ಕಳಪೆ ಕಾಮಗಾರಿ: ಮಣ್ಣು ಪರೀಕ್ಷೆ ಮಾಡದೆ ಎರೆ ಮಣ್ಣಿಗೆ ಕಾಂಕ್ರಿಟ್!

By Kannadaprabha NewsFirst Published Sep 6, 2022, 1:10 PM IST
Highlights

ಚಿತ್ರದುರ್ಗದ ಬನಶಂಕರಿ ಬಡಾವಣೆಯಲ್ಲಿ ಮಣ್ಣು ಪರೀಕ್ಷೆ ಮಾಡಿ ವರದಿ ಪಡೆಯದೇ ಕಾಂಕ್ರಿಟ್ ಬಳಸಿ ರಸ್ತೆ ನಿರ್ಮಾನ ಮಾಡಿರುವುದರಿಂದ ರಸ್ತೆಗಳು ಎರಡು ವರ್ಷಕ್ಕೆ ಬಿರುಕು ಬಿಟ್ಟಿವೆ. 

ಚಿತ್ರದುರ್ಗ (ಸೆ.6) : ಅನುದಾನ ಇದೆ ಅನ್ನುವ ಕಾರಣಕ್ಕೆ ಬೇಕಾಬಿಟ್ಟಿಯಾಗಿ ಎಸ್ಟಿಮೇಟ್‌ ಮಾಡಿ ಸಿಸಿ ರಸ್ತೆ ಮಾಡುವ ನೆಪದಲ್ಲಿ ಕೋಟ್ಯಂತರ ರುಪಾಯಿ ಸರ್ಕಾರಿ ದುಡ್ಡು ಮೂರಾ ಬಟ್ಟೆಮಾಡಿದ ಖ್ಯಾತಿ ಪಟ್ಟಿಯಲ್ಲಿ ಪ್ರಾಯಶಃ ಚಿತ್ರದುರ್ಗ ಅಗ್ರಸ್ಥಾನದಲ್ಲಿದೆ ಅನ್ನಿಸುತ್ತೆ. ಉದ್ಯೋಗ ಖಾತ್ರಿಯಡಿ ಹಳ್ಳಿಗಳಲ್ಲಿ ಕೈಗೊಂಡ ಕಾಮಗಾರಿಗಳು ಅದೆಷ್ಟೋ ಚೆನ್ನಾಗಿವೆ. ನಾಲ್ಕಾರು ವರ್ಷಗಳಾದರೂ ಗಟ್ಟಿಮುಟ್ಟಾಗಿವೆ. ಅದರೆ ನಗರ ಪ್ರದೇಶದ್ದು ತೀರಾ ಅಧ್ವಾನವಾಗಿದೆ. ಎರಡು ವರ್ಷಕ್ಕೆ ಬಿರುಕು, ಗುಂಡಿ ಬೀಳುವುದು ಸಾಮಾನ್ಯವಾಗಿದೆ.

ಕಾಮಗಾರಿ ಮುಗಿದ ನಾಲ್ಕೇ ತಿಂಗಳಲ್ಲಿ ಬಿರುಕುಬಿಟ್ಟ ಶಾಲಾ ಕಟ್ಟಡ!

ಚಿತ್ರದುರ್ಗ(Chitradurga) ಬನಶಂಕರಿ ಬಡಾವಣೆ(Banashankari badavane)ಯಲ್ಲಿ ಬಿರುಕು ಬಿಟ್ಟರಸ್ತೆಗಳ ಬಗ್ಗೆ ಸರಣಿ ವರದಿ ಗಮನಿಸಿದ ಬೆಂಗಳೂರಿನ ಇಸ್ರೋ ವಿಜ್ಞಾನಿ(ISRO scientist)ಯೋರ್ವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನ ತುಂಬಾ ಬದಲಾಗಿದ್ದು ಎರೆ ಜಮೀನಿನಲ್ಲಿ ಹಾಗೆಲ್ಲ ಸಿಸಿ ರಸ್ತೆ ಮಾಡಲು ಬರುವಂತಿಲ್ಲ. ಹಾಗೊಂದು ವೇಳೆ ರಸ್ತೆ ಮಾಡಲೇಬೇಕೆಂದರೆ ತುಂಬಾ ದುಬಾರಿಯಾಗುತ್ತದೆ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ನೆಲಕ್ಕೆ ಬೆಂಜರಿ ಸುರಿದು, ಅದರ ಮೇಲೆ ಕಾಂಕ್ರಿಟ್‌ ಹಾಕಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.

ಬನಶಂಕರಿ ಬಡಾವಣೆ ಪೂರ್ಣ ಪ್ರಮಾಣದಲ್ಲಿ ಎರೆ ಭೂಮಿ ಹೊಂದಿದೆ. ಕನಿಷ್ಠ ಐದು ಅಡಿಯಿಂದ 10 ಅಡಿ ತನಕ ಇಲ್ಲಿ ಕಪ್ಪು ಮಟ್ಟು ದೊರೆಯುತ್ತದೆ. ಹಾಗಾಗಿ ಈ ಪ್ರದೇಶದಲ್ಲಿ ಮನೆ ಕಟ್ಟುವವರು ಕನಿಷ್ಠ ಏಳು ಅಡಿವರೆಗೆ ಪಾಯ ತೋಡುತ್ತಾರೆ. ಇಲ್ಲದಿದ್ದರೆ ಹತ್ತಾರು ವರ್ಷಕ್ಕೆ ಗೋಡೆ ಬಿರುಕು ಬೀಳುತ್ತದೆ ಎಂಬ ಆತಂಕ ಅವರದ್ದು. ರಸ್ತೆ ನಿರ್ಮಿಸುವಾಗಲೂ ಕೂಡಾ ಇಂತಹದ್ದೇ ಕಾಳಜಿ ತೋರಬೇಕಾಗಿದೆ. ಈ ಪ್ರದೇಶದಲ್ಲಿರುವ ಮಣ್ಣಿನ ಗುಣ ಎಂತಹದ್ದು ಎಂದು ತಿಳಿದುಕೊಂಡೇ ಮುಂದುವರಿಯಬೇಕು. ಅದಕ್ಕೆ ತಕ್ಕಂತೆ ತಂತ್ರಜ್ಞಾನ ಹುಡುಕಿ ಅಳವಡಿಸಬೇಕು.

ಕಳಪೆ ಕಾಮಗಾರಿಯಾದರೆ ಸಂಬಂಧಿಸಿದವರೆ ಹೊಣೆ: ಸತೀಶ್‌ ಜಾರಕಿಹೊಳಿ

ಬನಶಂಕರಿ ಬಡಾವಣೆಯಲ್ಲಿ ಮಣ್ಣು ಪರೀಕ್ಷೆ ಮಾಡಿ ವರದಿ ಪಡೆಯದೇ ಇರುವ ಪರಿಣಾಮ ರಸ್ತೆಗಳು ಎರಡು ವರ್ಷಕ್ಕೆ ಬಿರುಕು ಬಿಟ್ಟಿವೆ. ಇನ್ನೊಂದೆರೆಡು ವರ್ಷ ಹೋದಲ್ಲಿ ರಸ್ತೆ ಕಾಣಿಸದೇ ಬರೀ ಬಿರುಕುಗಳೇ ಪ್ರಧಾನವಾಗಿರುತ್ತವೆ. ಲಭ್ಯವಾದ ಎಲ್ಲ ಅನುದಾನ ಬಳಕೆ ಮಾಡಿಕೊಂಡು ಬನಶಂಕರಿ ಬಡಾವಣೆಯಲ್ಲಿ ಸಿಸಿ ರಸ್ತೆಗಳ ಮಾಡಲಾಗಿದೆ. ರಸ್ತೆ ನಿರ್ಮಾಣದ ಉದ್ದೇಶವೇ ಸಫಲವಾಗದಿದ್ದರೆ ಅದು ದುರ್ಬಳಕೆ ಎಂದೇ ಪರಿಗಣಿತವಾಗುತ್ತದೆ.

ರುಡ್‌ಸೆಟ್‌ ಸಂಸ್ಥೆ ಸಮೀಪ ಇದೆ

ಬನಶಂಕರಿ ಬಡಾವಣೆಯಲ್ಲಿ ನಿರುದ್ಯೋಗಿಗಳಿಗೆ ತರಬೇತಿ ನೀಡಲಾಗುತ್ತದೆ. ಬಳ್ಳಾರಿ ಒಳಗೊಂಡಂತೆ ಮಧ್ಯ ಕರ್ನಾಟಕದ ಮೂರ್ಲಾಲ್ಕು ಜಿಲ್ಲೆಗಳಿಂದ ಯುವಕ, ಯುವತಿಯರು ಆಗಮಿಸುತ್ತಾರೆ. ತರಬೇತಿಗೆ ಮಕ್ಕಳನ್ನು ಬಿಡಲು ಪೋಷಕರೂ ಬರುತ್ತಾರೆ. ಬಿರುಕು ಬಿಟ್ಟದುರ್ಗದ ರಸ್ತೆಗಳ ನೋಡಿ ತಮ್ಮೂರುಗಳಿಗೆ ಹೋಗಿ ಗುಣಗಾನ ಮಾಡುತ್ತಿದ್ದಾರೆ. ಕೇವಲ ಐತಿಹಾಸಿಕ ಮಹತ್ವಕ್ಕೆ ಹೆಸರು ಮಾಡಿದ್ದ ಚಿತ್ರದುರ್ಗ ಇದೀಗ ಇಲ್ಲಿನ ಕಳಪೆ ಗುಣಮಟ್ಟದ ರಸ್ತೆಗಳಿಗೂ ಖ್ಯಾತಿ.

ಕಪ್ಪು ಮಣ್ಣಿನಲ್ಲಿ ಜಿಪ್ಸಮ್‌(ಜಿಗುಟು) ಜಾಸ್ತಿ ಇರುತ್ತದೆ. ಇಂತಹ ಕಡೆ ರಸ್ತೆ ಮಾಡುವ ಟೆಕ್ನಾಲಜಿ ಬೇರೆಯದೇ ಇರುತ್ತದೆ. ಸಾಮಾನ್ಯ ರಸ್ತೆ ಮಾಡುವುದಕ್ಕಿಂತ ತುಸು ದುಬಾರಿಯಾದ ತಂತ್ರಜ್ಞಾನ ಇದಾಗಿದೆ. ದುಬಾರಿಯಾಗುತ್ತೆ ಅನ್ನುವ ಕಾರಣಕ್ಕೆ ಸಾಯಿಲ್‌ ಟೆಸ್ಟ್‌ ಮಾಡಿಸದೇ ರಸ್ತೆ ಮಾಡುತ್ತಿದ್ದಾರೆ. ಅದು ಸರಿಯಾದ ಕ್ರಮವಲ್ಲ. ಅನುದಾನ ಅಪವ್ಯಯ ಮಾಡಿದಂತಾಗುತ್ತದೆ.

ಹೆಸರು ಹೇಳಲಿಚ್ಚಿಸಿದ ಇಸ್ರೋ ವಿಜ್ಞಾನಿ

click me!