ಹಗರಿಬೊಮ್ಮನಹಳ್ಳಿ: ಚಿಕಿತ್ಸೆಗೆ ತೆರಳಿದ್ದ ಮಹಿಳೆ ಅರ್ಧ ಗಂಟೆಯಲ್ಲಿ ಸಾವು

By Kannadaprabha NewsFirst Published Oct 2, 2021, 1:18 PM IST
Highlights

*  ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದ ಘಟನೆ
*  ಇಂಜೆಕ್ಷನ್‌ ನೀಡಿದ್ದೆ ಸಾವಿಗೆ ಕಾರಣವೆಂದು ಕುಟುಂಬಸ್ಥರ ಆರೋಪ
*  ಆಸ್ಪತ್ರೆ ಮುಂಭಾಗ ಶವವಿಟ್ಟು ಪ್ರತಿಭಟನೆ
 

ಹಗರಿಬೊಮ್ಮನಹಳ್ಳಿ(ಅ.02):  ಮೈ-ಕೈ ನೋವು, ಜ್ವರದಿಂದ ಬಳುತ್ತಿದ್ದ ಮಹಿಳೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ(Government Hospital) ಚಿಕಿತ್ಸೆಗೆ ದಾಖಲಾಗಿ ಅರ್ಧಗಂಟೆಯೊಳಗೆ ಮೃತಪಟ್ಟಿದ್ದಾರೆ. ಇಂಜೆಕ್ಷನ್‌ ನೀಡಿದ್ದು, ರಿಯಾಕ್ಷನ್‌ ಆಗಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿರುವ ಕುಟುಂಬಸ್ಥರು ಆಸ್ಪತ್ರೆ ಮುಂಭಾಗದಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಕೂಡ್ಲಿಗಿ ರಸ್ತೆಯ ನಿವಾಸಿ ಕೆ. ಶಾಂತಮ್ಮ (52) ಮೃತರು.

ಪತಿಯೊಂದಿಗೆ ಮಧ್ಯಾಹ್ನ ಆಗಮಿಸಿದ ಇವರಿಗೆ ರಕ್ತ ಪರೀಕ್ಷೆ ಮಾಡಿಸುವಂತೆ ವೈದ್ಯರು(Doctors) ಹೇಳಿದ್ದಾರೆ. ವೈದ್ಯರ ಸಲಹೆಯಂತೆ ಪರೀಕ್ಷೆ ಮಾಡಿಸಿದ್ದು ಇದರ ಫಲಿತಾಂಶ ಬರುವ ಮುನ್ನವೇ ಆಸ್ಪತ್ರೆಯ ಸಿಬ್ಬಂದಿ ಶಾಂತಮ್ಮನಿಗೆ ಇಂಜೆಕ್ಷನ್‌ ನೀಡಿದ್ದಾರೆ. ಇದಾದ ಅರ್ಧ ಗಂಟೆಯೊಳಗೆ ನನ್ನ ಕಣ್ಣೆದುರೇ ಮೃತಪಟ್ಟಿದ್ದಾರೆ ಎಂದು ಮೃತರ ಪತಿ ಅಂಜೀನಪ್ಪ ಆರೋಪಿಸಿದ್ದಾರೆ.

ಕಮಲದತ್ತ ಪ್ರಭಾವಿ ಕಾಂಗ್ರೆಸ್‌ ಮುಖಂಡ: ರಾಜಕೀಯದಲ್ಲಿ ಭಾರೀ ಸಂಚಲನ..!

ಸುದ್ದಿ ತಿಳಿದು ಮೃತರ ಮಗಳು ಕೆ. ನಾಗರತ್ನ ಹಾಗೂ ಸಂಬಂಧಿಕರು ಆಸ್ಪತ್ರೆಗೆ ಆಗಮಿಸಿ ಮುತ್ತಿಗೆ ಹಾಕಿದರು. ಈ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಆಸ್ಪತ್ರೆ ಮುಂಭಾಗ ಶವವಿಟ್ಟು ಪ್ರತಿಭಟನೆ ನಡೆಸಿದರು. ಬಳಿಕ ಸ್ಥಳಕ್ಕಾಗಮಿಸಿದ ಪಿಎಸ್‌ಐ ಮಾರುತಿ ಮತ್ತು ಸಿಬ್ಬಂದಿ ಅವರೊಂದಿಗೆ ಕುಟುಂಬಸ್ಥರು ವಾಗ್ವಾದ ನಡೆಸಿದ್ದಾರೆ. ಆರು ಗಂಟೆ ಬಳಿಕ ಮೃತರ ಮಗಳು ಇಲ್ಲಿ ನಮಗೆ ನ್ಯಾಯ ಸಿಗುವುದಿಲ್ಲ ಎಂದು ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿ ಶವ ತೆಗೆದುಕೊಂಡು ಹೋಗಿದ್ದಾರೆ.

ಆಸ್ಪತ್ರೆಯ ಸಿಬ್ಬಂದಿಯಿಂದ ಈ ಸಾವು ಸಂಭವಿಸಿಲ್ಲ. ಡೈಕ್ಲೋ ಇಂಜೆಕ್ಷನ್‌ ಮಾತ್ರ ನೀಡಲಾಗಿದೆ. ತಪಾಸಣೆಗೆ ಬಂದ ವೇಳೆ ರಕ್ತ ಪರೀಕ್ಷೆಗೆ ಕಳಿಸಲಾಗಿತ್ತು. ಆ ವರದಿ ಬಂದ ಬಳಿಕ ಸಾವಿಗೆ ಕಾರಣ ತಿಳಿಯಬಹುದು ಎಂದು ಆಸ್ಪತ್ರೆಯ ವೈದ್ಯ ತಿಪ್ಪೇಸ್ವಾಮಿ ತಿಳಿಸಿದ್ದಾರೆ. 
 

click me!