Kodagu News: ಎಮ್ಮೆಮಾಡು ಗ್ರಾ.ಪಂ. ವ್ಯಾಪ್ತಿಯ ರಸ್ತೆಗಳು ಗುಂಡಿಮಯ!

By Kannadaprabha NewsFirst Published Dec 3, 2022, 7:55 AM IST
Highlights

ಸಮೀಪದ ಎಮ್ಮೆಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು ವಾಹನ ಚಾಲಕರು, ಗ್ರಾಮೀಣ ಜನರು ಸಮಸ್ಯೆ ಎದುರಿಸುವಂತಾಗಿದೆ. ಹದಗೆಟ್ಟರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವುದೇ ಸವಾಲಾಗಿ ಪರಿಣಮಿಸಿದೆ. ರಸ್ತೆ ಉದ್ದಕ್ಕೂ ಎಲ್ಲೆಲ್ಲೂ ಗುಂಡಿಗಳದ್ದೇ ದರ್ಬಾರು ಕೆಲವೆಡೆಯಂತೂ ಜಲ್ಲಿಕಲ್ಲುಗಳೇ ರಸ್ತೆಯಲ್ಲಿ ರಾರಾಜಿಸುತ್ತಿವೆ.

ದುಗ್ಗಳ ಸದಾನಂದ

ನಾಪೋಕ್ಲು (ಡಿ.3) : ಸಮೀಪದ ಎಮ್ಮೆಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು ವಾಹನ ಚಾಲಕರು, ಗ್ರಾಮೀಣ ಜನರು ಸಮಸ್ಯೆ ಎದುರಿಸುವಂತಾಗಿದೆ. ಹದಗೆಟ್ಟರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವುದೇ ಸವಾಲಾಗಿ ಪರಿಣಮಿಸಿದೆ. ರಸ್ತೆ ಉದ್ದಕ್ಕೂ ಎಲ್ಲೆಲ್ಲೂ ಗುಂಡಿಗಳದ್ದೇ ದರ್ಬಾರು ಕೆಲವೆಡೆಯಂತೂ ಜಲ್ಲಿಕಲ್ಲುಗಳೇ ರಸ್ತೆಯಲ್ಲಿ ರಾರಾಜಿಸುತ್ತಿವೆ.

ಎಮ್ಮೆಮಾಡಿನ ಸುತ್ತಮುತ್ತಲಿನ ಗ್ರಾಮಗಳಾದ ಕುರುಳಿ, ಪಡಿಯಾಣಿ ಸೇರಿದಂತೆ ವಿವಿಧ ಗ್ರಾಮಗಳನ್ನು ಸಂಪರ್ಕಿಸುವ ಬಹುತೇಕ ರಸ್ತೆಗಳು ಗುಂಡಿಮಯವಾಗಿವೆ. ಇವೆಲ್ಲ ಗ್ರಾಮೀಣ ರಸ್ತೆಗಳಾದರೂ ವಾಹನಗಳ ಸಂಚಾರ ಸಾಕಷ್ಟುಇದೆ. ಆಟೋಗಳು, ಖಾಸಗಿ ವಾಹನಗಳು, ವಿವಿಧ ಶಾಲಾ ವಾಹನಗಳು, ಖಾಸಗಿ ಬಸ್ಸುಗಳು, ಸರ್ಕಾರಿ ಬಸ್ಸುಗಳು ಈ ರಸ್ತೆಯುದ್ದಕ್ಕೂ ಸಂಚರಿಸುತ್ತವೆ. ಎಮ್ಮೆಮಾಡು- ಪಡಿಯಾಣಿ ರಸ್ತೆಯಲ್ಲಿ ಸಾಗುವ ಬಸ್‌ಗಳಿಗೆ ಸಾಕಷ್ಟುಪ್ರಯಾಣಿಕರು ಲಭಿಸಿದರೆ ನಾಪೋಕ್ಲುವಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳ ಸಂಖ್ಯೆಯೂ ಸಾಕಷ್ಟಿದ್ದು, ಖಾಸಗಿ ವಾಹನಗಳಲ್ಲಿ ಅವರು ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಎಮ್ಮೆಮಾಡು-ಕೂರುಳಿ, ಎಮ್ಮೆಮಾಡು -ಪಡಿಯಾಣಿ ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿವೆ.

ಬಿಗ್ 3 ಇಂಪ್ಯಾಕ್ಟ್: ಮಂಡ್ಯದಲ್ಲಿ ರಸ್ತೆಗಿಳಿದ ಜೆಸಿಬಿಗಳು

 

ನಾಪೋಕ್ಲು ಭಾಗಮಂಡಲ ರಸ್ತೆಯ ಎಮ್ಮೆಮಾಡು ಜಂಕ್ಷನ್‌ನಿಂದ ಎಮ್ಮೆಮಾಡು ದರ್ಗಾದವರೆಗಿನ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ದರ್ಗಾದ ಸಮೀಪದ ರಸ್ತೆಯನ್ನು ಜೆಸಿಬಿಯಿಂದ ಅಗೆದು ಕಾಮಗಾರಿ ಪೂರ್ಣಗೊಳಿಸದೆ ಅರ್ಧಕ್ಕೇ ಕೈ ಬಿಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ದರ್ಗಾದ ಎದುರು ಭಾಗದ ರಸ್ತೆಗೆ 20 ಲಕ್ಷದ ಕಾಂಕ್ರೀಟ್‌ ಕಾಮಗಾರಿ ನಿರ್ಮಿಸುವುದಾಗಿ ಹೇಳಿದ ಗುತ್ತಿಗೆದಾರರು ನಾಪತ್ತೆಯಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ರಸ್ತೆ ಕೆಲಸ ಆಗದೆ ಹಾಗೆ ಉಳಿದಿದೆ ಎಂದು ಇಲ್ಲಿನ ಗ್ರಾಮಸ್ಥರು ಆರೋಪಿಸುತ್ತಾರೆ .

ಮಂಡ್ಯದಲ್ಲಿ ಯಮರೂಪಿ ರಸ್ತೆ ಗುಂಡಿಗಳು: ಪ್ರಾಣ ಹೋದರೂ 'ಆಡಳಿತ ವರ್ಗ' ಡೋಂಟ್ ಕೇರ್

ರಸ್ತೆ ಕಾಮಗಾರಿ ಅರ್ಧದಲ್ಲಿ ಬಿಟ್ಟಿರುವ ಬಗ್ಗೆ ಈಗಾಗಲೇ ಸಂಬಂಧಪಟ್ಟವರ ಗಮನಕ್ಕೆ ಹಲವು ಬಾರಿ ತಂದಿದ್ದರೂ ಸಮಸ್ಯೆ ಬಗೆಹರಿಯಲಿಲ್ಲ. ಮುಂಬರುವ ಉರೂಸ್‌ ಹಬ್ಬಕ್ಕೆ ಮುಂಚಿತವಾಗಿ ದುರಸ್ತಿ ಕಾರ್ಯ ಕೈಗೊಳ್ಳದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ಮುಖಾಂತರ ಪ್ರತಿಭಟಿಸಲಾಗುವುದು

ಸಿ.ಎಂ. ರಫೀಕ್‌ , ಮಾಜಿ ಜಿಲ್ಲಾಧ್ಯಕ್ಷರು ಬಿಜೆಪಿ ಅಲ್ಪಸಂಖ್ಯಾತ ಘಟಕ ಕೊಡಗು ಜಿಲ್ಲೆ

ಈ ಗ್ರಾಮೀಣ ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸುವ ಸವಾರರು ಹೈರಾಣಾಗುತ್ತಿದ್ದಾರೆ ಮಳೆಗಾಲ ಮುಗಿದ ನಂತರ ರಸ್ತೆ ಹೊಂಡಗಳನ್ನು ಮುಚ್ಚುವುದು ಅತಿ ಅಗತವಾದುದ್ದು. ರಸ್ತೆ ದುಸ್ಥಿತಿ ಬಗ್ಗೆ ಇತ್ತೀಚೆಗೆ ನಡೆದ ತಹಸೀಲ್ದಾರ್‌ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲೂ ಗಮನಸೆಳೆಯಲಾಗಿದೆ. ಮಳೆಯ ನೆಪ ಹೇಳಿಕೊಂಡು ಕಾಮಗಾರಿಯನ್ನು ವಿಳಂಬ ಮಾಡುವುದು ಸರಿಯಲ್ಲ

- ಪಿ.ಎ. ಅಬೂಬಕ್ಕರ್‌ ಸಖಾಫಿ, ಎಮ್ಮೆಮಾಡು ಜಮಾಯತ…. ಅಧ್ಯಕ್ಷರು

ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿದ ರಸ್ತೆಗಳ ತಡೆಗೋಡೆ ಸೇರಿದಂತೆ ಇನ್ನಿತರ ಕೆಲಸವನ್ನು ಈಗಾಗಲೇ ಮಾಡಲಾಗಿದೆ. ರಸ್ತೆ ಕೆಲಸಕ್ಕೆ ಅನುದಾನ ಬಿಡುಗಡೆಯಾಗಿಲ್ಲ. ಬಂದ ಕೂಡಲೇ ಕೆಲಸ ಪ್ರಾರಂಭಿಸಲಾಗುವುದು

- ಅಶೋಕ್‌ ಜಿಲ್ಲಾ ಪಂಚಾಯಿತಿ ಜೆಇ

ಹದಗೆಟ್ಟರಸ್ತೆಯನ್ನು ಗುಂಡಿ ಮುಚ್ಚುವ ಕೆಲಸ ಮಾಡಲಾಗುವುದು. ಬಾಕಿ ಉಳಿದಿರುವ 100 ಮೀಟರ್‌ ಕಾಂಗ್ರೆಸ್‌ ರಸ್ತೆಯನ್ನು ಗುತ್ತಿಗೆದಾರರು ಮಾಡಬೇಕಾಗಿದ್ದು ಅವರಿಗೆ ಈಗಾಗಲೇ ನೋಟಿಸ್‌ ಕೂಡ ನೀಡಲಾಗಿದೆ

- ಸತೀಶ್‌, ಪಿಡಬ್ಲ್ಯೂಡಿ ಜೆಇ

click me!