ಆಯುರ್ವೇದ ಅತಿ ಬಳಕೆ; ಜನರೇ ಎಚ್ಚರ..!

By Kannadaprabha NewsFirst Published Sep 10, 2020, 2:11 PM IST
Highlights

ದೇಶದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮಿತಿ ಮೀರಿದೆ. ಇದೇ ವೇಳೆ ಜನರು ಆಯುರ್ವೇದ ಔಷಧಗಳತ್ತ ಹೆಚ್ಚು ಮುಖ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೊಂಚ ಎಚ್ಚರ

ವರದಿ : ಗೋಪಾಲ್‌ ಯಡಗೆರೆ

ಶಿವಮೊಗ್ಗ(ಸೆ.10):  ಅತಿಯಾದರೆ ಅಮೃತವೂ ವಿಷ! ಈ ಮಾತು ಕೊರೋನಾ ಕಾಲದಲ್ಲಿ ಬಳಕೆಯಾಗುತ್ತಿರುವ ಆಯುರ್ವೇದ ಔಷಧಕ್ಕೂ ತಾಳೆಯಾಗುತ್ತಿದೆ. ನಿಜ, ಇಂತಹ ಸಂಗತಿ ಇತ್ತೀಚೆಗೆ ಬೆಳಕಿಗೆ ಬರತೊಡಗಿದ್ದು, ಆಯುರ್ವೇದ ವೈದ್ಯರು ಈ ಕುರಿತು ಎಚ್ಚರಿಕೆ ನೀಡತೊಡಗಿದ್ದಾರೆ.

ಆಲೋಪತಿಯಲ್ಲಿ ಔಷಧವೇ ಇಲ್ಲದ ಕೊರೋನಾ ವೈರಾಣವನ್ನು ಆಯುರ್ವೇದಿಂದ ಮಾತ್ರ ಮಣಿಸಲು ಸಾಧ್ಯ ಎಂದು ಭಾವಿಸಿದ್ದರು. ಇದಕ್ಕೆ ಪೂರಕವಾದ ಅನೇಕ ಘಟನೆಗಳು ನಡೆದಿದ್ದು, ಜನ ಆಯುರ್ವೇದವನ್ನು ನಂಬಿದ್ದರು. ಕೊರೋನಾ ಎಂಬ ಮಹಾಮಾರಿ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಜನ ವ್ಯಾಪಕವಾಗಿ ಆಯುರ್ವೇದದ ಮೊರೆ ಹೋಗಿದ್ದರು. ಇದರಿಂದ ಸಾಕಷ್ಟುಲಾಭ ಕೂಡ ಕಂಡಿದ್ದರು.

ಸ್ವತಃ ಪ್ರಧಾನಿಯವರೇ ಆಯುರ್ವೇದ ಔಷಧ ಬಳಕೆಯಿಂದ ರೋಗ ನಿರೋಧಕ ಶಕ್ತಿ ಸಿಗುತ್ತದೆ ಎಂದು ಟಿಫ್ಸ್‌ ನೀಡಿದ್ದು, ಡಾ. ಕಜೆಯವರ ಔಷಧ, ಶಿವಮೊಗ್ಗದಲ್ಲಿ ಶ್ರೀ ರಾಮಕೃಷ್ಣಾಶ್ರಮ ಸ್ವಾಮೀಜಿಯವರು ತಾವು ಆಯುರ್ವೇದದಿಂದಲೇ ಗುಣಮುಖರಾಗಿದ್ದು ಎಂದು ಹೇಳಿದ್ದು ಎಲ್ಲವೂ ಆಯುರ್ವೇದದತ್ತ ಜನರನ್ನು ಸೆಳೆಯಲು ಕಾರಣವಾಯಿತು.

ಸುಖ ನಿದ್ರೆಗೆ ಬಿಸಿ ಹಾಲು: ಈ ಸಿಂಪಲ್ ಮಿಲ್ಕ್ ರೆಸಿಪಿ ಟ್ರೈ ಮಾಡಿ

ಜನ ಆಯುರ್ವೇದದತ್ತ ಮುಖ ಮಾಡಿದರು. ಆಯುರ್ವೇದ ಔಷಧಾಲಯಗಳನ್ನು ತಡಕಾಡಿದರು. ನಾರು ಬೇರುಗಳ ಹೆಸರುಗಳನ್ನು ಬಾಯಿಪಾಠ ಮಾಡತೊಡಗಿದರು. ಆದರೆ ಆಯುರ್ವೇದ ಔಷಧದ ಬಳಕೆ ಹೇಗೆ ಎಂಬ ಮಾಹಿತಿ ಮಾತ್ರ ಜನರಿಗೆ ಸರಿಯಾಗಿ ಸಿಗಲಿಲ್ಲ. ಆಯುರ್ವೇದ ವೈದ್ಯರು ಆಯುರ್ವೇದ ಔಷಧದಿಂದ ಕೊರೋನಾ ನಿಯಂತ್ರಿಸಲು ಸಾಧ್ಯ ಮತ್ತು ಇದು ಬಾರದಂತೆ ತಡೆಯಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬಳಕೆ ಮಾಡಬಹುದು ಎಂದೆಲ್ಲ ಹೇಳಿದರು. ವ್ಯಾಟ್ಸಪ್‌ಗಳಲ್ಲಿ ಪುಂಖಾನುಪುಂಖವಾಗಿ ಲೇಖನಗಳು ಬರತೊಡಗಿದವು. ಯಾರು ಬರೆದಿದ್ದು ಎಂಬುದರ ಯಾವುದೇ ಮಾಹಿತಿ ಇಲ್ಲದೆ ಪ್ರತಿ ದಿನ ಹತ್ತಾರು ಇಂತಹ ಹೊಸ ಹೊಸ ಔಷಧಗಳ ಪಟ್ಟಿಹರಡತೊಡಗಿತು.

ಶಿವಮೊಗ್ಗ ನಗರದಲ್ಲಿ ಸಚಿವ ಕೆ. ಎಸ್‌. ಈಶ್ವರಪ್ಪನವರು ಆಯುರ್ವೇದ ಕಿಟ್‌ ವಿತರಿಸಿದರು. ಇದರಲ್ಲಿ ಇರುವುದನ್ನು ಮಾತ್ರ ಸೇವಿಸಿ ಎಂದು ಕಿವಿ ಮಾತು ಹೇಳಿದ್ದರು. ಇದನ್ನು ತಜ್ಞರು ಸೇರಿದಂತೆ ಎಲ್ಲರೂ ಸ್ವಾಗತಿಸಿದ್ದರು. ಇದರಿಂದ ಸಾಕಷ್ಟುಉಪಯೋಗವಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಬಹುತೇಕ ಜನ ಇದರ ಜೊತೆಗೆ ವಾಟ್ಸಾಪ್‌ ಮಾಹಿತಿ, ಸ್ನೇಹಿತರ ಸಲಹೆ, ಪರಿಚಿತರು ತಯಾರಿಸಿದ ಆಯುರ್ವೇದ ಔಷಧ ಎಲ್ಲವನ್ನೂ ಕಷಾಯ ಮಾಡಿ ಸೇವಿಸಿತೊಡಗಿದರು. ಅಮೃತಬಳ್ಳಿ, ಅರಿಸಿನ, ನೆಲನೆಲ್ಲಿ, ಕಾಳುಮೆಣಸು ಸೇರಿದಂತೆ ದಿನದಿಂದ ದಿನಕ್ಕೆ ಬಳಕೆಯ ಪ್ರಮಾಣ ಏರುತ್ತಾ ಸಾಗಿತು.

ಇದು ಸಾಕಷ್ಟುಮಂದಿಯಲ್ಲಿ ಅಡ್ಡ ಪರಿಣಾಮ ಬೀರತೊಡಗಿತು. ಅತಿಯಾದ ಉಷ್ಣ ದೇಹವನ್ನು ಆವರಿಸಿತು. ಮಲಬದ್ದತೆ ಸೇರಿದಂತೆ ಅನೇಕ ಸಮಸ್ಯೆಗಳು ಕಾಡತೊಡಗಿದವು. ಬಿಪಿ ಇದ್ದವರಿಗೆ ತಲೆನೋವು ಕಾಣಿಸ ತೊಡಗಿತು.

ಬಾವಲಿ ಮಾತ್ರವಲ್ಲ ಆನೆಯನ್ನೂ ತಿಂತಾರೆ..! ಜಗತ್ತಿನಾದ್ಯಂತ ಜನ ಸೇವಿಸೋ ಪ್ರಾಣಿಗಳಿವು..!

ಆಯುರ್ವೇದ ತಜ್ಞರ ಪ್ರಕಾರ ಯಾವುದೇ ಔಷಧಿಯಾದರೂ ಅದರ ಬಳಕೆ ಪ್ರಮಾಣ ಬಹಳ ಮುಖ್ಯ. ಕಂಡಿದ್ದನ್ನೆಲ್ಲಾ ಸೇವಿಸುತ್ತಾ ಹೋದರೆ ಅದು ಔಷಧವಾಗಿ ಪರಿಣಾಮ ಬೀರುವುದಿಲ್ಲ. ಯಾವ್ಯಾವ ವಸ್ತು ಯಾವ ಪ್ರಮಾಣದಲ್ಲಿ ಸೇರಿಸಬೇಕು ಮತ್ತು ದಿನಕ್ಕೆ ಎಷ್ಟುಪ್ರಮಾಣ ಸೇವಿಸಬೇಕು ಎಂಬುದಿರುತ್ತದೆ. ಆಯುರ್ವೇದದಿಂದ ಅಡ್ಡ ಪರಿಣಾಮ ಇಲ್ಲ ಎಂದು ತಮ್ಮಷ್ಟಕ್ಕೆ ತಾವೇ ಅಂದುಕೊಂಡು ವಿಪರೀತ ಪ್ರಮಾಣದಲ್ಲಿ ಸೇವಿಸಿದರೆ ಅದು ಬೇರೆಯದೇ ದುಷ್ಪರಿಣಾಮ ಬೀರಬಹುದು. ಯಾವುದಕ್ಕೂ ಕುಟುಂಬ ವೈದ್ಯರ ಸಲಹೆ ಬಹಳ ಮುಖ್ಯ ಎನ್ನುತ್ತಾರೆ.

ಒಟ್ಟಾರೆ ಜನ ಮತ್ತೆ ವೈದ್ಯರ ಬಳಿ ಬರತೊಡಗಿದ್ದಾರೆ. ಏನು ತೆಗೆದುಕೊಳ್ಳುತ್ತಿದ್ದೀರಿ ಎಂದು ವೈದ್ಯರ ಪ್ರಶ್ನೆಗೆ ಇವರು ನೀಡುತ್ತಿರುವ ಉತ್ತರ ಕಂಡು ಅನೇಕ ಸಂದರ್ಭದಲ್ಲಿ ವೈದ್ಯರು ಹೌಹಾರಿದ್ದಾರೆ. ಹೀಗೆ ಅತಿಯಾಗಿ ಯಾವುದನ್ನೂ ಸೇವಿಸಬೇಡಿ. ತಜ್ಞ ವೈದ್ಯರಿಂದ ಸೂಕ್ತ ಸಲಹೆಯೊಂದಿಗೆ ಸೇವಿಸಿ. ಆಯುರ್ವೇದ ಖಂಡಿತ ಒಳ್ಳೆಯದು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದರಿಂದ ಸಾಧ್ಯ. ಕೊರೋನಾ ಸೋಂಕನ್ನು ದೂರ ಇಡಬಹುದು. ಆದರೆ ಎಲ್ಲದಕ್ಕೂ ಒಂದು ಮಿತಿಯಿರುತ್ತದೆ. ಮಿತಿ ಮೀರಿದರೆ ಅಮೃತವೂ ವಿಷಯವಾಗುತ್ತದೆ ಎನ್ನುತ್ತಾರೆ.

ಬಿಪಿ ಮತ್ತು ಅಸಿಡಿಟಿ ಇದ್ದವರಿಗೆ ಅತಿಯಾದ ಬಳಕೆ ಸ್ವಲ್ಪ ಮಟ್ಟಿಗೆ ಸಮಸ್ಯೆ ತಂದೊಡ್ಡಬಹುದು. ಯಾವುದೇ ಔಷಧವಿರಲಿ, ನಿಮ್ಮ ಕುಟುಂಬ ವೈದ್ಯರ ಸಲಹೆ ಮೇರೆಗೆ ಸೇವಿಸುವುದು ಉತ್ತಮ.

-ಡಾ. ಶ್ರೀನಿವಾಸ ರೆಡ್ಡಿ, ಆಯುರ್ವೇದ ತಜ್ಞರು, ಶಿವಮೊಗ್ಗ

click me!