ರಸ್ತೆಗೆ ಮರ: ಎಸ್ಸೆಸ್ಸೆಲ್ಸಿ ಮಕ್ಕಳಿಗೆ ನೆರವಾದ ಬಿಇಒ ಬಿಂಬ

By Kannadaprabha NewsFirst Published Jul 4, 2020, 7:38 AM IST
Highlights

ತುಮರಿ ಸರ್ಕಾರಿ ಪ್ರೌಢಶಾಲೆಯಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಸಾಗರದ ಕ್ಷೇತ್ರ ಶಿಕ್ಷಣಾ​ಧಿಕಾರಿಗಳ ಕಚೇರಿಯಿಂದ ಮಾರ್ಗಾ​ಧಿಕಾರಿ ಉಮಾಪತಿ ನೇತೃತ್ವದಲ್ಲಿ ಜೀಪಿನಲ್ಲಿ ಪ್ರಶ್ನೆ ಪತ್ರಿಕೆ ಒಯ್ಯುತ್ತಿರುವ ಸಂದರ್ಭದಲ್ಲಿ ಅಂಬಾರಗೋಡ್ಲು ರಸ್ತೆಯಲ್ಲಿ ಮರ ಬಿದ್ದಿತ್ತು. ಈ ಸಮಸ್ಯೆಯನ್ನು ನಿಗಧಿತ ಸಮಯದಲ್ಲಿ ಬಗೆಹರಿಸುವಲ್ಲಿ ಸಾಗರ ಕ್ಷೇತ್ರಶಿಕ್ಷಣಾಧಿಕಾರಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಸಾಗರ(ಜು.04): ತಾಲೂನ ಅಂಬಾರಗೋಡ್ಲು ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಮರ ಮುರಿದು ಬಿದ್ದು ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ತುಮರಿ ಪರೀಕ್ಷಾ ಕೇಂದ್ರಕ್ಕೆ ಕ್ಷೇತ್ರ ಶಿಕ್ಷಣಾ​ಧಿಕಾರಿಗಳ ನೇತೃತ್ವದಲ್ಲಿ ಹರಸಾಹಸಪಟ್ಟು ನಿಗ​ದಿತ ಸಮಯಕ್ಕೆ ತಲುಪಿಸಲಾಗಿದೆ.

ತುಮರಿ ಸರ್ಕಾರಿ ಪ್ರೌಢಶಾಲೆಯಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಸಾಗರದ ಕ್ಷೇತ್ರ ಶಿಕ್ಷಣಾ​ಧಿಕಾರಿಗಳ ಕಚೇರಿಯಿಂದ ಮಾರ್ಗಾ​ಧಿಕಾರಿ ಉಮಾಪತಿ ನೇತೃತ್ವದಲ್ಲಿ ಜೀಪಿನಲ್ಲಿ ಪ್ರಶ್ನೆ ಪತ್ರಿಕೆ ಒಯ್ಯುತ್ತಿರುವ ಸಂದರ್ಭದಲ್ಲಿ ಅಂಬಾರಗೋಡ್ಲು ರಸ್ತೆಯಲ್ಲಿ ಮರ ಬಿದ್ದಿತ್ತು. ಮರದ ಜೊತೆಗೆ ವಿದ್ಯುತ್‌ ತಂತಿಗಳು ಸಹ ಹರಿದು ಬಿದ್ದಿದ್ದರಿಂದ ಸ್ಥಳೀಯರು ಮರವನ್ನು ತೆರವುಗೊಳಿಸಲು ಹಿಂದೇಟು ಹಾಕಿದರು.

ಉಮಾಪತಿ ಅವರು ಬಿಇಒ ಬಿಂಬ ಕೆ.ಆರ್‌. ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರು. ತಕ್ಷಣ ತಹಸೀಲ್ದಾರ್‌ ಚಂದ್ರಶೇಖರ್‌ ನಾಯ್ಕ್ ಅವರು ವಾಹನ ವ್ಯವಸ್ಥೆ ಮಾಡಿದರು. ಸ್ವತಃ ಬಿಇಒ ಸ್ಥಳಕ್ಕೆ ಹೋಗಿ ಅರಣ್ಯ ಇಲಾಖೆ, ಮೆಸ್ಕಾಂ ಸಿಬ್ಬಂದಿಗಳಿಗೆ ಮನವಿ ಮಾಡಿ ಮರ ಹಾಗೂ ವಿದ್ಯುತ್‌ ತಂತಿ ತೆರವು ಮಾಡಿಸಿದರು. ಗ್ರಾಮಸ್ಥರು ಸಹಕಾರ ನೀಡಿದರು. ಇದರಿಂದಾಗಿ ನಿಗ​ದಿತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆ ಪತ್ರಿಕೆ ತಲುಪಿಸಲು ಸಾಧ್ಯವಾಯಿತು.

ಗಡಿಯಲ್ಲಿ ದಾರಿ ತಪ್ಪಿದ ವಿದ್ಯಾರ್ಥಿ: ಶಿಕ್ಷಕರ ಸಾಹಸದಿಂದ ಕೊನೆಗೂ ಎಕ್ಸಾಂ ಬರೆದ..!

ರಸ್ತೆಗೆ ಬಿದ್ದ ಇನ್ನೊಂದು ಮರ:

ಕರೂರು ಹೋಬಳಿಯ ಮಾರಲಗೋಡಿನಿಂದ ತುಮರಿಗೆ ವಿದ್ಯಾರ್ಥಿಗಳನ್ನು ಕರೆತರುತ್ತಿದ್ದ ಸರ್ಕಾರಿ ಬಸ್‌ ಸಂಚರಿಸುವ ಮಾರ್ಗಮಧ್ಯದಲ್ಲಿ ದೊಡ್ಡ ಮರವೊಂದು ಮುರಿದು ಬಿದ್ದಿದ್ದರಿಂದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹೋಗುವುದು ಹೇಗೆ ಎನ್ನುವ ಸಮಸ್ಯೆ ಉದ್ಭವಿಸಿತ್ತು. ಕ್ಷೇತ್ರ ಶಿಕ್ಷಣಾ​ಕಾರಿಗಳ ಮನವಿ ಮೇರೆಗೆ ಗ್ರಾಮಸ್ಥರ ಸಹಕಾರದೊಂದಿಗೆ ಕೆಎಸ್‌ಆರ್‌ಟಿಸಿ ಚಾಲಕ, ನಿರ್ವಾಹಕರು ರಸ್ತೆಗೆ ಮರ ತೆರವುಗೊಳಿಸಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಎರಡೂ ಪ್ರಕರಣಗಳಲ್ಲಿ ಸಹಕರಿಸಿದವರಿಗೆ ಬಿಇಒ ಕೃತಜ್ಞತೆ ಸಲ್ಲಿಸಿದ್ದಾರೆ.
 

click me!