ಮೀಸಲಾತಿ ಕೊಡಿಸುವುದು ಪೀಠದ ಜವಾಬ್ದಾರಿ; ವಚನಾನಂದ ಸ್ವಾಮೀಜಿ

By Kannadaprabha NewsFirst Published Sep 6, 2022, 1:25 PM IST
Highlights

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಿಸುವುದು ಸಂಘ ಹಾಗೂ ಪೀಠದ ಜವಾಬ್ದಾರಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ನಿಮ್ಮ ಜವಾಬ್ದಾರಿ ಎಂದು ಹರಿಹರದ ವೀರಶೈವ ಲಿಂಗಾಯಿತ ಪಂಚಮಸಾಲಿ ಗುರು ಪೀಠದ ವಚನಾನಂದ ಸ್ವಾಮೀಜಿ ಹೇಳಿದರು

ಚಿತ್ರದುರ್ಗ (ಸೆ.6) : ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಿಸುವುದು ಸಂಘ ಹಾಗೂ ಪೀಠದ ಜವಾಬ್ದಾರಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ನಿಮ್ಮ ಜವಾಬ್ದಾರಿ ಎಂದು ಹರಿಹರದ ವೀರಶೈವ ಲಿಂಗಾಯಿತ ಪಂಚಮಸಾಲಿ ಗುರು ಪೀಠದ ವಚನಾನಂದ ಸ್ವಾಮೀಜಿ ಹೇಳಿದರು. ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮುದಾಯದಿಂದ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಮೀಸಲಾತಿಯನ್ನು ಯಾವುದೆ ಸರ್ಕಾರ ಏಕಾಏಕೀ ನೀಡಲು ಸಾಧ್ಯವಿಲ್ಲ. ಕಾನೂನಾತ್ಮಕವಾಗಿ ಜಾತಿ ಸಮೀಕ್ಷೆ ಆಗಬೇಕು ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯದ 15 ಜಿಲ್ಲೆಗಳಲ್ಲಿ ಜಾತಿ ಸಮೀಕ್ಷೆ ಮಾಡಲಾಗಿದೆ. ಕಳೆದ 2 ವರ್ಷದಿಂದ ಹೋರಾಟ ಮಾಡಿದ್ದರ ಫಲವಾಗಿ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ವರದಿ ನೀಡುವಂತೆ ಪತ್ರ ಬಂದಿದೆ. ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಪಂಚಮಸಾಲಿ ಸಮಾಜ ಸೇರ್ಪಡೆಯಾಗಿ ಮೀಸಲಾತಿ ಸಿಕ್ಕರೆ ಹೆಚ್ಚು ಸಂಖ್ಯೆಯ ಸಮಾಜಬಾಂಧವರು ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.

ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡದಿದ್ದರೆ ಸರ್ಕಾರಕ್ಕೆ ತಕ್ಕ ಪಾಠ: ಕೂಡಲ ಶ್ರೀ

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯಾಧ್ಯಕ್ಷ ಬಿ.ಪಿ ಪಾಟೀಲ್‌ ಮಾತನಾಡಿ, ಕೋವಿಡ್‌ ಕಾರಣಗಳಿಂದ ಕಳೆದ 2 ವರ್ಷ ಯಾವುದೇ ಚಟುವಟಿಕೆ ನಡೆದಿಲ್ಲ ಕಳೆದ 2 ತಿಂಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಂಘಟಿತರಾಗಿ ಹೋರಾಟ ಮಾಡುವ ಕಾಲ ಸನ್ನಿಹಿತವಾಗಿದೆ 2ಎ ಮೀಸಲಾತಿಯ ಜೊತೆಗೆ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವಂತೆ ಒತ್ತಾಯ ಮಾಡಲಾಗುತ್ತಿದೆ ಎಂದರು.

ನಿಕಟ ಪೂರ್ವ ರಾಜ್ಯಾಧ್ಯಕ್ಷ ಬಾವಿ ಬೆಟ್ಟಪ್ಪ ಮಾತನಾಡಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ 2004ರಿಂದ ಮಾಡಿಕೊಂಡು ಬರುತ್ತಿದ್ದೇವೆ, ಸಮಾಜದ ಮಕ್ಕಳಿಗೆ ಸನ್ಮಾನ ಮಾಡುವಾಗ ಸಮಾಜದ ಹೆಗ್ಗುರುತಾಗಿ ಲಿಂಗದಕಾಯಿ ಕೊಡುತ್ತಿದ್ದೇವೆ. ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ಮಕ್ಕಳು ಸಮಾಜಕ್ಕೆ ಕೀರ್ತಿ ತರುವ ಮಕ್ಕಳಾಗ ಬೇಕೇ ಹೊರತು ಸಮಾಜಕ್ಕೆ ಕಳಂಕ ತರುವ ಮಕ್ಕಳಾಗಬೇಡಿ ಎಂದರು.

ಪಂಚಮಸಾಲಿಗಳಿಗೆ ಮೀಸಲಾತಿ ತಪ್ಪಿಸಿದ್ದು ಯಡಿಯೂರಪ್ಪ: ಕಾಶಪ್ಪನವರ

ಜಿಲ್ಲಾ ಅಧ್ಯಕ್ಷ ಜೆ. ಶಿವಪ್ರಕಾಶ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನುಶಂಕರ್‌, ಜಿಲ್ಲೆಯ ಎಲ್ಲಾ ತಾಲೂಕುಗಳ ಗೌರವಾಧ್ಯಕ್ಷರು, ಅಧ್ಯಕ್ಷರು, ಪ್ರದಾನ ಕಾರ್ಯದರ್ಶೀಗಳು, ಮಹಿಳಾ ಸಂಘದ ಪದಾಧಿಕಾರಿಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ಎಂಎಲ್‌ಸಿ ಕೆ ಎಸ್‌ ನವೀನ್‌, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ ಸುರೇಶ್‌, ನಿವೃತ್ತ ಸೈನಿಕ ಆನಿವಾಳದ ಉಮಾಪತಿ, ಜಿಲ್ಲೆಯ ಎಲ್ಲಾ ತಾಲೂಕುಗಳ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸುಮಾರು 150 ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

click me!