ಎಸ್ಸೆಸ್ಸೆಲ್ಸಿ ಮಕ್ಕಳಿಗೆ ತಲಾ 1 ಸಾವಿರ ರು. ಸಹಾಯಧನ: ಶಾಸಕ ಪ್ರದೀಪ್‌ ಈಶ್ವರ್‌ ಭರವಸೆ

By Kannadaprabha NewsFirst Published May 31, 2023, 11:03 PM IST
Highlights

ಕ್ಷೇತ್ರದ ಸರ್ಕಾರಿ ಪೌಢಶಾಲೆಗಳ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಒಂದು ಸಾವಿರ ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರುಪಾಯಿಗಳ ಸಹಾಯ ಧನವನ್ನು ತಮ್ಮ ಸ್ವಂತ ಹಣದಿಂದ ಕೊಡುತ್ತೇನೆ ಎಂದು ನೂತನ ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದರು. 

ಚಿಕ್ಕಬಳ್ಳಾಪುರ (ಮೇ.31): ಕ್ಷೇತ್ರದ ಸರ್ಕಾರಿ ಪೌಢಶಾಲೆಗಳ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಒಂದು ಸಾವಿರ ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರುಪಾಯಿಗಳ ಸಹಾಯ ಧನವನ್ನು ತಮ್ಮ ಸ್ವಂತ ಹಣದಿಂದ ಕೊಡುತ್ತೇನೆ ಎಂದು ನೂತನ ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದರು. ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ಶಿಕ್ಷಕರ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಪ್ರೌಢಶಾಲೆಯಿಂದ 5 ಮಂದಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ವಿಶೇಷ ತರಬೇತಿ ನೀಡುವ ಮೂಲಕ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅವರನ್ನು ರಾರ‍ಯಂಕ್‌ ಗಳಿಸುವಂತೆ ಮಾಡಲಾಗುವುದು ಎಂದರು.

ಪ್ರತಿಭಾವಂತ ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್‌: ಪ್ರತಿ ಶಾಲೆಯಿಂದ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತ್ಯೇಕ ಹಾಸ್ಟೆಲ್‌ನಲ್ಲಿ ಇರಿಸಲಾಗುವುದು. ಅವರಿಗೆ ಸರ್ಕಾರಿ ಶಾಲೆಯ ಶಿಕ್ಷಕರೇ ಕೋಚಿಂಗ್‌ ನೀಡುತ್ತಾರೆ. ಅವರಿಗೆ ತಗಲುವ ಎಲ್ಲಾ ಖರ್ಚುಗಳನ್ನು ತಾವೇ ಭರಿಸುತ್ತಿರುವುದಾಗಿ ಹೇಳಿದರು. ಕಾರ್ಪೊರೇಟ್‌ ಶಾಲೆಗಳ ಮಾದರಿಯಲ್ಲಿ ಎಲ್ಲಾ ಶಾಲೆಗಳಲ್ಲಿ ಪಾಠ ಪ್ರವಚನಗಳು ನಡೆಯುವಂತೆ ಮಾಡಲಾಗುವುದು. ವಿಶೇಷ ರೀತಿಯಲ್ಲಿ ಎಲ್ಲಾ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಶೇಕಡ 80 ರಷ್ಟುಹಾಜರಾತಿ ಇಲ್ಲದ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಈ ಬಗ್ಗೆ ಪೋಷಕರಿಗೂ ಸಹ ತಿಳವಳಿಕೆ ನೀಡಲಾಗುವುದು ಎಂದರು.

ಅರಿಶಿಣ ಖರೀದಿಗೆ ಒತ್ತಾಯಿಸಿ ರೈತರ ಪ್ರತಿಭಟನೆ​​​: ಜಿಲ್ಲಾಡಳಿತ ವಿಳಂಬ ನೀತಿಗೆ ​ಧಿಕ್ಕಾರದ ಘೋಷಣೆ

40ರಿಂದ 50 ಲಕ್ಷ ರು.ಗಳ ಯೋಜನೆ: ಈ ಯೋಜನೆಗೆ ಸುಮಾರು 40ರಿಂದ 50 ಲಕ್ಷ ರುಪಾಯಿಗಳ ಅಗತ್ಯವಿದೆ. ಇದಕ್ಕೆ ಕ್ರಿಯಾ ಯೋಜನೆಯನ್ನು ತಾವೇ ತಯಾರಿಸಿದ್ದು ಈ ಎಲ್ಲಾ ವೆಚ್ಚವನ್ನು ತಾವೇ ವೈಯಕ್ತಿಕವಾಗಿ ಭರಿಸುತ್ತೇನೆ. ಉತ್ತಮ ಪ್ರಯತ್ನವನ್ನು ಮಾಡಿ ಉತ್ತಮ ಫಲಿತಾಂಶ ತರಿಸುವ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ಶಿಕ್ಷಕರನ್ನು ಗುರ್ತಿಸಲಾಗುವುದು. ಅವರನ್ನು ರಾಜ್ಯ ಮಟ್ಟದ ಪ್ರಶಸ್ತಿಗೆ ಶಿಫಾರಸು ಮಾಡಲಾಗುವುದು ಎಂದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅವರಣದಲ್ಲಿ ಖಾಸಗಿ ವ್ಯಕ್ತಿಗಳು ಕಾರು, ದ್ವಿಚಕ್ರವಾಹನಗಳು ಮತ್ತು ಇತರೆ ವಾಹನಗಳನ್ನು ನಿಲ್ಲಿಸಲು ಅವಕಾಶ ನೀಡುವುದಿಲ್ಲ. ಕಲ್ಯಾಣ ಮಂಟಪಗಳ ಮದುವೆ ಮುಂಜಿ ಸಂದರ್ಭಗಳಲ್ಲಿ ಸಮಾರಂಭಗಳಿಗೆ ಬರುವವರು ಸಹಾ ಇಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದು ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. ನಂದಿ ರಂಗಮಂದಿರದಲ್ಲಿ ಶಾಲಾ ಸಮಯದಲ್ಲಿ ಯಾವುದೇಕಾರಣಕ್ಕೂ ಯಾವುದೇ ಸಭೆ ಸಮಾರಂಭ ನಡೆಸಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.

ಬೀದಿ ಕಾಮಣ್ಣರಿಗೆ ಎಚ್ಚರಿಕೆ: ಹೆಣ್ಣು ಮಕ್ಕಳು ಶಾಲೆಗೆ ಬರುವ ವೇಳೆ ಪುಂಡರು ಚುಡಾಯಿಸುವುದು ಸೇರಿದಂತೆ ಅವರನ್ನು ಅಧ್ಯಯನದಿಂದ ಬೇರೆ ಕಡೆಗೆ ಗಮನ ಸೆಳೆಯುವಂತೆ ಮಾಡುತ್ತಿದ್ದಾರೆ. ಇದರಿಂದಾಗಿ ಕೆಲವು ಹೆಣ್ಣು ಮಕ್ಕಳು ಅಡ್ಡದಾರಿಗೆ ಹೋಗಲು ಅವಕಾಶವಾಗಿದೆ ಎಂದು ಕೆಲವು ಶಿಕ್ಷಕರು ಶಾಸಕರ ಗಮನ ಸೆಳೆದರು. ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್‌ ಇಲಾಖೆಗೆ ಸೂಚನೆ ನಿಡಲಾಗುವುದು. 

ಪಕ್ಷಭೇದವಿಲ್ಲದೆ ಆದ್ಯತೆ ಮೇರೆಗೆ ಕೆಲಸ ಮಾಡಿ: ಶಾಸಕ ಧೀರಜ್‌ ಮುನಿರಾಜ್‌

ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು. ಅದರಂತೆಯೇ ಶಿಕ್ಷಕರು ಸಹ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಪೊಲೀಸರಿಗೆ ದೂರು ನೀಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ ಉಪಕಾರ್ಯದರ್ಶಿ ಶಿವಕುಮಾರ್‌, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಳಾಖೆಯ ಪ್ರಭಾರಿ ಉಪನಿರ್ದೇಶಕ ಗೋವಿಂದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೋಭಾ, ಡಿವೈಪಿಸಿಗಳಾದ ಹಂಸವೇಣಿ, ರಭಿಯಾ ತಬ್ಸಮ್‌ ಮತ್ತಿತರರು ಹಾಜರಿದ್ದರು.

click me!