ಶೋಭಾ ಹಿಲ್‌ವ್ಯೂ‌ನಲ್ಲಿ DCP ಅಣ್ಣಾಮಲೈಯೊಂದಿಗೆ ಪೊಲೀಸ್ ಸಂವಾದ

By Web DeskFirst Published Jan 25, 2019, 3:53 PM IST
Highlights

ನಾಗರಿಕರು ಕೆಲವೊಂದು ವಿಷಯಗಳಲ್ಲಿ ನೇರವಾಗಿ ಅಲ್ಲದೇ ಹೋದರೂ, ಪರೋಕ್ಷವಾಗಿ ಪೊಲೀಸರೊಂದಿಗೆ ಕೈ ಜೋಡಿಸಿದರೆ ಅಪರಾಧ ಮುಕ್ತ ಸಮಾಜ ನಿರ್ಮಾಣ ಸುಲಭವಾಗುತ್ತದೆ. ಆದರೆ, ಈ ವಿಷಯದಲ್ಲಿ ಸಾರ್ವಜನಿಕರು ಯಾವ ರೀತಿ ಪಾಲ್ಗೊಳ್ಳಬೇಕೆಂಬ ಅರಿವು ನಾಗರಿಕರಿಗೆ ಇರುವುದಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸ್ ಸಂವಾದ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು: ನಗರದಲ್ಲಿ ಎಲ್ಲಿ ನೋಡಿದರಲ್ಲಿ ಅಪರಾಧ ಚಟುವಟಿಕೆಗಳೂ ಹೆಚ್ಚುತ್ತಿವೆ. ನಾಗರಿಕರು ಕೆಲವೊಂದು ಸಮಾಜ ವಿರೋಧಿ ಚಟುವಟಿಕೆಗಳನ್ನು ನೋಡಿ ನಮಗೆ ಸಂಬಂಧವೇ ಇಲ್ಲವೆಂದು ತಮ್ಮ ಪಾಡಿಗೆ ತಾವಿದ್ದು ಬಿಡುತ್ತಾರೆ. ಆದರೆ, ಶಿಕ್ಷಿತ ಸಮಾಜದಲ್ಲಿ ಪೊಲೀಸರೊಂದಿಗೆ ಪ್ರತಿಯೊಬ್ಬ ನಾಗರಿಕನೂ ಕೈ ಜೋಡಿಸಿದರೆ ಶಾಂತಿಯುತ ವಾತಾವರಣ ಸೃಷ್ಟಿಸಬಹುದು.

ಪೊಲೀಸರೊಂದಿಗೆ ಕೈ ಜೋಡಿಸುವ ಕಾರ್ಯದಲ್ಲಿ ನಾಗರಿಕರ ಜವಾಬ್ದಾರಿ ಏನು? ನಾಗರಿಕರು ಯಾವ ರೀತಿ ಸಹಕರಿಸಿದರೆ ಪೊಲೀಸರಿಗೆ ನೆರವಾಗುತ್ತದೆ...? ಮುಂತಾದ ವಿಷಯಗಳ ಬಗ್ಗೆ ಶ್ರೀಸಾಮಾನ್ಯನಿಗೆ ಅರಿವು ಇರುವುದಿಲ್ಲ. ಇಂಥ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಸ್ಥೆಗಳ ಒಕ್ಕೂಟ ಊಫರ್‌ವಾಸ್ ಹಾಗೂ ತಲಘಟ್ಟಪುರ ಠಾಣೆ ಸಹಯೋಗದಲ್ಲಿ ಪೊಲೀಸರೊಂದಿಗೆ ಸಂವಾದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.

ಕನಕಪುರ ರಸ್ತೆಯ ನೈಸ್ ಜಂಕ್ಷನ್ ಸಮೀಪವಿರುವ ಶೋಭಾ ಹಿಲ್‌ವ್ಯೂ ಅಪಾರ್ಟ್‌ಮೆಂಟ್‌ನಲ್ಲಿ ಬೆಂಗಳೂರು ದಕ್ಷಿಣ ಡಿಸಿಪಿ ಅಣ್ಣಮಲೈ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ಜನವರಿ 26, ಶನಿವಾರ ಸಂಜೆ 3.45ಕ್ಕೆ ಹಮ್ಮಿಕೊಂಡಿದ್ದು, ಸಾರ್ವಜನಿಕರು ಪಾಲ್ಗೊಳ್ಳಬಹುದು. 

ಸಂವಾದದಲ್ಲಿ ಸುಬ್ರಹ್ಮಣ್ಯ ಪುರ ಠಾಣೆಯ ಎಸಿಪಿ ಮಹಾದೇವ ಟಿ, ತಲಘಟ್ಟಪುರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಕುಮಾರ್ ಹಾಗೂ ಕುಮಾರಸ್ವಾಮಿ ಲೇ ಔಟ್ ಠಾಣೆಯ ಸಂಚಾರಿ ಪೊಲೀಸ್ ಬಿ.ಪಿ. ನಾಜರಾಜು ಸಹ ಪಾಲ್ಗೊಳ್ಳುತ್ತಿದ್ದಾರೆ.

ನಿಮ್ಮ ಸುತ್ತಮುತ್ತ ನಡೆಯುತ್ತಿರುವ ವಿವಿಧ ಅಪರಾಧ ಚಟುವಟಿಕೆಗಳು ಹಾಗೂ ಕನಕಪುರ ರಸ್ತೆಯ ಸಂಚಾರಿ ವ್ಯವಸ್ಥೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ, ಉತ್ತರ ಪಡೆಯಬಹುದು. ಆಸಕ್ತರು ಪಾಲ್ಗೊಂಡು ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದೆಂದು ಸಂಘಟಕರು ತಿಳಿಸಿದ್ದಾರೆ.

ಇದನ್ನೂ ಓದಿ: ರಾತ್ರೋ ರಾತ್ರಿ ರೌಡಿಗಳ ಚಳಿ ಬಿಡಿಸಿದ ಡಿಸಿಪಿ ಅಣ್ಣಾಮಲೈ
 

click me!