ಒಂದು ವರ್ಷದೊಳಗೆ ಶಾಶ್ವತ ಪರಿಹಾರ: ಶಾಸಕ ಪಿ.ರವಿಕುಮಾರ್‌

By Kannadaprabha NewsFirst Published May 31, 2023, 11:22 PM IST
Highlights

ನಗರದ ಬೀಡಿ ಕಾರ್ಮಿಕರ ಕಾಲೋನಿ ನಿವಾಸಿಗಳಿಗೆ ಮಳೆ ನೀರಿನಿಂದ ರಕ್ಷಣೆ ದೊರಕುವಂತೆ ಮಾಡಿ ಶಾಶ್ವತ ಪರಿಹಾರ ಒದಗಿಸುವುದು ನನ್ನ ಮುಖ್ಯ ಗುರಿಯಾಗಿದೆ. ಮುಂದಿನ ಒಂದು ವರ್ಷಗಳೊಳಗೆ ಶಾಶ್ವತ ಪರಿಹಾರ ದೊರಕಿಸಿಕೊಡುವುದಾಗಿ ಎಂದು ಶಾಸಕ ಪಿ.ರವಿಕುಮಾರ್‌ ಗೌಡ ಭರವಸೆ ನೀಡಿದರು.

ಮಂಡ್ಯ (ಮೇ.31): ನಗರದ ಬೀಡಿ ಕಾರ್ಮಿಕರ ಕಾಲೋನಿ ನಿವಾಸಿಗಳಿಗೆ ಮಳೆ ನೀರಿನಿಂದ ರಕ್ಷಣೆ ದೊರಕುವಂತೆ ಮಾಡಿ ಶಾಶ್ವತ ಪರಿಹಾರ ಒದಗಿಸುವುದು ನನ್ನ ಮುಖ್ಯ ಗುರಿಯಾಗಿದೆ. ಮುಂದಿನ ಒಂದು ವರ್ಷಗಳೊಳಗೆ ಶಾಶ್ವತ ಪರಿಹಾರ ದೊರಕಿಸಿಕೊಡುವುದಾಗಿ ಎಂದು ಶಾಸಕ ಪಿ.ರವಿಕುಮಾರ್‌ ಗೌಡ ಭರವಸೆ ನೀಡಿದರು. ಮಳೆ ಬಂದರೆ ಬೀಡಿ ಕಾರ್ಮಿಕರ ಕಾಲೋನಿ ಅಕ್ಷರಶಃ ಕೆರೆಯಂತಾಗುತ್ತಿದೆ. ಕಳೆದ ಹದಿನೈದು ವರ್ಷಗಳಿಂದ ನೀರು ತುಂಬಿಕೊಂಡಾಗ ತಾತ್ಕಾಲಿಕ ವಸತಿ ವ್ಯವಸ್ಥೆ, ಆಹಾರ ಕಿಟ್‌ಗಳನ್ನು ವಿತರಿಸುವುದು ಮಾಡಿ ಹೋಗುತ್ತಿದ್ದೇವೆ. ಸ್ಥಳೀಯ ನಿವಾಸಿಗಳಿಗೆ ಶಾಶ್ವತ ಪರಿಹಾರ ದೊರಕಿಸಿಕೊಡಲು ಈವರೆಗೆ ಸಾಧ್ಯವಾಗಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಮಳೆ ನೀರು ನಿಲುಗಡೆಯಾಗದಂತೆ ತಡೆಯುವುದಕ್ಕೆ 5 ಕೋಟಿ ರು. ವೆಚ್ಚದಲ್ಲಿ ವಾಲ್‌ ನಿರ್ಮಾಣ ಮಾಡಬೇಕೆಂದು ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ. ಆ ಪ್ರಸ್ತಾವನೆ ಬಗ್ಗೆ ಜಲಸಂಪನ್ಮೂಲ ಇಲಾಖೆಯೊಂದಿಗೆ ಚರ್ಚಿಸಿ ಹಣ ಬಿಡುಗಡೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದ ರವಿಕುಮಾರ್‌, ನೀರು ಹೊರಗೆ ಹೋಗುವುದಕ್ಕೆ ಈಗ 5 ವಾಲ್‌ಗಳಿದೆ. ಅದನ್ನು 8ಕ್ಕೆ ಏರಿಸಬೇಕಿದೆ. ಮಳೆಗಾಲ ಬರುವುದಕ್ಕೆ ಮುನ್ನವೇ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಮುಗಿಸುವಂತೆ ಸೂಚಿಸಿದ್ದೇನೆ ಎಂದು ನುಡಿದರು.

ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ: ಶಾಸಕ ಕೊತ್ತೂರು ಮಂಜುನಾಥ್‌

ಹೆದ್ದಾರಿ ಬಂದ್‌ ಎಚ್ಚರಿಕೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಂದಲೂ ಸಮಸ್ಯೆಯಾಗುತ್ತಿದೆ. ಹೆದ್ದಾರಿ ರಸ್ತೆಯಲ್ಲಿ ಬಿದ್ದ ಮಳೆ ನೀರೆಲ್ಲವನ್ನೂ ಈ ಭಾಗದ ಚರಂಡಿಗೆ ಹರಿಯಬಿಟ್ಟಿದ್ದಾರೆ. ಪ್ರಾಧಿಕಾರದವರು ಮೋರಿಯನ್ನು ವಿಶಾಲವಾಗಿ ನಿರ್ಮಿಸಿಕೊಡಬೇಕಿದೆ. ಇಲ್ಲದಿದ್ದರೆ ರಸ್ತೆಯನ್ನು ಬಂದ್‌ ಮಾಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇವೆ. ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಮಾತನಾಡಿ ಕ್ರಮ ವಹಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಹಾಲಿ ಇರುವ 2 ಅಡಿ ಅಗಲದ ಮೋರಿಯನ್ನು 10 ಅಡಿಗಳಷ್ಟುಅಗಲಕ್ಕೆ ನಿರ್ಮಿಸಬೇಕು. ಅಧಿಕಾರಿಗಳು ಮೊಂಡುತನ ತೋರಿದರೆ ರಸ್ತೆ ಬಂದ್‌ ಮಾಡುವುದು ಅನಿವಾರ್ಯವಾಗಲಿದೆ. ಅದಕ್ಕಾಗಿ ಒಂದು ವಾರ ಕಾಲಾವಕಾಶ ಕೇಳಿದ್ದಾರೆ. ಅಲ್ಲಿಯವರೆಗೆ ಕಾದುನೋಡುವುದಾಗಿ ತಿಳಿಸಿದರು.

ಮಳೆ ನೀರಿನಿಂದ ಕಾಲೋನಿಯ ನಿವಾಸಿಗಳಿಗೂ ತೊಂದರೆಯಾಗಬಾರದು, ಅಕ್ಕ-ಪಕ್ಕದ ಜಮೀನುಗಳಿಗೂ ನೀರು ನುಗ್ಗದಂತೆ ಪರಾರ‍ಯಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಳೆ ಬರುವುದಕ್ಕೆ ಮುನ್ನ ಏನಾದರೂ ತಾತ್ಕಾಲಿಕ ಪರಿಹಾರ ಒದಗಿಸಲೇಬೇಕು. ಮಳೆ ನೀರು ನುಗ್ಗದಂತೆ ತಡೆಯುವುದಕ್ಕೆ ಬೇಕಾದ ಕ್ರಮಗಳನ್ನು ಜಾರಿಗೊಳಿಸಲಾಗುವುದು. ಅದಕ್ಕಾಗಿಯೇ ಎರಡು ತಿಂಗಳು ಮುಂಚಿತವಾಗಿಯೇ ಆಗಮಿಸಿ ವೀಕ್ಷಣೆ ನಡೆಸುತ್ತಿದ್ದೇನೆ. ಶಾಶ್ವತ ಪರಿಹಾರ ಒದಗಿಸುವುದಕ್ಕೂ ಬದ್ಧನಾಗಿದ್ದೇನೆ. ಅದಕ್ಕೆ ಸಮಯಾವಕಾಶ ಬೇಕಿದೆ ಎಂದರು.

ಹೊಸ ಮೋರಿಗೆ ನಿರ್ಮಾಣಕ್ಕೆ ಟೆಂಡರ್‌: ಬೀಡಿ ಕಾರ್ಮಿಕರ ಕಾಲೋನಿಯ ಚರಂಡಿಗಳು ಕುಸಿತಗೊಂಡಿವೆ. ಮಣ್ಣು ತುಂಬಿಕೊಂಡು ಅವ್ಯವಸ್ಥೆಯ ಆಗರವಾಗಿದೆ. ಚರಂಡಿಯನ್ನು ಹೊಸದಾಗಿ ನಿರ್ಮಿಸುವ ಅವಶ್ಯಕತೆ ಇದೆ. ಅದಕ್ಕೆ ಹೊಸ ಟೆಂಡರ್‌ ಕರೆದು ಇನ್ನೊಂದು ವಾರದೊಳಗೆ ಕೆಲಸ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಬೀಡಿ ಕಾರ್ಮಿಕರ ಕಾಲೋನಿಯಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ. ರಸ್ತೆಗಳಿಗೆ ಡಾಂಬರೀಕರಣವಾಗಬೇಕಿದೆ. ಇಷ್ಟುದಿನ ಹೇಗಿತ್ತೋ ಗೊತ್ತಿಲ್ಲ. ಈಗ ನಾವು ಅಧಿಕಾರಕ್ಕೆ ಬಂದಿದ್ದೇವೆ. ಗೃಹಮಂಡಳಿ, ಕೊಳಚೆ ನಿರ್ಮೂಲನಾ ಮಂಡಳಿ ವ್ಯಾಪ್ತಿಗೆ ಕಾಲೋನಿ ಬರುವುದರಿಂದ ಸರ್ಕಾರ ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿದರು.

ಅರಿಶಿಣ ಖರೀದಿಗೆ ಒತ್ತಾಯಿಸಿ ರೈತರ ಪ್ರತಿಭಟನೆ​​​: ಜಿಲ್ಲಾಡಳಿತ ವಿಳಂಬ ನೀತಿಗೆ ​ಧಿಕ್ಕಾರದ ಘೋಷಣೆ

ಅಗತ್ಯವಿರುವ ಹಣಕಾಸಿನ ನೆರವು ಒದಗಿಸುತ್ತೇನೆ. ಸಚಿವ ಜಮೀರ್‌ ಅಹಮದ್‌ ಜೊತೆಯೂ ಮಾತನಾಡಿದ್ದೇನೆ. ಕಾಲೋನಿ ಅಭಿವೃದ್ಧಿಗೆ ಎಷ್ಟುಹಣ ಬೇಕೋ ಒದಗಿಸಲು ಸಿದ್ಧನಿದ್ದೇನೆ ಎಂದಿದ್ದಾರೆ. ಅವರನ್ನೂ ಕರೆದುಕೊಂಡು ಬಂದು ಮೂಲಸೌಲಭ್ಯಗಳನ್ನು ದೊರಕಿಸಿಕೊಡುವುದಾಗಿ ತಿಳಿಸಿದರು. ಕಾಲೋನಿಗೆ ಇನ್ನೊಂದು ವಾರದೊಳಗೆ ಬೀದಿ ದೀಪಗಳನ್ನು ಅಳವಡಿಸುವಂತೆ ಸೂಚಿಸಿದ್ದೇನೆ. ಒಂದು ವಾರದೊಳಗೆ ಆ ವ್ಯವಸ್ಥೆಯಾಗಿರಬೇಕು. ಇಲ್ಲದಿದ್ದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುತ್ತೇನೆ ಎಂದು ಖಡಕ್ಕಾಗಿ ಹೇಳಿದರು.

click me!