Sadashiva report: ಸದಾಶಿವ ವರದಿ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಧರಣಿ

By Kannadaprabha NewsFirst Published Sep 22, 2022, 10:01 AM IST
Highlights
  • ನ್ಯಾ. ಎ.ಜೆ. ಸದಾಶಿವ ಆಯೋಗ ವರದಿ ಕೇಂದ್ರಕ್ಕೆ ಶಿಫಾರಸು ಮಾಡಿ
  • ಕರ್ನಾಟಕ ರಾಜ್ಯ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ವತಿಯಿಂದ ಧರಣಿ ಸತ್ಯಾಗ್ರಹ

ಶಿಗ್ಗಾಂವಿ (ಸೆ.22) : ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿಯನ್ನು ಸಂಪುಟದಲ್ಲಿ ಅಂಗೀಕರಿಸಿ ಪ್ರಸ್ತುತ ಅಧಿವೇಶನದಲ್ಲಿ ಚರ್ಚಿಸಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿ ಬುಧವಾರ ಕರ್ನಾಟಕ ರಾಜ್ಯ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ವತಿಯಿಂದ ಡಿ.ಎಸ್‌. ಮಾಳಗಿ ಮತ್ತು ಪರಮೇಶ್ವರಪ್ಪ ಮೇಗಳಮನಿ ನೇತೃತ್ವದಲ್ಲಿ ಪಟ್ಟಣದ ಕಿತ್ತೂರು ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ಸಿಎಂ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ಸಿಎಂ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು.

ತಮ್ಮ ಜನ್ಮ ದಿನದಂದೇ ಸದಾಶಿವ ವರದಿ ಜಾರಿಗೆ ಪ್ರತಿಭಟನೆ ನಡೆಸಿದ ಷಡಕ್ಷರಮುನಿ ಸ್ವಾಮೀಜಿ

ಜಾಂಜ್‌ ಮೇಳ, ಹಲಗೆ ಸದ್ದಿನೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಜಾರಿಗೆ ಕ್ರಮ ಕೈಗೊಳ್ಳುವಂತೆ ಸಿಎಂಗೆ ಒತ್ತಾಯಿಸಿ ಶಿಗ್ಗಾಂವಿ ತಹಸೀಲ್ದಾರ್‌ ಮೂಲಕ ಮನವಿ ಸಲ್ಲಿಸಿದರು.

ವರದಿ ಜಾರಿಗೆ ರಾಜಕೀಯ ವ್ಯಕ್ತಿಗಳ ಇಚ್ಛಾಶಕ್ತಿ ಕೊರತೆ ಕಾರಣವಾಗಿದ್ದು, ಕರ್ನಾಟಕದಲ್ಲಿರುವ ಪರಿಶಿಷ್ಟರು ಒಂದೇ ಬಗೆಯ, ಒಂದೇ ಭಾಷೆಯ ವರ್ಗಗಳುಳ್ಳ ಜಾತಿಗಳಾಗಿಲ್ಲ, ಅಸ್ಪೃಶ್ಯರು, ಅಲೆಮಾರಿಗಳು ಸೇರಿಕೊಂಡು 101 ಪರಿಶಿಷ್ಟಜಾತಿಗಳಾಗಿವೆ. ಶೋಷಿತರಲ್ಲಿಯೇ ಹಿಂದುಳಿದಿರುವ ಸೌಲಭ್ಯ ವಂಚಿತ ಸಮುದಾಯಗಳ ಜನಸಂಖ್ಯಾಧಾರಿತವಾಗಿ ಒಳಮೀಸಲಾತಿ ಜಾರಿಗಾಗಿ ಈಗಿರುವ 15ರ ಮೀಸಲಾತಿ ಹಂಚಿಕೆ ಪರಿಷ್ಕರಣೆ ಮಾಡಿ ಪರಿಶಿಷ್ಟರಲ್ಲಿರುವ 101 ಜಾತಿಗಳಿಗೂ ಸಮಪಾಲು ಸಮಬಾಳು ಸಾಮಾಜಿಕ ನ್ಯಾಯಕ್ಕಾಗಿ 2005ರಲ್ಲಿ ಏಕ ಸದಸ್ಯ ವಿಚಾರಣಾ ಆಯೋಗ ರಚನೆಗೊಂಡು ಅನುಚ್ಛೇದ 15 ಮತ್ತು 16ರ ಅಡಿಯಲ್ಲಿ ಪರಿಶಿಷ್ಟಜಾತಿಗಳ ಸಂವಿಧಾನಿಕ ಸೌಲಭ್ಯಗಳಾದ ಶೈಕ್ಷಣಿಕ ಹಾಗೂ ಆರ್ಥಿಕ ತಾರತಮ್ಯಗಳ ಪರಿಶೀಲನೆಯ ಜವಾಬ್ದಾರಿಯನ್ನು ಗೌರವಾನ್ವಿತ ನ್ಯಾಯಮೂರ್ತಿಗಳಾದ ಎ.ಜೆ. ಸದಾಶಿವ ಅವರು ನಿರ್ವಹಿಸಿದ್ದಾರೆ. ಆಯೋಗದ ಸಮೀಕ್ಷೆ ಪ್ರಕ್ರಿಯೆಗೆ ಹಿಂದಿನ ಬಿಜೆಪಿ ಸರ್ಕಾರ 12 ಕೋಟಿ ಅನುದಾನ ನೀಡಿದೆ. ಪರಿಶಿಷ್ಟರ ಮನೆ ಮನೆ ಸಮೀಕ್ಷೆ ಹಾಗೂ ಎಲ್ಲ ಹಂತದ ಪರಿಶೀಲನಾ ಕಾರ್ಯನಿರ್ವಹಿಸಿದ ನ್ಯಾಯಮೂರ್ತಿ ಎ.ಜೆ. ಸದಾಶಿವ ನೇತೃತ್ವದ ಆಯೋಗ ತನ್ನ ಸುದೀರ್ಘ ವರದಿಯನ್ನು 2012ರಲ್ಲಿ ಬಿಜೆಪಿ ಸರ್ಕಾರವಿದ್ದಾಗಲೇ ನೀಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Reservation ಮಾದಿಗ ಜನಾಂಗಕ್ಕೆ ಒಳಮೀಸಲು, ಸಿಎಂ ಭರವಸೆ!

ಡಿ.ಎಸ್‌. ಮಾಳಗಿ, ಪರಮೇಶಪ್ಪ ಮೇಗಳಮನಿ, ಉಡಚಪ್ಪ ಮಾಳಗಿ, ಮಾಲತೇಶ ಯಲ್ಲಾಪೂರ, ಎಸ್‌.ಎಫ್‌. ಮಣಕಟ್ಟಿ, ಸಿದ್ದಪ್ಪ ಹರಿಜನ, ಬಸವರಾಜ ಕಟ್ಟಿಮನಿ, ಭೀಮಣ್ಣ ಹೊಟ್ಟೂರ, ಶಿವಾನಂದ ಬೆಳಗಲಿ, ನಿಂಗಪ್ಪ ಹರಿಜನ, ಹನುಮಂತಪ್ಪ ಹರಿಜನ, ಚಂದ್ರಪ್ಪ ಹರಿಜನ, ಮಲ್ಲಪ್ಪ ದೊಡ್ಡಮನಿ, ಅಶೋಕ ಮುರೆಣ್ಣವರ, ಪ್ರೇಮಾ ಕಲಕೇರಿ, ಸಂಜಯ ಗಾಂಧಿ ಸಂಜೀವಣ್ಣವರ, ಮುತ್ತಣ್ಣ ಬೆನ್ನೂರ, ನಾಗರಾಜ ಮಾಳಗಿ, ಹೊನ್ನಪ್ಪ ತಗಡಿನಮನಿ, ಎಸ್‌.ಆರ್‌. ರಂಗನಾಥ ಸೇರಿದಂತೆ ಮುಖಂಡರು ಇದ್ದರು

click me!