'ನನಗೆ ಈ ಕೊರಗೊಂದು ಕಾಡುತ್ತಿದೆ' : ಎಂಟಿಬಿ ನಾಗರಾಜ್

By Kannadaprabha NewsFirst Published Sep 10, 2020, 1:47 PM IST
Highlights

ನನಗೆ ವಂಚನೆ ಮಾಡಿ ಬದುಕಬೇಕಾದ ಯಾವುದೇ ಅನಿವಾರ್ಯತೆ ಇಲ್ಲ. ಜನ ಸೇವೆ ಮಾಡುವ ಸಲುವಾಗಿ ನಾನು ರಾಜಕೀಯಕ್ಕೆ ಬಂದವನು ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ. 

 ಹೊಸಕೋಟೆ (ಸೆ.10): ನಾನು ಜನಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದು, ರಾಜಕೀಯದಲ್ಲಿ ವಂಚನೆ ಮಾಡಿ ಬದುಕುವ ಅನಿವಾರ್ಯ ನನಗೆ ಬಂದಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್‌ ತಿಳಿಸಿದರು.

ತಾಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದಲ್ಲಿ ನಡೆದ ಅಭಿನಂದನಾ ಸಮಾರಂಭ ಹಾಗೂ ಬಡವರಿಗೆ ಉಚಿತ ಆಯುಷ್ಮಾನ್‌ ಭಾರತ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಿ ಮಾತನಾಡಿದರು.

ಕೊರಗೂ ಕಾಡುತ್ತಿದೆ:  ತಾಲೂಕಿನಲ್ಲಿ ಅಧಿಕಾರ ಮಾಡಿದ ಬಚ್ಚೇಗೌಡ ಕುಟುಂಬ ಬಡವರ ಮೇಲೆ ದೌರ್ಜನ್ಯ ದಬ್ಬಾಳಿಕೆ ಮಾಡಿ ರಾಜಕೀಯ ಮಾಡಿದ್ದರು. ನಾನು ಹೊಸಕೋಟೆಗೆ ಬಂದ ಮೇಲೆ ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿದೆ. ಆದರೆ ಕಳೆದ ಉಪ ಚುನಾವಣೆಯಲ್ಲಿ ಕೆಲವರ ಕುತಂತ್ರದಿಂದ ಸೋಲನ್ನು ಅನುಭವಿಸುವಂತಾಯಿತು. ಆದರೆ ನಾನು ಸೋತೆ ಎಂಬು ಚಿಂತೆ ಎಂದಿಗೂ ನನ್ನನ್ನು ಕಾಡುತ್ತಿಲ್ಲ. ಬದಲಾಗಿ ಹೊಸಕೋಟೆ ಅಭಿವೃದ್ಧಿ ಕುಂಠಿತವಾಯಿತೆಂಬ ಕೊರಗು ನನ್ನನ್ನು ಕಾಡುತ್ತಿದೆ. ತಾಲೂಕಿಗೆ ಶಾಶ್ವತ ನೀರಾವರಿ ಯೋಜನೆ, ಮೆಟ್ರೋ ಯೋಜನೆ ತರುವ ಯೋಜನೆ ಇತ್ತು. ಮುಖ್ಯಮಂತ್ರಿ  ಬಿ.ಎಸ್‌. ಯಡಿಯೂರಪ್ಪನವರು ಕೂಡ ನನ್ನ ಮನವಿಗೆ ಸ್ಪಂದಿಸಿದ್ದರು. ಆದರೆ ಹೊಸಕೋಟೆ ಜನ ಸ್ವಾಭಿಮಾನಕ್ಕೆ ಬೆಲೆ ಕೊಟ್ಟಪರಿಣಾಮವಾಗಿ ಹೊಸಕೋಟೆ ಅಭಿವೃದ್ಧಿಯಲ್ಲಿ ಹಿಂದುಳಿಯುವಂತಾಗಿದೆ ಎಂದರು.

ನಾನು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಇದೇ ಕಾರಣ : ಎಂಟಿಬಿ ನಾಗರಾಜ್ ...

ಬಿಜೆಪಿ ಅಭ್ಯರ್ಥಿಗಳ ಗೆಲ್ಲಿಸಿ:  ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಸತೀಶ್‌ ಮಾತನಾಡಿ, ದೇಶದಲ್ಲಿ ಪ್ರಧಾನಿ ಮೋದಿ ಹಾಗೂ ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪನವರ ಅಭಿವೃದ್ಧಿ ಮೆಚ್ಚಿ ವಿವಿಧ ಪಕ್ಷಗಳ ಮುಖಂಡರಿಗೆ ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಪಂ ಚುನಾವಣೆ ಸಮೀಪಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿ, ಗ್ರಾಪಂಗಳಲ್ಲಿ ಬಿಜೆಪಿ ತೆಕ್ಕೆಗೆ ಬರುವ ವಿಶ್ವಾಸ ಇದೆ ಎಂದರು.

ಹೊಸಕೋಟೆಯಲ್ಲಿ 40 ವರ್ಷ ಅದಿಕಾರ ಮಾಡಿದ ಬಚ್ಚೇಗೌಡರರಿಗೆ ಈ ಗ್ರಾಮದಲ್ಲಿ ಅಧಿಕ ಮತ ನೀಡಿ ಗೆಲ್ಲಿಸಿದ್ದಾರೆ. ಅವರು ಮಾಡಿರುವ ಅಭಿವೃದ್ಧಿ ಆದರೂ ಏನು ಎಂದು ಗ್ರಾಮಸ್ಥರಿಗೆ ತಿಳಿದಿದೆ, ನಾನು ನನ್ನ ಅಧಿಕಾರಾವಧಿಯಲ್ಲಿ ಈ ಗ್ರಾಮಕ್ಕೆ ಕಾಂಕ್ರೀಟ್‌ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ದೇವಾಲಯ ಅಭಿವೃದ್ಧಿಗೆ ಸುಮಾರು 2 ಕೋಟಿಗೂ ಅಧಿಕ ಹಣ ನೀಡಿದ್ದೇನೆ. ಆದರೂ ಉಪ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದ್ದಾರೆ.

ತಾಪಂ ಅಧ್ಯಕ್ಷ ವಿ.ಸಿ.ಜಯದೇವಯ್ಯ, ಬಿಜೆಪಿ ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಸುಜಾತ ನಾಗರಾಜ್‌, ಸಂಚಾಲಕಿ ಸುಮತಿ ರೆಡ್ಡಿ, ಮುಖಂಡರಾದ ಶಿವರಾಜ್‌, ಡಿ.ಸಿ.ರಾಜಣ್ಣ, ಸುಬ್ರಮಣ್ಯಾಚಾರಿ, ನಾಗಭೂಷಣ್‌, ಮಂಜುನಾಥ್‌, ತಿಮ್ಮರಾಯಪ್ಪ, ಮೂರ್ತಿ, ವಿನೋದ್‌ರಾಜ್‌, ಸಿಸಿಕೆ ಮುನಿರಾಜ್‌, ರಮೇಶ್‌, ಪ್ರಸಾದ್‌ ಇದ್ದರು.

ನಾನು ಪ್ರಾಮಾಣಿಕವಾಗಿ ಅಭಿವೃದ್ಧಿ ಮಾಡಿದ್ದು, ಸೋಲು-ಗೆಲುವು ಎಲ್ಲವನ್ನೂ ದೇವರಿಗೆ ಬಿಟ್ಟಿದ್ದೇನೆ. ಬಚ್ಚೇಗೌಡರ ಕುಟುಂಬ ನನ್ನ ಮೇಲೆ ಸುಳ್ಳು ಆರೋಪ ಮಾಡಿ ಜನರ ವಿಶ್ವಾಸ ಗಳಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಮಗ ಈಗ ಸ್ವಾಭಿಮಾನದ ಹೆಸರಿನಲ್ಲಿ ಗೆದ್ದು ಕಾಂಗ್ರೆಸ್‌ ಪಕ್ಷದ ಕದ ತಟ್ಟಿದ್ದಾರೆ. ಪ್ರತಿ ಬಾರಿ ಚುನಾವಣೆಗೂ ಒಂದೊಂದು ಪಕ್ಷದಿಂದ ಸ್ಪರ್ಧೆ ಮಾಡಿ ಮತದಾರರನ್ನು ಯಾಮಾರಿಸುವುದೇ ಬಚ್ಚೇಗೌಡರ ಕುಟುಂಬದ ದೊಡ್ಡ ಸಾಧನೆ.

ಎಂಟಿಬಿ ನಾಗರಾಜ್‌, ವಿಧಾನ ಪರಿಷತ್‌ ಸದಸ್ಯ

click me!