Managaluru: ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ರಾರಾಜಿಸುತ್ತಿದೆ ಸಾವಯವ ಕೃಷಿ ತೋರಣ!

By Govindaraj SFirst Published Sep 14, 2022, 9:32 AM IST
Highlights

ಕೃಷಿ ಖುಷಿ ಕೊಡುವ ಕಾರ್ಯ ಎಂಬುದಕ್ಕೆ ಇಂಬು ನೀಡುವಂತೆ ಬಂಟ್ವಾಳ- ಪೂಂಜಾಲಕಟ್ಟೆರಾಷ್ಟ್ರೀಯ ಹೆದ್ದಾರಿಯ ಮಣಿಹಳ್ಳ- ವಗ್ಗದ ನಡುವೆ ಬಡಗುಂಡಿ ಎಂಬಲ್ಲಿ ಹೆದ್ದಾರಿ ಪಕ್ಕದಲ್ಲೇ ರಾರಾಜಿಸುತ್ತಿದೆ ಸಾವಯವ ಕೃಷಿ ತೋರಣ..!

ಮೌನೇಶ ವಿಶ್ವಕರ್ಮ

ಬಂಟ್ವಾಳ (ಸೆ.14): ಕೃಷಿ ಖುಷಿ ಕೊಡುವ ಕಾರ್ಯ ಎಂಬುದಕ್ಕೆ ಇಂಬು ನೀಡುವಂತೆ ಬಂಟ್ವಾಳ- ಪೂಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಮಣಿಹಳ್ಳ- ವಗ್ಗದ ನಡುವೆ ಬಡಗುಂಡಿ ಎಂಬಲ್ಲಿ ಹೆದ್ದಾರಿ ಪಕ್ಕದಲ್ಲೇ ರಾರಾಜಿಸುತ್ತಿದೆ ಸಾವಯವ ಕೃಷಿ ತೋರಣ..!

ಹೆದ್ದಾರಿ ಪಕ್ಕದ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದನ್ನು ಕಂಡು ಬೇಸತ್ತು ಹೋಗಿರುವ ಈ ಕಾಲಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲೇ ಸಾಲು ಸಾಲು ಬೆಂಡೆ ಮತ್ತು ಅಲಸಂಡೆ ತರಕಾರಿ ಬೆಳೆಸುವ ಮೂಲಕ ಕೃಷಿಕರೊಬ್ಬರು ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ ಬೆಳೆದ ತರಕಾರಿಯಲ್ಲಿ ಕೆಲವಷ್ಟನ್ನು ಶಾಲೆ, ಅಂಗನವಾಡಿಗಳ ಅಕ್ಷರ ದಾಸೋಹಕ್ಕೆ ಉಚಿತವಾಗಿ ನೀಡುತ್ತಿದ್ದಾರೆ.

Mangaluru: ಸುವರ್ಣ ನ್ಯೂಸ್ ‌ಇಂಪ್ಯಾಕ್ಟ್: ಉಳ್ಳಾಲದ ಮರಳು ದಂಧೆಕೋರರು ಅರೆಸ್ಟ್!

ಇಲ್ಲಿನ ಬಡಗುಂಡಿ ನಿವಾಸಿ ರಾಮಣ್ಣ ಸಪಲ್ಯ ನಾವೂರು ಎಂಬವರೇ ಹೆದ್ದಾರಿ ಪಕ್ಕದಲ್ಲಿ ಸಾವಯವ ಕೃಷಿ ಸಾಹಸದಲ್ಲಿ ತೊಡಗಿದ್ದು, ಕೃಷಿಯಿಂದಲೇ ಖುಷಿ ಕಾಣುತ್ತಿದ್ದಾರೆ. ಕಳೆದ 25 ವರ್ಷಗಳಿಂದ ತಮ್ಮ ಅಡಕೆ ತೋಟ ಮತ್ತು ಗದ್ದೆಯಲ್ಲಿ ತರಕಾರಿ ಬೆಳೆಯುತ್ತಿದ್ದು, ಕಳೆದ ಎರಡು ವರ್ಷಗಳ ಹಿಂದೆ ಇವರ ಜಮೀನಿನ ಒಂದು ಭಾಗ ಹೆದ್ದಾರಿ ವಿಸ್ತರಣೆಯಿಂದ ಕೈ ತಪ್ಪಿತ್ತು. ಪ್ರಸ್ತುತ ಬಂಟ್ವಾಳ- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಈ ರಸ್ತೆ ಬದಿ ಉಳಿದಿರುವ ತಮ್ಮ ಅಡಕೆ ತೋಟಕ್ಕೆ ಇವರು ರಕ್ಷಣೆ ಬೇಲಿ ಅಳವಡಿಸಿದ್ದಾರೆ.



ಕಳೆದ ಎರಡು ವರ್ಷಗಳಿಂದ ಈ ಬೇಲಿಯುದ್ದಕ್ಕೂ ಗೋಣಿ ಚೀಲದಲ್ಲಿ ಸಾವಯವ ಗೊಬ್ಬರ ಬಳಸಿ ಸಾಲು ಸಾಲು ಬೆಂಡೆ ಮತ್ತು ಅಲಸಂಡೆ ಗಿಡ ಬೆಳೆಯುತ್ತಿದ್ದಾರೆ. ಈ ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರು ಮತ್ತು ವಾಹನ ಸವಾರರು ಈ ಫಲವತ್ತಾದ ತರಕಾರಿ ಕಂಡು ಕುತೂಹಲದಿಂದ ವೀಕ್ಷಿಸುತ್ತಿರುವ ದೃಶ್ಯ ಕಂಡು ಬಂದಿದೆ.



ಕೇವಲ ಹಟ್ಟಿ ಗೊಬ್ಬರ ಮತ್ತು ಹನಿ ನೀರಾವರಿ ಮೂಲಕ 150ಕ್ಕೂ ಮಿಕ್ಕಿ ಬೆಂಡೆ ಗಿಡ, 250ಕ್ಕೂ ಮಿಕ್ಕಿ ಅಲಸಂಡೆ ಗಿಡ ಬೆಳೆದಿದ್ದು, ರಸ್ತೆ ಬದಿ ಬೇಲಿಗೆ ಅಲಸಂಡೆ ಬಳ್ಳಿ ಹಬ್ಬಿದೆ. ಉಳಿದಂತೆ ಮನೆ ಹಿಂಬದಿ ಬೇಲಿಯಲ್ಲಿ ಅಲಸಂಡೆ ಮಾತ್ರವಲ್ಲದೆ ಹೀರೆಕಾಯಿ, ತೊಂಡೆ, ಸೋರೆಕಾಯಿ ಮತ್ತು ಬೂದುಕುಂಬಳ ಬಳ್ಳಿ ಬೆಳೆಸಿದ್ದಾರೆ.

ಬಿಜೆಪಿ ಸರ್ಕಾರದ ರಸ್ತೆ ಡಾಂಬರ್‌ಗಿಂತ ರಾಗಿ ಹಿಟ್ಟೇ ಹೆಚ್ಚು ಸ್ಟ್ರಾಂಗ್ ಎಂದ ಕಾಂಗ್ರೆಸ್

ಈ ಹಿಂದೆ ತೈವಾನ್‌ ಪಪ್ಪಾಯಿ ಬೆಳೆದು ಆರ್ಥಿಕವಾಗಿ ಸ್ವಾವಲಂಬನೆ ಕಂಡುಕೊಂಡಿದ್ದೇನೆ. ಕೆಲವೊಮ್ಮೆ ತರಕಾರಿ ಬಳ್ಳಿಗೆ ನವಿಲುಗಳ ಕಾಟ ಕಂಡು ಬರುತ್ತದೆ ಬಿಟ್ಟರೆ ಉಳಿದಂತೆ ಬೇರೆ ಯಾವುದೇ ಪ್ರಾಣಿಗಳ ಉಪಟಳವಿಲ್ಲ. ಸಾವಯವ ಗೊಬ್ಬರ ಬಳಕೆಯಿಂದ ಗಿಡಗಳಿಗೆ ಯಾವುದೇ ರೋಗ ಭೀತಿ ಇಲ್ಲ. ಇದರಲ್ಲಿ ಬೆಳೆದ ತರಕಾರಿಗಳನ್ನು ಸ್ಥಳೀಯ ಅಂಗನವಾಡಿ ಸಹಿತ ಕೆಲವೊಂದು ಶಾಲೆಯ ಅಕ್ಷರ ದಾಸೋಹಕ್ಕೆ ಉಚಿತವಾಗಿ ಕೊಡುಗೆ ನೀಡುತ್ತಿರುವುದಾಗಿ ರಾಮಣ್ಣ ನಾವೂರು ’ಕನ್ನಡಪ್ರಭ’ಕ್ಕೆ’ ತಿಳಿಸಿದ್ದಾರೆ.

click me!