ಯಲ್ಲಾಪುರ ಪಟ್ಟಣದಲ್ಲಿ ಹಂದಿಗಳ ಅಸಹಜ ಸಾವು

By Kannadaprabha NewsFirst Published Apr 8, 2020, 12:06 PM IST
Highlights

ಯಲ್ಲಾಪುರ ಪಟ್ಟಣದಲ್ಲಿ ಬಿಡಾಡಿ ಹಂದಿಗಳು ಅಸಹಜವಾಗಿ ಸಾಯತೊಡಗಿವೆ. ಕಳೆದ ಎರಡು ದಿನಗಳಲ್ಲಿ ಆರಕ್ಕೂ ಹೆಚ್ಚು ಹಂದಿಗಳು ಅಸು ನೀಗಿವೆ.

ಉತ್ತರ ಕನ್ನಡ(ಏ.08): ಯಲ್ಲಾಪುರ ಪಟ್ಟಣದಲ್ಲಿ ಬಿಡಾಡಿ ಹಂದಿಗಳು ಅಸಹಜವಾಗಿ ಸಾಯತೊಡಗಿವೆ. ಕಳೆದ ಎರಡು ದಿನಗಳಲ್ಲಿ ಆರಕ್ಕೂ ಹೆಚ್ಚು ಹಂದಿಗಳು ಅಸು ನೀಗಿವೆ. ಕಳೆದೆರಡು ದಿನಗಳಲ್ಲಿ ಪಟ್ಟಣದ ಐಬಿ ರಸ್ತೆಯಲ್ಲಿಯ ಕಾರ್ಪೊರೇಷನ್‌ನ ಬ್ಯಾಂಕ್‌ ಎದುರು 4 ಹಂದಿಗಳು ಮೃತಪಟ್ಟಿವೆ. ಮಂಗಳವಾರ ಬೆಳಗ್ಗೆ ಎರಡು ಹಂದಿಗಳು ಸತ್ತಿದ್ದು ಕಂಡು ಬಂದಿದೆ. ಇನ್ನಷ್ಟುಹಂದಿಗಳು ಸಾಯುವ ಸ್ಥಿತಿಗೆ ತಲುಪಿವೆ.

ಹಂದಿಗಳ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪಟ್ಟಣದಾದ್ಯಂತ ಲಾಕ್‌ಡೌನ್‌ ಅನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಹೀಗಾಗಿ ಹೋಟೆಲ್‌ಗಳು ತೆರೆದಿಲ್ಲ. ತರಕಾರಿ ಮಾರುಕಟ್ಟೆತೆರೆದಿಲ್ಲ. ಹೊಟೇಲ್‌ ಹಾಗೂ ತರಕಾರಿ ಮಾರುಕಟ್ಟೆಯ ತ್ಯಾಜ್ಯಗಳು ಸಿಗದೇ ಇರುವ ಕಾರಣಕ್ಕೆ ಬಿಡಾಡಿ ದನಗಳಿಗೆ, ಹಂದಿಗಳಿಗೆ, ಮಂಗಗಳಿಗೆ, ಬೀದಿ ನಾಯಿಗಳಿಗೆ ಆಹಾರ ಸಿಗುವುದು ಕಷ್ಟವಾಗಿದೆ.

ರಸ್ತೆಗಿಳಿದವರ ಕೈಗೆ ಸೀಲ್‌, 14 ದಿನ ಕ್ವಾರಂಟೈನ್‌

ಈ ಕಾರಣಕ್ಕಾಗಿ ಹಂದಿಗಳು ಸತ್ತಿವೆಯೋ ಅಥವಾ ಪ್ರಾಣಿಗಳಿಗೆ ಹರಡುವ ಸೋಂಕಿನ ಕಾರಣಕ್ಕಾಗಿ ಸತ್ತಿವೆಯೋ, ಇಲ್ಲವೆ ಇಲಿ, ಹೆಗ್ಗಣಗಳ ಕಾಟಕ್ಕಾಗಿ ಅನೇಕ ದಿನಸಿ ಅಂಗಡಿ, ಬೇಕರಿಯವರು ಲಾಕ್‌ಡೌನ್‌ ಅವಧಿಯಲ್ಲಿ ತಮ್ಮ ಅಂಗಡಿಗಳಲ್ಲಿ ವಿಷವಿಡುತ್ತಿದ್ದಾರೆ. ಉಳಿದಿರುವ ವಿಷವನ್ನು ಕಸದಲ್ಲಿ ಎಸೆಯುವುದರಿಂದ ಅಂತಹ ವಿಷ ಸೇವಿಸಿ ಪ್ರಾಣ ಬಿಟ್ಟಿವೆಯೋ ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಲಾಕ್‌ಡೌನ್‌ನಿಂದಾಗಿ ಜನ ಹೆಚ್ಚಿಗೆ ಸಂಚರಿಸುತ್ತಿಲ್ಲ. ತುರ್ತು ಅಗತ್ಯಕ್ಕಾಗಿ ಪರಿವೀಕ್ಷಣಾ ಮಂದಿರ ರಸ್ತೆಯಲ್ಲಿ ಸಂಚರಿಸುವ ಜನ ಹಂದಿಗಳ ಸಾವಿನಿಂದ ಆತಂಕಕ್ಕೀಡಾಗಿದ್ದಾರೆ. ಹಂದಿಗಳ ನಿರಂತರ ಸಾವಿನ ಕುರಿತು ವೈಜ್ಞಾನಿಕ ಹಾಗೂ ವೈದ್ಯಕೀಯ ತಪಾಸಣೆ ಆಗಬೇಕಾಗಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.

click me!