New Year 2022 : ಉಡುಪಿ- ಯಕ್ಷಗಾನ ಕೋಲ ಉತ್ಸವಗಳಿಗೆ ಬ್ರೇಕ್‌

By Kannadaprabha NewsFirst Published Dec 28, 2021, 3:06 PM IST
Highlights
  • ರಾಜ್ಯ ಸರ್ಕಾರದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಡಿ. 28ರಿಂದ ಜ. 7ರ ವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್‌ ಕರ್ಫ್ಯೂ 
  • ಉಡುಪಿಯಲ್ಲಿ ಇಂದಿನಿಂದ ಯಕ್ಷಗಾನ ಕೋಲ ಉತ್ಸವಗಳಿಗೆ ಬ್ರೇಕ್‌

 ಉಡುಪಿ (ಡಿ.28):  ರಾಜ್ಯ ಸರ್ಕಾರದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಡಿ. 28ರಿಂದ ಜ. 7ರ ವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್‌ ಕರ್ಫ್ಯೂ (Night curfew )  ವನ್ನು ಜಾರಿಗೊಳಿಸಲಾಗುತ್ತಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು, ಜನ ಓಡಾಟವನ್ನು ನಡೆಸುವಂತಿಲ್ಲ. ರಾತ್ರಿ 10 ಗಂಟೆ ನಂತರ ಯಕ್ಷಗಾನ (Yakshagana) , ಕೋಲ, ಉತ್ಸವಾದಿಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಹೇಳಿದ್ದಾರೆ.

 ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಅವರು ವಿವರಗಳನ್ನು ನೀಡಿದರು.

Latest Videos

ಕರ್ಫ್ಯೂ ಅವಧಿಯಲ್ಲಿ ರೆಸ್ಟೋರೆಂಚ್‌, ಬಾರ್‌, ಕ್ಲಬ್‌, ಪಬ್‌ಗಳಲ್ಲಿ ಶೇ 50ಕ್ಕಿಂತ ಹೆಚ್ಚು ಗ್ರಾಹಕರಿಗೆ ಅವಕಾಶ ನೀಡುವಂತಿಲ್ಲ. ಈ ಸಂಸ್ಥೆಗಳ ಸಿಬ್ಬಂದಿ ಕಡ್ಡಾಯವಾಗಿ 2 ಡೋಸ್‌ ಲಸಿಕೆಯನ್ನು ಹಾಕಿಸಿ, ಕೋವಿಡ್‌ (Covid)  ನೆಗೆಟಿವ್‌ ವರದಿ ಹೊಂದಿರಬೇಕು.

ಈ 10 ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸಭೆ, ಸಮ್ಮೇಳನ, ಮದುವೆ (Marriage) ಇತ್ಯಾದಿ ಸಮಾರಂಭಗಳಲ್ಲಿ 300ಕ್ಕಿಂತ ಹೆಚ್ಚು ಜನರನ್ನು ಸೇರಿಸುವಂತಿಲ್ಲ. ಇದು ಸಮಾರಂಭದ ಸಂಘಟಕರ ಹೊಣೆಯಾಗಿರುತ್ತದೆ.

ಆದರೆ ರಾತ್ರಿ ಕಫä್ರ್ಯ ಸಂದರ್ಭದಲ್ಲಿ ದೂರವಾಣಿ (Phone) , ಮೆಸ್ಕಾಂ, ಇತ್ಯಾದಿ ಅಗತ್ಯ ಸೇವೆಗಳನ್ನು ಒದಗಿಸುವವರಿಗೆ, ರೋಗಿಗಳು ಮತ್ತು ಅವರ ಸಹಾಯಕರು, ರಾತ್ರಿ ಪಾಳಿಯ ಉದ್ಯೋಗಿಗಳಿಗೆ ರಿಯಾಯಿತಿ ನೀಡಲಾಗಿದೆ. ಟ್ರಕ್‌ ಮತ್ತು ಸರಕು ವಾಹನಗಳಿಗೆ, ಇ- ಕಾಮರ್ಸ್‌ ಮತ್ತು ಹೋಮ್‌ ಡೆಲಿವರಿ ವಾಹನಕ್ಕೆ, ಬಸ್ಸು (Bus) ಮತ್ತು ಟ್ಯಾಕ್ಸಿಗಳ ಸಂಚಾರಕ್ಕೆ ಅವಕಾಶವಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಮು.ಕಾ.ನಿ.ಅಧಿಕಾರಿ ಡಾ.ನವೀನ್‌ ಭಟ್‌, ಎಎಸ್ಪಿ ಕುಮಾರಚಂದ್ರ, ಡಿಎಚ್‌ಓ ಡಾ. ನಾಗಭೂಷಣ ಉಡುಪಿ, ನೋಡಲ್‌ ಅಧಿಕಾರಿ ಡಾ.ಪ್ರಶಾಂತ್‌ ಭಟ್‌ ಮುಂತಾದವರಿದ್ದರು.

ಮಣಿಪಾಲ - 35 ವಿದ್ಯಾರ್ಥಿಗಳು ಪಾಸಿಟಿವ್‌

ಡಿ.2ರಂದು ಮಣಿಪಾಲದ ಎಂಐಟಿಯಲ್ಲಿ 7 ವಿದ್ಯಾರ್ಥಿಗಳಿಗೆ (Students) ಕೊರೋನಾ ಸೋಂಕು ಪತ್ತೆಯಾಗಿತ್ತು. ನಂತರ 2 ವಾರಗಳಲ್ಲಿ 10, 733 ಮಂದಿ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಿ ಪರೀಕ್ಷೆಗೊಳಪಡಿಸಲಾಗಿ, ಅವರಲ್ಲಿ 35 (ಶೇ 0.30) ಮಂದಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ಇನ್ನೂ 2000 ಮಂದಿಯ ಪರೀಕ್ಷೆಗೊಳಪಡಿಸಲಾಗುತ್ತದೆ. ಎಂಐಟಿಯನ್ನು ಕಂಟೈನ್ಮೆಂಟ್‌ ಝೋನ್‌ ಮಾಡಲಾಗಿದೆ ಎಂದು ಡಿಸಿ ಹೇಳಿದರು.

10 ದಿನ ನೈಟ್ ಕರ್ಫ್ಯೂ : 

ಒಮಿಕ್ರೋನ್‌ ಭೀತಿ ಹಿನ್ನೆಲೆಯಲ್ಲಿ (Omicron Threat) ರಾಜ್ಯ ಸರ್ಕಾರ ವಿಧಿಸಿರುವ ರಾತ್ರಿ ಕರ್ಫ್ಯೂ (Night Curfew) ಮಂಗಳವಾರ 10 ಗಂಟೆಯಿಂದ ಜಾರಿಯಾಗಲಿದ್ದು, ಮುಂದಿನ ಹತ್ತು ದಿನಗಳ ಕಾಲ ಪ್ರತಿ ದಿನ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ವಾಣಿಜ್ಯ ಚಟುವಟಿಕೆ ಹಾಗೂ ಅನಗತ್ಯ ಸಂಚಾರಕ್ಕೆ ನಿರ್ಬಂಧ ಇರಲಿದೆ. ಜತೆಗೆ ಸಭೆ, ಸಮಾರಂಭ, ಸಮಾವೇಶ, ಮದುವೆ ಕಾರ್ಯಕ್ರಮಗಳಲ್ಲಿ 300ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ ಎಂಬ ನಿಯಮವೂ ಅನ್ವಯವಾಗಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಭಾನುವಾರ ನಡೆದ ಸಭೆ ಬಳಿಕ ರಾತ್ರಿ ಕಫä್ರ್ಯ ಮಾರ್ಗಸೂಚಿ ಪ್ರಕಟಿಸಲಾಗಿತ್ತು. ಇದರನ್ವಯ ರಾಜ್ಯದಲ್ಲಿ ಡಿ.28 ರಿಂದ ರಾತ್ರಿ ಬರುವ ಜ.7ರ ಬೆಳಗ್ಗೆ 5ಗಂಟೆವರೆಗೆ ರಾತ್ರಿ ಕಫä್ರ್ಯ ಜಾರಿಯಲ್ಲಿರಲಿದೆ.

ಈ ಅವಧಿಯಲ್ಲಿ ಅನಗತ್ಯ ಸುತ್ತಾಟ, ಜನ ಸೇರುವಿಕೆ, ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳು, ಬಾರ್‌, ಪಬ್‌, ರೆಸ್ಟೋರೆಂಟ್‌, ಚಲನಚಿತ್ರಮಂದಿರ ಸೇರಿದಂತೆ ಅಗತ್ಯಸೇವೆಯಲ್ಲದ ಯಾವುದೇ ವಾಣಿಜ್ಯ ಚಟುವಟಿಕೆಗೂ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

 ನೈಟ್‌ ಕರ್ಫ್ಯೂ ಯಾರಿಗೆ ನಿರ್ಬಂಧವಿಲ್ಲ?:

ರಾತ್ರಿ  ಕರ್ಫ್ಯೂ  ನಿರ್ಬಂಧದಿಂದ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ರೋಗಿಗಳು ಹಾಗೂ ಅವರ ಸಹಾಯಕರು, ಪೋಷಕರು ತುರ್ತು ಅಗತ್ಯವಿದ್ದಾಗ ಸಂಚರಿಸಬಹುದು. ರಾತ್ರಿ ಪಾಳಿಯೂ ಕಾರ್ಯನಿರ್ವಹಿಸುವ ಕೈಗಾರಿಕೆ, ಕಂಪೆನಿಗಳ ಉದ್ಯೋಗಿಗಳು, ಟೆಲಿಕಾಂ ಸೇವಾ ಕಂಪೆನಿಗಳ ಸಿಬ್ಬಂದಿ ತಮ್ಮ ಗುರುತಿನ ಚೀಟಿಯೊಂದಿಗೆ ಸಂಚರಿಸಬಹುದು.

ಸರಕು ಸಾಗಣೆ ವಾಹನಗಳಿಗೆ (ಖಾಲಿ ವಾಹನವೂ ಸೇರಿದಂತೆ) ನಿರ್ಬಂಧವಿಲ್ಲ. ಇ ಕಾಮರ್ಸ್‌, ಆಹಾರ ಸೇರಿದಂತೆ ಹೋಂ ಡೆಲಿವರಿ ನೀಡುವ ಉದ್ಯೋಗಿಗಳು, ವೈದ್ಯಕೀಯ, ತುರ್ತು ಹಾಗೂ ಅಗತ್ಯ ಸೇವೆಗಳು, ಔಷಧ ಮಳಿಗೆಗಳು ಕಾರ್ಯ ನಿರ್ವಹಿಸಬಹುದು. ಉಳಿದಂತೆ ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶವಿಲ್ಲ.

ಸಾರ್ವಜನಿಕ ಸಾರಿಗೆಗೆ ನಿರ್ಬಂಧವಿಲ್ಲ:

ಬಸ್ಸು, ರೈಲು, ಮೆಟ್ರೋ ಹಾಗೂ ವಿಮಾನಗಳು ಯಥಾಪ್ರಕಾರ ಸಂಚರಿಸುತ್ತವೆ. ಹೀಗಾಗಿ ಬಸ್ಸು, ರೈಲು, ವಿಮಾನ ನಿಲ್ದಾಣ, ತುರ್ತು ಅಗತ್ಯಗಳಿಗೆ ಸಂಚರಿಸಲು ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳು, ಟ್ಯಾಕ್ಸಿಗಳಿಗೆ ಅನುಮತಿ ನೀಡಲಾಗಿದೆ. ಬಸ್ಸು ನಿಲ್ದಾಣ, ರೈಲು, ವಿಮಾನ ನಿಲ್ದಾಣಗಳಿಗೆ ಪ್ರಯಾಣಿಸುವವರು ಪ್ರಯಾಣದ ದಾಖಲೆ (ಟಿಕೆಟ್‌) ಹೊಂದಿರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

click me!