ಉಡುಪಿ: ದಲಿತ ಬಾಲಕನಿಗೆ ಬಹಿಷ್ಕಾರ: ಪೇಜಾವರ ಶ್ರೀ ಕಳವಳ

By Suvarna NewsFirst Published Sep 21, 2022, 6:29 PM IST
Highlights

Udupi News: ಪಲ್ಲಕ್ಕಿಯ ದಂಡ ಮುಟ್ಟಿದ ದಲಿತ ಬಾಲಕನಿಗೆ  ಬಹಿಷ್ಕಾರ ಹಾಕಿರುವ ಘಟನೆಯ ಬಗ್ಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ 

ಉಡುಪಿ (ಸೆ. 21): ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಪಲ್ಲಕ್ಕಿಯ ದಂಡ ಮುಟ್ಟಿದ ದಲಿತ ಬಾಲಕನಿಗೆ  ಬಹಿಷ್ಕಾರ ಹಾಕಿರುವ ಘಟನೆಯ ಬಗ್ಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ (Vishwa Prasanna Theertha Swamiji)ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಘಟನೆಯನ್ನು ಖಂಡಿಸಿದ್ದಾರೆ. ಉತ್ಸವ ಇಡೀ ಊರಿಗೆ ಸಂಬಂಧಿಸಿದ ಕಾರ್ಯಕ್ರಮವಾಗಿದೆ. ಬಹಿಷ್ಕಾರದ ಮೂಲಕ ಶಿಕ್ಷೆ ನೀಡುವುದು, ದಂಡ ವಿಧಿಸುವುದನ್ನು ಯಾವ ಧರ್ಮ ಗ್ರಂಥವೂ (Religious Book) ಒಪ್ಪುವುದಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ. ಮಾಲೂರಿನಲ್ಲಿ ದಲಿತ (Dalit) ಬಾಲಕನಿಗೆ ಬಹಿಷ್ಕಾರ ವಿಚಾರ ನಮಗೆ ಬಹಳ ಖೇದವಾಗಿದೆ ಎಂದು ಪೇಜಾವರು ಶ್ರೀ ವಿಶ್ವಪ್ರಸನ್ನ ತೀರ್ಥರು ಬೇಸರ ವ್ಯಕ್ತಪಡಿಸಿದರು.

ಅವರು ಬುಧವಾರ ಉಡುಪಿಯ ಪೇಜಾವರ ಮಠದಲ್ಲಿ ಮಾಲೂರಿನಲ್ಲಿ ಉತ್ಸವದ ಸಂದರ್ಭ ಪಲ್ಲಕ್ಕಿ ಮುಟ್ಟಿದ್ದಕ್ಕೆ ದಲಿತ ಬಾಲಕನಿಗೆ ಸವರ್ಣೀಯರು ಹೇರಿದ ಬಹಿಷ್ಕಾರದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.  ಹಿಂದೂ ಸಂಘಟನೆಗಳು ಪಿಡುಗಿನ ವಿರುದ್ಧ ಜಾಗೃತಿ ಮೂಡಿಸುತ್ತಿದೆ. ಸರಕಾರ (Government) ಕೂಡ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು. ತಪ್ಪು ಮಾಡಿದವರನ್ನು ಶಿಕ್ಷಿಸಿದರೆ ಸಾಲದು, ಜಾಗೃತಗೊಳಿಸುವ ಕಾರ್ಯಕ್ರಮ ನಿರಂತರ  ನಡೆಯಬೇಕು. ಸಮಾಜ ಮತ್ತು ಧರ್ಮ ಒಪ್ಪದ ಚಟುವಟಿಕೆಗಳಿಗೆ ಯಾರು ಇಳಿಯಬಾರದು ಎಂದು ನುಡಿದರು. 

ಉಗ್ರರ ವಿರುದ್ಧ ನಿರಂತರ ಕೂಂಬಿಂಗ್ ಮಾಡಬೇಕು:  ಶಿವಮೊಗ್ಗಕ್ಕೆ (Shivamogga) ಉಗ್ರರ ಪ್ರವೇಶವಾಗಿದೆ ಎಂದು ಕೇಳಿ ನಮಗೆ ತೀವ್ರ ಖೇದವಾಗಿದೆ. ಮಂಗಳೂರು ಉಡುಪಿ ಭಾಗದಲ್ಲೂ ಇಂತಹ ಚಟುವಟಿಕೆ ನಡೆದಿದೆ. ಸ್ಯಾಟಲೈಟ್ ಫೋನುಗಳ (Satellite Phone) ಮೂಲಕ ಸಂಭಾಷಣೆ ನಡೆಯುವುದು ನಮ್ಮ ಗಮನಕ್ಕೆ ಬಂದಿತ್ತು. ನಿಖರವಾದ ಮಾಹಿತಿಗಳ ಜೊತೆಗೆ ಇದನ್ನು ಪರಿಶೀಲನೆ ಮಾಡಬೇಕು, ಪ್ರಕರಣದಲ್ಲಿ ಹತ್ತು ಹಲವು ಜನ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಸಂಶಯ ವ್ಯಕ್ತಪಡಿಸಿದರು

ದೇವರ ಕೋಲು ಮುಟ್ಟಿದ್ದಕ್ಕೆ ದಲಿತ ಬಾಲಕಗೆ ಹಲ್ಲೆ, ದಂಡ

ಉಗ್ರರ ವಿರುದ್ಧ ಕೂಂಬಿಂಗ್ ಮಾದರಿಯಲ್ಲಿ ಪರಿಶೀಲನೆ ಆಗಬೇಕು, ಸಮಾಜದ ಶಾಂತಿ ಕದಡುವುದನ್ನು ತಪ್ಪಿಸಬೇಕು. ಉಗ್ರರಿಂದ ಸಮಾಜದಲ್ಲಿ ಯಾರಿಗೂ ನೆಮ್ಮದಿ ಇಲ್ಲ, ಸಮಾಜದ ಶಾಂತಿ ಕದಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮವಾಗಲಿ ಎಂದು ಹೇಳಿದರು.

ಯಾವುದೇ ಕೋಮಿನ ಬಣ್ಣ ನೀಡದೆ ಇದನ್ನು ನಿಗ್ರಹ ಮಾಡಬೇಕು. ಭಾರತ ದೇಶದ ಒಳಗೆ ಇರುವವರು ಭಾರತೀಯರು, ದೇಶದ ಯಾವುದೇ ಭಾಗದಲ್ಲಿ ಉಗ್ರರ ಕರಿ ನೆರಳು ಹಾಯಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿದ ಕ್ರಮ ಕೈಗೊಳ್ಳಬೇಕು ಎಂದರು.

click me!