ರಾಗಿಣಿ, ಸಂಜನಾ ಡ್ರಗ್ ಕಿಂಗ್ ಪಿನ್‌ಗಳಲ್ಲ : ಸಿ.ಟಿ ರವಿ

By Kannadaprabha NewsFirst Published Sep 15, 2020, 11:44 AM IST
Highlights

ರಾಗಿಣಿ ಹಾಗೂ ಸಂಜನಾ ಡ್ರಗ್ ಕಿಂಗ್ ಪಿನ್‌ಗಳಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ. ಹಾಗಾದ್ರೆ ಅವರ ಹೇಳಿಕೆ ಹಿಂದಿನ ಉದ್ದೇಶವೇನು..?

ಮಂಡ್ಯ (ಸೆ.15) :  ಡ್ರಗ್‌ ಪ್ರಕರಣದಲ್ಲಿ ಸಿಲುಕಿರುವ ಚಿತ್ರನಟಿಯರಾದ ರಾಗಿಣಿ ಮತ್ತು ಸಂಜನಾ ಡ್ರಗ್‌ ಕಿಂಗ್‌ಪಿನ್‌ಗಳಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

"

ಡ್ರಗ್ಸ್‌ ದಂಧೆಯಲ್ಲಿ ಚಿತ್ರನಟಿಯರನ್ನು ಪ್ರಧಾನವಾಗಿ ಕಂಡುಬರುತ್ತಿದ್ದರೂ ಅವರು ಕಿಂಗ್‌ಪಿನ್‌ಗಳಲ್ಲ. ಅವರನ್ನು ಮುಂದಿಟ್ಟುಕೊಂಡು ಆಟವಾಡಿಸುತ್ತಿರುವವರ ಹೆಡೆಮುರಿ ಕಟ್ಟಬೇಕಿದೆ. ಅದಕ್ಕೆ ಬಿಜೆಪಿ ಸರ್ಕಾರ ಸನ್ನದ್ಧವಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಶೇಖ್‌ ಫಾಜಿಲ್‌ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ಜಮೀರ್‌ ಅಹಮದ್‌ ಕಾಣಿಸಿಕೊಂಡಿರುವ ಫೋಟೋಗಳು ವ್ಯಾಟ್ಸಾಪ್‌ನಲ್ಲಿ ಹರಿದಾಡುತ್ತಿವೆ. ಇವರ ಮುಖಭಾವವನ್ನು ನೋಡಿದರೆ ಜನ್ಮಜನ್ಮಾಂತರ ಸಂಬಂಧವೆಂಬಂತೆ ಫೋಸ್‌ ನೀಡಿದ್ದಾರೆ ಎಂದು ಸುದ್ದಿಗಾರರಿಗೆ ಹೇಳುವ ಮೂಲಕ ಕುಟುಕಿದರು.

ಆಪ್ತ ಶೇಖ್‌ನಿಂದ ಜಮೀರ್‌ಗೂ ಸುತ್ತಿಕೊಳ್ಳುತ್ತಾ ಡ್ರಗ್ ಉರುಳು? ...

ಜಮೀರ್‌ ಅಹಮದ್‌ ಅವರು ಕೊಲಂಬೋಗೆ ಹೋಗುವುದು ತಪ್ಪಲ್ಲ. ಏಕೆ ಹೋಗುತ್ತಾರೆ ಎನ್ನುವುದು ಮುಖ್ಯ. ಅಲ್ಲಿ ಅವರ ಸಂಬಂಧಿಕರಿದ್ದಾರೆಯೇ, ಬ್ಯುಸಿನೆಸ್‌ ಮಾಡ್ತಿದ್ದಾರೆಯೇ, ಯಾವ ಉದ್ದೇಶಕ್ಕೆ ಅಲ್ಲಿಗೆ ಹೋಗುತ್ತಿದ್ದರು ಎಂಬ ಸಂಶಯ ಜನರಲ್ಲಿದೆ. ಅದನ್ನು ಅವರು ನಿವಾರಿಸಬೇಕು. ಅವರ ನಡೆಯ ಬಗ್ಗೆ ಸಂಶಯವಿರಬಾರದು. ನಿಮ್ಮ ವ್ಯವಹಾರದಲ್ಲಿ ನಾವು ಪಾಲು ಕೇಳುತ್ತಿಲ್ಲ. ಕೊಲಂಬೋಗೆ ಹೋಗುವ ಉದ್ದೇಶವೇನು ಅಷ್ಟುತಿಳಿಸಿದರೆ ಸಾಕು ಎಂದು ಕಾಲೆಳೆದರು.

ಜಮೀರ್‌ ಹಾಗೂ ಎಸ್‌ಡಿಪಿಐ ಸಂಘಟನೆ ನಡುವೆ ಸಂಬಂಧವಿದೆ. ಇದಕ್ಕೆ ಎಸ್‌ಡಿಪಿಐ ಬ್ಯಾನರ್‌ ಜೊತೆ ನಿಂತಿರುವುದೇ ಸಾಕ್ಷಿ ಎಂದು ವ್ಯಾಟ್ಸಾಪ್‌ನಲ್ಲಿ ಬಂದಿದ್ದ ಪೋಟೋ ತೋರಿಸಿ ಹೇಳಿದರು. ಆದರೂ, ಸಂಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ಇನ್ನು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಅವರ ಮೇಲೆ ಬಂದಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಸಹವಾಸದಿಂದ ಸನ್ಯಾಸಿ ಕೆಟ್ಟಎಂಬಂತಾಗಿದೆ ಎಂದು ಜಮೀರ್‌ರನ್ನು ಗುರಿಯಾಗಿಸಿಕೊಂಡು ಲೇವಡಿ ಮಾಡಿದರು.

ಕಾಂಗ್ರೆಸ್ಸಿಗರು ಅಂಬೇಡ್ಕರ್‌ ವಿರೋಧಿಯೇ?

ತ್ರಿಭಾಷಾ ಸೂತ್ರವನ್ನು ಸಂವಿಧಾನದಲ್ಲಿ ಹೇಳಿದೆ. ಸಂವಿಧಾನ ಬರೆದವರು ಅಂಬೇಡ್ಕರ್‌. ಅದನ್ನು ಒಪ್ಪಿಕೊಂಡವರು ಕಾಂಗ್ರೆಸ್ಸಿಗರು. ಆ ಸಮಯದಲ್ಲಿ ಜನಸಂಘ ಶಕ್ತಿಯುತವಾಗಿರಲಿಲ್ಲ. ತ್ರಿಭಾಷಾ ಸೂತ್ರ ಒಪ್ಪಿಕೊಂಡ ಕಾಂಗ್ರೆಸ್ಸಿಗರೇ ಅದನ್ನು ವಿರೋಧಿಸುವುದಾದರೆ ಅವರು ಅಂಬೇಡ್ಕರ್‌ ವಿರೋಧಿಯೇ ಅಥವಾ ನೆಹರು-ಇಂದಿರಾ ಕಾರ್ಯಕ್ರಮಗಳ ವಿರೋಧಿಯೇ ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಸಿ.ಟಿ.ರವಿ ಖಾರವಾಗಿಯೇ ಪ್ರಶ್ನಿಸಿದರು.

ಶ್ರೀಲಂಕಾದ ಕ್ಯಾಸಿನೋಗಳಲ್ಲಿ ಜಮೀರ್ ಆಪ್ತ ಮಾಡುತ್ತಿದ್ದುದು ಬೇರೆಯದ್ದೇ ಕೆಲಸ..! .

ಅಂದು ತ್ರಿಭಾಷಾ ಸೂತ್ರ ಒಪ್ಪಿಕೊಂಡ ಕಾಂಗ್ರೆಸ್‌ ಇಂದು ಅದನ್ನು ವಿರೋಧಿಸುವ ನಾಟಕವಾಡುತ್ತಾ ಗೋಸುಂಬೆತನ ಪ್ರದರ್ಶಿಸುತ್ತಿದೆ ಎಂದು ಟೀಕಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯಡಿ ಮಾತೃಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಮೂಲ ಉದ್ದೇಶವಿದೆ. ಇಲ್ಲಿ ರಾಷ್ಟ್ರದ 22 ಭಾಷೆಗಳಲ್ಲಿ ಯಾವ ಭಾಷೆಯನ್ನು ಕಲಿಯುವುದಕ್ಕೂ ಅವಕಾಶ ನೀಡಲಾಗಿದೆ. ಆದರೆ, ಹಿಂದಿ ಭಾಷೆಯನ್ನು ಕಲಿಯಲೇಬೇಕೆಂಬ ಒತ್ತಡ ಹಾಕಿಲ್ಲ. ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ. 

ಆಯ್ಕೆ ಅವರ ಇಚ್ಛೆ ಎಂದು ಹೇಳಿದರು.

ಹಿಂದಿ ಭಾಷೆಯನ್ನು ವಿರೋಧಿಸುವ ನೆಪದಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರದ ವಿರುದ್ಧ ಸಂಘರ್ಷ ತರುವ ಷಡ್ಯಂತ್‌ರವನ್ನು ಕೆಲವರು ಮಾಡುತ್ತಿದ್ದಾರೆ. ನಾನೂ ಸಹ ಕನ್ನಡಿಗ. ನನಗೂ ಕನ್ನಡ ಬೇಕು. ಹಿಂದಿ ಏರಿಕೆಯಿಂದ ಕನ್ನಡಶಾಲೆ ಮುಚ್ಚಿರುವ ಒಂದೇ ಒಂದು ಉದಾಹರಣೆ ರಾಜ್ಯದಲ್ಲಿ ತೋರಿಸಿ ಎಂದು ಸವಾಲು ಹಾಕಿದ ಸಚಿವ ಸಿ.ಟಿ.ರವಿ, ಇಂಗ್ಲೀಷ್‌ ಕಾರಣಕ್ಕೆ ಮುಚ್ಚಿರುವ ಹಲವಾರು ಶಾಲೆಗಳಿವೆ. ಆದರೂ ಏಕೆ ಈ ಆಷಾಢಭೂತಿತನ. ಆಯ್ಕೆ ಮತ್ತು ಏರಿಕೆಗೆ ವ್ಯತ್ಯಾಸವೇ ಗೊತ್ತಿಲ್ಲದ ಕಾಂಗ್ರೆಸ್ಸಿಗರು ಮಹಾಮೂರ್ಖರು ಎಂದು ಹೇಳಿದರು.

click me!