ಮೈಸೂರಲ್ಲಿ ಕೊರೋನಾ ತಡೆಗೆ ರೋಹಿಣಿ ಸಿಂಧೂರಿ ಪ್ಲಾನ್

By Kannadaprabha NewsFirst Published Oct 7, 2020, 10:01 AM IST
Highlights

ಕೊರೋನಾ ಹಾಟ್‌ಸ್ಪಾಟ್ ಜಿಲ್ಲೆಗಳಲ್ಲಿ ಮೈಸೂರು ಕೂಡ ಒಂದಾಗಿದ್ದು ಇದೀಗ ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೊಸ ಕ್ರಮ ಕೆಐಗೊಳ್ಳುತ್ತಿದ್ದಾರೆ

 ಮೈಸೂರು (ಅ.07):  ಕೆ.ಆರ್‌. ಆಸ್ಪತ್ರೆಯಲ್ಲಿ ಹೆಚ್ಚು ಕೋವಿಡ್‌ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಾಸಿಗೆಗಳು ಹಾಗೂ ವೈದ್ಯರ ಸಂಖ್ಯೆ ನಿಯೋಜನೆ ಹೆಚ್ಚಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚಿಸಿದರು.

ಮೈಸೂರು ವೈದ್ಯಕೀಯ ಕಾಲೇಜಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ತಜ್ಞ ವೈದ್ಯರು, ವೈದ್ಯರು, ನರ್ಸ್‌ಗಳು, ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಖ್ಯೆ, ಹಾಸಿಗೆಗಳ ಸಾಮರ್ಥ್ಯದ ಬಗ್ಗೆ ಮಾಹಿತಿ ಪಡೆದರು. ನಂತರ ಮಾತನಾಡಿ, ಕೆ.ಆರ್‌. ಆಸ್ಪತ್ರೆಯಲ್ಲಿ ಈಗ 178 ಬೆಡ್‌ ಇವೆ. ಇನ್ನೂ 200 ಬೆಡ್‌ಗಳನ್ನು ಕೋವಿಡ್‌ ಚಿಕಿತ್ಸೆಗೆ ಹೆಚ್ಚಿಸುವಂತೆ, ಹಾಗೂ ಟ್ರಾಮಾ ಕೇರ್‌ ಸೆಂಟರ್‌ನಲ್ಲೂ ಕೋವಿಡ್‌ ಚಿಕಿತ್ಸೆಗೆ ಆಕ್ಸಿಜನ್‌ ಬೆಡ್‌ಗಳನ್ನು ವ್ಯವಸ್ಥೆ ಮಾಡಿಕೊಳ್ಳಲು ಆಗಿರುವ ಪ್ರಕ್ರಿಯೆಯನ್ನು ಬೇಗ ಪೂರ್ಣಗೊಳಿಸುವಂತೆ ತಿಳಿಸಿದರು.

ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಇಷ್ಟವಿಲ್ಲ-2 ವಾರ ಕೊಡಿ : ರೋಹಿಣಿ ಸಿಂಧೂರಿ ..

ವೈದ್ಯಕೀಯ ಸ್ನಾತಕೋತ್ತರ ಪದವಿಯ ಕೊನೆಯ ವರ್ಷದಲ್ಲಿ 154 ವಿದ್ಯಾರ್ಥಿಗಳು ಇರುತ್ತಾರೆ. ಅವರನ್ನು ಕೋವಿಡ್‌ ಚಿಕಿತ್ಸೆಗೆ ಬಳಸಿಕೊಳ್ಳಲು ಸೂಕ್ತ ತರಬೇತಿ ನೀಡುವ ಬಗ್ಗೆ ಆಲೋಚಿಸುವಂತೆ ಅವರು ಹೇಳಿದರು.

ನಂತರ ಪಿಪಿಇ ಕಿಟ್‌ ಧರಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ಕೆ.ಆರ್‌. ಆಸ್ಪತ್ರೆಯ ಕೋವಿಡ್‌ ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಕ್ಸಿಜನ್‌ ಸಿಲಿಂಡರ್‌ ಹಾಗೂ ವೆಂಟಿಲೇಟರ್‌ಗಳನ್ನು ಪರಿಶೀಲಿಸಿದರು. ಕೋವಿಡ…-19 ವಿಭಾಗಕ್ಕೆ ತೆರಳಿ ಪ್ರತಿಯೊಂದು ಕೊಠಡಿಯಲ್ಲಿನ ಸೋಂಕಿತರನ್ನ ವೀಕ್ಷಿಸಿದರು. ನೂತನ ಲಿಕ್ವಿಡ್‌ ಆಕ್ಸಿಜನ್‌ ಕಟ್ಟಡವನ್ನು ವೀಕ್ಷಣೆ ಮಾಡಿ ಆದಷ್ಟುಬೇಗ ನಿರ್ಮಿಸುವಂತೆ ಎಂಜಿನಿಯರ್‌ಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಇದೇ ವೇಳೆ ಮೈಸೂರು ವೈದ್ಯಕೀಯ ಕಾಲೇಜಿನ ನರ್ಸ್‌ಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಮೈಸೂರು ವೈದ್ಯಕೀಯ ಕಾಲೇಜು ನಿರ್ದೇಶಕ ಹಾಗೂ ಡೀನ್‌ ಡಾ.ಸಿ.ಪಿ. ನಂಜರಾಜ, ಸಿಎಒ ಬಿ.ಆರ್‌. ರೂಪ, ಹಣಕಾಸು ಅಧಿಕಾರಿ ಮಹದೇವ ನಾಯಕ, ಕೆ.ಆರ್‌. ಆಸ್ಪತ್ರೆ ಅಧೀಕ್ಷಕ ಡಾ. ನಂಜುಂಡಸ್ವಾಮಿ, ಚೆಲುವಾಂಬ ಆಸ್ಪತ್ರೆ ಅಧೀಕ್ಷಕಿ ಡಾ. ಪ್ರಮೀಳಾ, ಡಾ. ಸುನೀತಾ, ಡಾ.ಎಂ. ಅನುರಾಧ, ಡಾ. ವೆಂಕಟೇಶ್‌, ಡಾ.ಎಚ್‌.ಜಿ. ಮಂಜುನಾಥ್‌ ಮೊದಲಾದವರು ಇದ್ದರು.

click me!