ಕಲ್ಯಾಣ ಕರ್ನಾಟಕದವರಿಗೆ ಕನ್ನಡಿಯೊಳಗಿನ ಗಂಟಾದ 371 ಜೆ..!

By Kannadaprabha NewsFirst Published Jun 26, 2021, 12:10 PM IST
Highlights

* ವೃಂದ-ನೇಮಕಾತಿ ನಿಯಮಗಳೇ ನೇಮಕಾತಿಗೆ ಅಡ್ಡಿ
* ಆಹ್ವಾನಿಸಿದ ಹುದ್ದೆಯಷ್ಟು ಅರ್ಜಿಗಳು ಬರುತ್ತಿಲ್ಲ
* ಮಾಧ್ಯಮಿಕ ಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಖಾಲಿ
 

ಸೋಮರಡ್ಡಿ ಅಳವಂಡಿ

ಕೊಪ್ಪಳ(ಜೂ.26): ಭಾಗದವರಿಗೆ ನೀಡಲಾಗಿರುವ 371 ಜೆ ಸ್ಥಾನಮಾನ ಕನ್ನಡಿಯೊಳಗಿನ ಗಂಟಾಗಿದೆ. ಅದರಲ್ಲೂ ಮಾಧ್ಯಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಇದು ಪದೇ ಪದೇ ಸಾಬೀತಾಗುತ್ತಿದೆ. ಹೀಗಾಗಿ, ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡುವಂತೆ ಕೂಗು ಕೇಳಿ ಬರುತ್ತಿದೆ.

2013ರಲ್ಲೆ ಜಾರಿಯಾದ ಕೆಲವೇ ವರ್ಷಗಳಲ್ಲಿ ಶಾಲಾ ಶಿಕ್ಷಕರ ನೇಮಕಾತಿಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಲಾಯಿತು. ಇದರಿಂದ 371 ಜೆ ಸ್ಥಾನಮಾನ ಇದ್ದರೂ ನೇಮಕಾತಿಗೆ ಅಡ್ಡಿಯಾಯಿತು. 2017 ಮತ್ತು 2019ರಲ್ಲಿ ಮಾಧ್ಯಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಶೇ. 20ರಷ್ಟುಹುದ್ದೆಗಳೂ ಭರ್ತಿಯಾಗಿಲ್ಲ. ಲಕ್ಷಾಂತರ ಪದವೀಧರರು ಇದ್ದರೂ ಈ ಷರತ್ತುಗಳಿಂದಲೇ ಅವರು ನೇಮಕವಾಗಲು ಸಾಧ್ಯವಾಗುತ್ತಿಲ್ಲ.

2017ರಲ್ಲಿ ಹೈದರಾಬಾದ್‌ ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ 371 ಜೆ ಅಡಿ 5,000 ಶಿಕ್ಷಕರ ಗೆ ಆದೇಶ ಮಾಡಲಾಯಿತು. ಈ ಹುದ್ದೆಗಳಿಗೆ ಲಕ್ಷಾಂತರ ಅಭ್ಯರ್ಥಿಗಳು ಅರ್ಹರಿದ್ದರೂ ಬದಲಾದ ನಿಯಮಗಳನ್ವಯ ಕೇವಲ 2,500 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದರು. ಇದರಲ್ಲಿ ನೇಮಕವಾಗಿದ್ದು 748 ಮಾತ್ರ. ಇನ್ನು 4,252 ಹುದ್ದೆಗಳು ಖಾಲಿ ಉಳಿದವು. ಇದಾದ ಮೇಲೆ 2019ರಲ್ಲಿ ಪುನಃ ಇದೇ ರೀತಿ ಹತ್ತು ಸಾವಿರ ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ ಮಾಡಿತು. ಈ ವೇಳೆಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಪುನಃ 5,000 ಹುದ್ದೆಗಳನ್ನು ಭರ್ತಿ ಮಾಡಲು ಮುಂದಾದರು. ಆದರ ಅರ್ಜಿ ಬಂದಿದ್ದು ಮಾತ್ರ ಕೇವಲ 3000! ಇದರಲ್ಲಿ ನೇಮಕವಾಗಿದ್ದು 900 ಹುದ್ದೆಗಳು ಮಾತ್ರ. ಹೀಗಾಗಿ, ಪುನಃ 4,100 ಹುದ್ದೆಗಳು ಖಾಲಿ ಉಳಿದವು. ಈಗ ಕಲ್ಯಾಣ ಕರ್ನಾಟಕದಲ್ಲಿ ಮಾಧ್ಯಮಿಕ ಶಾಲಾ ಶಿಕ್ಷಕರ (6ರಿಂದ 8ನೇ ತರಗತಿಗೆ) 4,800 ಹುದ್ದೆಗಳು ಖಾಲಿ ಇವೆ. ಪುನಃ ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ಆದರೆ, ಇದು ಕನ್ನಡಿಯೊಳಗಿನ ಗಂಟು ಎನ್ನುವಂತೆ ಆಗಿದೆ.

'ಕಲ್ಯಾಣ ಕರ್ನಾಟಕಕ್ಕೆ ಅನ್ಯ ಪ್ರದೇಶ ಸೇರ್ಪಡೆ ಮಾಡದಿರಿ'

ಈಗ ಯಾಕೆ?:

ರಾಜ್ಯ ಸರ್ಕಾರ ಮಾಧ್ಯಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿನ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಸಿಇಟಿ ಬರೆದು ಬಿಇಡಿ ಪಾಸಾಗಿರುತ್ತಾರೆ. ಇದಾದ ಮೇಲೆ ನೇಮಕಾತಿ ಸಿಇಟಿ ನಡೆಯುತ್ತದೆ. ಇದರ ಮಧ್ಯೆ ಈಗ ಟಿಇಟಿ ಪರೀಕ್ಷೆಯನ್ನು ಮಾಡಲಾಗಿದೆ. ಇದಕ್ಕೆ ನೂರೆಂಟು ಷರತ್ತುಗಳನ್ನು ಮಾಡಿದ್ದರಿಂದ ಪದವಿ ಅರ್ಹತೆ ಇದ್ದರೂ ಅವರು ನೇಮಕಾತಿಗೆ ಅರ್ಹತೆ ಹೊಂದುತ್ತಿಲ್ಲ. ಹೀಗಾಗಿ, ಬಹುದೊಡ್ಡ ಸಮಸ್ಯೆಯಾಗಿದೆ. ಹುದ್ದೆ ಖಾಲಿ ಇದ್ದು, ಪದವಿ ಅರ್ಹತೆ ಇದ್ದರೂ ನೇಮಕವಾಗುವ ಯೋಗ ಇಲ್ಲದಂತೆ ಆಗಿದೆ. ಕಳೆದೈದು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆದರೂ ಹುದ್ದೆಗಳು ಖಾಲಿ ಇವೆ.

ನಿಯಮದಲ್ಲಿ ಏನಿದೆ?

1. ಪದವೀಧರರು ಕನಿಷ್ಠ ಶೇ. 50ರಷ್ಟು ಅಂಕಗಳನ್ನು ಪ್ರತಿ ವಿಷಯದಲ್ಲಿ ಪಡೆದಿರಬೇಕು.
2. 2021ರ ವರೆಗೆ ಬಿಇಡಿ ಮಾಡಿದ ಅಭ್ಯರ್ಥಿಗಳಿಗೆ ಪದವಿಯಲ್ಲಿ ಸರಾಸರಿ ಕನಿಷ್ಠ ಶೇ. 50ರಷ್ಟುಅಂಕಗಳನ್ನು ಪಡೆದಿರಬೇಕು ಎಂದಿದೆ.
3. ಪದವಿಯಲ್ಲಿ ಸರಾಸರಿ ಶೇ. 50 ಅಂಕಗಳನ್ನು ಪಡೆದ ಅಭ್ಯರ್ಥಿಗಳು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಜಿ ಸಲ್ಲಿಸಬೇಕೆಂದಿದೆ.

ಏನಾಗಬೇಕು?

1. ಒಟ್ಟಾರೆಯಾಗಿ ಅಭ್ಯರ್ಥಿಯು ಪದವಿಯಲ್ಲಿ ಸರಾಸರಿ ಶೇ. 50ರಷ್ಟುಅಂಕಗಳನ್ನು ಪಡೆದಿರಬೇಕು ಎಂದು ತಿದ್ದುಪಡಿಯಾಗಬೇಕಿದೆ.

2. ಪದವೀಧರ ಪ್ರಾಥಮಿಕ ಶಾಲೆಗಳ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪತ್ರಿಕೆ-2 ಹಾಗೂ ಪತ್ರಿಕೆ-3ರಲ್ಲಿ ಕ್ರಮವಾಗಿ ಶೇ. 50 ಹಾಗೂ ಶೇ. 60 ಅಂಕಗಳನ್ನು ಪಡೆಯುವ ಬಗ್ಗೆ. ನೇಮಕಾತಿಯ ಸಂದರ್ಭದಲ್ಲಿ ಆಯ್ಕೆ ಪಟ್ಟಿಯನ್ನು ಅಭ್ಯರ್ಥಿಯು ಪದವಿ, ಶಿಕ್ಷಕರ ಅರ್ಹತಾ ಪರೀಕ್ಷೆ, ಬಿಇಡಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳಲ್ಲಿ ಶೇಕಡಾವಾರು ಪ್ರಮಾಣದಲ್ಲಿ ಪರಿಗಣಿಸಿ ಎಲ್ಲ ಹಂತದ ಪರೀಕ್ಷೆಗಳಿಗೂ ಸಮಾನ ಮಹತ್ವ ನೀಡಿರುವುದು ಸರಿಯಷ್ಟೇ. ಆಯ್ಕೆ ಪಟ್ಟಿತಯಾರಿಸುವಾಗ; 1. ಸ್ಪರ್ಧಾತ್ಮಕ ಪರೀಕ್ಷೆ: 0.35 2. ಟಿಇಟಿ ಪರೀಕ್ಷೆ: 0.15 3. ಪದವಿ ಅಂಕ: 0.25 4. ಬಿಇಡಿ ಅಂಕ: 0.25 ಹೀಗೆ ಅಂಕಗಳನ್ನು ಪರಿಗಣಿಸಿ ಅಭ್ಯರ್ಥಿಯ ಪ್ರತಿ ಪರೀಕ್ಷೆಗಳಲ್ಲಿ ಪಡೆದ ಅಂಕಗಳಿಗೂ ಮಹತ್ವ ನೀಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೇಮಕಾತಿಗೆ ಅರ್ಹತೆ ಪಡೆಯಲು ಕನಿಷ್ಠ ಅಂಕ ನಿಗದಿಗೊಳಿಸಿರುವುದು ನೇಮಕಾತಿಗೆ ಅಡ್ಡಿಯುಂಟು ಮಾಡಿದೆ.

ಕಾಂಗ್ರೆಸ್‌ನಲ್ಲೂ ಸಿಎಂ ಕುರ್ಚಿಗೆ ಗುದ್ದಾಟ: ನಾನೂ ಮುಖ್ಯಮಂತ್ರಿ ಆಕಾಂಕ್ಷಿ ಎಂದ ಎಸ್‌.ಆರ್‌.ಪಾಟೀಲ್‌

3. ಪತ್ರಿಕೆ -1: 150 ಅಂಕ, ಪತ್ರಿಕೆ -2: 150 ಅಂಕ, ಪತ್ರಿಕೆ-3: 100 ಅಂಕ ಹೀಗೆ ಮೂರು ಪತ್ರಿಕೆಗಳಿಗೆ ಪರೀಕ್ಷೆ ನಡೆಸಲಾಗುತ್ತಿದ್ದು, ಪತ್ರಿಕೆ-2 ಹಾಗೂ ಪತ್ರಿಕೆ-3ರಲ್ಲಿ ಕ್ರಮವಾಗಿ ಶೇ. 50 ಮತ್ತು ಶೇ. 60 ಅಂಕಗಳನ್ನು ಪಡೆಯುವುದು ಕಡ್ಡಾಯ ಮಾಡಿದ್ದು, ನೇಮಕಾತಿಗೆ ಅಡ್ಡಿಯಾಗುತ್ತಿದ್ದು, ತೆಗೆಯಬೇಕಾಗಿದೆ.

ತಿದ್ದುಪಡಿಗೆ ಮುಂದಾದ ಸರ್ಕಾರ:

ಸರ್ಕಾರ ಈಗ ಕೊನೆಗೂ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಲು ಮುಂದಾಗಿದೆ. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು, ಶಾಸಕರು ಆಗ್ರಹದ ಮೇರೆಗೆ ಈ ನಿರ್ಧಾರಕ್ಕೆ ಬಂದಿದೆ. ಈ ತಿದ್ದುಪಡಿಯಾದ ಮೇಲೆಯೇ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿ ಎನ್ನುವ ಆಗ್ರಹವೂ ಇದೆ.

ನಮಗೆ 371 ಜೆ ದೊರೆಯುತ್ತಿದ್ದಂತೆ ಈ ತಿದ್ದುಪಡಿಗಳನ್ನು ಮಾಡಿದ್ದರಿಂದ ಪದವಿ ಪಡೆದ ಅಭ್ಯರ್ಥಿಗಳು ಇದ್ದರೂ ನೇಮಕಾತಿಯಾಗುತ್ತಿಲ್ಲ. ಕೆಎಎಸ್‌, ಐಎಎಸ್‌ಗೆ ಇಲ್ಲದ ಷರತ್ತುಗಳನ್ನು ಮಾಡಲಾಗಿದೆ. ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಕನಿಷ್ಠ ಅಂಕಗಳು ಎಲ್ಲಿಯೂ ಇಲ್ಲ. ಇದ್ಯಾವ ನ್ಯಾಯ? ಎಂದು ಹೈ-ಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ರಜಾಕ್‌ ಉಸ್ತಾದ್‌ ತಿಳಿಸಿದ್ದಾರೆ. 

ಮಾಧ್ಯಮಿಕ ಶಾಲಾ ಶಿಕ್ಷಕರ ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡದಿದ್ದರೆ ನಾನು ವಿಧಾನಸೌಧ ಮುಂದೆಯೇ ಹೋರಾಟ ಮಾಡುತ್ತೇನೆ. ನಮಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲೇಬೇಕು ಎಂದು ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪುರ ಹೇಳಿದ್ದಾರೆ. 

ಪದವಿ ಪಡೆದು, ಸಿಇಟಿ ಪಾಸಾಗಿ, ಟಿಇಟಿ ಪಾಸಾದರೂ ನಮಗೆ ನೇಮಕಾತಿ ಭಾಗ್ಯ ಇಲ್ಲ. ಇಲ್ಲದ ಷರತ್ತು ವಿಧಿಸಿದ್ದರಿಂದ ಕಳೆದೈದು ವರ್ಷಗಳಿಂದ ನಮಗೆ ನೇಮಕಾತಿಯಾಗಲು ಆಗುತ್ತಲೇ ಇಲ್ಲ ಎಂದು ವಿದ್ಯಾರ್ಥಿ ಚಂದ್ರು ತಿಳಿಸಿದ್ದಾರೆ.
 

click me!