ಗದಗ: ಅಡ್ನೂರ-ರಾಜೂರಿನ ಪಂಚಾಕ್ಷರ ಶಿವಾಚಾರ್ಯರು ಲಿಂಗೈಕ್ಯ

By Kannadaprabha NewsFirst Published Oct 17, 2020, 12:45 PM IST
Highlights

ಲಿಂ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಕ್ರಿಯಾಮೂರ್ತಿಗಳಾಗಿದ್ದ ಶ್ರೀಗಳು| ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ರಾಜೂರು ಹಾಗೂ ಗದಗ ನಗರದ ಹಾತಲಗೇರಿ ರಸ್ತೆಯಲ್ಲಿರುವ ಪಂ. ಪುಟ್ಟರಾಜಗಳ ಕ್ರಿಯಾಮೂರ್ತಿಗಳ ಬೃಹನ್ಮಠದ ಪಟ್ಟಾಧ್ಯಕ್ಷರಾಗಿದ್ದ ಶ್ರೀಗಳು| 

ಗದಗ(ಅ.17): ಅಡ್ನೂರು, ರಾಜೂರು ಬ್ರಹ್ಮನ್ಮಠದ ಪಟ್ಟಾಧ್ಯಕ್ಷ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು (70) ಶುಕ್ರವಾರ ಲಿಂಗೈಕ್ಯರಾದರು. ಲಿಂ. ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಶುಕ್ರವಾರ ಚಿಕಿತ್ಸೆ ಫಲಿಸದ ಕಾರಣ ಅವರು ಶಿವಾಧೀನರಾದರು. ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಅಡ್ನೂರು, ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ರಾಜೂರು ಹಾಗೂ ಗದಗ ನಗರದ ಹಾತಲಗೇರಿ ರಸ್ತೆಯಲ್ಲಿರುವ ಪಂ. ಪುಟ್ಟರಾಜಗಳ ಕ್ರಿಯಾಮೂರ್ತಿಗಳ ಬೃಹನ್ಮಠದ ಪಟ್ಟಾಧ್ಯಕ್ಷರಾಗಿದ್ದರು.

ಲಿಂ. ಪಂಚಾಕ್ಷರ ಶಿವಾಚಾರ್ಯ ಶ್ರೀಗಳು, ಲಿಂ. ಪಂಡಿತ ಪುಟ್ಟರಾಜ ಕವಿ ಗವಾಯಿಗಳಿಗೆ ಕ್ರಿಯಾಮೂರ್ತಿಗಳಾಗಿದ್ದರು. ಪಂ. ಪುಟ್ಟರಾಜ ಕವಿ ಗವಾಯಿಗಳು ಪ್ರತಿನಿತ್ಯ ಶಿವನ ಪೂಜೆ ನೆರವೇರಿಸಿ, ಪಂಚಾಕ್ಷರ ಸ್ವಾಮೀಜಿಗಳಿಂದ ಪಾದೋದಕ ಸ್ವೀಕರಿಸಿದ ಬಳಿಕವೇ ಪ್ರಸಾದ ಸೇವಿಸುತ್ತಿದ್ದರು. ಶ್ರೀಗಳ ಅಗಲಿಕೆಯಿಂದ ಗದಗ, ಧಾರವಾಡ ಹಾಗೂ ಕೊಪ್ಪಳದ ಮಠಗಳ ಅಪಾರ ಭಕ್ತ ಸಮುದಾಯವು ಶೋಕ ಸಾಗರದಲ್ಲಿ ಮುಳುಗಿದೆ. ಲಿಂ. ಪಂಚಾಕ್ಷರ ಶಿವಾಚಾರ್ಯರ ಕ್ರಿಯಾ ಸಮಾಧಿಯು ಶುಕ್ರವಾರ ರಾತ್ರಿ ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ರಾಜೂರು ಗ್ರಾಮದಲ್ಲಿ ವೀರಶೈವ ಲಿಂಗಾಯತ ಧರ್ಮದ ವಿಧಿವಿಧಾನದಂತೆ ಜರುಗಿತು.

ಶಾಂತಿ ಸಂದೇಶ:

ಗದಗ ಹಾಗೂ ರಾಜೂರಿನ ಅಡ್ನೂರು ಹಿರೇಮಠದ ಅಧ್ಯಕ್ಷ ಷ.ಬ್ರ. ಪಂಚಾಕ್ಷರ ಶಿವಾಚಾರ್ಯರು ಲಿಂಗೈಕ್ಯರಾದ ವಿಷಯ ತಿಳಿದು ಮನಸ್ಸಿಗೆ ಬಹಳಷ್ಟು ನೋವಾಗಿದೆ. ಆತ್ಮಕ್ಕೆ ಚಿರಶಾಂತಿ ಅನುಗ್ರಹಿಸಲಿ. ಅವರ ಅಗಲುವಿಕೆಯಿಂದ ದುಃಖತಪ್ತರಾದ ಅವರ ಅಪಾರವಾದ ಭಕ್ತ ಸಮೂಹಕ್ಕೆ ಅವರ ಅಗಲುವಿಕೆಯನ್ನು ಸಹಿಸಿಕೊಳ್ಳುವ ಆತ್ಮಸ್ಥೈರ್ಯವನ್ನು ಕಾಶಿ ವಿಶ್ವನಾಥ, ಮಾತಾ ಅನ್ನಪೂರ್ಣೆ ಹಾಗೂ ಜಗದ್ಗುರು ವಿಶ್ವರಾದ್ಯರು ಅನುಗ್ರಹಿಸಲಿ ಎಂದು ಕಾಶಿ ಜಗದ್ಗುರುಗಳು ಹೇಳಿದ್ದಾರೆ.

ಅಡ್ನೂರು-ರಾಜೂರು ಪಂಚಾಕ್ಷರ ಶಿವಾಚಾರ್ಯರು ಕ್ರಿಯಾಸಮಾಧಿ 

ಅಡ್ನೂರು ಬೃಹನ್ಮಠದ ಪಂಚಾಕ್ಷರ ಶಿವಾಚಾರ್ಯರ ಕ್ರಿಯಾಸಮಾಧಿ ಕುಕನೂರು ತಾಲೂಕಿನ ರಾಜೂರು ಗ್ರಾಮದ ಶರಣಬಸವೇಶ್ವರ ಮಠದ ಆವರಣದಲ್ಲಿ ಶುಕ್ರವಾರ ಸಂಜೆ ಹರ -ಗುರು -ಚರ ಮೂರ್ತಿಗಳ ಸಾನ್ನಿಧ್ಯದಲ್ಲಿ ಜರುಗಿತು.
ಪಂಚಾಕ್ಷರ ಶಿವಾಚಾರ್ಯರು ಹುಲಗೂರ ಗ್ರಾಮದ ತೆವರಿಮಠದ ಶ್ರೀ ಗಂಗಾಧರಯ್ಯ ಹಾಗೂ ಸಾವಿತ್ರಮ್ಮ ದಂಪತಿಯ ಸುಪುತ್ರರಾಗಿ 1946 ರ ಜನೇವರಿ 20 ರಂದು ಜನಿಸಿದರು. 1962 ರಲ್ಲಿ ಅವರ 16 ನೇ ಪ್ರಾಯದಲ್ಲಿ ಹಿರೇಕೆರೂರು ಹಂಸಬಾವಿಯ ಬಳಗಾನೂರು ಮನೆಯಲ್ಲಿ ಸಿಂಧಗಿಯ ಶಾಂತವೀರ ಶಿವಾಚಾರ್ಯರಿಂದ ಅಯ್ಯಾಚಾರ ಜರುಗಿತು. ನಂತರ ಗದುಗಿನ ಗುರು ಪುಟ್ಟರಾಜ ಆಶೀರ್ವಾದ ಸಹ ದೊರೆಯಿತು. 1968 ರಲ್ಲಿ ಅಡ್ನೂರಿಗೆ ಆಗಮಿಸಿದ್ದರು. 23-10-1969 ರಲ್ಲಿ ಡಾ. ಜ.ಚ.ನಿ ಅವರಿಂದ ಅನುಗ್ರಹ ದೀಕ್ಷಾ ಪಡೆದರು.

'ಜನರ ಸಂಕಷ್ಟಕ್ಕೆ ಸ್ಪಂದಿಸದ ಮೋದಿ, ಬಿಜೆಪಿ ಸರ್ಕಾರದ ವೈಫಲ್ಯ ಕಾಂಗ್ರೆಸ್‌ಗೆ ವರ'

ತಮ್ಮ ತಪೋಬಲ ಹಾಗೂ ಭಕ್ತರ ಸಹಕಾರದಿಂದ ಅಡ್ನೂರಿನ ಮಠದ ಜೀರ್ಣೋದ್ಧಾರ ಹಾಗು ಅಲ್ಲಿ ಶಿಕ್ಷಣ ವಿದ್ಯಾಸಂಸ್ಥೆ, ಹಾಸ್ಟಲ್‌ಗಳನ್ನು ತೆರೆದು ಬಡವರಿಗೆ ಆಸರೆ ಆದರು. ಸದಾ ದೇವಿ ಆರಾಧನೆ, ಶಿವಪೂಜೆ ಮಾಡುತ್ತಾ ಗದಗ, ಕೊಪ್ಪಳ, ಧಾರವಾಡ ಸೇರಿದಂತೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮ ನೀಡಿದ ಹಿರಿಮೆ ಅವರದು. ಸದಾ ಪುಟ್ಟರಾಜ ಗವಾಯಿಗಳ ಕ್ರೀಯಾ ಮೂರ್ತಿಗಳಾಗಿ ಸೇವೆ ಸಲ್ಲಿಸಿದ ಮಹೀಮರು ಅವರಾಗಿದ್ದರು.

ರಾಜೂರಿನಲ್ಲಿ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಅವರಿಂದ 25-1-1988 ಮಾಘ ರಥಸಪ್ತಮಿ ದಿನದಂದು ಶರಣಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಜರುಗಿತು. 1982 ರಲ್ಲಿ ರಾಜೂರಿಗೆ ಆಗಮಿಸಿದ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಅವರು ಧಾರ್ಮಿಕ ನೆಲೆಗಟ್ಟಿನ ಮೇಲೆ ಸಾಮಾಜಿಕ ಮೌಲ್ಯ ಕಾಪಾಡುವ ನಿಟ್ಟಿನಲ್ಲಿ ಕಾರ್ಯಪ್ರರುತ್ತರಾದರು. ಅವರ ಕ್ರೀಯಾಶೀಲತೆ ರಾಜೂರು ಗ್ರಾಮದ ಭಕ್ತರ ಲವಲವಿಕೆಗೆ ಕಾರಣವಾಯಿತು. ರಾಜೂರಿನ ಭಕ್ತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿ ಭಕ್ತರ ಸಂಕಲ್ಪದಂತೆ ರಾಜೂರಿನ ಆದಿ ದೇವರಾಗಿ ನೆಲೆನಿಂತು ಭಕ್ತರ ಭಕ್ತಿಗೆ ಶ್ರೀಗಳು ಶಕ್ತಿಯಾಗಿ ರಾಜೂರು ಕ್ಷೇತ್ರವನ್ನು ಅವಿಮುಕ್ತ ಕ್ಷೇತ್ರವನ್ನಾಗಿಸಿದ್ದಾರೆ.
 

click me!