ನಮ್ಮ ಮಾತಾಪಿತರೇ ನಮಗೆ ಮಾದರಿ: ಶಾಸಕ ಪ್ರದೀಪ್‌ ಈಶ್ವರ್‌

By Kannadaprabha NewsFirst Published Aug 17, 2023, 8:34 PM IST
Highlights

ಬಡತನ, ತಾರತಮ್ಯಗಳ ಅಡೆತಡೆಗಳನ್ನು ಎದುರಿಸಿ ಮೇಲೆದ್ದು ಬರುವಂತಾದರೆ ಅದು ಸಮಾನತೆ. ಪ್ರಜಾಸತ್ತಾತ್ಮಕ ಜಾತ್ಯತೀತ, ಸಮಾಜವಾದಿ ಸಾರ್ವಭೌಮತ್ವವನ್ನು ಪ್ರತಿಪಾದಿಸುವ ಭಾರತ ದೇಶದ ಸಂವಿಧಾನದ ಚೆಲುವಿನ ಪ್ರತೀಕ. 

ಚಿಕ್ಕಬಳ್ಳಾಪುರ (ಆ.17): ಬಡತನ, ತಾರತಮ್ಯಗಳ ಅಡೆತಡೆಗಳನ್ನು ಎದುರಿಸಿ ಮೇಲೆದ್ದು ಬರುವಂತಾದರೆ ಅದು ಸಮಾನತೆ. ಪ್ರಜಾಸತ್ತಾತ್ಮಕ ಜಾತ್ಯತೀತ, ಸಮಾಜವಾದಿ ಸಾರ್ವಭೌಮತ್ವವನ್ನು ಪ್ರತಿಪಾದಿಸುವ ಭಾರತ ದೇಶದ ಸಂವಿಧಾನದ ಚೆಲುವಿನ ಪ್ರತೀಕ. ನಮ್ಮ ಹಿರಿಯರು ನಮಗೆ ಸ್ವಾತಂತ್ರ್ಯವನ್ನು ಗಳಿಸಿ ಕೊಟ್ಟಿದ್ದಾರೆ. ಅವರನ್ನು ಗೌರವಿಸಬೇಕಾದ ಗುರುತರವಾದ ಜವಾಬ್ದಾರಿ ನಮ್ಮದಾಗಿದೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದರು.

ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಮಂಗಳವಾರ ನಡೆದ 76ನೇ ಸ್ವಾತಂತ್ರ್ಯೋತ್ಸವದಲ್ಲಿ ಮಾತನಾಡಿದ ಅವರು, ನಮ್ಮ ಮಾತಾಪಿತರೇ ನಮಗೆ ಮಾದರಿ. ಅವರ ಮಹಾನ್‌ ಕನಸನ್ನು ನನಸಾಗಿಸುವುದೇ ಸ್ವಾತಂತ್ರ್ಯದ ಹಂಬಲ. ಶಾಂತಿಯ ನೆಲೆಬೀಡಾದ ಸತ್ಯಸಾಯಿ ಗ್ರಾಮದಿಂದಲೇ ಸಹೋದರ ಸಹೋದರಿಯರ ಕನಸನ್ನು ಸಾಕಾರಗೊಳಿಸುವ ಕಾರ್ಯಕ್ಕೆ ಮುನ್ನುಡಿ ಬರೆಯೋಣ ಎಂದರು. ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎನ್‌.ನರಸಿಂಹಮೂರ್ತಿ ಮಾತನಾಡಿ, ಭವಿಷ್ಯದ ಭಾರತದಲ್ಲಿ ಯುವಜನತೆ ತೊಡಬೇಕಾದ ಪಣ, ಹಾಗೆಯೇ ದೇಶ ಕಟ್ಟುವ ಕಾರ್ಯದಲ್ಲಿ ಶ್ರೀ ಸತ್ಯಸಾಯಿ ಸಂಸ್ಥೆ ತೊಡಗಿಸಿಕೊಂಡ ರೀತಿಯನ್ನು ವಿವರಿಸಿದರು.

ಕಾಂಗ್ರೆಸ್ ಸೇರುವ ಯಾವುದೇ ಪರಿಸ್ಥಿತಿ ಬಂದಿಲ್ಲ: ಶಾಸಕ ಶಿವರಾಮ್ ಹೆಬ್ಬಾರ್

ಹೋರಾಟಗಾರರನ್ನು ಸ್ಮರಿಸುವ ಉದ್ದೇಶ: ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಸದ್ಗುರು ಮಧುಸೂಧನ ಸಾಯಿ ಆಶೀರ್ವಚನ ನೀಡಿ, ವೀರ ತ್ಯಾಗಿಗಳ ಕೊಡುಗೆಗಳನ್ನು ನೆನಪು ಮಾಡಿಕೊಳ್ಳುವುದು ಸ್ವಾತಂತ್ರ್ಯ ಉತ್ಸವದ ಆಚರಣೆಯ ಮುಖ್ಯ ಉದ್ದೇಶ. ಭಾರತ ಮಾತೆಗೆ ಈ ದೇಶದ ಪ್ರಜೆಗಳೆಲ್ಲರೂ ಮಕ್ಕಳೆ. ಎಲ್ಲಾ ಮಾತಾಪಿತರಿಗೆ ತಮ್ಮ ತಮ್ಮ ಮಕ್ಕಳು ಬೆಳೆದು ಉನ್ನತವಾದುದನ್ನು ಸಾಧಿಸಬೇಕೆಂಬ ಹಂಬಲವಿರುತ್ತದೆ. ಆ ಹಂಬಲವನ್ನು ಸರಿದಾರಿಯಲ್ಲಿ ಸಾಕ್ಷಾತ್ಕಾರಗೊಳಿಸುವುದೇ ಭಾರತ ಮಾತೆಗೆ ಸಲ್ಲಿಸುವ ಗೌರವವಾಗಿದೆ ಎಂದರು.

ಒಂದೂವರೆ ವರ್ಷದಲ್ಲಿ 173 ಪೋಕ್ಸೋ ಪ್ರಕರಣ: ರಾಜ್ಯದಲ್ಲೇ ನಂಬರ್ 1 ಕುಖ್ಯಾತಿ ಪಡೆಯುತ್ತಾ ಚಿಕ್ಕಮಗಳೂರು!

ಕಸ ವಿಲೇವಾರಿ ವಾಹನಕ್ಕೆ ಚಾಲನೆ: ಇದೇ ಸಂದರ್ಭದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಮಾರ್ಗದರ್ಶನದಂತೆ ಶಾಸಕ ಪ್ರದೀಪ್‌ ಈಶ್ವರ್‌ ಅವರು 3 ಟನ್‌ ಸಾಮರ್ಥ್ಯವನ್ನು ಹೊಂದಿರುವ ಸ್ವಯಂ ಚಾಲಿತ ಕಸ ಸಂಗ್ರಹಣಾ ವಾಹನಕ್ಕೆ ಚಾಲನೆ ನೀಡಿ ಲೋಕಾರ್ಪಣೆ ಮಾಡಿದರು. ಮುಂದಿನ ದಿನಗಳಲ್ಲಿ ಈ ವಾಹನವು ಗ್ರಾಮಗಳಲ್ಲಿ ಸಂಚರಿಸಿ ಕಸ ಸಂಗ್ರಹಣೆ ಮಾಡಿ ತ್ಯಾಜ್ಯ ಮುಕ್ತ ಚಿಕ್ಕಬಳ್ಳಾಪುರ ಕಾರ್ಯಕ್ಕೆ ಶ್ರಮಿಸಲಿದೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಸ್ವಾತಂತ್ರೋತ್ಸವದ ಕುರಿತು ಮಾತನಾಡಿದರು. ಆಶ್ರಮದ ಹಿರಿಯರು, ಆಡಳಿತ ವರ್ಗದ ಸದಸ್ಯರು, ದೇಶ ವಿದೇಶಗಳಿಂದ ಬಂದ ವಿಶೇಷ ಅತಿಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

click me!