮೆಟೀರಿಯಲ್‌ ಸಾಗಾಣಿಕೆ ನಡುವೆ ನೆರೆಯ ಕೇರಳಕ್ಕೆ ರಾಯಲ್ಟಿ, ಎಂಡಿಪಿ ವಂಚಿಸಿ ಸಾವಿರಾರು ಟನ್‌ ಸಾಗಾಣಿಕೆ ಆಗುತ್ತಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾದು ಹೋಗುವ ಹೆದ್ದಾರಿಯಲ್ಲಿ ಅರಣ್ಯ, ಪೊಲೀಸ್‌ ಇಲಾಖೆ ಚೆಕ್‌ ಪೋಸ್ಟ್‌ ಸಿಬ್ಬಂದಿ ಸಹಕಾರದಲ್ಲಿ ದೊಡ್ಡ ದೊಡ್ಡ ಟಿಪ್ಪರ್‌ಗಳಲ್ಲಿ ತಾಲೂಕಿನ ಪ್ರಾಕೃತಿಕ ಸಂಪತ್ತು ರಾಯಲ್ಟಿ ಹಾಗೂ ಎಂಡಿಪಿ ವಂಚಿಸಿ ಬಿಳಿ ಮತ್ತು ಕರಿ ಕಲ್ಲಿನ ಉತ್ಪನ್ನಗಳು ಸಾಗಿಸುತ್ತಿದ್ದಾರೆ.

೫೦ ಟನ್‌ ಸಾಮರ್ಥ್ಯದ ದೊಡ್ಡ ದೊಡ್ಡ ಟಿಪ್ಪರ್‌ಗಳಲ್ಲಿ ಕೇವಲ ೧೦ ಟನ್‌ ರಾಯಲ್ಟಿ ಅಥವಾ ಎಂಡಿಪಿಯೊಂದಿಗೆ ಕರಿ ಕಲ್ಲಿನ ಎಂ.ಸ್ಯಾಂಡ್‌, ಚಿಪ್ಸ್‌,೧೨ ಎಂಎಂ ಜಲ್ಲಿ ಹಾಗು ಕರಿ ಕಲ್ಲು (ಬೋಡ್ರೇಸ್‌) ಹೊರ ರಾಜ್ಯಕ್ಕೆ ನಿತ್ಯ ಸುಮಾರು ೩೫ ಕ್ಕೂ ಹೆಚ್ಚು ಟಿಪ್ಪರ್ (‌೧೮ ವೀಲ್‌, ೧೬ ವೀಲ್‌, ೧೨ ವೀಲ್‌) ಸಂಚರಿಸುತ್ತಿವೆ.

ಚಾಮರಾಜನಗರ ಕಾರಾಗೃಹದಲ್ಲಿ ಖೈದಿಗಳಿಗೆ ಕಂಪ್ಯೂಟರ್ ತರಬೇತಿ: SSLC, ಮೇಲ್ಪಟ್ಟ ವಿದ್ಯಾರ್ಹತೆಯುಳ್ಳವರು ಆಯ್ಕೆ

ತಾಲೂಕಿನ ಹಂಗಳ, ತೆರಕಣಾಂಬಿ ಬಳಿಯ ಕರಿ ಕಲ್ಲು ಕ್ವಾರಿಯಲ್ಲಿ ವೇಸ್ಟ್‌ ಅಂತ ಬಿಡಲಾಗಿದ್ದ ಕರಿ ಕಲ್ಲನ್ನು ಗುಂಡ್ಲುಪೇಟೆ ಬಳಿಯ ಎರಡು ಕ್ರಷರ್‌ನಲ್ಲಿ ವೇಸ್ಟ್‌ ಎನ್ನುತ್ತಿದ್ದ ಕರಿ ಕಲ್ಲನ್ನು ಎಂ.ಸ್ಯಾಂಡ್‌, ಚಿಪ್ಸು, ೧೨ ಎಂಎಂ ಜಲ್ಲಿ ಪುಡಿ ಮಾಡುತ್ತಿದ್ದಾರೆ.

೧೨,೧೬,೧೮ ವೀಲ್‌ ಟಿಪ್ಪರ್‌ಗಳಲ್ಲಿ ಬಾಡಿ ಮಟ್ಟಕ್ಕೆ ಕರಿ ಕಲ್ಲಿನ ಎಂ.ಸ್ಯಾಂಡ್‌, ಜಲ್ಲಿ, ಚಿಪ್ಸು ತುಂಬಿ, ಟಿಪ್ಪರ್‌ ಚಕ್ರದ ಸಾಮರ್ಥ್ಯದ ಅರ್ಧಕ್ಕಿಂತಲೂ ಕಡಿಮೆ ರಾಯಲ್ಟಿ/ಎಂಡಿಪಿ ಹಾಕಿಕೊಂಡು ಕೇರಳಕ್ಕೆ ರಾಜಾರೋಷವಾಗಿ ಸಾಗಿಸುತ್ತಿದ್ದಾರೆ.
ಕೇರಳಕ್ಕೆ ತೆರಳುವ ಟಿಪ್ಪರ್‌ಗೆ ಒಂದು ಟ್ರಿಪ್‌ಗೆ ರಾಯಲ್ಟಿ/ಎಂಡಿಪಿ ಪಡೆಯುತ್ತಾರೆ. ಎರಡು ಮೂರು ಟ್ರಿಪ್‌ ಕೇರಳಕ್ಕೆ ಹೋದರೂ ಹಳೆಯ ರಾಯಲ್ಟಿ/ಎಂಡಿಪಿಯಲ್ಲಿ ಅಕ್ರಮವಾಗಿ ಕಲ್ಲು ಸಾಗಿಸುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಶಾಸಕರ ಹೆಸರು ದುರ್ಬಳಕೆ

ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರ ಹೆಸರನ್ನು ಕೆಲ ಕಲ್ಲು ದಂಧೆಕೋರರು ದುರ್ಬಳಕೆ ಮಾಡಿಕೊಂಡು ಶಾಸಕರ ಹೆಸರಲ್ಲಿ ದುಡ್ಡು ಸಂಗ್ರಹಿಸಿ ಜೇಬಿಗೆ ಇಳಿಸುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಅಧಿಕಾರಿಗಳು ಶಾಮೀಲು?

ತಾಲೂಕಿನ ಕರಿ ಮತ್ತು ಬಿಳಿ ಕಲ್ಲಿನ ಉತ್ಪನ್ನಗಳನ್ನು ಕೇರಳಕ್ಕೆ ಸಾಗಿಸುವಾಗ ತಾಲೂಕಿನ ಕೆಲ ಅಧಿಕಾರಿಗಳು ಶಾಮೀಲಾಗಿರುವುದೇ ಈ ದಂಧೆ ಸದ್ದಿಲ್ಲದೆ ವ್ಯಾಪಕವಾಗಿ ನಡೆಯಲು ಕಾರಣವಾಗಿದೆ ಎಂದು ಬಿಳಿ ಕಲ್ಲು ಕ್ವಾರಿಯ ಲೀಸ್‌ದಾರರೊಬ್ಬರು ಹೇಳಿದ್ದಾರೆ.

ಕೇಳೋರೆ ಇಲ್ಲ?

ತಾಲೂಕಿನ ಪ್ರಾಕೃತಿಕ ಸಂಪತ್ತು ರಾಜಧನ ವಂಚಿಸಿ ನೆರೆಯ ಕೇರಳ ರಾಜ್ಯಕ್ಕೆ ನಿತ್ಯ ಲೂಟಿಯಾಗುತ್ತಿದ್ದರೂ ನೆಲ, ಜಲ, ಭಾಷೆ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಕನ್ನಡಪರ ಸಂಘಟನೆಗಳೂ ಈ ವಿಚಾರದಲ್ಲಿ ಬಾಯಿ ಬಿಚ್ಚುತ್ತಿಲ್ಲವೇಕೆ ಎಂದು ನಾಗರಿಕರು ಪ್ರಶ್ನಿಸಿದ್ದಾರೆ.

ಕಾಟಾಚಾರದ ತಪಾಸಣೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಹಾಗೂ ಪೊಲೀಸ್‌ ಇಲಾಖೆಯ ತಪಾಸಣೆ ಕೇಂದ್ರಗಳಿವೆ ಆದರೆ ತಪಾಸಣೆ ಕಾಟಾಚಾರಕ್ಕೆ ನಡೆಯುತ್ತಿದ್ದು ರಾಯಲ್ಟಿ/ಎಂಡಿಪಿ ವಂಚನೆ ಪತ್ತೆ ಮಾಡಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಈ ಚೆಕ್‌ಪೋಸ್ಟ್‌ಗಳ ತಿರುಗಿಯೂ ನೋಡುತ್ತಿಲ್ಲ ಎನ್ನಲಾಗಿದೆ.

ಹೆಜ್ಜೇನು ದಾಳಿಗೆ ಹೆದರಿ ಬಾವಿಗೆ ಹಾರಿದ ಯುವಕ!

ಶಾಸಕರೇ ದಂಧೆ ನಿಲ್ಲಿಸಲಿ

ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ರ ಹೆಸರೇಳಿಕೊಂಡು ಕೇರಳಕ್ಕೆ ರಾಜಧನ ವಂಚಿಸಿ ಸಾಗಿಸುವ ದಂಧೆಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಶಾಸಕರನ್ನು ಒತ್ತಾಯಿಸಿದ್ದಾರೆ.

ಪ್ರಾಕೃತಿಕ ಸಂಪತ್ತು ಲೂಟಿ ತಾಲೂಕಿನಲ್ಲಿ ಇತ್ತೀಚಿನ ದಿನಗಲ್ಲಿ ಹೆಚ್ಚಾಗಿದೆ. ಕೇರಳ ರಾಜ್ಯಕ್ಕೆ ಕರಿ/ಬಿಳಿ ಕಲ್ಲಿನ ಉತ್ಪನ್ನಗಳು ರಾಯಲ್ಟಿ/ಎಂಡಿಪಿ ವಂಚಿಸಿ ರಾಜಾರೋಷವಾಗಿ ಹೋಗುತ್ತಿದೆ. ಇದನ್ನು ತಡೆಯಬೇಕಾದ ಅಧಿಕಾರಿಗಳು ಪಂಚೇಂದ್ರಿಯಗಳನ್ನು ಮುಚ್ಚಿಕೊಂಡು ಮೌನ ವಹಿಸಿದ್ದಾರೆ. ಕೂಡಲೇ ರಾಜಧನ ವಂಚಿಸಿ ಕೇರಳ ರಾಜ್ಯಕ್ಕೆ ತಾಲೂಕಿನ ಪ್ರಾಕೃತಿಕ ಸಂಪತ್ತು ತೆರಳುವುದನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಮದ್ದೂರು ತಪಾಸಣೆ ಕೇಂದ್ರದ ಬಳಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಪಂ ಅಧ್ಯಕ್ಷ ಹಾಗೂ ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ ತಿಳಿಸಿದ್ದಾರೆ.

click me!