
ಬೆಂಗಳೂರು, (ಆ.11): ಕೊರೋನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನ ದೇವಸ್ಥಾನಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ಹೌದು...ಶ್ರಾವಣ ಮಾಸದ ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಬೆಂಗಳೂರಿನ ದೇವಸ್ಥಾನಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧ ವಿಧಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಜುಲೈ ತಿಂಗಳಲ್ಲಿ ಹೆಚ್ಚಿದ RT ನಂಬರ್: 3 ನೇ ಅಲೆ ಭೀತಿ ಇನ್ನೂ ಹೆಚ್ಚಳ
ಶ್ರಾವಣ ಮಾಸದಲ್ಲಿ ದೇಗುಲಗಳಲ್ಲಿ ಜನಸಂದಣಿ ಉಂಟಾಗುವುದರಿಂದ ಕೋವಿಡ್ ಸೋಂಕು ಹೆಚ್ಚುವ ಕಾರಣಕ್ಕೆ ಮುಂಜಾಗ್ರತಾವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಎಂದಿನಂತೆ ಪ್ರತಿದಿನ ರಾತ್ರಿ 9ರಿಂದ ಬೆಳಗ್ಗೆ 5ಗಂಟೆ ವರೆಗೆ ನೈಟ್ ಕರ್ಫ್ಯೂ ಇರಲಿದೆ.
ಈಗಾಗಲೇ ಕೇರಳ ಹಾಗೂ ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಆದರೂ ಸಹ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಕೇಸ್ ಹೆಚ್ಚಳವಾಗುತ್ತಿದೆ. ಅದರಲ್ಲೂ ಮಕ್ಕಳ ಪ್ರಕರಣಗಳು ಜಾಸ್ತಿಯಾಗುತ್ತಿವೆ.
ಆದ್ದರಿಂದ ಆಗಸ್ಟ್ 15ರ ಬಳಿಕ ಬೆಂಗಳೂರಿನಲ್ಲೂ ಟಫ್ ರೂಲ್ಸ್ ಜಾರಿ ಮಾಡುವ ಬಗ್ಗೆ ಚಿಂತನೆಗಳು ನಡೆದಿವೆ. ಈ ಬಗ್ಗೆ ಈಗಾಗಲೇ ಕಂದಾಯ ಸಚಿವ ಆರ್ ಅಶೋಕ್ ಸುಳಿವು ಸಹ ಕೊಟ್ಟಿದ್ದಾರೆ.