
ಹಾವೇರಿ(ಮೇ.21): ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಇಲ್ಲಿಯ ಎಪಿಎಂಸಿ ಗೋದಾಮಿನ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು 254 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ಬುಧವಾರ ನಡೆದಿದೆ.
ಇಲ್ಲಿಯ ಹಾನಗಲ್ಲ ರಸ್ತೆ ಎಪಿಎಂಸಿ ಆವರಣದಲ್ಲಿರುವ ಶಿವಯೋಗಿ ಪಟ್ಟಣಶೆಟ್ಟಿ ಎಂಬವರಿಗೆ ಸೇರಿದ ಸಿದ್ದಲಿಂಗೇಶ್ವರ ಟ್ರೇಡರ್ಸ್ ಎಂಬ ಗೋದಾಮಿನಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ರೇಶನ್ ಕಾರ್ಡ್ದಾರರಿಗೆ ವಿತರಿಸಲು ಆಹಾರ ಇಲಾಖೆಯಿಂದ ನೀಡಿದ್ದ ಅಕ್ಕಿಯನ್ನು ಸಂಗ್ರಹಿಸಿಡಲಾಗಿತ್ತು.
ಮುಂಬೈನಿಂದ ಹಾವೇರಿ ಬರಲಿದೆ ರೈಲು: ಎಚ್ಚರ ತಪ್ಪಿದ್ರೆ ಅಪಾಯ ಫಿಕ್ಸ್..!
ದಾಳಿ ವೇಳೆ 254 ಕ್ವಿಂಟಲ್ ಅಕ್ಕಿ ದೊರೆತಿದ್ದು, ಗೋದಾಮಿನ ಮಾಲೀಕ ಶಿವಯೋಗಿ ಪಟ್ಟಣಶೆಟ್ಟಿ ಮತ್ತು ಅಲ್ಲಿ ಕೆಲಸ ಮಾಡುತ್ತಿದ್ದ ಶಿವು ಕರಗಾಲ, ರವಿ ನಾಗನೂರ ಎಂಬವರನ್ನು ಬಂಧಿಸಲಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಪಿಎಸ್ಐ ಸಿದ್ದಾರೂಢ ಬಡಿಗೇರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.