Davanagere: ಶಾಮನೂರು ಶಿವಶಂಕರಪ್ಪನವರ ಪುತ್ರನ ಸಕ್ಕರೆ ಕಂಪನಿಯಿಂದ ಸುತ್ತ ಹಳ್ಳಿಗಳ ಜನರ ಆಕ್ರೋಶ

By Suvarna NewsFirst Published Jan 16, 2023, 10:43 PM IST
Highlights

ದಾವಣಗೆರೆಯಲ್ಲಿರುವ ಶಾಸಕ ಶಾಮನೂರು ಶಿವಶಂಕರಪ್ಪನವರ ಪುತ್ರನ ಒಡೆತನದ ದಾವಣಗೆರೆ ಸಕ್ಕರೆ ಕಂಪನಿ ಪ್ರತಿ ದಿನ ಹೊರ ಸೂಸುವ ಹೊಗೆಯಿಂದ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಜನರು ಬದುಕುವುದು ಕಷ್ಟಕರವಾಗಿದೆ ಎಂದು ರೈತ ಒಕ್ಕೂಟದ ಮುಖಂಡ ಬಿ.ಎಂ. ಸತೀಶ್ ಹೇಳಿದರು.

ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಜ.16): ದಾವಣಗೆರೆ  ತಾಲ್ಲೂಕಿನ ಕುಕ್ಕುವಾಡ ಗ್ರಾಮದಲ್ಲಿರುವ ಶಾಸಕ ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್. ಎಸ್. ಗಣೇಶ ಅವರ ಒಡೆತನದ ದಾವಣಗೆರೆ ಸಕ್ಕರೆ ಕಂಪನಿ ಪ್ರತಿ ದಿನ ಹೊರ ಸೂಸುವ ಹೊಗೆಯಿಂದ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಜನರು ಬದುಕುವುದು ಕಷ್ಟಕರವಾಗಿದೆ ಎಂದು ರೈತ ಒಕ್ಕೂಟದ ಮುಖಂಡ ಬಿ.ಎಂ. ಸತೀಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ನಿತ್ಯ ಈ ಶುಗರ್ ಫ್ಯಾಕ್ಟರಿಯ ಚಿಮಣಿಯಿಂದ ಬೂದಿ ಹೊರಸೂಸುತ್ತಿದೆ. ಹಂಚಿನ ಮನೆಗಳ ಮೇಲೆ ಈ ಬೂದಿ ಬಿದ್ದು ಶೇಖರವಾಗಿ ಗಾಳಿಯಲ್ಲಿ ಎಲ್ಲಾ ಕಡೆ ಪ್ರಸರಿಸುತ್ತದೆ. ಊಟ ಮಾಡುವಾಗ ತಟ್ಟೆಯಲ್ಲಿ  ಬೀಳುವುದರಿಂದ ಇದನ್ನೇ ಊಟ ಮಾಡಿದ ಜನರು ರೋಗ ರುಜನಗಳಿಂದ ಬಳಲುತ್ತಿದ್ದಾರೆ.  ಒಣ ಹಾಕಿದ ಬಟ್ಟೆಗಳ ಮೇಲೆ ಈ ಬೂದಿ ಬೀಳುವುದರಿಂದ ಬಟ್ಟೆ  ಬೂದು ಬಣ್ಣಕ್ಕೆ ತಿರುಗುತ್ತಿವೆ ಎಂದು ಆರೋಪಿಸಿದರು.

 ಹುಲ್ಲು, ಗಿಡ ಗಂಟೆಗಳ ಮೇಲೆ  ಬೂದಿ ಬೀಳುವುದರಿಂದ ಈ ಹುಲ್ಲನ್ನೇ ದನ-ಕರುಗಳು, ಕುರಿ ಮೇಕೆಗಳು ಮೇಯುವುದರಿಂದ ಇವುಗಳು ಸಹ ಸರಿಯಾದ ಬೆಳವಣಿಗೆ ಇಲ್ಲದೆ ರೋಗಗ್ರಸ್ತವಾಗಿವೆ. ಇದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಮಾಡುತ್ತಿರುವ ರೈತರು ನಷ್ಟದ ಸಂಕಷ್ಟಕ್ಕೀಡಾಗಿದ್ದಾರೆ ಎಂದರು.

ನಿತ್ಯ ಜನರು ಸೇರಿದಂತೆ ಪಶುಗಳು ಹೊಗೆಯಿಂದ ಬರುವ ಬೂದಿ ತಿಂದು ಬದುಕಬೇಕಾಗಿದೆ. ಒಂದು ದಿನವೂ ಬಿಳಿ ಅಥವಾ ಸ್ವಚ್ಛ ಬಟ್ಟೆ ಧರಿಸುವಂತಿಲ್ಲ. ಈ ಭಾಗದ ರೈತರು ಬೆಳೆದಿರುವ ಭತ್ತ ಪೂರ್ಣ ಕಪ್ಪಾಗುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಕಡಿಮೆಯಾಗುತ್ತದೆ.

ಈ ಸಕ್ಕರೆ ಕಾರ್ಖಾನೆಯಿಂದ ಹೊರಸೂಸುವ ವಿಷಯುಕ್ತ ತ್ಯಾಜ್ಯ ನೀರನ್ನು ಸಹ ಹಳ್ಳಕ್ಕೆ ಬಿಡಲಾಗುತ್ತಿದೆ. ಈ ನೀರಿನಲ್ಲಿ ಆಸಿಡ್ ಇದ್ದು, ಹಳ್ಳದಲ್ಲಿರುವ ಮೀನು ಮತ್ತು ಇತರೆ ಜಲಚರ ಜೀವಿಗಳು ಸತ್ತಿವೆ. ಸುತ್ತ ಮುತ್ತಲ ಗ್ರಾಮಗಳ ರೈತರು ಇದೇ ನೀರನ್ನು ಪಂಪ್ ಸೆಟ್ ಗಳ ಮೂಲಕ ಜಮೀನುಗಳಿಗೆ ಪೂರೈಕೆ ಮಾಡುತ್ತಾರೆ. ಇದರಿಂದ ಎಲ್ಲಾ ರೈತರ ಜಮೀನುಗಳು ವಿಷಯುಕ್ತವಾಗಿವೆ ಎಂದು ಆರೋಪಿಸಿದರು.

ಮಣ್ಣಿನಲ್ಲಿರುವ ಜೀವಾಣುಗಳು ನಾಶವಾಗಿದ್ದು, ಯಾರ ಜಮೀನಿನಲ್ಲಿಯೂ ಎರೆ ಹುಳು ಕಾಣಿಸುವುದಿಲ್ಲ. ಈ ಜಮೀನಿನಲ್ಲಿ ಬೆಳೆ ಇಳುವರಿ ಬಹಳ ಕಡಿಮೆ ಆಗಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಳ್ಳಿಗಳ ಜನರ ಬದುಕು ಬೂದಿಮಯವಾಗಿ ಬರ್ಬಾದಾಗಿದೆ. ವಿಷಯುಕ್ತ ಬೂದಿ ಮಿಶ್ರಿತ ಗಾಳಿ ಮತ್ತು ವಿಷ ಮಿಶ್ರಿತ ನೀರಿನಿಂದ ಜನರ ಪಶುಗಳ ಉಸಿರಾಟ ಕಷ್ಟಕರವಾಗಿದೆ ಎಂದು ವಿವರಿಸಿದರು.

Davanagere: ಶಾಮನೂರು ಶಿವಶಂಕರಪ್ಪ ಬಗ್ಗೆ ಹಗುರ ಮಾತು ಬೇಡ: ವೀರಶೈವ ಮಹಾಸಭಾ ಎಚ್ಚರಿಕೆ

ಕೊಡುಗೈ ದಾನಿ ಎಂದೇ ಹೆಸರಾಗಿರುವ ರಾಜ್ಯದ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪನವರ ಒಡೆತನದ ಕಾರ್ಖಾನೆಯ ಕರ್ಮಕಾಂಡ ಖಂಡಿಸಿ, ಜ.19 ರ ಗುರುವಾರ  ಬೆಳಿಗ್ಗೆ 11 ಗಂಟೆಗೆ ಕುಕ್ಕುವಾಡ ಗ್ರಾಮದಲ್ಲಿ ಚನ್ನಗಿರಿ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದರು.

ಅದೃಷ್ಟ ಇದ್ದರೆ ಪರಮೇಶ್ವರ್ ಮುಂದಿನ ಸಿಎಂ ಆಗಬಹುದು: ಶಾಮನೂರು ಶಿವಶಂಕರಪ್ಪ

ಸುದ್ದಿಗೋಷ್ಠಿಯಲ್ಲಿ, ಎಂ.ಬಿ. ಹಾಲಪ್ಪ, ಬಲ್ಲೂರು ಬಸವರಾಜಪ್ಪ, ನಾಗರಾಜ್ ಆಮಟಿ,  ಕನಗೊಂಡನಹಳ್ಳಿ ವೈ.ಎನ್. ತಿಪ್ಪೇಸ್ವಾಮಿ, ಬಲ್ಲೂರು ಬಕ್ಕೇಶಯ್ಯ,‌ ಎಂ.ಬಿ. ಗುತ್ಯಪ್ಪ, ಚನ್ನಪ್ಪ, ಅಂಜಲಿ ಜ್ಯೋತಿಕಾರ್,   ಬಸವರಾಜಪ್ಪ ಇನ್ನಿತರರಿದ್ದರು.

click me!