ಈ ವರ್ಷದ ಭಾರೀ ಮಳೆಗೆ ಮಣಿಪಾಲದಲ್ಲೂ ಹಲವಡೆ ಭೂಕುಸಿತ!

By Ravi NayakFirst Published Sep 11, 2022, 3:13 PM IST
Highlights

ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೆ ಮಳೆ ಉಂಟುಮಾಡಿರುವ ಹಾನಿಗಳು ಒಂದೊಂದಾಗಿ ಬಯಲಾಗುತ್ತಿದೆ. ಪರಿಸರ ಸೂಕ್ಷ್ಮ ಪ್ರದೇಶವಾದ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಸಂಭವಿಸುತ್ತಿರುವ ಸಣ್ಣಪುಟ್ಟ, ಭೂಕುಸಿತಗಳು ಭವಿಷ್ಯದ ಅಪಾಯದ ಕರೆಗಂಟೆಗಳಾಗಿವೆ.

ಉಡುಪಿ (ಸೆ.11) : ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೆ ಮಳೆ ಉಂಟುಮಾಡಿರುವ ಹಾನಿಗಳು ಒಂದೊಂದಾಗಿ ಬಯಲಾಗುತ್ತಿದೆ. ಪರಿಸರ ಸೂಕ್ಷ್ಮ ಪ್ರದೇಶವಾದ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಸಂಭವಿಸುತ್ತಿರುವ ಸಣ್ಣಪುಟ್ಟ, ಭೂಕುಸಿತಗಳು ಭವಿಷ್ಯದ ಅಪಾಯದ ಕರೆಗಂಟೆಗಳಾಗಿವೆ.

ಉಡುಪಿ(Udupi) ಜಿಲ್ಲೆಯ ಮಣಿಪಾಲ(Manipal)ವೆಂಬ ವಿದ್ಯಾನಗರ ಯಾರಿಗೆ ಗೊತ್ತಿಲ್ಲ ಹೇಳಿ? ಪ್ರಪಂಚದ 57 ರಾಷ್ಟ್ರಗಳ ಸುಮಾರು 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ಇಂತಹ ಮಣಿಪಾಲ ಒಂದು ಕಾಲದಲ್ಲಿ ಹಾಳು ಗುಡ್ಡೆಯಾಗಿತ್ತು, ಈ ಹಾಳು ಕೊಂಪೆ ಕಳೆದ ಐದು ದಶಕಗಳಲ್ಲಿ ಭೂಲೋಕದ ಸ್ವರ್ಗವಾಗಿ ಮಾರ್ಪಟ್ಟಿದೆ. ಬದಲಾದ ಸನ್ನಿವೇಶದಲ್ಲಿ ಮಣಿಪಾಲವೆಂಬ ಗುಡ್ಡೆ ಪ್ರದೇಶದಲ್ಲಿ ನೂರೆಂಟು ಬಹು ಮಹಡಿ ಕಟ್ಟಡಗಳು ತಲೆ ಎತ್ತಿವೆ. ಭೂಮಿಯ ಮೇಲಿನ ಒತ್ತಡದಿಂದ ಕೆಲವೊಂದು ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಲು ಆರಂಭಿಸಿದೆ. ಉಡುಪಿ ಜಿಲ್ಲಾಧಿಕಾರಿ ಕಚೇರಿಯಿಂದ ಸ್ವಲ್ಪವೇ ಕೆಳಭಾಗದಲ್ಲಿರುವ ಶೀಮ್ರ ಸಿದ್ಧಿವಿನಾಯಕ ದೇವಸ್ಥಾನದ ಬಳಿ ಈ ಬಾರಿ ಮಳೆಗಾಲಕ್ಕೆ ಭಾರಿ ಪ್ರಮಾಣದ ಮಣ್ಣು ಕುಸಿತವಾಗಿದೆ. ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣ ಹಂತದಲ್ಲಿರುವ ಸ್ನಾನಘಟ್ಟ ಪ್ರದೇಶದಲ್ಲಿ ಈ ಮಣ್ಣಿನ ಸವಕಳಿ ಸಂಭವಿಸಿದೆ.

ಉಡುಪಿ‌ ಜಿಲ್ಲೆಯಲ್ಲಿ ಮತ್ತೆ ಮಳೆ: ಇಲಿ ಜ್ವರ ಭೀತಿ

ದೇಗುಲದ ಕಟ್ಟಡದಿಂದ ಕೇವಲ ಐದು ಅಡಿ ದೂರದಲ್ಲಿ ಭೂಕುಸಿತ(Landslide) ವಾಗಿರುವುದು ಕಂಡು ಬರುತ್ತಿದೆ. ಸ್ನಾನಘಟ್ಟ ಕಾಮಗಾರಿಯ ವೇಳೆ ಮಣ್ಣಿನ ರಚನೆಯಲ್ಲಿ ಬದಲಾವಣೆಯಾಗಿದ್ದು, ವಿಪರೀತ ಮಳೆ(Heavy Rain) ಸುರಿದ ಪರಿಣಾಮ ಬಲಹೀನವಾದ ಗುಡ್ಡೆ ಸ್ವರ್ಣ ನದಿ ತಟಕ್ಕೆ ಬಿದ್ದಿದೆ. ಮಳೆಗಾಲವಾದ್ದರಿಂದ ಸದ್ಯ ಸ್ನಾನಘಟ್ಟ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಯೋಜನೆಯ ಅಂದಾಜು ವೆಚ್ಚದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದ್ದು ಆದಷ್ಟು ಬೇಗ ಕಾಮಗಾರಿ ಆರಂಭಿಸಬೇಕು, ಇಲ್ಲವಾದರೆ ಶೀಮ್ರ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.

ಸಿದ್ದಿ ವಿನಾಯಕ ದೇವಸ್ಥಾನ(Siddhi Vinayak Temple)ದ ಮೇಲ್ಭಾಗದಲ್ಲಿ ಗುಡ್ಡ ಪ್ರದೇಶವಿದ್ದು, ಖಾಸಗಿ ವ್ಯಕ್ತಿಗಳು ಜೆಸಿಬಿ(JCB) ಬಳಸಿ ಅಲ್ಲಿಯೂ ಮಣ್ಣು ತೆರವು ಮಾಡಿದ್ದಾರೆ. ಒಂದು ರೀತಿಯಲ್ಲಿ ಇದು ಕೂಡ ಭವಿಷ್ಯದಲ್ಲಿ  ಪರಿಸರಕ್ಕೆ ಆತಂಕ ತಂದರೆ ಆಶ್ಚರ್ಯವಿಲ್ಲ. ಪ್ರತಿ ವರ್ಷ ಮಣಿಪಾಲದಲ್ಲಿ ಹೊಸ ಹೊಸ ಮಾದರಿಯ ಕಟ್ಟಡಗಳು ಬಹು ಮಹಡಿಗಳೊಂದಿಗೆ ನಿರ್ಮಾಣವಾಗುತ್ತಿದೆ. ಮಣ್ಣಿನ ಗುಣಮಟ್ಟದ ಸೂಕ್ತ ಅಧ್ಯಯನ ಮಾಡದ ಅವಜ್ಞಾನಿಕ ಕಟ್ಟಡಗಳಿಂದ, ಭವಿಷ್ಯದಲ್ಲಿ ಭಾರಿ ಅಪಾಯ ಉಂಟಾಗಬಹುದು ಅನ್ನುವುದು ನಾಗರಿಕರ ಆತಂಕ.

ಈ ಬಾರಿಯ ಮಳೆಗಾಲಕ್ಕೆ ಉಡುಪಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ. ಸುಮಾರು 264 ಕೋಟಿಯಷ್ಟು ನಷ್ಟವನ್ನು ಜಿಲ್ಲಾಡಳಿತ ಅಂದಾಜಿಸಿದೆ. ಈಗಾಗಲೇ ಕೇಂದ್ರದ ನೆರೆ ಅಧ್ಯಯನ ತಂಡ ಬಂದು ಪರಿಶೀಲಿಸಿದೆ. ಸೂಕ್ತ ಪರಿಹಾರ ಸಿಗುವ ನಿರೀಕ್ಷೆ ಇದೆ, ಆದರೆ ಭವಿಷ್ಯದ ಆತಂಕಗಳಿಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ. Udupi Rains; ಬೈಂದೂರು ಮಳೆ ದುರಂತ, ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ!

click me!