ರೋಣ ಕೆರೆ ಭರ್ತಿ: ಯಾವುದೇ ಸಂದರ್ಭದಲ್ಲೂ ಕೆರೆ ಕೋಡಿ ಹರಿಯುವ ಸಾಧ್ಯತೆ

By Ravi NayakFirst Published Sep 11, 2022, 4:32 PM IST
Highlights
  • ಒಡಲು ತುಂಬಿಕೊಂಡ ರೋಣದ ಕೆರೆ, ನಿವಾಸಿಗಳಲ್ಲಿ ಆತಂಕ
  • ಯಾವುದೇ ಸಂದರ್ಭದಲ್ಲಿ ಕೆರೆ ಕೋಡಿ ಹರಿಯುವ ಸಾಧ್ಯತೆ
  • ಸುತ್ತಲೂ ತಂತಿಬೇಲಿ ಇದ್ದರೂ ಜನ ಜಾನುವಾರುಗಳಿಗೆ ಸುರಕ್ಷತೆ ಇಲ್ಲ

ರೋಣ (ಸೆ.11) : ಪಟ್ಟಣದ ಮಧ್ಯ ಭಾಗದಲ್ಲಿರುವ ಶ್ಯಾನಭೋಗರ ಸಾರ್ವಜನಿಕ ಬೃಹತ್‌ ಕೆರೆ ನೀರು ತುಂಬಿ ಭರ್ತಿಯಾಗಿದ್ದು, ಅಪಾಯದ ಮಟ್ಟಕ್ಕೆ ತಲುಪಿದೆ. ಇದರಿಂದ ಕೆರೆ ಸುತ್ತಲಿನ ಬಡಾವಣೆ ನಿವಾಸಿಗಳಿಗೆ ಭಯ ಮತ್ತು ತೀವ್ರ ಆತಂಕ ಮಡುಗಟ್ಟಿದೆ. 7 ಎಕರೆ ವಿಸ್ತೀರ್ಣದ ಬೃಹತ್‌ ಕೆರೆಗೆ ನಿರಂತರ ಸುರಿಯುತ್ತಿರುವ ಮಳೆ ಮತ್ತು ಕಾಲುವೆ ಮೂಲಕ ನೀರು ಹರಿದು ಬರುತ್ತಿದ್ದು, ಮೊದಲ ಬಾರಿಗೆ ಕೆರೆ ನಿರೀಕ್ಷೆಗೂ ಮೀರಿ ತುಂಬಿದೆ.

Karnataka Rains| ರಾಜ್ಯದಲ್ಲಿ ಮಹಾಮಳೆಗೆ 4 ಸಾವು, 2,000 ಕೋಳಿ ನೀರು ಪಾಲು, ಭಾರಿ ನಷ್ಟ!

ಈ ಮೊದಲು ಕೆರೆಗೆ ಪಟ್ಟಣದ ಸುತ್ತಲಿನ ಜಮೀನುಗಳಿಂದ ನೀರು ಹರಿದು ಬರುತ್ತಿತ್ತು. ಇದರೊಟ್ಟಿಗೆ ಪಟ್ಟಣದ ವಿವಿಧ ಬಡಾವಣೆ ಗಲೀಜ ನೀರು ಬರುತ್ತಿತ್ತು. ಇದರಿಂದ ಸುತ್ತಲಿನ ವಾತಾವರಣ ಮಲೀನಗೊಳ್ಳತೊಡಗಿತು. ಇದರಿಂದ ಎಚ್ಚೆತ್ತುಕೊಂಡ ಪುರಸಭೆ ಕೆರೆ ಸೌಂದರ್ಯಕ್ಕೆ . 2 ಕೋಟೆ ವೆಚ್ಚದಲ್ಲಿ ವಿವಿಧ ಕಾಮಗಾರಿಗೆ ಒತ್ತು ನೀಡಿತು. ಇದರ ಜೊತೆಗೆ ಕೆರೆಗೆ ಕೃಷ್ಣಾಪುರ ಸಮೀಪದ ಮಲಪ್ರಭಾ ಬಲದಂಡೆ ಕಾಲುವೆ ಮೂಲಕ ನೀರು ಸಂಗ್ರಹಿಸಲು ಪ್ರತ್ಯೇಕವಾಗಿ . 1 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್‌ ಜೋಡಿಸಿ ಕೆರೆಗೆ ನೀರು ಹರಿಸುವ ಕಾಮಗಾರಿ ಕೈಗೊಳ್ಳಲಾಯಿತು. ಕಳೆದ 5 ದಿನಗಳಿಂದ ಕೆರೆಗೆ ಕಾಲುವೆ ಮೂಲಕ ಮತ್ತು ಮಳೆ ನೀರು ವಿಪರೀತವಾಗಿ ಹರಿದು ಬರುತ್ತಿದೆ, ಸದ್ಯ ಕೆರೆ ತುಂಬಿ ಅಪಾಯದ ಅಂಚಿಗೆ ತಲುಪಿದೆ.

ಕೆರೆ ಒಡೆಯುವ ಭೀತಿ ದಟ್ಟ:

ಕೆರೆಗೆ ನೀರು ಸಂಗ್ರಹವಾಗಿ ಪಟ್ಟಣದ ಸೌಂದರ್ಯ ಹೆಚ್ಚಳವಾಗಿದ್ದು ಒಂದೆಡೆ ಖುಷಿ ತಂದರೆ, ಮಿತಿ ಮೀರಿದ ನೀರು ಕೆರೆಗೆ ಹರಿದು ಬರುತ್ತಿರುವುದರಿಂದ ಕೆರೆ ಅಪಾಯದ ಮಟ್ಟತಲುಪಿ ಒಡೆಯುವ ಭೀತಿ ಹುಟ್ಟಿದೆ. ಇದರಿಂದ ಕೆರೆ ಪಕ್ಕದಲ್ಲಿರುವ ಕಲ್ಯಾಣ ನಗರ, ಶ್ರೀನಗರ ಬಡವಣೆ 800ಕ್ಕೂ ಹೆಚ್ವು ಮನೆಗಳ ನಿವಾಸಿಗಳಿಗೆ ತೀವ್ರ ಆತಂಕ ಸೃಷ್ಟಿಯಾಗಿದೆ. ಯಾವುದೇ ಸಂದರ್ಭದಲ್ಲಿ ಕೆರೆ ತುಂಬಿ ಕೋಡಿ ಹರಿಯುವ ಸಾಧ್ಯತೆ ದಟ್ಟವಾಗಿದೆ.

ಗಮನ ಹರಿಸದ ಪುರಸಭೆ:

ಕೆರೆ 20 ಅಡಿಗೂ ಹೆಚ್ಚು ನೀರಿನ ಆಳ ಹೊಂದಿದೆ. ಸುತ್ತಲೂ ತಂತಿಬೇಲಿ ಅಳವಡಿಸಲಾಗಿದ್ದರೂ, ಅಷ್ಟೊಂದು ಸುರಕ್ಷತೆಯಿಲ್ಲ, ಅಲ್ಲಲ್ಲಿ ದಾರಿಗಳಿವೆ. ಈ ಮೂಲಕ ಜಾನುವಾರು, ಹಂದಿ, ನಾಯಿಗಳು ತೆರಳುತ್ತಿವೆ. ಅಲ್ಲದೇ ಕೆರೆ ಸುತ್ತಲೂ ಜನ ಬಹಿರ್ದೆಸೆಗೆ ತೆರಳುತ್ತಾರೆ. ದನ,ಕರುಗಳು ನೀರು ಕುಡಿಯಲು ತೆರಳುತ್ತಿವೆ. ಆದ್ದರಿಂದ ಕೆರೆಯತ್ತ ಜನ ಮತ್ತು ಜಾನುವಾರು ತೆರಳದಂತೆ ಸ್ಥಳೀಯ ಪುರಸಭೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅತೀ ಮುಖ್ಯವಾಗಿದೆ. ಆದರೆ ಪುರಸಭೆ ಅಧಿಕಾರಿಗಳು ಈ ಕುರಿತು ಗಮನ ಹರಿಸದೇ ಇರುವದು ವಿಪರ್ಯಾಸ ಸಂಗತಿ.

ನೀರಿನ ಹರಿವು ತಡೆಗೆ ಕ್ರಮ ಕೈಗೊಳ್ಳಿ:

ಕೂಡಲೇ ಸ್ಥಳೀಯ ಪುರಸಭೆ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆರೆಗೆ ಕಾಲುವೆ ಮೂಲಕ ಹರಿದು ಬರುವ ನೀರಿನ ತಡೆಗೆ ಕ್ರಮ ಕೈಗೊಳ್ಳುವ ಮೂಲಕ ಜನರಲ್ಲಿ ಮೂಡಿದ ಭಯ, ಆತಂಕ ದೂರ ಮಾಡಬೇಕು ಎಂದು ಶ್ರೀನಗರ ಮತ್ತು ಕಲ್ಯಾಣ ನಗರ ಬಡಾವಣೆ ನಿವಾಸಿಗಳ ಆಗ್ರಹವಾಗಿದೆ. 80 ಕೆರೆಗಳಿಗೆ ನೀರು ಪೂರೈಕೆ : ಶೀಘ್ರ ಎಲ್ಲಾ ಕೆರೆ ಭರ್ತಿ

ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಕಾಲುವೆ ಮೂಲಕ ಹರಿದು ಬರುವ ನೀರಿನ ವಾಲ… ಗೇಟ್‌ ಕೂಡಲೇ ಬಂದ್‌ ಮಾಡುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗುವುದು. ಕೆರೆ ಸುತ್ತ ಜನ ಮತ್ತು ಜಾನುವಾರು ತೆರಳದಂತೆ, ಕೆರೆ ಸುತ್ತ ಅಳವಡಿಸಿದ ತಂತಿಬೇಲಿ ಬೀಗ ಹಾಕಲಾಗುವುದು. ಕೆರೆ ಸಮೀಪ ಯಾರು ಬರದಂತೆ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುವುದು.

ಕೃಷ್ಣಾ ನಾಯಕ ಮುಖ್ಯಾಧಿಕಾರಿಗಳು ಪುರಸಭೆ ರೋಣ

click me!