
ಸಾಗರ (ಸೆ.01): ಪಟ್ಟಣದ ಮಂಕಳಲೆ ರಸ್ತೆಯಲ್ಲಿರುವ ಸಂತ ಜೋಸೆಫರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಗುರುವಾರ ರಕ್ಷಾಬಂಧನ ಆಚರಣೆಗೆ ಸಂಬಂಧಪಟ್ಟಂತೆ ಮುಖ್ಯ ಶಿಕ್ಷಕರು ಮತ್ತು ಪೋಷಕರ ನಡುವೆ ಮಾತಿನ ಚಕಮಕಿ ನಡೆಯಿತು. ರಕ್ಷಾಬಂಧನ ಹಿನ್ನೆಲೆಯಲ್ಲಿ ಬುಧವಾರ ಶಾಲೆಯ 9ನೇ ತರಗತಿಯ ಮಕ್ಕಳು ಪರಸ್ಪರ ರಾಖಿ ಕಟ್ಟಿಕೊಂಡಿದ್ದಾರೆ. ಓರ್ವ ವಿದ್ಯಾರ್ಥಿನಿ ವಿದ್ಯಾಥಿಯೊಬ್ಬನಿಗೆ ರಾಖಿ ಕಟ್ಟಿದ್ದಾಳೆ. ಎಲ್ಲರ ಎದುರಿಗೆ ರಾಖಿ ಕಟ್ಟಿದ್ದರಿಂದ ಬಾಲಕ ಮಾನಸಿಕವಾಗಿ ಬೇಸರಗೊಂಡಿದ್ದ ಎನ್ನಲಾಗಿದೆ. ಬಾಲಕನಿಗೆ ರಾಖಿ ಕಟ್ಟಿದಾಗ ಉಳಿದ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದರು.
ಇದರಿಂದ ನೊಂದ ವಿದ್ಯಾರ್ಥಿ ಬಾತ್ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಅಳಲಾರಂಭಿಸಿದನು. ಆಗ ಮುಖ್ಯಶಿಕ್ಷಕರು ಮತ್ತು ಶಿಕ್ಷಕ ವರ್ಗ ವಿದ್ಯಾರ್ಥಿಯನ್ನು ಸಮಾಧಾನಪಡಿಸಿ, ಬಾಲಕನ ಕೈಗೆ ಕಟ್ಟಿದ್ದ ರಾಖಿಯನ್ನು ತೆಗೆಸಿದ್ದಲ್ಲದೇ, ಎಲ್ಲ ವಿದ್ಯಾರ್ಥಿಗಳ ರಾಖಿಯನ್ನು ಬಿಚ್ಚಿಸಿ ಕಳಿಸಿದ್ದರು. ಈ ವಿಷಯವನ್ನು ವಿದ್ಯಾರ್ಥಿಗಳು ಮನೆಗೆ ಹೋಗಿ ಪೋಷಕರಿಗೆ ತಿಳಿಸಿದ್ದರು. ಗುರುವಾರ ಪೋಷಕರು ಮತ್ತು ಹಿಂದೂಪರ ಸಂಘಟನೆಗಳು ಶಾಲೆಗೆ ಆಗಮಿಸಿ, ರಾಖಿ ಬಿಚ್ಚಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಕ್ಕಳಿಗೆ ಕಟ್ಟಿದ್ದ ರಾಖಿಯನ್ನು ಬಿಚ್ಚಿಸಿದ್ದ ಮುಖ್ಯಶಿಕ್ಷಕಿ ಮತ್ತು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರ ಪತನ: ಸಂಸದ ರಾಘವೇಂದ್ರ ಭವಿಷ್ಯ
ಸ್ಥಳಕ್ಕೆ ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್, ಸರ್ಕಲ್ ಇನ್ಸ್ಪೆಕ್ಟರ್ ಸೀತಾರಾಮ್, ಕೃಷ್ಣಪ್ಪ, ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ್, ಶಿಕ್ಷಣ ಇಲಾಖೆ ಅಧಿಕಾರಿಗಳು ಆಗಮಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಮುಖ್ಯ ಶಿಕ್ಷಕಿ ರಾಖಿ ತೆಗೆಸಿದಕ್ಕೆ ಕ್ಷಮೆ ಕೋರಿದ ಹಿನ್ನೆಲೆಯಲ್ಲಿ ಘಟನೆಯನ್ನು ಸಮಾಪ್ತಿಗೊಳಿಸಲಾಯಿತು. ಈ ಸಂದರ್ಭ ಹಿಂದೂಪರ ಸಂಘಟನೆಯ ಕೋಮಲ್ ರಾಘವೇಂದ್ರ, ಸಂತೋಷ್, ರಾಘವೇಂದ್ರ ಕಾಮತ್, ಆಟೋ ಗಣೇಶ್, ಕುಮಾರ ಶೆಟ್ಟಿ, ಶ್ರೀಧರ್ ಸಾಗರ್, ಪ್ರತಿಮಾ ಜೋಗಿ, ಕಿರಣ್, ನವೀನ್ ಯಳವರಸಿ, ಗಣೇಶ್ ಇನ್ನಿತರರು ಹಾಜರಿದ್ದರು.
ಘಟನೆಗೆ ಖಂಡನೆ: ಪವಿತ್ರವಾದ ರಕ್ಷಾ ಬಂಧನ ಕಾರ್ಯಕ್ರಮವನ್ನು ಅವಮಾನಿಸಿರುವ ಸಂತ ಜೋಸೆಫರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶಿಕ್ಷಕರ ಕ್ರಮವನ್ನು ಹಿಂದೂ ಜಾಗರಣಾ ವೇದಿಕೆ ಖಂಡಿಸಿದೆ. ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಶಾಲೆಯಲ್ಲಿ ಕಂಡುಬರುತ್ತಿದೆ. ಮಕ್ಕಳ ಓವರ್ ಕೋಟ್, ಬೆಲ್ಟ್ ಮೇಲೆ ಶಿಲುಬೆಯ ಚಿತ್ರವನ್ನು ಹಾಕಿರುವುದು ಸರಿಯಲ್ಲ. ಇಲ್ಲಿ ಎಲ್ಲ ವರ್ಗದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತಕ್ಷಣ ಟೈ, ಬೆಲ್ಟ್ ಮೇಲೆ ಹಾಕಿಸಿರುವ ಶಿಲುಬೆ ಚಿತ್ರವನ್ನು ತೆಗೆಯಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಒತ್ತಾಯಿಸಿದೆ.
ಶಿವಮೊಗ್ಗಕ್ಕೆ ಮೊದಲ ಇಂಡಿಗೋ ಪ್ರಯಾಣ: ವಿಮಾನ ಹತ್ತಿ ಸಂತಸಪಟ್ಟ ಬಿಎಸ್ವೈ, ಪಾಟೀಲ್, ಈಶ್ವರಪ್ಪ
ಶಾಲೆಯಿಂದ ಹೊರಕಳಿಸುವುದು ಸರಿಯಲ್ಲ: ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ ಮಾತನಾಡಿ, ರಕ್ಷಾ ಬಂಧನ ಹಬ್ಬ ಆಚರಿಸಿದರೆ ಮಕ್ಕಳಲ್ಲಿ ಸಹೋದರ ಭಾವನೆ ಬರುತ್ತದೆ. ಇದನ್ನು ಬಿಟ್ಟು, ಒಬ್ಬರ ಆಚರಣೆಯನ್ನು ಮಾಡಬೇಡಿ ಎಂದು ಹೇಳುವುದು ತಪ್ಪಾಗುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿ ದೇಶದ ಸಂಸ್ಕೃತಿ ಹಾಗೂ ಪದ್ಧತಿಯನ್ನು ಬದಲಾಯಿಸಲು ಮುಂದಾಗುವುದು ತಪ್ಪಾಗುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆಗಳಿದ್ದಲ್ಲಿ ಪೋಷಕರ ಮೀಟಿಂಗ್ ಕರೆದು ವಿಚಾರ ತಿಳಿಸಬೇಕು. ಅದನ್ನು ಬಿಟ್ಟು ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಕಳಿಸುವುದು ಸರಿಯಲ್ಲ. ಇಂಥ ಪ್ರಕರಣ ಬೆಳಕಿಗೆ ಬಂದರೆ ಮಕ್ಕಳಿಗೆ ಕಿರುಕುಳ ನೀಡಿದ ಆರೋಪದಡಿ ದೂರು ದಾಖಲಿಸುವುದಾಗಿಯೂ ಎಚ್ಚರಿಕೆ ನೀಡಿದ್ದೇನೆ ಎಂದರು.