ರಾಯಚೂರಿನ ಇಬ್ಬರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ, ವಿಶೇಷ ಕ್ಷೇತ್ರದಲ್ಲಿ ಸಾಧನೆ

By Gowthami KFirst Published Oct 30, 2022, 10:47 PM IST
Highlights

ರಾಜ್ಯ ಸರ್ಕಾರ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ರಾಯಚೂರಿನ ಇಬ್ಬರು ಸಾಧಕರು ಆಯ್ಕೆಯಾಗಿದ್ದಾರೆ. ಜಾನಪದ ಕ್ಷೇತ್ರದಲ್ಲಿ ಕಮಲಮ್ಮ ಸೂಲಗಿತ್ತಿ ಹಾಗೂ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ನಿವೃತ್ತ ಡಾ. ಡಿ.ಆರ್.ಬಳೂರಗಿ ಯವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

ರಾಯಚೂರು (ಅ.30): ರಾಜ್ಯ ಸರ್ಕಾರ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ರಾಯಚೂರಿನ ಇಬ್ಬರು ಸಾಧಕರು ಆಯ್ಕೆಯಾಗಿದ್ದಾರೆ. ಜಾನಪದ ಕ್ಷೇತ್ರದಲ್ಲಿ ಕಮಲಮ್ಮ ಸೂಲಗಿತ್ತಿ ಹಾಗೂ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ನಿವೃತ್ತ ಡಾ. ಡಿ.ಆರ್.ಬಳೂರಗಿ ಯವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಮೂಲತಃ ವಿಜಯಪುರ ಜಿಲ್ಲೆ ಸಾರವಾಡದವರಾದ ಬಳೂರಗಿ ಅವರು ಜನಿಸಿದ್ದು 1943 ಜುಲೈ 20ರಂದು. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು. ನಂತರ ವಿಜಯಪುರದಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿ,  ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ರಾಯಚೂರು ಜಿಲ್ಲೆಯಲ್ಲಿ  ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು.  ಡಾ.ಡಿ.ಆರ್. ಬಳೂರಗಿ ರಾಯಚೂರಿನ ಎಲ್‌ವಿಡಿ ಕಾಲೇಜಿನಲ್ಲಿ 1969ರಲ್ಲಿ ಭೌತಶಾಸ್ತ್ರ ಉಪನ್ಯಾಸಕ ಹುದ್ದೆ ಆರಂಭಿಸಿ 2011ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಸಂಸ್ಥಾಪಕರಲ್ಲಿ ಡಾ.ಡಿ.ಆರ್.ಬಳೂರಗಿ ಒಬ್ಬರಾಗಿದ್ದು, ಕಡಿಮೆ ಖರ್ಚಿನಲ್ಲಿ ವಿಜ್ಞಾನ ಪರಿಕರಗಳನ್ನು ತಯಾರಿಸುವುದನ್ನು ವಿದ್ಯಾರ್ಥಿಗಳಿಗೆ ಕಲಿಸುವುದರ ಜೊತೆಗೆ ರಾಕೆಟ್ ತಂತ್ರಜ್ಞಾನವನ್ನು ಮಕ್ಕಳಿಗೆ ಪರಿಚಯಿಸಿಕೊಡುವ ಕೆಲಸ ಮಾಡಿದ್ದರು. ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಡಾ.ಡಿ.ಆರ್.ಬಳೂರಗಿ ಉಪನ್ಯಾಸಕ ವೃತ್ತಿಯ ಜೊತೆಗೆ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮತ್ತು ಆಸಕ್ತಿ ಮೂಡಿಸಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳು ಆಗಿದ್ರು. ಡಾ. ಡಿ.ಆರ್.ಬಳೂರಗಿಯನ್ನು ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗೆ ಸಂದ ಗೌರವವಾಗಿದೆ.

ಇನ್ನೂ ಈ ನಡುವೆ ಬೆಳಗಾವಿಯ ವಿಜ್ಞಾನ ಕೇಂದ್ರದ ನಿರ್ದೇಶಕರಾಗಿ ಮತ್ತು ಗುಲ್ಬರ್ಗ ವಿವಿಯ ಸಹಾಯಕ ಕುಲಸಚಿವರಾಗಿ ಕೆಲ ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಸಂಸ್ಥಾಪಕರಲ್ಲಿ ಡಾ.ಡಿ.ಆರ್.ಬಳೂರಗಿ ಒಬ್ಬರಾಗಿದ್ದು, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಕೌನ್ಸಿಲ್‌ನಿಂದ ಕೊಡ ಮಾಡುವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.  ಅಷ್ಟೇ ಅಲ್ಲದೇ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತಾದ ಪರಮಾಣು ನ್ಯೂಕ್ಲಿಯರ್, ಕಣ್ಣು ಗಳು ಸೃಷ್ಟಿಯ ದೃಷ್ಟಿ ವೈವಿಧ್ಯ, ಒತ್ತಡ, ಮೂಲ ವಿಜ್ಞಾನ ಭಿನ್ನವಾಗಿ ಯೋಚಿಸಿ, ವಿದ್ಯುತ್ , ಕಾಂತತ್ವ ಮತ್ತು ವಿದ್ಯುತ್ಕಾಂತ್ವ, ಶಾಖ ಮತ್ತು ಶಬ್ದ ಹೀಗೆ ಹತ್ತಾರು ಪುಸ್ತಕಗಳು ಬರೆದ ಹೆಗ್ಗಳಿಕೆ ಡಾ.ಡಿ.ಆರ್. ಬಳೂರಗಿ ಅವರಿಗೆ ಇದೆ.

ಸುಗ್ಗಿಯು ಬಂದಿತು ಹಿಗ್ಗನು ತಂದಿತು,ನಮ್ಮಯ ನಾಡಿನ ಜನಕೆಲ್ಲ ಎಂಬ ಶಾಲಾ ಮಟ್ಟದ ಕನ್ನಡ ಪುಸ್ತಕದಲ್ಲಿ ಪದ್ಯವಾಗಿದ್ದ ಈ ಸುಗ್ಗಿ ಹಾಡನ್ನು ಕೇಳದವರಿಲ್ಲ. ಈ ಪದ್ಯ ಬರೆದವರು.. ದ.ರಾ ಬಳೂರಗಿ (ಡಿ.ಆರ್‌. ಬಳೂರಗಿ). ಬಳೂರಗಿಯವರು ಹನ್ನೊಂದು ವರ್ಷದ ಬಾಲಕನಾಗಿದ್ದ (1954) ಸಮಯದಲ್ಲಿ ಬರೆದ ಹಾಡಿದು, ಆ ಬಳಿಕ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ವಿಶೇಷ ಸಾಧನೆ ‌ಮಾಡಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮಾನವನ ವಿಕಾಸ ಎಂಬ ಸುದೀರ್ಘ ಬಾನುಲಿ ಸರಣಿ ನಿರ್ಮಿಸಿ, ಭಾರತದ ಹದಿನಾಲ್ಕು ಭಾಷೆಗಳಲ್ಲಿ ಪ್ರಸಾರ ಮಾಡಿದ್ದಾರೆ. ಬಾಲ ವಿಜ್ಞಾನ ಮಾಸಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯರಾಗಿ, ವಿಜ್ಞಾನದೀಪ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 

Belagavi: 49 ವರ್ಷಗಳಿಂದ ದಿನಪತ್ರಿಕೆ ವಿತರಣೆ ಮಾಡುವಾತನಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ!

 ಜನಪದ ಕಲೆಗೆ ಒಲಿದ ರಾಜೋತ್ಸವ ಪ್ರಶಸ್ತಿ! ಗ್ರಾಮೀಣ ಕಲೆಗಾರ್ತಿಗೆ ಗುರುತಿಸಿ ಪ್ರಶಸ್ತಿ ನೀಡಿದ ಸರ್ಕಾರ: 
ಕಮಲಮ್ಮ ಸೂಲಗಿತ್ತಿ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದ ನಿವಾಸಿ. ಸೋಬಾನೆ, ಜೋಗುಳ, ಸೂಲಗಿತ್ತಿ, ಗಿಡಮೂಲಿಕೆಯ ಔಷಧಿ ಸೇರಿದಂತೆ ವಿಶೇಷವಾಗಿ ಬುರ್ರಕಥಾ, ಜನಪದ ಹಾಡುಗಳ ಮೂಲಕ ಮನೆ ಮಾತಾಗಿರುವ ಕಮಲಮ್ಮ ಸೂಲಗಿತ್ತಿ. ಬಡತನದಲ್ಲಿಯೇ ಅರಳಿದ ಪ್ರತಿಭೆ‌. ಅನಕ್ಷರಸ್ಥರಾದರೂ ಬುರ್ರಕಥಾ, ಜನಪದ ಹೇಳುವುದರಲ್ಲಿ ಹಾಗೂ ಕಮಲಮ್ಮ ಸೂಲಗಿತ್ತಿ ನಿಸ್ಸೀಮರು. ಇವರು ಸೂಲಗಿತ್ತಿಯ ಪ್ರವೃತ್ತಿಯನ್ನ ಕಾಯಕ ಮಾಡಿಕೊಳ್ಳದೇ, ಬುರ್ರಕಥೆಯನ್ನು ಮಾತ್ರ ಕಾಯಕ ಮಾಡಿಕೊಂಡಿದ್ದಾರೆ. ಕಮಲಮ್ಮ ಸೂಲಗಿತ್ತಿ ಅವರಿಗೆ ಒಟ್ಟು 9 ಜನ ಮಕ್ಕಳು. ಅದರಲ್ಲಿ ಆರು ಗಂಡು, ಮೂರು ಹೆಣ್ಣು. ಎರಡು ಹೆಣ್ಣು ಒಂದು ಗಂಡು ತೀರಿ ಸದ್ಯ ಐದು ಜನ ಗಂಡು ಮಕ್ಕಳು-ಒಂದು ಹೆಣ್ಣು ಮಗಳು ಒಟ್ಟು ಆರು ಮಕ್ಕಳಿದ್ದಾರೆ. ಮೂರು ಗಂಡ್ಮಕ್ಕಳಿಗೆ ಮದುವೆ ಆಗಿದೆ. ಕರ್ನಾಟಕದ ಬಯಲಾಟ, ಯಕ್ಷಗಾನಗಳ ರೀತಿಯಲ್ಲಿ ಬುರ್ರಕಥೆ ಆಂಧ್ರದಲ್ಲಿ ಹೆಚ್ಚು ಜನಪ್ರಿಯ ಜನ ಜನಿತವಾದ ಕಲೆ. ಆಧುನಿಕ ಜನಪ್ರಿಯ ಮನೋ ರಂಜನಾ ಮಾಧ್ಯಮಗಳು ಪ್ರಚಾರಕ್ಕೆ ಬರುವ ಪೂರ್ವದಲ್ಲಿ ಗ್ರಾಮೀಣ ಪರಿಸರದ ಮನೋರಂಜನಾ ಮಾಧ್ಯಮವಾಗಿದ್ದ ಕಲೆ ಇದು.

2022ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 67 ಅರ್ಹ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಇನ್ನೂ ಕಮಲಮ್ಮ ಸೂಲಗಿತ್ತಿ 1000ಕ್ಕೂ ಹೆಚ್ಚು ಹೆರಿಗೆ ಮಾಡಿದ್ದಾರೆ.  ಇಂದಿನ ಆಧುನಿಕ ಯುಗದಲ್ಲಿಯೂ ಸಹ ಜನರು ಕಮಲಮ್ಮ ಸೂಲಗಿತ್ತಿ ಸಹಾಯ ಕೇಳುತ್ತಾರೆ. ಅಷ್ಟೇ ಅಲ್ಲದೇ ಕಮಲಮ್ಮ ಸೂಲಗಿತ್ತಿ  ಹೆರಿಗೆ ಆದ್ರೂ ಸಹ ಒಂದು ಗುಳಿಗೆಯಾಗಲಿ, ಸೂಜಿ ( ಇಂಜೆಕ್ಷನ್) ಸಹ ತೆಗೆದುಕೊಂಡಿಲ್ಲ. ಮನೆಯಲ್ಲಿಯೇ ಬಾಣಂತನ ಮಾಡಿಕೊಂಡಿದ್ದಾರೆ. ಇವರಿಗೆ ಹೆರಿಗೆ ಆದ್ರೆ ಪಕ್ಕದ ಮನೆಯವರೆಗೆ ಕಿಂಚಿತ್ತೂ ಸಹ ತಿಳಿಯುತ್ತಿರಲಿಲ್ಲ. 1000ಕ್ಕೂ ಹೆಚ್ಚು ಹೆರಿಗೆ ಮಾಡಿದ ಮಹಾತಾಯಿ ಈ ವರ್ಷದ ಕನ್ನಡ ರಾಜೋತ್ಸವ ವಿಜೇತರಾದ ಕಮಲಮ್ಮ ಸೂಲಗಿತ್ತಿ..ತನ್ನ ತಾಯಿ ನಾಗಮ್ಮನಿಂದ ಸೂಲಗಿತ್ತಿ, ತಂದೆ-ತಾಯಿಯಿಂದ ಔಷಧಿಗಳನ್ನು ಕೊಡುವುದು ಕಲಿತಿದ್ದಾರೆ. ಈಗಲೂ ಕಾಮಿಣಿ (ಬಿಳಿ, ಹಸಿರು), ಮುಟ್ದೋಸಿ, ತಟ್ಟು, ಕುರುಹು, ಗಡ್ಡೆ, ವಾಂತಿ ಭೇದಿ ಇತ್ಯಾದಿ ಕಾಯಿಲೆಗಳಿಗೆ ಕಮಲಮ್ಮ ‌ಸೂಲಗಿತ್ತಿ ವೈದ್ಯರಂತೆ ಔಷಧಿ ನೀಡುತ್ತಾ ಬರುತ್ತಿದ್ದಾರೆ.

click me!