ಸುರಪುರ: ಅಕ್ರಮ ಮರಳು ಸಂಗ್ರಹ ಅಡ್ಡೆ ಮೇಲೆ ದಾಳಿ

By Kannadaprabha NewsFirst Published Aug 23, 2023, 9:37 PM IST
Highlights

ಖಚಿತ ಮಾಹಿತಿ ಮೇರೆಗೆ ತಾಲೂಕು ಆಡಳಿತ, ಪೊಲೀಸ್‌ ಇಲಾಖೆ, ಸಾರ್ವಜನಿಕ ಲೋಕೋಪಯೋಗಿ ಇಲಾಖೆ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅ​ಧಿಕಾರಿಗಳು ದಾಳಿ ನಡೆಸಿ 1076 ಕ್ಯೂಬಿಕ್‌ ಮೀಟರ್‌, 12 ಲಕ್ಷ ರು. ಮೌಲ್ಯದ ಅಕ್ರಮ ಮರಳು ಎಂದು ಅಂದಾಜಿಸಲಾಗಿದೆ.

ಸುರಪುರ(ಆ.23):  ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳು ಅಡ್ಡೆಯ ಮೇಲೆ ತಾಲೂಕು ಆಡಳಿತ ಮತ್ತು ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅ​ಧಿಕಾರಿಗಳು ಮತ್ತು ಪೊಲೀಸರು ದಾಳಿ ಮಾಡಿ ಸುಮಾರು 150 ರಿಂದ 200 ಟಿಪ್ಪರ್‌ ಮರಳನ್ನು ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ತಾಲೂಕಿನ ದೇವತ್ಕಲ್‌ ಹೊರವಲಯದ ಸೀಮಾಂತರ ಪ್ರದೇಶದಲ್ಲಿ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ತಾಲೂಕು ಆಡಳಿತ, ಪೊಲೀಸ್‌ ಇಲಾಖೆ, ಸಾರ್ವಜನಿಕ ಲೋಕೋಪಯೋಗಿ ಇಲಾಖೆ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅ​ಧಿಕಾರಿಗಳು ದಾಳಿ ನಡೆಸಿ 1076 ಕ್ಯೂಬಿಕ್‌ ಮೀಟರ್‌, 12 ಲಕ್ಷ ರು. ಮೌಲ್ಯದ ಅಕ್ರಮ ಮರಳು ಎಂದು ಅಂದಾಜಿಸಲಾಗಿದೆ.

ಯಾದಗಿರಿ ನಗರಸಭೆಯಲ್ಲಿ ಭಾರೀ ಗೋಲ್ಮಾಲ್ ಆರೋಪ: ಅಕ್ರಮ ಬಯಲಿಗೆಳೆದ ಪೌರಾಯುಕ್ತರಿಗೆ ಜೀವ ಬೆದರಿಕೆ !

ತಹಸೀಲ್ದಾರ ವಿಜಯಕುಮಾರ್‌ ಹಾಗೂ ಡಿವೈಎಸ್ಪಿ ಜಾವೀದ್‌ ಇನಾಂದಾರ್‌ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ದಾಳಿ ಕುರಿತು ಕನ್ನಡಪ್ರಭದೊಡನೆ ಮಾತನಾಡಿದ ತಹಸೀಲ್ದಾರ ಕೆ. ವಿಜಯಕುಮಾರ, ಖಚಿತ ಮಾಹಿತಿ ಆಧರಿಸಿ ಕಕ್ಕೇರಾದ ನಾಡ ಕಚೇರಿ ಉಪ ತಹಸೀಲ್ದಾರ್‌ ಮತ್ತು ಕಂದಾಯ ಪರೀವೀಕ್ಷಕರು ಮತ್ತು ಇಬ್ಬರು ಗ್ರಾಮ ಆಡಳಿತಗಾರರೊಂದಿಗೆಖೀ ದಾಳಿ ನಡೆಸಲಾಯಿತು ಎಂದರು.

ಬೆನಕನಳ್ಳಿಯ ಸರ್ವೇ ನಂಬರ್‌ 70, ದೇವತ್ಕಲ್‌ ಸರ್ವೇ ನಂಬರ್‌ 143 ಮತ್ತು 172ರನಲ್ಲಿ ರಲ್ಲಿ ಗುಡ್ಡದ ರೂಪದಲ್ಲಿ ಮರಳು ದಾಸ್ತಾನು ಮಾಡಲಾಗಿತ್ತು. ಜಮೀನ ಮಾಲೀಕರು ಅಕ್ರಮವಾಗಿ ಸರಕಾರದ ರಾಜಧನಕ್ಕೆ ಮೋಸ ಮಾಡಿ ಮರಳು ಸಂಗ್ರಹಿಸಿದ್ದಾರೆ. ಸರಕಾರಕ್ಕೆ ತೆರಿಗೆ ಪಾವತಿಸದೆ ವಂಚಿಸಿರುವ ಜಮೀನು ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುವುದು. ಅಲ್ಲದೆ ಇಷ್ಟೊಂದು ಮರಳು ಸಂಗ್ರಹ ಮಾಡಲು ಹೇಗೆ ಸಾಧ್ಯವಾಗಿದೆ ಎಂಬುದನ್ನು ತನಿಖೆಯ ಬಳಿಕವೇ ತಿಳಿಯಲಿದೆ ಎಂದು ಅವರು ತಿಳಿಸಿದರು.

ಡಿವೈಎಸ್‌ಪಿ ಜಾವೀದ್‌ ಇನಾಂದಾರ, ಸಿಪಿಐ ಆನಂದ ವಾಗ್ಮೋಡೆ, ಪಿಡಬ್ಲ್ಯುಡಿ ಜೆಇಇ ಹಾಗೂ ಇತರೆ ಭೂ ಮತ್ತು ಗಣಿ ಅ​ಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು. ಹುಣಸಗಿ ಮತ್ತು ಸುರಪುರ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.

click me!