Police Brutality: ಕೊರಗರ ಮದುವೆಗೆ ನುಗ್ಗಿ ಪೊಲೀಸ್‌ ದಾಂಧಲೆ: ಮಹಿಳೆಯರ ಮೇಲೂ ಮನಬಂದಂತೆ ಥಳಿತ

Kannadaprabha News   | Asianet News
Published : Dec 29, 2021, 07:04 AM IST
Police Brutality: ಕೊರಗರ ಮದುವೆಗೆ ನುಗ್ಗಿ ಪೊಲೀಸ್‌ ದಾಂಧಲೆ: ಮಹಿಳೆಯರ ಮೇಲೂ ಮನಬಂದಂತೆ ಥಳಿತ

ಸಾರಾಂಶ

*  ಡಿಜೆ ಬಳಕೆ ಆರೋಪದಲ್ಲಿ ಮನಬಂದಂತೆ ಥಳಿಸಿದರು *  ಪೊಲೀಸರ ಅಮಾನವೀಯ ಘಟನೆಗೆ ಖಂಡನೆ *  ಮೂತ್ರ ವಿಸರ್ಜನೆಗೆ ತೆರಳಿದ್ದ ಮಹಿಳೆಯರ ಮೇಲೂ ಹಲ್ಲೆ   

ಕುಂದಾಪುರ(ಡಿ.29):  ಕೊರಗ ಸಮುದಾಯದ(Koraga Community) ಯುವಕನ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಅಳವಡಿಸಿದ್ದನ್ನು ಆಕ್ಷೇಪಿಸಿ ಮದುಮಗನೂ ಸೇರಿದಂತೆ ಮೆಹಂದಿ ಕಾರ್ಯಕ್ರಮಕ್ಕೆ ಬಂದ ಕೊರಗ ಸಮುದಾಯದವರ ಮೇಲೆ ಪೊಲೀಸರು(Police) ಮನಬಂದಂತೆ ಥಳಿಸಿದ(Assault) ಘಟನೆ ರಾಜ್ಯ ಸಮಾಜ ಕಲ್ಯಾಣ ಸಚಿವರ ತವರೂರಾದ ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಗ ಕಾಲನಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಘಟನೆಯಲ್ಲಿ ಮದುಮಗ ರಾಜೇಶ್‌, ಕೊರಗ ಸಮುದಾಯದ ಮುಖಂಡ ಗಣೇಶ್‌ ಕೊರಗ, ಸುಂದರಿ, ಲಕ್ಷ್ಮೇ, ಬೇಬಿ, 12 ವರ್ಷ ಪ್ರಾಯದ ಬಾಲಕಿ, ಮದುಮಗನ ತಾಯಿ ಗಿರಿಜಾ, ಪ್ರವೀಣ್‌, ಶೇಖರ್‌ ಮೊದಲಾದವರಿಗೆ ಕೈ, ಕಾಲು, ತಲೆ, ಕುತ್ತಿಗೆ ಮೊದಲಾದೆಡೆ ಗಾಯಗಳಾಗಿವೆ.

Chikmagalur| ಬಾರ್‌ ವಿರೋಧಿಸಿದ ಗ್ರಾಮಸ್ಥರ ಮೇಲೆ ಪೊಲೀಸರ ದರ್ಪ

ಸೋವವಾರ ರಾತ್ರಿ ನಡೆದ್ದೇನು?

ಕೋಟತಟ್ಟು ಪ.ಪಂ ವ್ಯಾಪ್ತಿಯ ಕೊರಗ ಕಾಲನಿಯಲ್ಲಿ ಕೊರಗ ಸಮುದಾಯದ ರಾಜೇಶ್‌ ಎನ್ನುವವರ ಮದುವೆ(Marriage) ಡಿ.29ಕ್ಕೆ ಕುಮಟಾದಲ್ಲಿ ನಡೆಯಲಿದ್ದು, ಸೋಮವಾರ ಮನೆಯಲ್ಲಿಯೇ ಅದ್ದೂರಿ ಮೆಹಂದಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಿಜೆ ವ್ಯವಸ್ಥೆಯೂ ಇದ್ದು ರಾತ್ರಿ 9.30ರಿಂದ ಊಟ ವ್ಯವಸ್ಥೆ ಮಾಡಲಾಗಿತ್ತು. 10 ಗಂಟೆಯ ಬಳಿಕ ಪೊಲೀಸ್‌ ಆಗಮಿಸಿ ಡಿಜೆ ತೆಗೆಯುವಂತೆ ಸೂಚಿಸಿದ್ದು, ಕೆಲವೇ ಕ್ಷಣಗಳಲ್ಲಿ ಬಂದ ಕೋಟ ಪಿಎಸ್‌ಐ ಸಂತೋಷ್‌ ಬಿ.ಪಿ ಹಾಗೂ ಇತರ ಕೆಲ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಮೇಲೆ ಲಾಠಿಯಿಂದ(Lathi) ಹಲ್ಲೆ ನಡೆಸಿ ಅವಾಚ್ಯವಾಗಿ ಬೈದಿದ್ದಾರೆ. ಈ ವೇಳೆಯಲ್ಲಿ ತಪ್ಪಿಸಲು ಹೋದ ಮಹಿಳೆಯರ(Woman) ಮೇಲೂ ಥಳಿಸಿದ ಪೊಲೀಸರು, ವಿಡಿಯೋ ಚಿತ್ರೀಕರಣ ಮಾಡಿದವರ ಮೊಬೈಲ್‌ ಕಸಿದುಕೊಂಡು ವಿಡಿಯೋವನ್ನು ಡಿಲೀಟ್‌ ಮಾಡಿದ್ದಾರೆ.

ಮೂತ್ರ ವಿಸರ್ಜನೆಗೆ ತೆರಳಿದ್ದ ಮಹಿಳೆಯರ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ. ಅಲ್ಲದೇ ಕೊರಗ ಮುಖಂಡ ಗಣೇಶ್‌ ಬಾರಕೂರು ಸೇರಿದಂತೆ ನಾಲ್ಕೈದು ಕೊರಗ ಸಮುದಾಯದ ಯುವಕರನ್ನು ಠಾಣೆಗೆ ಕರೆದೊಯ್ದು ಶರ್ಟ್‌ ಬಿಚ್ಚಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮದುಮಗನ(Groom) ಅಣ್ಣ ಗಿರೀಶ್‌, ಸುದರ್ಶನ ಹಾಗೂ ಸಚಿನ್‌ ಎನ್ನುವವರನ್ನು ಕೂಡ ಠಾಣೆಗೆ ಕರೆದೊಯ್ದು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ನೊಂದವರು ಆರೋಪಿಸಿದ್ದಾರೆ. ಈ ಬಗ್ಗೆ ಗಣೇಶ್‌ ಕೊರಗ ಪ್ರತಿಕ್ರಿಯೆ ನೀಡಿ, ಡಿಜೆ ಶಬ್ದ ಕಡಿಮೆ ಮಾಡಲು ಹೇಳಿ ತೆರಳುವಾಗಲೇ ಏಳೆಂಟು ಮಂದಿ ಪೊಲೀಸರು ಬಂದು ಏಕಾಏಕಿ ಜೀಪಿಗೆ ಎಳೆದೊಯ್ದರು. ಬಾಯಿಗೆ ಬಂದಂತೆ ಅವ್ಯಾಚವಾಗಿ ಬೈದರು. ಹೆಂಗಸರು, ಮಕ್ಕಳು, ವೃದ್ಧರು ಎಂದು ನೋಡದೆ ಹಲ್ಲೆ ಮಾಡಿದ್ದಾರೆ. ಕೊರಗ ಚಳವಳಿಯ ನನ್ನ ಸುದೀರ್ಘ ಜೀವನದಲ್ಲಿ ಪೊಲೀಸರಿಂದ ಈ ರೀತಿಯಾಗಿ ಅಮಾನವೀಯ ಹಲ್ಲೆ ನಾನು ಇದುವರೆಗೂ ಕಂಡಿಲ್ಲ ಎಂದು ಹೇಳಿದ್ದಾರೆ.

ತನಿಖೆಯ ಭರವಸೆ: 

ಘಟನೆ ನಡೆದ ಕೊರಗ ಕಾಲನಿಗೆ ಬ್ರಹ್ಮಾವರ ಸರ್ಕಲ್‌ ಇನ್ಸ್‌ಪೆಕ್ಟರ್‌ ಅನಂತ ಪದ್ಮನಾಭ ಮಂಗಳವಾರ ಭೇಟಿ ನೀಡಿದರು. ಕೊರಗ ಸಮುದಾಯದವರು, ಸ್ಥಳೀಯ ನಾಗರಿಕರು ಮಾತನಾಡಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಪಿಐ, ಘಟನೆ ಬಗ್ಗೆ ಈಗಾಗಾಲೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ವೀಡಿಯೋ ದೃಶ್ಯಾವಳಿಗಳನ್ನು ಗಮನಿಸಿ ಸೂಕ್ತ ತನಿಖೆ ನಡೆಸುತ್ತೇವೆ ಎಂದು ಭರವಸೆ ನೀಡಿದರು.

ವಿಡಿಯೋ ವೈರಲ್‌... ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ

ಪೊಲೀಸ್‌ ಹಲ್ಲೆಯ ವೀಡಿಯೋ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ(Social Media) ವೈರಲ್‌ ಆಗುತ್ತಿದ್ದಂತೆಯೇ ಪೊಲೀಸರ ಅಮಾನವೀಯ ನಡೆಯ ವಿರುದ್ಧ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಸೇರಿದಂತೆ ವಿವಿಧ ಸಂಘನೆಗಳು ಈ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.

ನಿಂದಿಸಿದ ಸವಾರನಿಗೆ ಬಿತ್ತು ಟ್ರಾಫಿಕ್ ಪೊಲೀಸರಿಂದ ಗೂಸಾ

ಮೂಲ ನಿವಾಸಿಗಳೆಂದು ಕರೆಸಿಕೊಳ್ಳುವ ಕೊರಗ ಸಮುದಾಯದವರು ಮುಗ್ಧರು. ಸಾಲ ಮಾಡಿ ಒಂದೊಳ್ಳೆ ಕಾರ್ಯಕ್ರಮ ಮಾಡಲು ಇಲಾಖೆ ಬಿಡುತ್ತಿಲ್ಲ. ಹಾಗಾದರೆ ಕೊರಗರು ಹಿಂದಿನಂತೆ ಬೇಡಿಯೇ ತಿನ್ನಬೇಕಾ? ಇದೆಲ್ಲಾ ಗಮನಿಸಿದಾಗ ದಲಿತರು, ಕೊರಗರ ಹಕ್ಕಿನ ಬಗ್ಗೆ ಕುಂದುಕೊರತೆ ಸಭೆ ಕರೆಯುವುದು ಕೇವಲ ಕಾಟಾಚಾರಕ್ಕೆ ಎಂದು ಅನ್ನಿಸುತ್ತಿದೆ ಅಂತ ಕೊರಗ ಶ್ರೇಯೋಭಿವೃದ್ಧಿ ಮುಖಂಡ ಗಣೇಶ್‌ ಕುಂಭಾಶಿ ತಿಳಿಸಿದ್ದಾರೆ.  

ಕಾಲನಿಯಲ್ಲಿ 30 ವರ್ಷಗಳ ಬಳಿಕ ನಡೆಯುವ ಒಂದೊಳ್ಳೆ ಕಾರ್ಯಕ್ರಮ ಇದಾಗಿತ್ತು. ಇಲ್ಲಿ ಎಲ್ಲರೂ ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಅಂತಹ ಸಂದರ್ಭ ಪೊಲೀಸರು ಈ ರೀತಿ ದುರ್ವರ್ತನೆ ತೋರಿದ್ದು ಖಂಡನೀಯ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಅಂತ ನ್ಯಾಯವಾದಿ ಗ್ರಾ.ಪಂ ಸದಸ್ಯ ಪ್ರಮೋದ್‌ ಹಂದೆ ಹೇಳಿದ್ದಾರೆ. 

ಕೋಟತಟ್ಟು ಕೊರಗ ಸಮುದಾಯದವರ ಮೇಲೆ ಪೊಲೀಸರ ಹಲ್ಲೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಈಗಾಗಲೇ ಡಿಸಿ, ಎಸ್ಪಿ, ಐಜಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೂಡಲೇ ಕ್ರಮಕೈಗೊಂಡು ನ್ಯಾಯ ಒದಗಿಸಲು ಸೂಚನೆ ನೀಡಿದ್ದೇನೆ. ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿರುವುದರಿಂದ ಬುಧವಾರ ಸಂಜೆ ಹೊರಟು ಗುರುವಾರ ಬೆಳಗ್ಗೆ ಕೊರಗ ಕಾಲನಿಗೆ ಭೇಟಿ ನೀಡಿ ಅವರಿಗೆ ಧೈರ್ಯ ತುಂಬುತ್ತೇನೆ ಅಂತ ಸಮಾಜ ಕಲ್ಯಾಣ ಮತ್ತು ಹಿಂದುಳಿದ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ(Kota Shrinivas Poojari) ತಿಳಿಸಿದ್ದಾರೆ. 
 

PREV
Read more Articles on
click me!

Recommended Stories

ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ