ಜಿಲ್ಲಾ ಕಾರಾಗೃಹ ಸಿಬ್ಬಂದಿ ಕೊಲೆ ಮಾಡಲು ಕೈದಿಗೆ ಹೇಳಿದ ಜೈಲು ಅಧೀಕ್ಷಕ

By Suvarna NewsFirst Published Dec 15, 2020, 8:54 AM IST
Highlights

ಜಿಲ್ಲಾ ಕಾರಾಗೃಹದಲ್ಲಿ ಅಧಿಕಾರಿಯೋರ್ವರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆಯೊಂದು ನಡೆದಿದ್ದು ಈ ಸಂಬಂಧ ದೂರು ದಾಖಲಾಗಿದೆ. 

ಹಾವೇರಿ (ಡಿ.15):  ಜಿಲ್ಲಾ ಕಾರಾಗೃಹದಲ್ಲಿ ಅಧೀಕ್ಷಕ ಸಿಬ್ಬಂದಿ  ಜೈಲಿನ ವಾರ್ಡನ್ ಮೇಲೆ ಹಲ್ಲೆ ನಡೆಸಿದ್ದಾಗಿ ಆರೋಪ ಮಾಡಲಾಗಿದೆ. 

ಹಾವೇರಿ ಜಿಲ್ಲಾ ಕಾರಾಗೃಹದ ಅಧೀಕ್ಷಕ ಟಿ.ಬಿ.ಭಜಂತ್ರಿ ಅವರು ತಮ್ಮ ಮೇಲೆ ಹಲ್ಲೆ ನಡೆಸಿದ್ದು, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಜೈಲಿನ ವಾರ್ಡನ್ ಪುಂಡಲೀಕ ಪವಾರ್  ಪೊಲೀಸರಿಗೆ ದೂರು ನೀಡಿದ್ದಾರೆ. 

ಸೋಮವಾರ ಬೆಳಗ್ಗೆ ಕಾರಾಗೃಹದ ಮಹಾದ್ವಾರದ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಧೀಕ್ಷಕ ಟಿ.ಬಿ.ಭಜಂತ್ರಿ ಅವರು ತಮ್ಮ ಕಚೇರಿಗೆ ಕರೆಸಿಕೊಂಡು ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ. ಜೈಲಿನ ವಿದ್ಯಮಾನಗಳನ್ನು ಮೇಲಾಧಿಕಾರಿಗಳಿಗೆ ತಿಳಿಸುತ್ತೀಯಾ ಎಂದು ಹೇಳುತ್ತ ಮುಖಕ್ಕೆ ಕೈಯಿಂದ ಹೊಡೆದಿದ್ದಾರೆ. ಅಲ್ಲದೇ ವಿಚಾರಣಾಧೀನ ಕೈದಿಯೊಬ್ಬನನ್ನು ಕರೆದು, ಈತನನ್ನು ಕೊಲೆ ಮಾಡು ಬಂದದ್ದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

'ಕೆನ್ನೆಗೆ ಬಾರಿಸುತ್ತೇನೆ' ಮಾಸ್ಕ್ ಹಾಕೊಳ್ಳಿ ಎಂದಿದ್ದಕ್ಕೆ ನಿವೃತ್ತ ಮಹಿಳಾ ಅಧಿಕಾರಿ ದರ್ಪ ..

 ವಿಚಾರಣಾಧೀನ ಕೈದಿ   ಕುತ್ತಿಗೆ ಬಲವಾಗಿ ಹಿಸುಕಿ ಕೊಲೆಗೆ ಯತ್ನಿಸಿದ್ದಾನೆ. ಆಗ ಸಹಾಯಕ ಜೈಲರ್ ಬಂದು ತಪ್ಪಿಸಿದ್ದು, ನೀನು ಜೀವ ಉಳಿಸಿಕೊಂಡಿದ್ದು, ಇನ್ನು ಮೇಲೆ ಹೇಗೆ ಕೆಲಸ ಮಾಡುತ್ತೀಯಾ ಎಂದು ನೋಡಿಕೊಳ್ಳುತ್ತೇನೆ. ಈ ಬಗ್ಗೆ ಏನಾದರೂ ದೂರು ನೀಡಿದರೆ ನಿನ್ನ ಮೇಲೂ ಕೇಸ್ ಹಾಕಿಸಿ ಜೈಲಿಗೆ ಕಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. 

ಹಲ್ಲೆಯಿಂದ ಗಾಯಗೊಂಡ ವಾರ್ಡನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.  ಆದ್ದರಿಂದ ನನಗೆ ರಕ್ಷಣೆ ನೀಡಬೇಕು ಹಾಗೂ ಟಿ.ಬಿ.ಭಜಂತ್ರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುಂಡಲೀಕ ಪವಾರ್ ಅವರು ಗ್ರಾಮೀಣ ಠಾಣೆಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

click me!