ಡ್ರಗ್ಸ್‌ನಲ್ಲಿ ಸಿಕ್ಕವರಿಗೆ ಶಿಕ್ಷೆಯಾಗಲಿ: ಪುನೀತ್‌ ರಾಜಕುಮಾರ್‌

By Kannadaprabha NewsFirst Published Oct 18, 2020, 3:51 PM IST
Highlights

ಕೊರೋ​ನಾ​ದಿಂದ 7 ತಿಂಗ​ಳಲ್ಲಿ ಚಿತ್ರ​ರಂಗಕ್ಕೆ ದೊಡ್ಡ ಪೆಟ್ಟು| ಚಿತ್ರೀಕರಣಕ್ಕೆ ನಿರ್ಮಾಪಕರು ಕೋಟ್ಯಂತರ ರುಪಾಯಿಗಳನ್ನು ವ್ಯಯ ಮಾಡಿರುತ್ತಾರೆ| ಭಗವಂತ ಕೊರೋನಾ ದೂರ ಮಾಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ ಪುನೀತ್‌ ರಾಜಕುಮಾರ್‌|

ಗಂಗಾವತಿ(ಅ.18): ಡ್ರಗ್ಸ್‌ ಮಾಫಿಯಾದಲ್ಲಿ ಸಿಕ್ಕಿ ಹಾಕಿಕೊಂಡವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಖ್ಯಾತ ಚಿತ್ರನಟ ಪುನೀತ್‌ ರಾಜಕುಮಾರ್‌ ಹೇಳಿದ್ದಾರೆ. 

ಸಮೀಪದ ವಾಣಿ ಭದ್ರೇಶ್ವರ ದೇವಸ್ಥಾನದ ಸಮೀಪ ನಡೆಯುತ್ತಿರುವ ಜೇಮ್ಸ್‌ ಚಿತ್ರದ ಚಿತ್ರೀಕರಣದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಇತ್ತೀಚೆಗೆ ಬೆಂಗಳೂರಿನಲ್ಲಿ ಡ್ರಗ್ಸ್‌ ಹಗರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು, ಇದರಿಂದ ಚಿತ್ರರಂಗಕ್ಕೆ ಕೆಟ್ಟ ಹೆಸರು ಬರುತ್ತಿದೆ. ಯಾರೋ ಮಾಡಿದ ತಪ್ಪಿಗೆ ಯಾರಿಗೆ ಅಪವಾದ ಬರುತ್ತಿದೆ. ಕಾರಣ ಈ ಹಗರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕೆಂದು ಹೇಳಿದ್ದಾರೆ.  ಚಿತ್ರರಂಗದ ಕ್ಷೇತ್ರದಲ್ಲಿ ಇಂತಹ ಹಗರಣಗಳು ನಡೆಯುತ್ತಿದ್ದ ಬಗ್ಗೆ ನನಗೆ ನೋವುಂಟಾಗಿದೆ. ಕಾರಣ ಡ್ರಗ್ಸ್‌ ಮಾಫಿಯಾದ ಬಗ್ಗೆ ತನಿಖೆ ನಡೆದಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗುವುದರಲ್ಲಿ ತಪ್ಪೇನಿಲ್ಲ ಎಂದರು.

ಕೊರೋನಾದಿಂದ ನಷ್ಟ

ಕಳೆದ 7 ತಿಂಗಳಿನಿಂದ ಕೊರೋನಾ ಸೋಂಕು ಹಬ್ಬುತ್ತಿದ್ದರಿಂದ ಚಿತ್ರರಂಗದ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಎಂದು ಪುನೀತ್‌ ರಾಜಕುಮಾರ್‌ ವಿಷಾದ ವ್ಯಕ್ತಪಡಿಸಿದರು. ಚಿತ್ರರಂಗದಿಂದ ನಿರ್ಮಾಪಕರು, ನಿರ್ದೇಶಕರು, ಕಾರ್ಮಿಕರು ಶ್ರಮಿಸುತ್ತಿದ್ದಾರೆ. ಇದರಿಂದ ನೂರಾರು ಕುಟುಂಬಗಳಿಗೆ ಜೀವನ ನಿರ್ವಹಣೆಯಾಗುತ್ತಿದ್ದವು. ಕೊರೋನಾದಿಂದ ಚಿತ್ರರಂಗದ ಕ್ಷೇತ್ರ ಕುಂಠಿತಗೊಂಡಿದೆ ಎಂದರು. ಚಿತ್ರೀಕರಣಕ್ಕೆ ನಿರ್ಮಾಪಕರು ಕೋಟ್ಯಂತರ ರುಪಾಯಿಗಳನ್ನು ವ್ಯಯ ಮಾಡಿರುತ್ತಾರೆ ಎಂದು ತಿಳಿಸಿದ ಅವರು, ಭಗವಂತ ಕೊರೋನಾ ದೂರ ಮಾಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

'ಬಿಜೆಪಿ ಸರ್ಕಾರ ದಲಿ​ತರ ಮೇಲೆ ಹಿಡಿತ ಸಾಧಿ​ಸಲು ಯತ್ನಿ​ಸು​ತ್ತಿ​ದೆ'

5ನೇ ಸಿನಿಮಾ

ಗಂಗಾವತಿ-ಹೊಸಪೇಟೆ ಪ್ರದೇಶವು ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇಂತಹ ಪ್ರದೇಶದಲ್ಲಿ ಚಿತ್ರೀಕರಣ ಮಾಡುವ ಭಾಗ್ಯ ನನಗೆ ದೊರೆತಿರುವುದು ಅ​ದೃಷ್ಟ ಎಂದರು. ಜೇಮ್ಸ್‌ ಚಿತ್ರ ಚಿತ್ರೀಕರಣಕ್ಕೆ ಎಲ್ಲರೂ ಸಹಕಾರ ನೀಡುತ್ತಿದ್ದಾರೆಂದು ತಿಳಿಸಿದ ಅವರು, ಈ ಪ್ರದೇಶದಲ್ಲಿ ಬರುವ ಅಭಿಮಾನಿಗಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದರು. ಕೊರೋನಾ ವೈರಸ್‌ ಎಲ್ಲರನ್ನು ದೂರ ಮಾಡುತ್ತಿದೆ. ಇದು ನಿವಾರಣೆ ಆಗಬೇಕೆಂದರು.
 

click me!