ಕರುಳು ಹಿಂಡುವ ಬಡತನ : 1.50 ಲಕ್ಷಕ್ಕೆ 3 ತಿಂಗಳ ಹಸುಗೂಸು ಮಾರಿದ್ರು

Kannadaprabha News   | Asianet News
Published : Aug 30, 2020, 11:18 AM IST
ಕರುಳು ಹಿಂಡುವ ಬಡತನ : 1.50 ಲಕ್ಷಕ್ಕೆ 3 ತಿಂಗಳ ಹಸುಗೂಸು ಮಾರಿದ್ರು

ಸಾರಾಂಶ

ಪೋಷಕರ ಕಿತ್ತು ತಿನ್ನುವ ಬಡತನ ತಮ್ಮ ಕಂದನನ್ನೇ ಮಾರುವಂತೆ ಮಾಡಿದೆ. ಮೂರು ತಿಂಗಳ ಹಸುಗೂಸನ್ನು 1.50 ಲಕ್ಷಕ್ಕೆ ಮಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದೆ. 

 ಚಿಕ್ಕಬಳ್ಳಾಪುರ (ಆ.30): ಬಡತನದ ಹಿನ್ನೆಲೆಯಲ್ಲಿ 3 ತಿಂಗಳ ಹೆಣ್ಣು ಹಸುಗೂಸನ್ನು ಪೋಷಕರು ಗೃಹ ರಕ್ಷಕರೊಬ್ಬ ಮಧ್ಯಸ್ಥಿಕೆಯಲ್ಲಿ ಒಂದೂವರೆ ಲಕ್ಷಕ್ಕೆ ಮಾರಾಟ ಮಾಡಿರುವ ಅಮಾನವೀಯ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ತಿನಕಲ್‌ ಗ್ರಾಮದಲ್ಲಿ ನಡೆದಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹೆಣ್ಣು ಮಗು ಮಾರಾಟವಾಗಿದ್ದ ಗ್ರಾಮಕ್ಕೆ ಶನಿವಾರ ದೌಡಾಯಿಸಿ ಮಗುವನ್ನು ರಕ್ಷಿಸಿ ಜಿಲ್ಲಾಸ್ಪತ್ರೆಯ ಆರೈಕೆ ಕೇಂದ್ರಕ್ಕೆ ದಾಖಲಿಸಿದ್ದಾರೆ.

ಏನಿದು ಘಟನೆ?

ಚಿಂತಾಮಣಿಯ ತಿನಕಲ್‌ ಗ್ರಾಮದ ಮಹಾಲಕ್ಷ್ಮೇ ಹಾಗೂ ಮಂಜುನಾಥ ದಂಪತಿಗೆ 1 ಗಂಡು ಜೊತೆಗೆ 3 ತಿಂಗಳ ಹೆಣ್ಣು ಮಗು ಇದೆ. ಆದರೆ ಬಡತನದಿಂದಾಗಿ ಸಂಸಾರ ನಡೆಸಲು ಮತ್ತು ಮಕ್ಕಳನ್ನು ಸಾಕಲು ಸಾಧ್ಯವಾಗುತ್ತಿಲ್ಲ ಎಂದು ಹೆಣ್ಣು ಮಗುವನ್ನು ಮಾರಾಟ ಮಾಡಲು ತಿರ್ಮಾನಿಸಿ ಶಿಡ್ಲಘಟ್ಟತಾಲೂಕಿನ ಮಾಳಮಾಚನಹಳ್ಳಿಯ ಮಕ್ಕಳಿಲ್ಲದ ಮಂಜುನಾಥ ಹಾಗೂ ಮುನಿರತ್ನಮ್ಮ ದಂಪತಿಗೆ ಮಾರಾಟ ಮಾಡಿದ್ದಾರೆ.

ಹೆಣ್ಣು ಮಗು ಮಾರಾಟವಾಗಿರುವ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ತಂಡ ಶಿಡ್ಲಘಟ್ಟದ ಮಾಳಮಾಚನಹಳ್ಳಿ ಮುನಿರತ್ನಮ್ಮ ಹಾಗೂ ಮಂಜುನಾಥ ಮನೆಗೆ ತೆರಳಿ ಅವರ ವಶದಲ್ಲಿದ್ದ ಹೆಣ್ಣು ಮಗುವನ್ನು ವಶಕ್ಕೆ ಪಡೆದು ಜಿಲ್ಲಾಸ್ಪತ್ರೆಯಲ್ಲಿ ಇಟ್ಟಿದ್ದಾರೆ. ಅಲ್ಲದೆ ಮಗು ಮಾರಾಟ ಹಾಗೂ ಖರೀದಿಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿಗಳು ಶಿಡ್ಲಘಟ್ಟಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಜನಿಸಿದ ಕೆಲವೇ ಗಂಟೆಗಳಲ್ಲಿ ಕೊರೊನಾದಿಂದ ನವಜಾತ ಶಿಶು ಸಾವು.

ಮಾರಾಟ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಗುವಿನ ತಂದೆ ಮಂಜುನಾಥ ನಾಪತ್ತೆಯಾಗಿದ್ದಾರೆ. ತಾಯಿ ಮಾರಾಟ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಮಗುವನ್ನು ಖರೀದಿ ಮಾಡಿರುವ ಶಿಡ್ಲಘಟ್ಟಮೂಲದ Ü ದಂಪತಿಗಳು ನಮಗೆ ಈ ಬಗ್ಗೆ ಏನು ಕಾನೂನು ಗೊತ್ತಿಲ್ಲ. ನಮ್ಮಿಂದ ತಪ್ಪಾಗಿದ್ದೆ ಕ್ಷಮಿಸಿ ಬಿಡಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ.

ಮಗುವಿನ ತಂದೆ ವಿಚಾರದಲ್ಲಿ ದಂಪತಿ ಮಧ್ಯೆ ಜಗಳ: ಮಗುವನ್ನು ಬಾವಿಗೆಸೆದ ತಾಯಿ..

3 ತಿಂಗಳ ಹೆಣ್ಣು ಮಗುವನ್ನು ಚಿಂತಾಮಣಿ ತಾಲೂಕಿನ ತಿನಕಲ್‌ ಗ್ರಾಮದ ಪೋಷಕರು ಒಂದೂವರೆ ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಇದಕ್ಕೆ ಮಧ್ಯವರ್ತಿಯಾಗಿ ಗೃಹ ರಕ್ಷಕರೊಬ್ಬರು ಕೆಲಸ ಮಾಡಿದ್ದಾರೆ. ತಮಗೆ ಮಕ್ಕಳು ಇಲ್ಲವೆಂದು ಶಿಡ್ಲಘಟ್ಟದ ಮಾಳಮಾಚನಹಳ್ಳಿ ಗ್ರಾಮದ ಮುನಿರತ್ನಮ್ಮ ಹಾಗೂ ಮಂಜುನಾಥ ಎಂಬುವರು ಖರೀದಿ ಮಾಡಿದ್ದು ಸದ್ಯ ಮಗುವನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದು ಪ್ರಕರಣ ವಿಚಾರಣಾ ಹಂತದಲ್ಲಿದೆ.

-ನಾಗವೇಣಿ, ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಶಿಡ್ಲಘಟ್ಟ,

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!