ಕುಷ್ಟಗಿಯಲ್ಲಿ ಬೀದಿನಾಯಿಗಳ ಕಾಟಕ್ಕೆ ಹೈರಾಣಾದ ಜನತೆ

By Web DeskFirst Published Dec 1, 2019, 7:57 AM IST
Highlights

ಬೀದಿನಾಯಿ ಕಾಟಕ್ಕೆ ಬೇಸತ್ತ ಜನ| ಕುಷ್ಟಗಿ ಪಟ್ಟಣದಲ್ಲಿ ಬೀದಿನಾಯಿ ಸಂಖ್ಯೆ ಹೆಚ್ಚಳ|ವಾಹನ ಸಂಚಾರ, ಆಟವಾಡುವ ಮಕ್ಕಳಿಗೆ ಭಯ|ಚಿಕ್ಕಮಕ್ಕಳಂತೂ ಜೀವ ಕೈಯಲ್ಲಿ ಹಿಡಿದು ಸಾಗುವಂತಾಗುತ್ತದೆ |ರಾತ್ರಿ ವೇಳೆ ಪಟ್ಟಣಕ್ಕೆ ಬರುವವರು ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಹೋಗುವುದು ಕಷ್ಟಕರ|

ಕುಷ್ಟಗಿ(ಡಿ.01): ಪಟ್ಟಣದ ಪ್ರಮುಖ ರಸ್ತೆಗಳು, ವಿವಿಧ ಬಡಾವಣೆಗಳಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಸಾರ್ವಜನಿಕರು ನಿತ್ಯ ಭಯದಲ್ಲೇ ಕಾಲಕಳೆಯುವಂತಾಗಿದೆ.

ವಿವಿಧ ಬಡಾವಣೆಗಳಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗಿದ್ದರಿಂದ ಮಕ್ಕಳು ಬೀದಿಯಲ್ಲಿ ಆಟವಾಡಲು ಭಯಪಡುವಂತಾಗಿದೆ. ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುವುದು, ಕಚ್ಚಾಡುವುದರಿಂದ ದ್ವಿಚಕ್ರ ವಾಹನ ಸವಾರರೂ ಅಪಾಯ ಎದುರಿಸುವಂತಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಬೀದಿನಾಯಿಗಳು ಹೆಚ್ಚುವ ಜತೆಗೆ ಪುರಸಭೆ ಮುಂಭಾಗದಲ್ಲೇ ಸಾಕಷ್ಟುಬೀದಿನಾಯಿಗಳು ಠಿಕಾಣಿ ಹೂಡಿರುತ್ತವೆ. ರಾತ್ರಿ ವೇಳೆ ಪಟ್ಟಣಕ್ಕೆ ಬರುವವರು ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಹೋಗುವುದು ಕಷ್ಟಕರವಾಗಿದೆ. ಕೆಲವರ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ ಉದಾಹರಣೆಗಳೂ ಇವೆ.

ಮಾಂಸದ ಆಸೆ:

ಮಾಂಸದ ಅಂಗಡಿಗಳು ಮತ್ತು ಮಾಂಸಾಹಾರಿ ಹೋಟೆಲ್‌ಗಳ ಮುಂಭಾಗದಲ್ಲಿ ಅತಿ ಹೆಚ್ಚು ಬೀದಿನಾಯಿಗಳು ಕಂಡು ಬರುತ್ತಿವೆ. ಪುರಸಭೆ ರಸ್ತೆಯುದ್ದಕ್ಕೂ ಸಾಕಷ್ಟು ಸಂಖ್ಯೆ ಮಾಂಸದ ಅಂಗಡಿಗಳಿವೆ. ಅದರ ಮುಂದೆ ಸಾಕಷ್ಟು ಸಂಖ್ಯೆ ನಾಯಿಗಳು ನಿತ್ಯ ಕಾದಿರುತ್ತವೆ. ಅವು ಎಲುಬು ಮತ್ತು ರಕ್ತದ ರುಚಿ ಕಂಡಿದ್ದು, ಕ್ರೂರವಾಗಿ ವರ್ತಿಸುತ್ತವೆ. 

ಈ ಮಾರ್ಗದಲ್ಲಿ ತೆರಳುವವರ ಮೇಲೆರಗಲು ಯತ್ನಿಸುತ್ತವೆ. ಚಿಕ್ಕಮಕ್ಕಳಂತೂ ಜೀವ ಕೈಯಲ್ಲಿ ಹಿಡಿದು ಸಾಗುವಂತಾಗುತ್ತದೆ. ಹಲವು ವಾಹನ ಸವಾರರು ಸಣ್ಣಪುಟ್ಟಅಪಘಾತಕ್ಕೀಡಾದ ಪ್ರಸಂಗಗಳು ನಡೆದಿವೆ. ಸಾರ್ವಜನಿಕರು ಬೀದಿನಾಯಿ ಕಾಟದಿಂದ ಬೇಸತ್ತು ಹೋಗಿದ್ದಾರೆ. ಬೀದಿನಾಯಿಗಳ ನಿಯಂತ್ರಣಕ್ಕೆ ಪುರಸಭೆ ಅಧಿಕಾರಿಗಳು ಸೂಕ್ತ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳಾದ ಪರಸಪ್ಪ, ಶಂಕ್ರಪ್ಪ, ಯಮನೂರಪ್ಪ ಇತರರು ಆಗ್ರಹಿಸಿದ್ದಾರೆ.
 

click me!