
ಹುಮನಾಬಾದ್(ಜ.19): ಪರಿಸರದಲ್ಲಿನ ಉಷ್ಣವಲಯ ಮತ್ತು ವಾಯುಮಂಡಲದ ಎತ್ತರದಲ್ಲಿ ಸ್ಥಳೀಯ ಹವಾಮಾನವನ್ನು ಮೇಲ್ವಿಚಾರಣೆ ಮಾಡಲು ಆಕಾಶಕ್ಕೆ ಹಾರಿಸಿದ ಏರ್ ಬಲೂನ್ ಶನಿವಾರ ಬೆಳಗ್ಗಿನ ಜಾವ ತಾಲೂಕಿನ ಜಲಸಿಂಗಿ ಗ್ರಾಮದಲ್ಲಿ ಧರೆಗೆ ಉರುಳಿ ಬಿದ್ದಿದ್ದು ಗ್ರಾಮಸ್ಥರು ಕೆಲ ಕಾಲ ಆತಂಕಗೊಂಡಿದ್ದರು.
ಗ್ರಾಮಸ್ಥರು ಕೂಡಲೇ 112ಗೆ ಕರೆ ಮಾಡಿ ಮಾಹಿತಿ ನೀಡಿದ ಹಿನ್ನಲೆ ಡಿವೈಎಸ್ಪಿ ಜೆ.ಎಸ್ ನ್ಯಾಮೇಗೌಡರ್ ಅವರು ಸಿಬ್ಬಂದಿಗಳೊಂದಿಗೆ ತಕ್ಷಣ ಸ್ಥಳಕ್ಕೆ ಧಾವಿಸಿ, ಈ ಕುರಿತು ಮಾಹಿತಿ ಪಡೆದು ಹೈದ್ರಾಬಾದ್ ಇಸ್ರೋ ಸಂಸ್ಥೆಯಿಂದ ಈ ಬಲೂನ್ ಹಾರಿಸಿದ್ದು, ಇದರಿಂದ ಯಾರಿಗೂ ಪ್ರಾಣಾಪಾಯವಿಲ್ಲ ಎಂದು ಧೈರ್ಯ ತುಂಬಿದ ಅವರು. ಈ ಕುರಿತು ಮಾಹಿತಿ ನೀಡಿದಕ್ಕೆ ಕೃತಜ್ಞತೆ ಸಲ್ಲಿಸಿ ಇಂತಹ ಅರಿಚಿತ ಯಾವುದೇ ವಸ್ತುಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದರು.
ಬೀದರ್ ಹಣ ಲೂಟಿ ಹಿಂದೆ ಬಿಹಾರದ ಅಮಿತ್ ಗ್ಯಾಂಗ್?
ಹೈದ್ರಾಬಾದ್ನ ಟಿ.ಐ.ಎಫ್.ಆರ್ ಬಲೂನ್ ಕೇಂದ್ರದಿಂದ ಜನವರಿ 17ರಂದು ಉಡಾವಣೆ ಮಾಡಲಾಗಿತ್ತು, ತಾಂತ್ರಿಕ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಹುಮನಾಬಾದ ತಾಲೂಕಿನ ಜಲಸಂಗಿ ಗ್ರಾಮದಲ್ಲಿ ಬಂದು ಬಿದ್ದಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿತ್ತು. ಆಕಾಶದಿಂದ ಧರೆಗೆ ಬರುತ್ತಿರುವುದನ್ನು ಕಂಡ ಕೆಲ ಜನರು ಭಯಭೀತರಾಗಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸದ್ಯ ಏರ್ ಬಲೂನ್ ಬಿಳುವುದರಿಂದ ಯಾವುದೇ ಅನಾಹುತ, ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಯಂತ್ರದ ಕುರಿತು ಮಾಹಿತಿ ನೀಡಿದರು. ಯಾರೂ ಕೂಡ ಭಯಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಬೀದರ್ ದರೋಡೆ: ಮೃತನ ಕುಟುಂಬಕ್ಕೆ 8 ಲಕ್ಷ ಪರಿಹಾರ
ಇಂತಹ ಬಲೂನ್ಗಳನ್ನು ವರ್ಷದಲ್ಲಿ ಎರಡು ಋತುಗಳಲ್ಲಿ ಉಡಾಯಿಸಲಾಗುತ್ತದೆ. ಜನವರಿ – ಏಪ್ರಿಲ್ ಮತ್ತು ಅಕ್ಟೋಬರ್ ದಿಂದ ಡಿಸೆಂಬರ್ವರೆಗೆ ಹಾರಿಸಿ ಪರಿಸರದಲ್ಲಿನ ವಾತಾವರಣದ ಕುರಿತು ಪರೀಕ್ಷೆ ನಡೆಸುತ್ತವೆ ಎಂದು ಸ್ಥಳದಲ್ಲಿದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕನ್ನಡದಲ್ಲೇ ಮಾಹಿತಿ ಪತ್ರ
ಏರ್ ಬಲೂನಲ್ಲಿ ಒಂದು ವಿಶಿಷ್ಟ ಲಕ್ಷಣವೆಂದರೆ, ವಿವಿಧ ತಾಂತ್ರಿಕ ಅಂಶಗಳು ಅಳವಡಿಸಿದ ಕಾರಣ ಹೈದ್ರಾಬಾದ್ ಬಲೂನ್ ಕೇಂದ್ರದ ಅಧಿಕಾರಿಗಳು ಕೂಡ ಅದನ್ನು ಹಿಂಬಾಲಿಸಿಕೊಂಡು ಗ್ರಾಮಕ್ಕೆ ಬಂದಿದ್ದಾರೆ. ಅದರ ಮೇಲೆ ಕನ್ನಡದಲ್ಲಿ ಬರೆದಿದ್ದು, ಇದರ ಯಾವುದೇ ವಸ್ತುಗಳನ್ನು ತೆರೆಯಬಾರದು, ಎಲ್ಲ ವಸ್ತುಗಳನ್ನು ಕಾಪಾಡಬೇಕು, ಮಾಹಿತಿ ನೀಡಬೇಕು, ಹೀಗೆ ವಿವಿಧ ರೀತಿಯ ಕನ್ನಡದಲ್ಲಿ ಮಾಹಿತಿ ಇದ್ದ ಪತ್ರ ಕೂಡ ಅದರೊಂದಿಗೆ ಲಗತ್ತಿಸಲಾಗಿತ್ತು ಎಂದು ಹೇಳಲಾಗಿದೆ.