2025ರ ಬಜೆಟ್‌ನಲ್ಲಿ ರಾಮನಗರಕ್ಕೆ 6 ಯೋಜನೆ ಘೋಷಣೆ : 3ಕ್ಕೆ ಚಾಲನೆ, 3ಕ್ಕೆ ಗ್ರಹಣ?

Published : Mar 05, 2026, 07:41 AM IST
Siddaramaiah

ಸಾರಾಂಶ

ಕಳೆದ ಬಜೆಟ್‌ನಲ್ಲಿ ರಾಮನಗರ ಜಿಲ್ಲೆಗೆ ಘೋಷಿಸಲಾದ 6 ಯೋಜನೆಗಳ ಪೈಕಿ, ಹೈಟೆಕ್ ರೇಷ್ಮೆ ಮಾರುಕಟ್ಟೆ, ಮಾಗಡಿ ಆಸ್ಪತ್ರೆ ನವೀಕರಣ ಮತ್ತು ಹಾರೋಹಳ್ಳಿ ಪ್ರಜಾಸೌಧ ನಿರ್ಮಾಣ ಸೇರಿದಂತೆ 3 ಯೋಜನೆಗಳು ಪ್ರಗತಿಯಲ್ಲಿವೆ. 

ರಾಮನಗರ: ಕಳೆದ ಬಾರಿ ಆಯವ್ಯಯದಲ್ಲಿ ಜಿಲ್ಲೆಗೆ 6 ಯೋಜನೆಗಳು ಘೋಷಣೆಯಾಗಿದ್ದವು. ಅವುಗಳಲ್ಲಿ 3 ಯೋಜನೆಗಳ ಅನುಷ್ಠಾನ ಪ್ರಕ್ರಿಯೆ ಚಾಲನೆಯಲ್ಲಿದ್ದರೆ, ಉಳಿದ 3 ಯೋಜನೆಗಳು ಘೋಷಣೆಗಷ್ಟೇ ಸೀಮಿತವಾಗಿವೆ.

ಜಿಲ್ಲೆಯವರೇ ಆದ ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ ಹುದ್ದೆಯಲ್ಲಿರುವ ಕಾರಣ ಘೋಷಣೆಯಾಗಿರುವ ಮೂರು ಯೋಜನೆಗಳು ಹಣಕಾಸಿನ ಕೊರತೆ ಇಲ್ಲದೆ ಅನುಷ್ಠಾನಗೊಳ್ಳುತ್ತಿವೆ. ಇನ್ನುಳಿದ ಮೂರು ಯೋಜನೆಗಳ ಬಗ್ಗೆ ಸುಳಿವೆ ಇಲ್ಲದಂತಾಗಿದೆ.

ಪ್ರಗತಿಯಲ್ಲಿರುವ ಕಾಮಗಾರಿಗಳು

2024-25ನೇ ಸಾಲಿನ ಬಜೆಟ್ ನಲ್ಲಿ ಏಷ್ಯಾದಲ್ಲಿಯೇ ಅತಿ ಹೆಚ್ಚು ರೇಷ್ಮೆಗೂಡು ಮಾರಾಟ ವಹಿವಾಟು ನಡೆಸುವ ರಾಮನಗರ ಮತ್ತು ಶಿಡ್ಲಘಟ್ಟದಲ್ಲಿರುವ ರೇಷ್ಮೆ ಮಾರುಕಟ್ಟೆಗಳನ್ನು ಮೊದಲನೇ ಹಂತದಲ್ಲಿ 150 ಕೋಟಿ ರು. ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗಿತ್ತು.

2ನೇ ಹಂತದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಶೀಘ್ರದಲ್ಲಿಯೇ ಪೂರ್ಣಗೊಳಿಸಲು ಕಳೆದ ಬಜೆಟ್ ನಲ್ಲಿ 250 ಕೋಟಿ ರು. ಘೋಷಿಸಲಾಗಿತ್ತು. ಅದರಂತೆ ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಬಳಿ ನಿರ್ಮಾಣವಾಗುತ್ತಿರುವ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣದ 2ನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ.

ಮಾಗಡಿ ತಾಲೂಕು ಆಸ್ಪತ್ರೆಯ ನವೀಕರಣ ಸೇರಿದಂತೆ 2 ಜಿಲ್ಲಾಸ್ಪತ್ರೆ ಮತ್ತು 7 ತಾಲೂಕು ಆಸ್ಪತ್ರೆಗಳಿಗೆ ಒಟ್ಟು 650 ಕೋಟಿ ರು.ಅನುದಾನ ಹಾಗೂ ಹಾರೋಹಳ್ಳಿ ತಾಲೂಕುನಲ್ಲಿ ಪ್ರಜಾಸೌಧ ನಿರ್ಮಾಣದ ಘೋಷಣೆಯಾಗಿತ್ತು. ಮಾಗಡಿ ಆಸ್ಪತ್ರೆಯ ನವೀಕರಣ ಹಾಗೂ ಹಾರೋಹಳ್ಳಿಯಲ್ಲಿ ಪ್ರಜಾಸೌಧ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಘೋಷಣೆಗಷ್ಟೇ ಸೀಮಿತ 

ಮೇಕೆದಾಟು ಯೋಜನೆ ಪೂರ್ವ ಸಿದ್ದತಾ ಕಾರ್ಯ ಅಂತಿಮಗೊಂಡಿದ್ದು, ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರಗಳ ತೀರುವಳಿ ದೊರೆತ ಕೂಡಲೆ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಬಜೆಟ್ ನಲ್ಲಿ ಹೇಳಿಕೊಂಡಿತ್ತು.

ಈಗಾಗಲೇ ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಆದೇಶದ ಮೇರೆಗೆ ರಾಜ್ಯ ಸರ್ಕಾರ ನೂತನ ಡಿಪಿಆರ್ (ಪರಿಷ್ಕೃತ ಯೋಜನಾ ವರದಿ) ಸಲ್ಲಿಸಿದೆ. ಇದೀಗ ಬಜೆಟ್ ನಲ್ಲಿ ಮೇಕೆದಾಟು ಯೋಜನೆ ಕುರಿತು ರಾಜ್ಯಸರ್ಕಾರದ ನಿಲುವು ಏನಾಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಪವಿತ್ರಾ ಗೌಡಗೆ ಮತ್ತೊಂದು ಶಾಕ್; ಟ್ರಯಲ್‌ ಕೋರ್ಟ್‌ ಆದೇಶ ರದ್ದು ಮಾಡಿದ ಹೈಕೋರ್ಟ್‌

ರಾಮನಗರ ಮತ್ತು ಉಲ್ಲಾಳಕ್ಕೆ ಕರ್ನಾಟಕ ಕುಡಿಯುವ ನೀರು ಸರಬರಾಜು ಮಂಡಳಿಯಿಂದ 705 ಕೋಟ ವೆಚ್ಚದ ಯೋಜನೆಯನ್ನು ಅನುಷ್ಟಾನಗೊಳಿಸಲಾಗುವುದು ಎಂದು ಘೋಷಿಸಲಾಗಿತ್ತು. ಆದರೆ, ರಾಮನಗರದಲ್ಲಿ ಈಗಾಗಲೇ 457 ಕೋಟಿ ವೆಚ್ಚದ ನೆಟ್ಕಲ್ ಕುಡಿಯುವ ನೀರಿನ ಯೋಜನೆ ಕಾಮಗಾರಿ ಲೋಕಾರ್ಪಣೆಗೊಂಡಿದೆ. ಈಗ ನೂತನವಾಗಿ ಘೋಷಣೆಯಾಗಿರುವ ಯೋಜನೆ ಯಾವುದು ಎಂಬುದರ ಬಗ್ಗೆ ಸ್ಪಷ್ಟನೆ ಸಿಗಲೇ ಇಲ್ಲ.

ರಾಮನಗರದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ ಬಜೆಟ್ ನಲ್ಲಿ ಘೋಷಣೆ ಮಾತ್ರ ಸೀಮಿತವಾಗಿದೆ.

ಇದನ್ನೂ ಓದಿ: ವಾಣಿಜ್ಯ ವಿದ್ಯುತ್‌ ದರ ಹೆಚ್ಚಳ- ಯುನಿಟ್‌ಗೆ 10ರಿಂದ 95 ಪೈಸೆ ಏರಿಕೆ

PREV
Read more Articles on
click me!

Recommended Stories

ಲೋಕಾ ದಾಳಿಗೊಳಗಾದ KREIS ಎಂಜಿನಿಯರ್ ಜನಾರ್ಧನ್ ಒಂದು ತಿಂಗಳಿಂದ ನಿಗೂಢ ನಾಪತ್ತೆ
Bengaluru: ಬಾಡಿಗೆ ಮನೆ ಹಣಕ್ಕಾಗಿ ಕಾಲಲ್ಲಿ ತುಳಿದು ಸೋದರಮಾವನ ಕೊಲೆಗೈದ ಯುವಕನ ಬಂಧನ