ಗಂಗಾವತಿ: ವದಂತಿ ನಂಬಿ ಕೋವಿಡ್‌ ಲಸಿಕೆ ಹಾಕಿಕೊಳ್ಳಲು ಜನರ ಹಿಂದೇಟು

By Kannadaprabha NewsFirst Published Sep 10, 2021, 1:31 PM IST
Highlights

*  ಗಂಗಾವತಿಯ ಹಲವು ವಾರ್ಡ್‌ಗಳಲ್ಲಿ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ನಿರಾಕರಣೆ
*  ಗ್ರಾಮೀಣ ಭಾಗದಲ್ಲೂ ನಿರಾಕರಣೆ
*  ನಾವು ಸತ್ತರೆ ಯಾರು ಜವಾಬ್ದಾರರು? 

ರಾಮಮೂರ್ತಿ ನವಲಿ

ಗಂಗಾವತಿ(ಸೆ.10): ಕೋವಿಡ್‌ ಲಸಿಕೆ ಹಾಕಿಕೊಂಡರೆ ಸಾಯುತ್ತಾರೆ. ಹಾಗಾಗಿ ಯಾರೂ ಲಸಿಕೆ ಹಾಕಿಕೊಳ್ಳಬಾರದು ಎಂಬ ಗಾಳಿಸುದ್ದಿಗೆ ಇಲ್ಲಿನ 27ನೇ ವಾರ್ಡಿನಲ್ಲಿರುವ ಜುರುಬುರು ಜನಾಂಗದವರು ಭಯಭೀತರಾಗಿದ್ದು, ಲಸಿಕೆ ಹಾಕಿಕೊಳ್ಳಲು ಹಿಂದೇಟು ಹಾಕುತ್ತಿರುವ ಘಟನೆ ನಡೆದಿದೆ.

ದೇಶದಲ್ಲಿ ಮಹಾಮಾರಿಯಾಗಿ ಹಬ್ಬಿದ್ದ ಕೊರೋನಾ ಸೋಂಕು ತಡೆಗೆ ಜನರಿಗೆ ಹಾಕಿಸಿಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದ್ದರಿಂದ ಬಹಳಷ್ಟುಜನರು ಲಸಿಕೆ ಹಾಕಿಸಿಕೊಂಡಿದ್ದು ಕೊರೋನಾ ತಡೆಗೆ ಸಹಕರಿಸಿದ್ದಾರೆ. ಆದರೆ, ಕೊವೀಡ್‌ ಎರಡು ಅಲೆಗಳು ಮುಗಿದು 3ನೇ ಅಲೆ ಬರುವ ಸಾಧ್ಯತೆ ಇದ್ದರೂ ಸಹ ಗಂಗಾವತಿ ನಗರದ ಕೆಲ ವಾರ್ಡ್‌ಗಳ ಜನರು ಮೊದಲನೇ ಡೋಸ್‌ ಲಸಿಕೆ ಹಾಕಿಸಿಕೊಳ್ಳಲು ಸಹ ಹಿಂದೇಟು ಹಾಕಿದ್ದಾರೆ.

ಕೆಲ ವಾರ್ಡ್‌ಗಳಲ್ಲಿ ಲಸಿಕೆ ಹಾಕಲು ನಗರಸಭೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯಕರ್ತೆಯರು ಮುಂದಾಗಿದ್ದರೂ ಸಹ ಅಲ್ಲಿಯ ಜನರು ನಿರಾಕರಿಸುತ್ತಿದ್ದಾರೆ. ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಲಸಿಕೆ ಹಾಕಿಸಿಕೊಳ್ಳುವಂತೆ ಮನೆ ಮನೆಗಳಿಗೆ ತೆರಳಿದರೂ ಸಹ ಜನ ಮಾತ್ರ ತಮ್ಮ ಮನೆಯಿಂದ ಪರಾರಿಯಾಗುತ್ತಿದ್ದಾರೆ.

ಭಾರತದಲ್ಲಿ 70 ಕೋಟಿ ಲಸಿಕೆ ವಿತರಣೆಯ ದಾಖಲೆ

ನಾವು ಸತ್ತರೆ ಯಾರು ಜವಾಬ್ದಾರರು?:

ನಗರದ 27ನೇ ವಾರ್ಡ್‌ನಲ್ಲಿ ಜುರುಬುರು ಜನಾಂಗದವರಿದ್ದು, ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ. ಲಸಿಕೆ ಹಾಕಿಸಿಕೊಂಡರೆ ಸಾಯುತ್ತಾರೆ ಎಂಬ ಗಾಳಿ ಸುದ್ದಿಗೆ ಭಯಗೊಂಡ ಜನರು ನಿರಾಕರಿಸುತ್ತಿದ್ದಾರೆ. ಲಸಿಕೆ ಹಾಕಲು ಹೋಗಿರುವ ಸಿಬ್ಬಂದಿಗಳಿಗೆ ಡಿಮ್ಯಾಂಡ್‌ ಇಟ್ಟಿದ್ದು, ತಾವು ಸತ್ತರೆ ಇನ್ಸೂರೆಸ್ಸ್‌ ಬಾಂಡ್‌ ನೀಡಿ ಅಥವಾ ಯಾರು ಜವಾಬ್ದಾರರು ಎಂದು ಲಿಖಿತವಾಗಿ ಬರೆದು ಕೊಡಿ ಎಂಬ ಡಿಮ್ಯಾಂಡ್‌ ಹಾಕುತ್ತಿದ್ದಾರೆ. ಇದಕ್ಕೆ ಬೇಸತ್ತ ಸಿಬ್ಬಂದಿಗಳು ಕೊನೆಗೂ ಮನವರಿಕೆ ಮಾಡಿ ನಗರಸಭೆಯ ಪೌರಾಯುಕ್ತರು, ಪೊಲೀಸ್‌ ಅಧಿಕಾರಿಗಳ ನೇತ್ರತ್ವದಲ್ಲಿ ಲಸಿಕೆ ಅಭಿಯಾನ ನಡೆಸಿ ಲಸಿಕೆ ಹಾಕುತ್ತಿದ್ದಾರೆ. ಅದರಂತೆ 30ನೇ ವಾರ್ಡ್‌, 32, 33ನೇ ವಾರ್ಡ್‌ಗಳಲ್ಲಿ ಲಸಿಕೆ ಅಭಿಯಾನ ನಡೆಸಿದ್ದು, ಪೊಲೀಸ್‌ ಅಧಿಕಾರಿಗಳ ನೇತ್ರತ್ವದಲ್ಲಿ ಲಸಿಕೆ ಹಾಕುವ ಕಾರ್ಯ ಆರಂಭವಾಗಿದೆ.

ಗ್ರಾಮೀಣ ಭಾಗದಲ್ಲೂ ನಿರಾಕರಣೆ:

ತಾಲೂಕಿನ ಹೊಸಕೇರಾ ಪಿಎಚ್‌ಸಿ ವ್ಯಾಪ್ತಿಯ ಡಗ್ಗಿ ಕ್ಯಾಂಪ್‌ ನಲ್ಲಿ ಇರುವ ದೇವಪ್ಪ ಎಂಬುವವರ ಕುಟುಂಬದವರ ಮನೆಗೆ ಅರೋಗ್ಯ ಇಲಾಖೆ ಸಿಬ್ಬಂದಿವರ್ಗದವರು ಹಲವು ಬಾರಿ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವರಿಕೆ ಮಾಡಿದರೂ ಸಹ ಅವರು ನಿರಾಕರಿಸಿದ್ದರು. ಕೊನೆಗೆ ಲಸಿಕೆ ಪಡೆಯುವ ವರೆಗೂ ನಿಮ್ಮ ಮನೆಯಿಂದ ಹೋಗುವುದಿಲ್ಲ ಎಂದು ಆರೋಗ್ಯ ಸಿಬ್ಬಂದಿ ವರ್ಗದವರು ಮನೆಯ ಮುಂದೆ ಕುಳಿತು ಮನವರಿಕೆ ಮಾಡಿದ ನಂತರ ಲಸಿಕೆ ಹಾಕಿಸಿಕೊಂಡರು.

ನಗರದ ವಿವಿಧ ವಾರ್ಡ್‌ಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವ ಅಭಿಯಾನ ನಡೆಸಲಾಯಿತು. ಆದರೆ, ಕೆಲವರಿಗೆ ಲಸಿಕೆ ಹಾಕಿಸಿಕೊಂಡರೆ ಸಾವು ಬರುತ್ತದೆ ಎಂಬ ಭಯದಿಂದ ನಿರಾಕರಿಸಿದ್ದರು. ಕೊನೆಗೆ ಅವರನ್ನು ಮನವಲಿಸಿ ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿಸಲಾಯಿತು ಎಂದು ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ ತಿಳಿಸಿದ್ದಾರೆ. 
 

click me!