ಮೋದಿ ಕಾರ್ಯಕ್ರಮ ಯಶಸ್ವಿಗಾಗಿ ಕಲಬುರಗಿಯಲ್ಲಿ ಪೂರ್ವ ಸಿದ್ದತಾ ಸಭೆ

By Suvarna NewsFirst Published Jan 16, 2023, 11:03 PM IST
Highlights

ಇದೇ ಜನವರಿ 19 ರಂದು ಸೇಡಂ ತಾಲ್ಲೂಕಿನ ಮಳಖೇಡದಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಯಶಸ್ವಿಯಾಗಿ ಕಂದಾಯ ಇಲಾಖೆಯ ಕಾರ್ಯದರ್ಶಿ ಹಾಗೂ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಎನ್. ಜಯರಾಮ್ ಅವರು ಕಲಬುರಗಿಯಲ್ಲಿಂದು ಅಧಿಕಾರಿಗಳ ಸಭೆ ನಡೆಸಿದರು.

ಕಲಬುರಗಿ (ಜ.16): ಇದೇ ಜನವರಿ 19 ರಂದು ಸೇಡಂ ತಾಲ್ಲೂಕಿನ ಮಳಖೇಡದಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಯಶಸ್ವಿಯಾಗಿ ಕಂದಾಯ ಇಲಾಖೆಯ ಕಾರ್ಯದರ್ಶಿ ಹಾಗೂ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಎನ್. ಜಯರಾಮ್ ಅವರು ಕಲಬುರಗಿಯಲ್ಲಿಂದು ಅಧಿಕಾರಿಗಳ ಸಭೆ ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಾರ್ಯಕ್ರಮದ ಪೂರ್ವಸಿದ್ಧತೆ ಕುರಿತು ಕರೆದಿದ್ದ ಅಧಿಕಾರಿಗಳ ಸಭೆ ನಡೆಸಿದ ಅವರು,  ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕಾರ್ಯಕ್ರಮವನ್ನು  ಸುಸೂತ್ರವಾಗಿ ನಡೆಸಬೇಕು. ಈ ನಿಟ್ಟಿನಲ್ಲಿ ಕಲಬುರಗಿ, ಬೀದರ್, ರಾಯಚೂರು ಹಾಗೂ ವಿಜಯಪುರ ಜಿಲ್ಲಾಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು.

ಪ್ರಮುಖವಾಗಿ ಕಾರ್ಯಕ್ರಮಕ್ಕೆ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್ ಹಾಗೂ ವಿಜಯಪುರ ಜಿಲ್ಲೆಗಳಿಂದ ಫಲಾನುಭವಿಗಳ ಕರೆತರಲು ಸೂಕ್ತ ಬಸ್ ವ್ಯವಸ್ಥೆ ಮಾಡಬೇಕು. ಅವರಿಗೆ ಅಂದು ಬೆಳಿಗ್ಗೆ ಉಪಹಾರ, ಕಾರ್ಯಕ್ರಮದ ಸ್ಥಳದಲ್ಲಿ ಊಟ, ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಅವರು ನಿರ್ದೇಶಿಸಿದರು.

ಆಯಾ ಜಿಲ್ಲೆಗಳ ಫಲಾನುಭವಿಗಳ ಕರೆತರಲು, ಊಟದ ವ್ಯವಸ್ಥೆ ಹಾಗೂ ವೇದಿಕೆ ಕರೆತರುವುದು ಮುಂತಾದವುಗಳ ನಿರ್ವಹಣೆಗಾಗಿ ಆಯಾ ಜಿಲ್ಲೆಗಳು ತಲಾ ಓರ್ವ ಸಹಾಯಕ ಆಯುಕ್ತ ಹಾಗೂ ಓರ್ವ ತಹಸೀಲ್ದಾರರನ್ನು ನಿಯೋಜಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು. 

ಕಾರ್ಯಕ್ರಮದ ಸ್ಥಳದ ಸನಿಹದಲ್ಲಿ ಬಯೋ ಶೌಚಾಲಯಗಳನ್ನು ನಿರ್ಮಿಸಬೇಕು ಹಾಗೂ ಅವುಗಳ ಸ್ವಚ್ಛಗೊಳಿಸಲು ಸ್ಥಳದಲ್ಲೇ ಪೌರ ಕಾರ್ಮಿಕರನ್ನು ನಿಯೋಜಿಸಬೇಕು ಎಂದು ಅವರು ಸೂಚಿಸಿದರು.

ಫಲಾನುಭವಿಗಳ ಕರೆತರುವ ಬಸ್‍ಗಳಿಗೆ ಎಂಟ್ರಿ ಪಾಯಿಂಟ್ (ಪ್ರವೇಶ)ಗಳನ್ನು ಹೆಚ್ಚಿಸಬೇಕು. ಬಸ್ ಇಳಿದು ಕಾರ್ಯಕ್ರಮಕ್ಕೆ ಬರುವ ಜನರು ಎಲ್ಲೂ ಸಾಲುಗಟ್ಟಿ ನಿಲ್ಲದಂತೆ ಸುಲಭವಾಗಿ ಒಳಬರುವಂತಾಗಬೇಕು. ಹಾಗೂ ಕಾರ್ಯಕ್ರಮ ಮುಗಿದ ಬಳಿಕವೂ ಯಾವುದೇ ಸಮಸ್ಯೆಯಾಗದಂತೆ ಸ್ಥಳದಿಂದ ಹೊರಹೋಗುವಂತಾಗಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಅವರು ಸೂಚನೆ ನೀಡಿದರು.

ಹಾಗೆಯೇ ವಾಹನ ನಿಲುಗಡೆಯಾಗುವ ಇಡೀ ಪ್ರದೇಶದಲ್ಲಿನ ಬೆಳೆಯ ಕಳೆಯನ್ನು ತೆಗೆದು ಹಾಕಬೇಕು. ಯಾಕೆಂದರೆ ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ತಿಳಿ ಹೇಳಿದರು. ಕಾರ್ಯಕ್ರಮದ ಸ್ಥಳ, ವಾಹನ ನಿಲುಗಡೆ ಸ್ಥಳ ಮುಂತಾದೆಡೆ 30 ಅಗ್ನಿಶಾಮಕ ವಾಹನಗಳ ವ್ಯವಸ್ಥೆ ಗೊಳಿಸಬೇಕು. ಅಗತ್ಯವಿದ್ದಲ್ಲಿ ಇತರೆ ಜಿಲ್ಲೆಗಳಿಂದಲೂ ಅಗ್ನಿಶಾಮಕ ವಾಹನಗಳನ್ನು ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಸ್ಥಳದಲ್ಲಿ ಆರೋಗ್ಯ ತಪಾಸಣಾ ಕೇಂದ್ರಗಳನ್ನು ತೆರೆಯಬೇಕು ಎಂದು ಸಲಹೆ ನೀಡಿದ ಅವರು ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಸಾರಿಗೆ ಇಲಾಖೆ, ಆಹಾರ ಇಲಾಖೆಗಳು ಜಂಟಿಯಾಗಿ ಸಹಾಯವಾಣಿ (ಹೆಲ್ಪ್‍ಲೈನ್) ತೆರೆಯುವ ಮೂಲಕ ಯಾವುದೇ ಸಮಸ್ಯೆ ಕಂಡು ಬಂದಲ್ಲಿ ಕೂಡಲೇ ಪರಿಹರಿಸಬೇಕು ಎಂದು ಹೇಳಿದರು.

ಕರ್ನಾಟಕ ಕುರುಕ್ಷೇತ್ರ ಗೆಲ್ಲಲು ಸಿಎಂ ಮಾಸ್ಟರ್ ಪ್ಲಾನ್: ರಾಜ್ಯಕ್ಕೆ ಬರಲಿದ್ದಾರೆ ಪಂಚ ಪಾಂಡವರು

ಆಹ್ವಾನ ಪತ್ರಿಕೆಗಳಿಗೆ ಪ್ರಧಾನ ಮಂತ್ರಿಗಳ ಕಾರ್ಯಾಲಯದಿಂದ ಒಪ್ಪಿಗೆ ದೊರೆತ ಬಳಿಕ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಹಾಜರಿದ್ದ ಕಲಬುರಗಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಕಾರ್ಯಕ್ರಮಕ್ಕೆ ಕೈಗೊಳ್ಳಲಾದ ಸಿದ್ಧತೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ಭದ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಜ.19ಕ್ಕೆ ಕಲಬುರಗಿಗೆ ಪ್ರಧಾನಿ ಮೋದಿ: ಸಚಿವ ಆರ್.ಅಶೋಕ್‌ರಿಂದ ಪೂರ್ವಸಿದ್ಧತೆ ಪರಿಶೀಲನೆ

ಸಭೆಯಲ್ಲಿ ಕಲಬುರಗಿ ಪ್ರಾದೇಶಿಕ ಆಯುಕ್ತರಾದ ಕೃಷ್ಣ ಭಾಜಪೇಯಿ, ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್, ಬೀದರ್ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ್.ಎಲ್, ರಾಜ್ಯ ಕಂದಾಯ ಕೋಶದ ನಿರ್ದೇಶಕ ಡಾ. ರಾಜೇಂದ್ರ ಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಡಿ. ಬದೋಲೆ,  ಕಲಬುರಗಿ ನಗರ ಪೆÇಲೀಸ್ ಆಯುಕ್ತ ಚೇತನ ಆರ್, ಅಪರ ಜಿಲ್ಲಾಧಿಕಾರಿ ಭೀಮಾಶಂಕರ್ ತೆಗ್ಗೆಳ್ಳಿ, ಕೆ.ಕೆ.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಮುಂತಾದವರು ಇದ್ದರು.

click me!